Wednesday, June 30, 2010

'ಕನ್ನಡಿಯೊಳಗಿನ ಗಂಟು '

ಬಾತ್ ರೂಮಿನ 
ಕನ್ನಡಿಯ ಮೇಲೊಂದು 
ಹಲ್ಲಿ---------!
ಕುಳಿತೇ  ಇತ್ತು
ಅಲ್ಲಿ -------!
ಯುಗ ಯುಗಗಳ 
ಅಲಸಿಕೆಯ
ಪಳೆಯುಳಿಕೆಯಂತೆ !
ಪ್ರತಿಬಿಂಬವೇ ಸಂಗಾತಿ 
ಎನಿಸಿತೋ ಏನೋ !
ಬಿಟ್ಟರೆ------- ಮತ್ತೆ 
ಸಿಗದೆಂದೋ ಏನೋ !
ಹಾಗೇ---- ಕುಳಿತಿತ್ತು 
ಬಹಳ------ ಹೊತ್ತು !
ಒಂದರೆ ಕ್ಷಣ ಮಾತ್ರ 
ಹೊರಳಿತ್ತು---- ಚಿತ್ತ !
ಕನ್ನಡಿಯಲಿ   ಕುಳಿತ 
ಚಿಟ್ಟೆಯತ್ತ---------- !
ಜಾರಿಬಿತ್ತು -----ಹಲ್ಲಿ !
ಗೊರ,ಗೊರನೆ ಕ್ಯಾಕರಿಸಿ
ಉಗಿದಿತ್ತು -------ನಲ್ಲಿ !
ಪಾಪ  ಪರದಾಡುತಿದೆ 
ಹಲ್ಲಿ ----------------!
ಕೆಳಗೆ -----ಸಿಂಕಿನಲ್ಲಿ!


Monday, June 28, 2010

'ಮಗು--ಬೆಳಕಿನ ಮೊಗ್ಗು'

ದೂರದಲ್ಲಿ ಮಿನುಗುವ ನಕ್ಷತ್ರಗಳು ,
ನೋಡಿ ಕಣ್ಣು ಮಿಟುಕಿಸಿ ನಗುತ್ತವೆ ,ಅಷ್ಟೇ !
ಅವುಗಳ ಮುಟ್ಟಲಾಗುವುದಿಲ್ಲ!
ಮುಟ್ಟಲಾಗದ ನಕ್ಷತ್ರವೊಂದು ಎದುರಿಗೇ
ಬಂದಿದೆ ನಮ್ಮ ಸ್ವರೂಪದಲ್ಲಿಯೇ !
ನಮ್ಮ ರಕ್ತ ಮಾಂಸ ,
ಮೂಳೆ ಮಜ್ಜೆಗಳನು ಹೊತ್ತು!
ನಮ್ಮೆದುರಿಗೇ ಇದೆ -----,
ಶುಭ್ರ ಧವಳಗಿರಿಯ 
ಸ್ಪರ್ಶಾತೀತ ಹಿಮರಾಶಿಯಂತೆ!
ನಮ್ಮೆದುರಿಗೇ  ಇದೆ -------,
ದಾರಿ ಮರೆತು ಧರೆಗಿಳಿದ,
ಗಂಧರ್ವನಂತೆ!
ನಮ್ಮೆದುರಿಗೇ ಇದೆ --------,
ಗರಿ ಸುಟ್ಟು ಭೂಮಿ ಮುಟ್ಟಿದ ,
ಗರುಡನಂತೆ!
ಬೊಗಸೆಯಲ್ಲಿ ಬಾಚಿ ತಬ್ಬಿಹಿಡಿದು ,
ಬೆರಗುಗಣ್ಣುಗಳಿಂದ ನೋಡುತ್ತಾ ,
ಆಸರೆಯ ಹಂದರ ಮೆಲುದನಿಯಲ್ಲಿ ,
ಬರೀಮೊಗ್ಗಿಗೆ ಕೇಳುವಷ್ಟೇ ದನಿಯಲ್ಲಿ ,
'ನನ್ನ ಸೂರ್ಯ'ಎನ್ನುತ್ತದೆ !
ಬೆಳಕಿನ ಮೊಗ್ಗು ಕಣ್ಣಗಲಿಸಿ ,
ದನಿ ಮೂಡಿದೆಡೆಗೆ ನೋಡುತ್ತದೆ!

