Wednesday, March 7, 2012

"ಹೆಂಗಸರು ಔರೆ ಊವಿದ್ದಂಗೆ"

ನಾಳೆ 'ವಿಶ್ವ ಮಹಿಳಾ ದಿನಾಚರಣೆ '.ವಿಶ್ವದ ಎಲ್ಲಾ ಮಹಿಳೆಯರಿಗೂ ನನ್ನ ನಮನಗಳು ಹಾಗೂ ಶುಭಾಶಯಗಳು.ಈ ಸಂದರ್ಭದಲ್ಲಿ ಜಿ ಪಿ ರಾಜರತ್ನಂ ಅವರ ಹೆಂಗಸರು ಔರೆ ಹೂವಿದ್ದಂಗೆ ಅನ್ನುವ ಕವನವನ್ನು ಬ್ಲಾಗಿಸುತ್ತಿದ್ದೇನೆ;

"ಹೆಂಗಸರು ಔರೆ ಊವ್ ಇದ್ದಂಗೆ "



ಹೆಂಗಸರು ಔರೆ ಹೂವಿದ್ದಂಗೆ
ನಲುಗಿಸ ಬಾರದು ಅವರನ್ನ !
ಒಂದು ಚೋಟುದ್ದ ಊವು ಅಂತ ಅದ್ನ
ಒದ್ದೋನು ಇಂದ್ರ ಉದ್ದಾರ ಆದ್ನ
ಹೆಂಗಸರ ಔರೆ ಊವಿದ್ದಂಗೆ
ನಲುಗಿಸ ಬಾರದು ಅವರನ್ನ!

Saturday, February 18, 2012

"ನಿಮ್ಮ ಮನಸ್ಸು ಸುಂದರವಾಗಿದ್ದರೆ, ಈ ಜಗತ್ತೇ ಸುಂದರ!!!"

ನನ್ನ ಬ್ಲಾಗ್  ಸ್ನೇಹಿತ ಬಾಲೂ ಸರ್ ಅವರ ಬ್ಲಾಗ್ 'ನಿಮ್ಮೊಳಗೊಬ್ಬ ಬಾಲು'ಅವರ ಬ್ಲಾಗಿನ ಧ್ಯೇಯ ವಾಕ್ಯ 'ನಿಮ್ಮ ಮನಸ್ಸು ಸುಂದರವಾಗಿದ್ದರೆ ,ಜಗತ್ತೇ ಸುಂದರ!!'ಎನ್ನುವ ಮಾತುಗಳು ನನಗೆ ಸದಾ ನೆನಪಾಗುತ್ತಿರುತ್ತವೆ .ಆ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆಯಲ್ಲವೇ!. The  world is neither good nor bad,our perception makes it so.'The mind in itself can create a hell or a heaven!'ನಾವು ಹೊರಗಿನ ಸಂದರ್ಭಗಳಿಂದ ,ಘಟನೆಗಳಿಂದ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ ಎನ್ನುತ್ತೇವೆ.ಆದರೆ ಆ ಘಟನೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ನಮ್ಮ ನೆಮ್ಮದಿ ಹಾಳಾಗುತ್ತದೆಯೇ ಹೊರತು ಆ ಘಟನೆಗಳಿಂದಲ್ಲ.ಸಾಧ್ಯವಿದ್ದಷ್ಟೂ ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬೇಡಿ.ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನಾಡಬೇಡಿ.ಯಾವುದೇ NEGATIVE VIBRATION ಅದರ ಮೂಲವಾದ ನಮ್ಮ ಮನಸ್ಸನ್ನೇ ಹಾಳು ಮಾಡುತ್ತದೆ.ಸದಾ ಕಾಲ ಮನಸ್ಸು ಶಾಂತಿಯಿಂದ,ನೆಮ್ಮದಿಯಿಂದ  ,ಸಂತೋಷದಿಂದ ಇರುವಂತೆ ನೋಡಿಕೊಳ್ಳಿ.THIS SHOULD BE  A ONE POINT PROGRAMME OF YOUR LIFE TIME..ಈ ಒಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡಿ.ಮತ್ತೆಲ್ಲಾ ವಿಷಯಗಳೂ ತಮ್ಮಷ್ಟಕ್ಕೆ ತಾವೇ ಬದಲಾಗುತ್ತವೆ.If you can make your mind beautiful,the world will definitely be beautiful.'ದೃಷ್ಟಿಯಂತೆ ಶೃಷ್ಟಿ'ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ.ಬಸವಣ್ಣನವರು ನೂರಾರು ವರುಷಗಳ ಹಿಂದೆಯೇ ಹೇಳಿದಂತೆ ಲೋಕದ ಡೊಂಕ ತಿದ್ದುವ ಮೊದಲು ನಮ್ಮ ಮನದ ಡೊಂಕುಗಳನ್ನು ತಿದ್ದಿಕೊಳ್ಳೋಣ.ನಮ್ಮ ನಮ್ಮ ಮನಗಳ ಸಂತೈಸಿಕೊಳ್ಳೋಣ.ನಮ್ಮ ಆಲೋಚನೆಗಳನ್ನು ಮೊದಲು ಸರಿಪಡಿಸಿಕೊಳ್ಳೋಣ.
'ಈ ಕ್ಷಣದಲ್ಲಿ ಇರುವುದನ್ನು 'ರೂಢಿಸಿ ಕೊಳ್ಳುವುದರಿಂದಲೂ, ಧ್ಯಾನದಿಂದಲೂ ,ಸದಾ ಧನಾತ್ಮಕ ಚಿಂತನೆಗಳಿಂದಲೂ (positive thinking), ನಮ್ಮ ಮನಸ್ಸನ್ನು ಸುಂದರವಾಗಿಸಿಕೊಂಡು ,ಈ ಜಗತ್ತನ್ನೂ ಸುಂದರಗೊಳಿಸೋಣ.

