Monday, March 30, 2015

"ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

Friday, March 20, 2015

"ಯಾರೋ ಹೇಳಿದ್ರು ಅಂತ...."

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.