ನಿಮಗೆ ಅಚ್ಚರಿ  ಎನಿಸಬಹುದು ,ಇದು ಪದ್ಯವಲ್ಲ ,ಗದ್ಯ! ಎಂ.ಆರ್.ದತ್ತಾತ್ರಿ ಯವರ 'ಪೂರ್ವ ಪಶ್ಚಿಮ'(ಛಂದ ಪ್ರಕಾಶನ)ಎಂಬ  ಪುಸ್ತಕದ 'ಬಳ್ಳಿಯಲ್ಲೊಂದು  ಬೆಳಕಿನ ಮೊಗ್ಗು'ಎಂಬ ಲೇಖನದ ಕೊನೆಯ ಪ್ಯಾರಾದ ಸಾಲುಗಳನ್ನು ಪದ್ಯದ ರೀತಿ ಜೋಡಿಸಿದ್ದೇನೆ.ದತ್ತಾತ್ರಿಯವರು ,ಈ ರೀತಿ ಗದ್ಯವನ್ನೂ ಪದ್ಯದಂತೆ ,ಲಯಬದ್ಧವಾಗಿ ,ಲಾಲಿತ್ಯ ಪೂರ್ಣವಾಗಿ ಬರೆದಿರುವುದನ್ನು ನೋಡಿ ,ಅಚ್ಚರಿಯಿಂದ ,ಸಂತೋಷಪಟ್ಟಿದ್ದೇನೆ!ನನ್ನ ಸಂತೋಷವನ್ನೂ ,ವಿಸ್ಮಯವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ಬ್ಲಾಗಿನಲ್ಲಿ ಹಾಕಿದ್ದೇನೆ.ಒಂದು ನವಜಾತ ಶಿಶುವನ್ನೂ,ಅದರ ತಾಯಿಯ ಸಂಭ್ರಮವನ್ನೂ ಅವರು ಪದಗಳಲ್ಲಿ ಹಿಡಿದಿಟ್ಟಿರುವ ರೀತಿ ನಿಜಕ್ಕೂ ಅದ್ಭುತ !ದತ್ತಾತ್ರಿಯವರು ಕವಿಯೂ ಹೌದು ಎಂದು ಪುಸ್ತಕದಲ್ಲಿ ಮಾಹಿತಿಯಿದೆ.ನಾನು ಅವರ ಕವನಸಂಕಲನವನ್ನು(ಅಲೆಮಾರಿ ಕನಸುಗಳು) ಓದಿಲ್ಲ.ಈ ರೀತಿ ಸೊಗಸಾಗಿ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಲಿ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಆಕರ್ಷಿಸಲಿ .ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ ಎನ್ನುವ ಹಾರೈಕೆ.

Saturday, June 26, 2010

'ವಿಸ್ಮಯ'

ನಾವು ----------,
ಕುಡಿಯುವ ನೀರು,
ಉಸಿರಾಡುವ ಗಾಳಿ,
ತಿನ್ನುವ ಆಹಾರ,
ಇರುವ ಪರಿಸರ,
ಎಲ್ಲವೂ ---------,
ವಿಷ ಮಯ------!
ಆದರೂ ,ಬದುಕಿದ್ದೇವೆ!
ನಿಜಕ್ಕೂ ವಿಸ್ಮಯ!
ಹೊಂದಿಕೊಳ್ಳುತ್ತವೆ 
ಎಲ್ಲವೂ --------,
ಪರಿಸರಕ್ಕೆ------!
ಹೊಂದಿಕೊಡಿದ್ದೆವೆಯೇ 
ನಾವೂ-----------,
ಪರಿಸರಕ್ಕೇ-------?
ವಿಷವೇ----- ಆಗಿ !!?
ಎನ್ನುವುದೇ -----,
ವಿಷಮ ----ಪ್ರಶ್ನೆ !!!

Thursday, June 24, 2010

'ಗಗನಕ್ಕೇರಿದ ತರಗೆಲೆಯೇ !'

ಹೆಸರು ,ಹೆಸರು ,ಹೆಸರು
ಎಂಬ ಕಸರು ತುಂಬಿದ ಗಾಳಿ !
ರೊಯ್ಯನೆಂದು  ಬೀಸಿ
ನಿನ್ನ  ಆಗಸಕ್ಕೆ ಏರಿಸಿ !
ನಾನೇ ಇಂದ್ರ ,ನಾನೇ ಚಂದ್ರ
ಎಂಬ ಭಾವ ಮೂಡಿ !
ನನ್ನ ಸಮನಾರಿಲ್ಲೆನುತ 
ಹೆಮ್ಮೆಯಿಂದ ಬೀಗಿ !
ಗಿರಿ, ಗಿರಿ, ಗಿರಿ, ತಿರುಗಿ! 
ಗಾಳಿ ನಿಂತ ಗಳಿಗೆ!
ಮರಳಿ ಬಿದ್ದೆ ಇಳೆಗೆ !
ಮಣ್ಣಿನಲ್ಲಿ ಮಣ್ಣಾದೆ,
ಮೆರೆದು ಒಂದು ಗಳಿಗೆ!!!
ನೆನಪೇ------ ಇರದೆ
ಸರಿದು -------ಹೋದೆ,
ಕಾಲ ಗರ್ಭದೊಳಗೆ!!!