Saturday, February 11, 2012

"ಸಂತಸದ ಜೀವನಕ್ಕೆ ಸರಳ ಸೂತ್ರಗಳು"

೧) ಕೀಳರಿಮೆ ಬಿಡಿ. ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿದಂತೆ "ತರಚುಗಾಯವ ಕೆರೆದು ಹುಣ್ಣನಾಗಿಪ ಕಪಿಯಂತೆ,ಕೊರತೆಯೊಂದನ್ನು ನೆನೆನೆದು ಕೊರಗಿ,ಮನದಲ್ಲಿ ನರಕ"ಸೃಷ್ಟಿಸಿಕೊಳ್ಳದಿರಿ.ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮ ಗುಣಗಳು ಇದ್ದೇ ಇರುತ್ತವೆ.ಅವನ್ನು ಮೊದಲು ನಾವು ಗುರುತಿಸಿಕೊಳ್ಳಬೇಕಷ್ಟೇ !
೨)ನಿಮ್ಮ ಮನಸ್ಸಿನಿಂದ ನಿಮ್ಮ ಹಳೆಯ ತಪ್ಪುಗಳು,ಸೋಲುಗಳು,ಬೇಸರಗಳು,ಪರರ ನಿಂದನೆಗಳು,ಹೀಗಳಿಕೆಗಳು ಮತ್ತು ಅವಮಾನಗಳನ್ನು ಎತ್ತಿ ಆಚೆಗೆ ಬಿಸಾಡಿ.ಅವನ್ನೆಲ್ಲಾ ಮೊದಲು ಬಿಟ್ಟುಹಾಕಿ.ನೀವು ಯಾರಿಗೂ,ಯಾವುದರಲ್ಲೂ ಕಮ್ಮಿ ಇಲ್ಲಾ ಎನ್ನುವ ಆತ್ಮ ವಿಶ್ವಾಸವನ್ನು ಹುಟ್ಟು ಹಾಕಿ.
೩)ನಿಮ್ಮ ಬಗ್ಗೆ ನೀವೇ ಮರುಕ ಪಡುವುದನ್ನು (self pity) ಮೊದಲು ನಿಲ್ಲಿಸಿ.ನಿಮ್ಮಲ್ಲಿ ಏನಿಲ್ಲ ಎನ್ನುವುದಕ್ಕಿಂತ ಏನೆಲ್ಲಾ ಇದೆ ಎನ್ನುವುದನ್ನು ಮೊದಲು ಗಮನಕ್ಕೆ ತಂದು ಕೊಳ್ಳಿ.ನೀವು ಏನು ಮಾಡಲಾರಿರಿ ಎನ್ನುವುದಕ್ಕಿಂತ ಏನನ್ನು ಮಾಡಬಲ್ಲಿರಿ ಎನ್ನುವುದರ ಕಡೆ ಗಮನಕೊಡಿ.
೪)ಸದಾ ಕಾಲ ನಿಮ್ಮ ಬಗ್ಗೆಯೇ ಚಿಂತಿಸುವುದನ್ನು ನಿಲ್ಲಿಸಿ.ನಿಮ್ಮ ರೋಗಗಳ ಬಗ್ಗೆ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಅವು ಭೂತಾಕಾರವಾಗಿ ಬೆಳೆಯುತ್ತವೆ.ನಿಮ್ಮಿಂದ ಯಾರಿಗಾದರೂ ಸಣ್ಣದೊಂದು ಸಹಾಯವಾಗಬಹುದೇ ನೋಡಿ.ಅವರಿಂದ ಏನನ್ನೂ ಬಯಸದೆ ಸಹಾಯ ಮಾಡುವುದು ಉತ್ತಮ.