Tuesday, June 22, 2010

'ಲೈವ್-ಬ್ಯಾಂಡ್ 'ಹುಡುಗಿಯರು

ಎಲ್ಲಿಂದಲೋ ---------,
ಹೊಟ್ಟೆಯ ಪಾಡಿಗೆಂದು ,
ಕಾಳನರಸಿ ಬಂದು ,
ಜಾಲಕ್ಕೆ  ಬಿದ್ದ ,
ವಲಸೆ ಹಕ್ಕಿಗಳು ನಾವು!


ನಿಮ್ಮ ತುಂಬಿದ ---,
ಗುಡಾಣ ಹೊಟ್ಟೆಗಳ ,
ಅಮಲಿಗೆ ,ತೆವಲಿಗೆ ,
ಗರಿಬಿಚ್ಚಿ ಕುಣಿದು ,
ನಿಮ್ಮನ್ನು ನಲಿಸಬೇಕಾಗಿ 
ಬಂದದ್ದು --------,
ನಮ್ಮ ಅನಿವಾರ್ಯತೆ!

ಈಗ-- ,ಇಲ್ಲಿ---, ಹೀಗೆ,
ಪೋಲೀಸ್ ಠಾಣೆಯಲ್ಲಿ,
ನಡುರಾತ್ರಿಯಲ್ಲಿ ನಡುಗುತ್ತಾ ,
ಒಳಗೊಳಗೇ ಕುದಿಯುತ್ತಾ,
ಟಿ.ವಿ.ಕ್ಯಾಮರಾಗಳ ಮುಂದೆ 
ಮುಖ ಮುಚ್ಚಿ ಕೂತಿದ್ದೇವೆ !
ಅನಾಥರಂತೆ ----------!


ತಿಂದುಂಡು ,ಕುಡಿದು ,
ನಮ್ಮೊಡನೆ ಕುಣಿದು ,
ಮಜಾ ,ಮಸ್ತಿ, ಮುಗಿಸಿ ,
ಬಾರಿನ ಹಿತ್ತಿಲ ಬಾಗಿಲಿಂದ ,
ನಿಮ್ಮದು 'ಗ್ರೇಟ್ ಎಸ್ಕೇಪ್ '!
ನಿಮ್ಮ ನಿಮ್ಮ ಮನೆಗಳಲ್ಲಿ 
ಮಡದಿ ಮಕ್ಕಳೊಡನೆ 
ಬೆಚ್ಚಗೆ ಮಲಗಲು !
ಮರ್ಯಾದಸ್ಥರಂತೆ !
 

Monday, June 21, 2010

'ನದಿಯಂತೆ ಸಾಗಬೇಕು'

ದೇಹವೆಂಬ ಮನೆಯಲ್ಲಿ 
ಅಶಾಂತಿಯ ಬೆಂಕಿ ಹತ್ತಿ ,
ಚಿಂತೆಯ ಹೊಗೆಯಲ್ಲಿ 
ದಾರಿ ಕಾಣದಾದಾಗಿ ,
ಮನೆ ,ಮನ ------,
ಹತ್ತಿ ಉರಿಯುವಾಗ ,
ಬೆಂಕಿಯನಾರಿಸಿ 
ದಾರಿ ತೋರುವ,
'ಅಗ್ನಿಶಾಮಕ ದಳದ'
'ಕಾಣದ ಕೈಗಳು '
ನಮ್ಮ ನೆರವಿಗೂ 
ಬರಬಹುದೆಂದು 
ಕಾದು ಕೂರುವ ಬದಲು ,
ನಮಗೆ ನಾವೇ ನೀರಾಗಿ 
ಬೆಂಕಿಯನಾರಿಸಿ ,
ಹೊಗೆಯ ಸರಿಸಿ 
ಸಮಸ್ಯೆಯ ಸುಳಿಗಳ 
ಜೊತೆ ಜೊತೆಯೇ 
ತಣ್ಣಗೆ --------,
ನದಿಯಾಗಿ ಹರಿದು 
ಮುಂದೆ  ಸಾಗುವುದು 
ಲೇಸಲ್ಲವೇ --------?

Sunday, June 20, 2010

" ಜೋಕು ----ಜೋಕಾಲೆ"

1)ಮೆಡಿಕಲ್ ಕಾಲೇಜಿನ psycho therapy department ಗೆ ಹೊಸದಾಗಿ ಬಂದಿದ್ದ ಪ್ರೊಫೆಸರ್ ರಾಮಸ್ವಾಮಿ ಯವರು ಆ ದಿನ ಬೆಳಿಗ್ಗೆ ಕೆಂಡಾಮಂಡಲ  ವಾಗಿದ್ದರು.ಅವರ ಚೇಂಬರ್ ನ ಹೊರಗೆ ಅವರ ಸೈನ್ ಬೋರ್ಡ್ ನಲ್ಲಿ ಅವರ ಹೆಸರಿನ ಕೆಳಗೆ psychotherapist   ಎನ್ನುವುದು  psycho  the  rapist ಎಂದಾಗಿತ್ತು!!

2)ಹೊಸದಾಗಿ ಮದುವೆ ಆಗಿದ್ದ ಇಬ್ಬರು ವಧುಗಳು ತಮ್ಮ ಗಂಡಂದಿರ ಬಗ್ಗೆ ಮಾತಾಡುತ್ತಿದ್ದರು.
ಒಬ್ಬಳು -"ನಿನ್ನ ಗಂಡ ನಿದ್ದೆ ಮಾಡುವಾಗ ಗೊರಕೆ ಹೊಡೆಯುತ್ತಾನೆಯೇ?"
ಇನ್ನೊಬ್ಬಳು-"ಗೊತ್ತಿಲ್ಲಾ ಕಣೆ .ಮದುವೆಯಾಗಿ ಇನ್ನೂ ಎರಡು ವಾರವಾಗಿದೆ.ನಿದ್ದೆ ಮಾಡಿದಾಗ ಗಮನಿಸುತ್ತೀನಿ"

3)ಪ್ರೊಫೆಸರ್ ಕೆ.ಎಸ್.ಮಿಶ್ರಾ, ಚೆನ್ನೈ ನ  ಅಪೋಲೋ ಆಸ್ಪತ್ರೆಯಲ್ಲಿ ಖ್ಯಾತ ಹೃದಯ ರೋಗ ತಜ್ಞರು.ಅವರು ವಿದ್ಯಾರ್ಥಿ ಯಾಗಿದ್ದಾಗ  ನಡೆದ ಘಟನೆ .ಸೆಮಿನಾರ್ ಒಂದರಲ್ಲಿ ಅವರು ಹೇಳಿದ್ದು.  C.M.C.VELLORE(ವೆಲ್ಲೂರ್ ಮೆಡಿಕಲ್ ಕಾಲೇಜ್ )ನಲ್ಲಿ ,ಎಲ್ಲಾ ಕಡೆಗಳಲ್ಲಿ 'christ never fails' ಎಂಬ ಬೋರ್ಡ್ ಗಳನ್ನು ಹಾಕಿದ್ದರಂತೆ .ಸುಮಾರು ನಲವತ್ತು ವರ್ಷಗಳ ಹಿಂದೆ ಅಲ್ಲಿ M.D.exam ಪಾಸ್ ಮಾಡುವುದು ಅತೀ ಕಷ್ಟವಾಗಿದ್ದು, ಸುಮಾರು ವಿದ್ಯಾರ್ಥಿಗಳು ನಾಲ್ಕಾರು ಸಲ fail ಆಗುತ್ತಿದ್ದರಂತೆ.ಹಾಗೆ ಹಲವಾರು ಸಲ  fail ಆದ ವಿದ್ಯಾರ್ಥಿಯೊಬ್ಬ 'christ never fails' ಎಂಬ ಬೋರ್ಡ್ ಒಂದರ ಕೆಳಗೆ ದಪ್ಪ ಅಕ್ಷರಗಳಲ್ಲಿ 'Let Him take the M.D.exam'ಎಂದು ಬರೆದನಂತೆ !

4) ಪತ್ನಿಯೊಬ್ಬಳು ತನ್ನ ಪತಿಯ ಚಿಕಿತ್ಸೆಗಾಗಿ ಮನೋ ವೈದ್ಯರ ಬಳಿ ಬಂದಳು.
ಪತ್ನಿ ;" ನನ್ನ ಪತಿಗೆ ವಿಚಿತ್ರವಾದ ಖಾಯಿಲೆ ಶುರುವಾಗಿದೆ ಡಾಕ್ಟ್ರೆ .ತಾವು ಒಂದು ರೇಸ್ ಕುದುರೆ ಎಂದುಕೊಂಡಿದ್ದಾರೆ ."
ಮನೋ ವೈದ್ಯ;"ನೋಡಿಮ್ಮಾ ಈ ಖಾಯಿಲೆ ವಾಸಿ ಆಗ ಬೇಕಾದರೆ ಬಹಳ ಹಣ ಖರ್ಚಾಗುತ್ತೆ"
ಪತ್ನಿ;"ಎಷ್ಟು ಖರ್ಚಾದರೂ ಪರವಾಗಿಲ್ಲಾ ಡಾಕ್ಟ್ರೆ .ಮೊನ್ನೆ ತಾನೇ ಇವರು  'Derby Race' ನಲ್ಲಿ ಓಡಿ,ಹತ್ತು ಲಕ್ಷ ರೂಪಾಯಿ ಗೆದ್ದಿದ್ದಾರೆ!"
( ಸಂಗ್ರಹ ---ವಿವಿಧ ಮೂಲಗಳಿಂದ )

Friday, June 18, 2010

'ಕಾಲ'