೫)ಶಾಂತಿ,ಸಮಾಧಾನ,ಮತ್ತು ಆನಂದದ ಬಗ್ಗೆ ಸದಾ ಯೋಚಿಸುವುದನ್ನು ರೂಢಿಸಿಕೊಳ್ಳಿ.ಈ ಉತ್ತಮ ಗುಣಗಳು ನಿಮ್ಮ ಅಭ್ಯಾಸವಾಗಲಿ.
೬)ನಾವು ಅಂದು ಕೊಂಡಿದ್ದಕ್ಕಿಂತ ಹೆಚ್ಚು ದೈವಿಕತೆ ನಮ್ಮೊಳಗಿದೆ.ನಮ್ಮ ಅಹಂಕಾರ ಮಾಯವಾದಾಗ  ನಾವು ದೈವಿಕವಾಗಿರುತ್ತೇವೆ.ನಾವು ದೈವಿಕವಾಗಿದ್ದಾಗ ಪರಿಶುದ್ಧರಾಗಿರುತ್ತೇವೆ.ಆರೋಗ್ಯದಿಂದಿರುತ್ತೇವೆ.ನಾವು ಧ್ಯಾನದಲ್ಲಿ ಮುಳುಗಿದಾಗ ನಮ್ಮ ಅಹಂಕಾರ ಮಾಯವಾಗಿ ನಾವು ದೈವಿಕ ಸಂಪರ್ಕದಲ್ಲಿರುತ್ತೇವೆ.ನಾವು ನಿದ್ದೆ ಹೋದಾಗ ನಮ್ಮ ಅಹಂಕಾರವೂ ನಿದ್ರಿಸಿರುತ್ತದೆ.ನಮ್ಮ ಹುದ್ದೆ ,ಸಂಪತ್ತು,ಸ್ಥಾನ ಮಾನ,ಕಾಡುವುದಿಲ್ಲ.ನಾವು ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.ನಾವು ಮತ್ತೊಬ್ಬರ ಆರೈಕೆಯನ್ನು ಮನಸ್ಸಿಟ್ಟು ಮಾಡಿದಾಗ ದೈವಿಕತೆಯಲ್ಲಿ ಮುಳುಗಿರುತ್ತೇವೆ.ನಾವು ಎಲ್ಲರನ್ನೂ ಅವರಂತೆಯೇ ಸ್ವೀಕರಿಸಿದಾಗ ದೈವಿಕತೆ ಮೂಡುತ್ತದೆ.ನಮ್ಮ ದೇಹದ ಪ್ರತಿಯೊಂದು ಜೀವ ಕೋಶದಲ್ಲೂ ಪ್ರೀತಿ ತುಂಬಿ ಹರಿಯುತ್ತದೆ.ನಾವು ಈಗಿನ ಕ್ಷಣವನ್ನು ಸಂಪೂರ್ಣವಾಗಿ ಸ್ವೀಕರಿಸಿದಾಗ ಆ ಶ್ರೇಷ್ಠ ಶಕ್ತಿಯೊಂದಿಗೆ ಒಂದಾಗಿರುತ್ತೇವೆ.
೭)ನಾನು ಸಂತಸದಿಂದ ಇದ್ದೇನೆ,ಸಂತೃಪ್ತಿಯಿಂದ ಇದ್ದೇನೆ,ಆ ದೇವರ ಆಶೀರ್ವಾದದಿಂದ ನನಗೆ ಯಾವ ಕೊರತೆಯೂ ಇಲ್ಲ ಎಂದುಕೊಂಡು ಧ್ಯಾನ ಮಾಡಿ.ಎಲ್ಲದರಿಂದ ಮುಕ್ತವಾದ ಶಾಂತಿಯ ನದಿ ನಿಮ್ಮಲ್ಲಿ ಹರಿಯುತ್ತದೆ.ಅದುವೆ ದೈವಿಕತೆ!