ಕಾಲ ನಿಷ್ಪಕ್ಷಪಾತಿ -------,
ಯಾರನ್ನೂ ಬಿಡುವುದಿಲ್ಲ !
ತನ್ನ ಹಲ್ಲಿನ ಮಿಲ್ಲಿನಲಿ 
ಎಲ್ಲರ ನುಣ್ಣಗೆ ಅರೆದು ,
ಕಷ್ಟ ನಷ್ಟಗಳ ಬಿಸಿನೀರಲಿ ಕಲೆಸಿ ,
ತಿಕ್ಕಿ ,ತೀಡಿ ,ಚೆನ್ನಾಗಿ ನಾದಿ,
ಜಂಜಡಗಳ ನಿಗಿನಿಗಿ ಕೆಂಡದಲಿ
ಸುಟ್ಟು ರೊಟ್ಟಿಯಾಗಿಸಿ,
ಸಾಂತ್ವನಕ್ಕೊಮ್ಮೆ ಆಗಾಗ 
ಬೆನ್ನಿಗೆ ಸುಖದ ಬೆಣ್ಣೆ ಸವರಿ!
'ಕೆಂಪು ಚಟ್ನಿ ಖಾರ'ದ ಜೊತೆ 
ಜಗಿದು ಜಗಿದು ತಿಂದು ,
ನುಂಗಿ ನೀರು ಕುಡಿದು ,
ತಣ್ಣಗೆ ಕಾಯುತ್ತಾನೆ ಮತ್ತೆ ,
ಹೊಸ ಹೊಸ ರೊಟ್ಟಿಗಳಿಗಾಗಿ !
ಕಾಲ -------ನಿಷ್ಪಕ್ಷಪಾತಿ ,
ಯಾರನ್ನೂ ---ಬಿಡುವುದಿಲ್ಲ!

('ತುಷಾರ '2000 ಜೂನ್ ನಲ್ಲಿ ಪ್ರಕಟಿತ )

Monday, June 14, 2010

'ನಗೆ -ಟಾನಿಕ್ '


1)ಸೀರಿಯಸ್ಸಾದ ಖಾಯಿಲೆಯಿಂದ ನರಳುತ್ತಿದ್ದ ರೋಗಿಯೊಬ್ಬ ಎಚ್ಚರ ತಪ್ಪಿದಾಗ ,ನಾಲಕ್ಕು ಕಿರಿಯ ವೈದ್ಯರು ಅವನನ್ನು ಸುಧೀರ್ಘ ಪರೀಕ್ಷೆಯ ನಂತರ ಅವನು ಬದುಕಿಲ್ಲವೆಂಬ ನಿರ್ಧಾರಕ್ಕೆ ಬಂದರು.ಅಷ್ಟರಲ್ಲಿ ಎಚ್ಚರವಾದ ರೋಗಿ ಎದ್ದು ಕೂತು 'ನಾನು ಸತ್ತಿಲ್ಲಾ ,ಇನ್ನೂ ಬದುಕಿದ್ದೇನೆ'ಎಂದ.ಅಲ್ಲೇ ಇದ್ದ ಸಿಸ್ಟರ್ ರೋಗಿಯನ್ನು ಉದ್ದೇಶಿಸಿ ರೂಢಿಯಂತೆ  'ಸುಮ್ನೆ ಬಾಯಿ ಮುಚ್ಚಿಕೊಂಡು ಮಲಕ್ಕೋ.ನಿನಗೇನು ಗೊತ್ತಾಗುತ್ತೆ?ನೀನೇನ್ ಡಾಕ್ಟರ ?'ಎಂದಳು.

2)'ಆ ಹುಡುಗಿಯನ್ನು ನೋಡಿ,ಹೇಗೆ ಸಿಗರೇಟು ಸೇದುತ್ತಿದ್ದಾಳೆ!'
'ಅವಳು ಹುಡುಗಿಯಲ್ಲ ,ಅದು ನನ್ನ ಮಗ'
'Oh!sorry sir ,ನೀವು ಅವರ ತಂದೆ ಅನ್ನೋದು ಗೊತ್ತಾಗಲಿಲ್ಲ'
'ನಾನು ಅವನ ತಂದೆ ಅಲ್ಲಾ,ಅವನ ತಾಯಿ'


3)ಹುಡುಗ ಹುಡುಗಿಯನ್ನು ನೋಡಿ ಹೋದ.'ಹುಡುಗ ಏನೋ ಪರವಾಗಿಲ್ಲಾ ,ಆದರೆ ನಗುವಾಗ ಅವನ ಹಲ್ಲು ಚೆನ್ನಾಗಿ ಕಾಣಿಸೊಲ್ಲಾ'ಎಂದರು ಅಲ್ಲಿದ್ದವರೊಬ್ಬರು.  'ಅಯ್ಯೋ ಅದಕ್ಯಾಕೆ ಅಷ್ಟು ಯೋಚನೆ ಮಾಡ್ತೀರಾ ?ಮದುವೆ ಆದ ಮೇಲೆ ಅವನಿಗೆ ನಗೋ ಅವಕಾಶ ಎಲ್ಲಿರುತ್ತೆ?'ಎಂದರು ಅಲ್ಲೇ ಇದ್ದ ಇನ್ನೊಬ್ಬರು!


4)ಮಹಾ ನಗರದ ಗಲ್ಲಿಯೊಂದರಲ್ಲಿ ಹೋಗುತ್ತಿದ್ದ ಮಹನೀಯರೊಬ್ಬರ ಹಿಂದಿನಿಂದ ವ್ಯಕ್ತಿಯೊಬ್ಬ 'ಬೆಡ್ ರೂಂ ಫೋಟೋಸ್ ,ಬೆಡ್ ರೂಂ ಫೋಟೋಸ್'ಎಂದು ಎರಡೆರಡು ಸಲ ಪಿಸುಗುಟ್ಟಿದ .ಮಹನೀಯರು ಆ ಕಡೆ ಈ ಕಡೆ ನೋಡಿ ಯಾರೂ ಇಲ್ಲದ್ದು ಖಾತ್ರಿ ಪಡಿಸಿಕೊಂಡು ಚೌಕಾಶಿ ಮಾಡಿ ಐನೂರು ರೂಪಾಯಿ ಕೊಟ್ಟು ಚೆನ್ನಾಗಿ ಪ್ಯಾಕ್ ಮಾಡಿದ್ದ ಆಲ್ಬಮ್ ಒಂದನ್ನು ಮನೆಗೆ ತಂದು ರೂಮಿನಲ್ಲಿ ಗುಟ್ಟಾಗಿ ಬಿಡಿಸಿ ನೋಡಿದರೆ , ಆಲ್ಬಮ್ಮಿನ ತುಂಬಾ ಬೇರೆ ಬೇರೆ ರೀತಿಯ ಬೆಡ್ ರೂಮಿನ ಫೋಟೋಗಳು!ಮಂಚ ,ಕನ್ನಡಿ,ಟೀಪಾಯಿ ,ಕರ್ಟನ್,ಕಿಟಕಿ ,ಬಾಗಿಲೂ------!

Sunday, June 13, 2010

'ಸಂಬಂಧಗಳ -ಸರ್ಜನರು'

'ಕುಂಬಾರನಿಗೆ ಒಂದು ವರುಷ,ದೊಣ್ಣೆಗೆ ಒಂದು ನಿಮಿಷ' ಎನ್ನುವ ಗಾದೆಯೇ ಇದೆ.ಸಂಬಂಧಗಳ ವಿಷಯದಲ್ಲೂ ನಮಗೆ ಗೊತ್ತೇ ಆಗದಂತೆ ಹೀಗಾಗಿಬಿಡುತ್ತದೆ.ವರುಷಗಳಿಂದ ಬೆಳೆದು ಬಂದಿದ್ದ ನವಿರಾದ ಸಂಬಧ,ಹಿತಶತ್ರುಗಳ ಒಂದು ಕೊಂಕು ನುಡಿಯಿಂದ ಮುರುಟಿ ಹೋಗುತ್ತದೆ.
ಮನ ನೊಂದುಕೊಳ್ಳುತ್ತದೆ.ಸಂಬಂಧಗಳು ಹಳಸುತ್ತವೆ.
ಸಬಂಧಗಳನ್ನು ಹಾಳುಮಾಡಿ,ಸಂತೋಷಿಸುವ ಇಂತಹ ವಿಕೃತ ಸಂತೋಷಿ,Hackers ಗಳಿಗೆ ಈ ಕವನದ ಸಮರ್ಪಣೆ ; -- 

ಚಾಣಕ್ಯನಿಗಿಂತಾ ಚಾಣಾಕ್ಷರು ನೀವು!
ನರಮಂಡಲಗಳ ಒಳ ಸುಳಿಗಳಲಿ
ಗೊತ್ತೇ  ಆಗದಂತೆ --------,
ಹರಿತ ಆಯುಧಗಳ ಬಚ್ಚಿಟ್ಟವರು!
ನವಿರಾದ ಸಂಬಂಧಗಳ ಮಡಿಕೆಗಳ 
ಬಿಡಿಸಿ,ಹದಗೆಡಿಸಿಟ್ಟವರು !
ಬಾಂಧವ್ಯದ ಬೇರುಗಳ 
ಗೊತ್ತೇ ಆಗದಂತೆ ಕೊಯ್ದವರು!
ಮೆಚ್ಚಬೇಕು ನಿಮ್ಮ'ಸರ್ಜನಿಕೆ'ಗೆ!
ಸಂಬಧಗಳು ಸತ್ತು ಹೆಣವಾಗಿ ,
ಕೊಳೆತು ನಾರಿದಾಗಲೇ 
ಅರಿವಾಗುವುದು --------,
ನಿಮ್ಮ ಕರಾಮತ್ತು ----!
ಕಾಂಡ  ಕೊರೆಯುವ  ಹುಳಕ್ಕೆ
ಔಷಧಿ  ಉಂಟು  ನೂರೆಂಟು!
ನೀವೋ ರಕ್ತ  ಬೀಜಾಸುರರು !
ಜರಾಸಂಧನ ವಂಶಜರು!
ನಿಮಗೆಲ್ಲಿಂದ  ತರೋಣ ಔಷಧಿ?
ನಿಮ್ಮಿಂದ ನಮ್ಮನ್ನು ಕಾಯಲು 
ಅವತರಿಸಬೇಕು ಅವನೇ 
ಸಂಭವಾಮಿ ಯುಗೇ ಯುಗೇ 
ಎಂದ --------ಆ ಕೇಶವನೇ !