(ಸಾಧಾರಿತ.ಭಾಗ(೬)ಮತ್ತು (೭)ಇಂದಿನ ಪ್ರಜಾವಾಣಿಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು' ಎಂಬ ಬರಹದಿಂದ ಆಯ್ದುಕೊಂಡಿದ್ದು.)

Thursday, February 9, 2012

"ನನ್ನ ಬ್ಲಾಗಿಗೆ ಎರಡು ವರ್ಷದ ಹರ್ಷ!!"

ಮೊನ್ನೆ ಮೊನ್ನೆ ಬ್ಲಾಗ್ ಶುರು ಮಾಡಿದ ಹಾಗಿದೆ.ಮೊನ್ನೆಗೆ ನನ್ನ ಬ್ಲಾಗಿಗೆ ಎರಡು ವರ್ಷ ತುಂಬಿದೆ.ಸುಮಾರು 184 ಬರಹಗಳು ಪ್ರಕಟವಾಗಿವೆ.ಸುಮಾರು 176 ಜನ  followers ಆಗಿದ್ದಾರೆ.ಬ್ಲಾಗ್ ಎನ್ನುವುದು ಏನು ಎಂದೇ ತಿಳಿಯದವನು ಅವರಿವರ ಸಹಾಯದಿಂದ ಕಷ್ಟ ಪಟ್ಟು ಶುರು ಮಾಡಿದೆ.ಈಗ ಹಿಂದಿರುಗಿ ನೋಡಿದರೆ ಇಷ್ಟೆಲ್ಲಾ ಬರಹಗಳನ್ನು ಹೇಗೆ ಬರೆದೆ ಎನ್ನುವುದು ತಿಳಿಯುತ್ತಿಲ್ಲ.ಇದಕ್ಕೆ ನಿಮ್ಮೆಲ್ಲರ ನಿರಂತರ ಪ್ರತಿಕ್ರಿಯೆ,ಪ್ರೋತ್ಸಾಹಗಳೇ ಮುಖ್ಯ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.ಎಲ್ಲಾ ಬ್ಲಾಗಿಗರದೂ ಉದಾರ ಮನಸ್ಸು.ಬ್ಲಾಗಿನ ಬಾಂಧವ್ಯ ನನಗೆ ಉತ್ತಮ ಸ್ನೇಹಿತರನ್ನು ಕೊಟ್ಟಿದೆ.ನಿಮ್ಮೆಲ್ಲರ ಪ್ರೀತಿ ,ಸ್ನೇಹಕ್ಕೆ ನಾನು ಚಿರಋಣಿ.ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳು ನನಗೆ ನಿರಂತರವಾಗಿ ಸಿಗಲಿ ಎಂದು  ಆ ದೇವರಲ್ಲಿ ನನ್ನ ಪ್ರಾರ್ಥನೆ. ತಿಳಿಯದೆ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ.ಬ್ಲಾಗಿಗೆ ಬರುವುದನ್ನು ನಿಲ್ಲಿಸಿರುವ ಎಲ್ಲಾ ಬಂಧುಗಳಿಗೂ ನನ್ನ ಬ್ಲಾಗಿಗೆ  ಬರುವಂತೆ ವಿನಂತಿ.ಇಂತಿ ನಮನಗಳು.

Sunday, February 5, 2012

"ಕೊಳಲಿನ ....ಅಳಲು!"