Wednesday, June 9, 2010

'ಮನೆಯೊಡತಿಯರಿಗೊಂದು -ನುಡಿನಮನ'

ನಾವು,ಬದುಕಿನ ರಂಗ ಸ್ಥಳದಲ್ಲಿ 
ಹೊನಲು ಬೆಳಕಿನಲ್ಲಿ ,
ಹಾ ಹಾ ,ಹೋ ಹೋ ಎಂದು 
ಹೊಗಳಿಸಿ ಕೊಳ್ಳುತ್ತಾ ,
ಕೀರ್ತಿ ಪತಾಕೆಗಳ ಮುಡಿಗೇರಿಸಿ,
ಉಬ್ಬುತ್ತಾ ,ಕೊಬ್ಬುತ್ತಾ ,
ಅಟ್ಟಕ್ಕೆ ಏರುತ್ತಿರುವಾಗ ,
ನೀವು ನಾಲಕ್ಕು ಗೋಡೆಗಳ ಮಧ್ಯೆಯೇ 
ತಾಯಿ ಬೇರಿನಂತೆ ,ಕತ್ತಲಲ್ಲಿಯೇ 
ಆಳಕ್ಕಿಳಿದಿರಿ-----------,
ನಮ್ಮ ಬುನಾದಿಗಳ ಭದ್ರಪಡಿಸಲು!
ನೆಲದ ಸಾರವ ಹೀರಿ ,
ನಿಮಗಾಗಿ ಏನೂ ಉಳಿಸಿಕೊಳ್ಳದೆ,
ರೆಂಬೆ ಕೊಂಬೆಗಳಿಗೆ,
ಹೂವು ,ಹಣ್ಣುಗಳಿಗೆ ,
ಉಣಬಡಿಸುವುದರಲ್ಲೇ ಸವೆಯಿತು 
ನಿಮ್ಮ ಬಾಳು !
ಬಿಸಿಲು ,ಬೆಳಕು ಗಾಳಿಗಳಿಗೆ 
ಮೈಯೊಡ್ಡದೇ ---------,
ಬೇರಾಗಿಯೇ ಉಳಿದು ,
ತೆರೆಯ ಮರೆಯಲ್ಲೇ ,
ಅಹರ್ನಿಶಿ ದುಡಿದ ನಿಮ್ಮೆಲ್ಲರಿಗೆ ,
ಇದೋ ---------ನನ್ನ ,
ನುಡಿ ---------- ನಮನ!

Tuesday, June 8, 2010

'ಮಾಂತ್ರಿಕ ಪ್ರೀತಿ!'

ನಾವು ಕೊಳೆತದ್ದೆಂದು
ಹೇಸಿ ,ಬೀಸಿ ಒಗೆದದ್ದನ್ನು  
ಪ್ರೀತಿಯಿಂದ  ತಬ್ಬಿ ,
ಕಾಪಿಡುವಂತೆ ಒಳಗೆ ದಬ್ಬಿ,
ನೆಲದ ಹಾಸಿಗೆಯೊಳಗೆ 
ತಣ್ಣಗೆ ಮಲಗಿಸಿ ,
ಜೀವ ಸೆಲೆಯ ಊಡಿಸಿ ,
ಹಸಿರ ಉಸಿರು ತುಂಬಿ ,
ಹಳೆ ಉಡುಗೆಗಳ ಕಿತ್ತೆಸದು,
ಚಿಗುರಿನ ಹೊಸ ಬಟ್ಟೆ ತೊಡಿಸಿ ,
ನಳ ನಳಿಸುವಂತೆ ಮಾರ್ಪಡಿಸಿ ,
ನವ ಜೀವನ ನೀಡಿ !
ಆಚೆ ಕಳಿಸುತ್ತದೆ ,
ಆ ಭೂಮಿ ತಾಯಿಯ 
ಮಾಂತ್ರಿಕ ಪ್ರೀತಿ!