ಕೊಳಲಿನಲಿ ಉಸಿರಿಲ್ಲ!
ಉಸಿರಿಲ್ಲದೆ ಬೇಸರದಿಂದ 
ನಿಡುಸುಯ್ಯಲೂ.....ಉಸಿರಿಲ್ಲ!
ಉಸಿರಿಲ್ಲದ ಬದುಕಿದು
ಎಂಥಾ ......ಬದುಕು?
ಖಾಲಿ ಬಿದಿರಿನ ಬದುಕು!
ಸಾಕಾಗಿದೆ 'ಶ-ಬರಿ'ತನ!
ರಾಗ ಹಾಕಿದೆ ಗಸ್ತು!
ಕೆಲಸವಿಲ್ಲದೇ ......ಸುಸ್ತು!
'ಗೋವುಗಳ'ಕಿವಿಗಳು
ಇಂಪಿಗಾಗಿ ಕಾದು ಸೋತಿವೆ!
ಎಲ್ಲಿ ಹೋದ ಕೃಷ್ಣ?
'ಗೋಪಿಯರ' ಚಿಂತೆಯಲಿ
ಮರೆತನೇ.....ಕೊಳಲ?
ಕೇಳುವನೆ ತನ್ನ ಅಳಲ...?
ಎಲ್ಲಿ ಹೋದ...... ಕೃಷ್ಣ?
ಎಲ್ಲಿ ಹೋದ..... ಕೃಷ್ಣ ?
ಬರೀ ಮೂರ್ತಿಯನೆ ಬಿಟ್ಟು!!
(ಕವಿತೆಯನ್ನು ಬರೆಯಲು ಪ್ರೇರಣೆ ನೀಡಿದ ಮಿತ್ರ ,ಕವಿ ,ಬದರಿನಾಥ್ ಪಲವಳ್ಳಿ ಯವರಿಗೆ ನಮನಗಳು.'ಶಬರಿ'ತನ ಅವರು ಬಳಸುವ ಪದ.ಅವರ ಅನುಮತಿ ಪಡೆಯದೇ ನಾನೂ ಬಳಸಿಕೊಂಡಿದ್ದೇನೆ.ಬದರಿ ಸರ್ ಕ್ಷಮೆ ಇರಲಿ .)

Thursday, January 26, 2012

"ಮೂಲಾ ನಕ್ಷತ್ರ !!"

ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ.ಪರಿಚಿತರೊಬ್ಬರು ಹೇಳಿದ್ದು.ಮೂಲಾ ನಕ್ಷತ್ರದ ಹುಡುಗಿಯೊಬ್ಬಳಿಗೆ ಮದುವೆ ಆಗುವುದು ಕಷ್ಟವಾಗಿತ್ತು.ಹುಡುಗಿಯ ಚಿಕ್ಕಪ್ಪ ಬುದ್ಧಿವಂತ,ಗಟ್ಟಿಗ ಮತ್ತು ಒಳ್ಳೆಯ ಮಾತುಗಾರ.ಹೇಗೋ ಮಾಡಿ ಒಂದು ಒಳ್ಳೆಯ ಸಂಬಂಧ ಕುದುರಿಸಿದರು.ಮದುವೆಯೂ ಆಗಿ ಹೋಯಿತು.ಸುಖ ಸಂಸಾರ.ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಹುಡುಗಿಯ ಆತ್ತೆ ಹೃದಯಾಘಾತದಿಂದ ತೀರಿ ಹೋದರು.'ಹುಡುಗಿಯ ಕಾಲ್ಗುಣ ಸರಿ ಇಲ್ಲ  ,ಅದಕ್ಕೇ ಹೀಗಾಯಿತು 'ಅಂತ ಹುಡುಗನ ಮನೆಯವರು ಕಿರಿ ಕಿರಿ ಶುರು ಮಾಡಿ ,ಮದುವೆ ಮಾಡಿಸಿದ ಹುಡುಗಿಯ ಚಿಕ್ಕಪ್ಪನನ್ನು ಕರೆಸಿ ಕ್ಯಾತೆ ತೆಗೆದರು.ಹುಡುಗಿಯ ಚಿಕ್ಕಪ್ಪ ಸ್ವಲ್ಪವೂ ವಿಚಲಿತನಾಗದೆ 'ಈಗೇನಾಯಿತು?ಒಳ್ಳೆಯದೇ ಆಗಿದೆಯಲ್ಲಾ!ಹುಡುಗಿಯ ಕಾಲ್ಗುಣದಿಂದ ಹುಡುಗಿಯ ಅತ್ತೆಗೆ ಮುತ್ತೈದೆ ಸಾವು ಬಂದಿದೆ!ಇದಕ್ಕಿಂತ ಪುಣ್ಯ ಬೇಕೇ?'ಎಂದು ಬಾಂಬ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದರಂತೆ.ಅವರ ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಗೆ "ವಾಹ್"ಎನಬೇಕು!ಆ ವ್ಯಕ್ತಿ ಈಗ ಇಲ್ಲ.ಆದರೆ ಅವರು ಬಾಳು ಹಸನಾಗಿಸಿದ ಆ ಹೆಣ್ಣು, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸುಖವಾಗಿದ್ದಾರೆ.

Sunday, January 22, 2012

"ಮುಲ್ಲಾ ನಾಸಿರುದ್ದೀನನ ಚತುರತೆ!"

ಮುಲ್ಲಾ ನಾಸಿರುದ್ದೀನನ ಬುದ್ಧಿವಂತಿಕೆ ಮತ್ತು ಅವನ ಕೀರ್ತಿಯನ್ನು ಕಂಡು ಅವನ ಊರಿನ ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದರು.ಹೇಗಾದರೂ ಮಾಡಿ ಅವನನ್ನು ಅವಮಾನಿಸಬೇಕೆಂದು ಹೊಂಚು ಹಾಕುತ್ತಿದ್ದರು.ಇದು ಮುಲ್ಲಾನಿಗೂ ತಿಳಿದಿತ್ತು.ಅವನೂ ತಕ್ಕ ಪಾಠ ಕಲಿಸಲು ಸಮಯ ಕಾಯುತ್ತಿದ್ದ.ಎಲ್ಲರೂ ಸೇರಿ ಮುಲ್ಲಾನನ್ನು ಒಂದು  ಪ್ರವಚನ ಕೊಡುವಂತೆ ಕೇಳಿಕೊಂಡರು.ಮುಲ್ಲಾ ಒಪ್ಪಿಕೊಂಡು ,ಹೇಳಿದ ಸಮಯಕ್ಕೆ ಹಾಜರಾಗಿ 'ನಾನು ಕೊಡುತ್ತಿರುವ ಪ್ರವಚನದ ವಿಷಯದ ಬಗ್ಗೆ ತಮಗೇನಾದರೂ ಗೊತ್ತಿದೆಯೇ?'ಎಂದು ಸಭೆಯಲ್ಲಿ ನೆರೆದ ಜನರನ್ನು ಕೇಳಿದ.ಸಭೆಯಲ್ಲಿದ್ದವರು ತಮಗೇನೂ ತಿಳಿಯದೆಂದರು.
'ಏನೂ ತಿಳಿಯದವರಿಗೆ ತಾನು ಹೇಳುವುದರಿಂದ ಏನೂ ಪ್ರಯೋಜನವಿಲ್ಲ'ಎಂದು ಮುಲ್ಲಾ ಮನೆಗೆ  ಹೋಗಿಬಿಟ್ಟ. ಅವರೆಲ್ಲಾ ಮತ್ತೆ ಹೋಗಿ ಅವನನ್ನು ಮತ್ತೆ ಪ್ರವಚನ ಕೊಡುವಂತೆ ಒತ್ತಾಯಿಸಿದರು.ಸಭೆಯಲ್ಲಿ ಈ ಬಾರಿ ಮುಲ್ಲಾ ಮತ್ತದೇ ಪ್ರಶ್ನೆ ಕೇಳಿದ,'ನಾನು ಹೇಳುತ್ತಿರುವ ವಿಷಯದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ?'ಸಭೆಯಲ್ಲಿದ್ದ ಅರ್ಧ ಜನ ತಿಳಿದಿದೆ ಎಂದರೆ ,ಇನ್ನರ್ಧ ಜನ ತಿಳಿದಿಲ್ಲ'ವೆಂದರು.ಮುಲ್ಲಾ 'ಹಾಗಾದರೆ ತಿಳಿದವರು ತಿಳಿಯದೆ ಇದ್ದವರಿಗೆ ಹೇಳಿ,ನನಗೆ ಬೇರೆ ಕೆಲಸವಿದೆ'ಎಂದು ಹೊರ ನಡೆದ.ಅಂದಿನಿದ ಹೊಟ್ಟೆ ಉರಿ ಪಡುತ್ತಿದ್ದವರು ಅವನ ಸಹವಾಸವೇ ಬೇಡವೆಂದು ದೂರ ಸರಿದರು.
( ಆಧಾರ:ಸೂಫಿ ಕಥಾಲೋಕ -ಪ್ರೊ.ಬಿ.ಗಂಗಾಧರ ಮೂರ್ತಿ)

Saturday, January 14, 2012

"ದೃಷ್ಟಿಯಂತೆ .........ಶೃಷ್ಟಿ!!"