Wednesday, June 2, 2010

'ಆನೆಯ ಸೊಂಡಿಲಿನಂಥ ಮನಸು !'

ಮನುಷ್ಯನ ಮನಸ್ಸುವಿಚಿತ್ರ!ಸದಾ ಒಂದು ರೀತಿಯ ಚಡಪಡಿಕೆಯ ಸ್ಥಿತಿ!ಒಮ್ಮೆ ಕೆರಳಿದರೆ,ಒಮ್ಮೆ ನರಳುತ್ತದೆ!ಒಮ್ಮೆಅರಳಿದರೆ ,ಒಮ್ಮೆ ಇದ್ದಕ್ಕಿದ್ದಂತೆಯೇ ಮುದುಡುತ್ತದೆ!ಇದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟಕರ!ಇನ್ನು ಇದರ ಜೊತೆ ಜೀವನ ಪೂರ್ತಿ ಏಗಬೇಕಲ್ಲಾ!ಸಾಮಾನ್ಯವಾಗಿ ಮನಸ್ಸನ್ನು' ಮರ್ಕಟಕ್ಕೆ'ಹೋಲಿಸುತ್ತಾರೆ.ಆಧ್ಯಾತ್ಮಿಕ ಗುರು ಮತ್ತು ಚಿಂತಕ ಏಕನಾಥ್ ಈಶ್ವರನ್ ಅವರ ಪುಸ್ತಕ ಒಂದರಲ್ಲಿ ಮನಸ್ಸಿನ ಚಂಚಲತೆ ಬಗ್ಗೆ ಒಂದು ವಿಶಿಷ್ಟ ರೀತಿಯ ಉದಾಹರಣೆ ಇದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯ ಗಳಂತೆ ಕೇರಳದಲ್ಲಿಯೂ ದೇವಸ್ಥಾನಗಳು ಜಾಸ್ತಿ.ದೇವಸ್ಥಾನಕ್ಕೆ ಹೋಗುವ ಇಕ್ಕಟ್ಟಾದ ದಾರಿಗಳ ಎಡ ಬಲದಲ್ಲಿ ಹಣ್ಣು ಕಾಯಿ ಮಾರುವ ಅಂಗಡಿಗಳು.ಈ ದೇವಸ್ಥಾನದ ಉತ್ಸವಗಳಲ್ಲಿ ಆನೆಗಳನ್ನು ಬಳಸುವುದು ಹೆಚ್ಚು.ಈ ಆನೆಗಳು ದೇವಸ್ಥಾನಕ್ಕೆ ಹೋಗಿ ಬರುವಾಗ ತಮ್ಮ ಸೊಂಡಿಲುಗಳನ್ನು ಅತ್ತಿತ್ತ ಆಡಿಸುತ್ತಾ ಅಂಗಡಿಗಳಲ್ಲಿ ಇಟ್ಟ ಬಾಳೆ ಹಣ್ಣಿನ ಗೊನೆಗಳನ್ನೂ ,ತೆಂಗಿನ ಕಾಯಿ ಗಳನ್ನೂ 'ಗುಳುಂ' ಮಾಡಿ ಬಿಡುತ್ತವಂತೆ ! !ಅದಕ್ಕೆ ಆ ಆನೆಗಳ ಮಾವುತರು ಒಂದು ಉಪಾಯ ಕಂಡು ಕೊಂಡಿದ್ದಾರಂತೆ!ಈ ಆನೆಗಳ ಸೊಂಡಿಲಿಗೆ ಹಿಡಿದುಕೊಳ್ಳಲು ಒಂದು ಕೋಲನ್ನು ಕೊಡುತ್ತಾರಂತೆ.ಆಗ ಆನೆಗಳ ಸೊಂಡಿಲಿಗೂ ಕೆಲಸ!ಅಂಗಡಿಗಳ ಹಣ್ಣು ಕಾಯಿ ಗಳಿಗೂ ಉಳಿಗಾಲ!ನಮ್ಮ ಮನಸ್ಸೂ ಈ ಆನೆಗಳ ಸೊಂಡಿಲಿನಂತೆ ಎನ್ನುತ್ತಾರೆ ಈಶ್ವರನ್.ಸದಾ ಅತ್ತಿತ್ತ ಚಲಿಸುವ ಆನೆಯ ಸೊಂಡಿಲಿನತಹ ನಮ್ಮ ಈ ಮನಸ್ಸು ಸುಮ್ಮನಿರಲು ಅದಕ್ಕೊಂದು ಮಂತ್ರ ಜಪವನ್ನೋ ,ಭಗವನ್ನಾಮ ಸ್ಮರಣೆಯ ಕೋಲನ್ನೋ ಕೊಡಿ ಎನ್ನುತ್ತಾರೆ.ಎಂತಹ ಒಳ್ಳೆಯ ಉದಾಹರಣೆಯಲ್ಲವೇ?