ಇಂದಿನ ಪ್ರಜಾವಾಣಿಯ 'ಭೂಮಿಕಾ'ದಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು'ವಿನಲ್ಲಿ 'ಸುಂದರ ಯೋಚನೆಗಳಿರಲಿ' ಎಂಬ ಬರಹ ಗಮನ ಸೆಳೆಯಿತು.ನಿಮಗೆಲ್ಲಾ ಹಾರ್ದಿಕ ಸಂಕ್ರಮಣದ ಶುಭಾಶಯಗಳನ್ನು ಕೋರುತ್ತಾ ಈ ಸುಂದರ ಬರಹದ ಕೆಲ ಪ್ರಮುಖ ಅಂಶಗಳನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

'ನಾವೆಲ್ಲಾ ನಮ್ಮ ಯೋಚನೆ,ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ.ನಮಗೆ ಜಗತ್ತು ಕೆಟ್ಟದ್ದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ,ಅದಕ್ಕೆ ನಮ್ಮ ಯೋಚನೆ ಕಾರಣ.ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ,ಆಗ ಜಗತ್ತು ಹೇಗೆ ಬದಲಾಗುತ್ತದೆ ನೋಡಿ.ಜಗತ್ತು ಸುಂದರ ಮತ್ತು ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ.ನಮ್ಮ ಸುತ್ತಲಿನ ಜಗತ್ತನ್ನು ಸುಂದರ ಗೊಳಿಸುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ.ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಗಳನ್ನು ಹೆಚ್ಚಿಸಿಕೊಳ್ಳಿ'ಎನ್ನುತ್ತಾರೆ ಲೇಖಕರು.

ಇದಕ್ಕೆ 'ಕ್ವಾಂಟಮ್ ಫಿಸಿಕ್ಸ್' ನಲ್ಲಿ 'observer effect' ಎನ್ನುತ್ತಾರೆ.'If you change the way you look at things ,the things you look at change' ಎನ್ನುವ ಒಂದು ಪ್ರಸಿದ್ಧ ಹೇಳಿಕೆ ಇದೆ.ಆದರೆ'ವರ್ಷಾನುಗಟ್ಟಲೆಯ ಅಭ್ಯಾಸಬಲ ದಿಂದ  ಜಗತ್ತನ್ನು ಸಂಶಯದಿಂದ ,ಎಚ್ಚರಿಕೆಯಿಂದ  ನೋಡುವ ನಮ್ಮ  ದೃಷ್ಟಿಕೋನವನ್ನು  ಸುಲಭದಲ್ಲಿ ಬದಲಾಯಿಸಲು ಸಾಧ್ಯವೇ?'ಎನ್ನುವ ಪ್ರಶ್ನೆ ಸಹಜವಾಗಿ  ಮೂಡುತ್ತದೆ.ನಮಗೆ ಹಿಂದೆ ಮೋಸ ಹೋದ ಅನುಭವ ಯಾರನ್ನೂ ಸುಲಭವಾಗಿ ನಂಬದಂತೆ ಮಾಡುತ್ತದೆ.ದಿನ ನಿತ್ಯದ ಬದುಕಿನಲ್ಲಿ ಕಣ್ಣೆದುರಿಗೇ ಮೋಸ ,ವಂಚನೆ ,ಕ್ರೌರ್ಯ ಕಾಣುತ್ತಿರುವಾಗ ಜಗತ್ತು ಸುಂದರವಾಗಿದೆ ಎಂದುಕೊಳ್ಳುವುದು ಹೇಗೆ ಸಾಧ್ಯ?ಇದು ಸತ್ಯಕ್ಕೆ ದೂರವಲ್ಲವೇ?ಎನ್ನುವ ಪ್ರಶ್ನೆ ಕಾಡುತ್ತದೆ. 
'ಯದ್ಭಾವಂ ತದ್ಭವತಿ'.'ದೃಷ್ಟಿಯಂತೆ ಶೃಷ್ಟಿ' ಎನ್ನುವುದನ್ನು ನಾವು ಮೊದಲು  ನಂಬಬೇಕು.ನನಗೆ ಪರಿಚಯವಿರುವ ಇಬ್ಬರು ಮಹಿಳೆಯರ ಅನುಭವವೇ ಇದಕ್ಕೆ ಸಾಕ್ಷಿ.ಒಬ್ಬ ಮಹಿಳೆ 'ನೂರಕ್ಕೆ ತೊಂಬತ್ತರಷ್ಟು ಆಟೋದವರು ಒಳ್ಳೆಯವರು,ಸಾಮಾನ್ಯವಾಗಿ ಮೋಸ ಮಾಡುವುದಿಲ್ಲ 'ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಎಂದೂ ತೊಂದರೆಯಾಗಿಲ್ಲ.ಒಳ್ಳೆಯ ಆಟೋದವರೇ ಸಿಗುತ್ತಾರೆ.ಆದರೆ ಅದೇ ಇನ್ನೊಬ್ಬರು ಬಹಳಷ್ಟು ಆಟೋದವರು ಮೋಸಮಾಡುತ್ತಾರೆ ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಅದೇ ರೀತಿಯವರು ಸಿಗುತ್ತಾರೆ.ಇದು ಬರೀ ಕಾಕ ತಾಳೀಯವೆಂದು ಹಗುರವಾಗಿ ತಳ್ಳಿ ಹಾಕುವಂತಿಲ್ಲ.ಮೊದಲಿಗೆ ಕಷ್ಟ ಸಾಧ್ಯವೆನಿಸಿದರೂ ನಾವು ನೋಡುವ ದೃಷ್ಟಿಯನ್ನು ಕ್ರಮೇಣ, ಪ್ರಯತ್ನ ಪೂರಕವಾಗಿ,ಬದಲಾಯಿಸಿ ಕೊಳ್ಳೋಣ.ಜಗತ್ತನ್ನು ಸುಂದರವೆಂದು ಕಾಣುವ ದೃಷ್ಟಿಯೂ ನಮಗೆ ಅಭ್ಯಾಸವಾಗಲಿ.ಒಂದು ಸುಂದರ ಜಗತ್ತನ್ನು ಶೃಷ್ಟಿ ಸೋಣ.'ಸರ್ವೇ ಜನಾಹ ಸುಖಿನೋ ಭವಂತು'.ಎಲ್ಲೆಲ್ಲೂ ಸುಖ ಮತ್ತು ಸಂತೋಷದ ಸಾಮ್ರಾಜ್ಯವೇ ರಾರಾಜಿಸಲಿ ಎಂದು ಪ್ರಾರ್ಥಿಸುತ್ತಾ ನಿಮ್ಮೆಲ್ಲರಿಗೂ ಸಂಕ್ರಾಂತಿಯು ಶುಭದಾಯಕವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ. 

Thursday, January 5, 2012

"ಜಾಯೆತೋ.....ಜಾಯೇ..ಕಹಾಂ ? "

ಬ್ಲಾಗ್ ಲೋಕದಿಂದ ವಿಮುಖನಾಗುತ್ತಿದ್ದೇನೆಯೇ?ಗೊತ್ತಿಲ್ಲ.ದಿನಕ್ಕೊಂದು ಬರಹವನ್ನು ಶೃಷ್ಟಿ ಮಾಡುತ್ತಿದ್ದ ಮನಸ್ಸು ಏಕೋ ಮಂಕಾಗಿದೆ !ಬ್ಲಾಗಿನ ಬರಹ ಪೋಸ್ಟ್ ಮಾಡಿ ಮೂರು ವಾರವಾಯಿತು.ಅದಕ್ಕೂ ಹಿಂದಿನ ಎರಡು ಬರಹಗಳೂ ಹಳೆಯ ಸರಕೇ!
ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಹೆಚ್ಚು ಹೆಚ್ಚು ನಿರಮ್ಮಳವಾಗಿ ಇರಬೇಕೆಂದುಕೊಂಡಷ್ಟೂ, ದಿನ ನಿತ್ಯದ ಜಂಜಾಟಗಳಿಂದ,ಸ್ವಾರ್ಥಿಗಳ ನಡವಳಿಕೆಯಿಂದ ಮನಸ್ಸು ಮುದುಡಿಹೋಗಿ,ಸೃಜನ ಶೀಲತೆ ಕಮ್ಮಿಯಾಗಿದೆ. 'ಜಾಯೆತೋ ಜಾಯೆ ಕಂಹಾ..... 'ಎನ್ನುವ ಹಳೆಯ ಹಿಂದಿ ಹಾಡೊಂದು ಪದೇ ಪದೇ ನೆನಪಾಗುತ್ತಿದೆ. ಒಂದು ರೀತಿಯ ಅತಂತ್ರ ಸ್ಥಿತಿ ! ಇದು ಪ್ರತಿ ಯೊಬ್ಬರ, ಪ್ರತಿನಿತ್ಯದ ಅನುಭವ!ಅಲ್ಲವೇ?ಈ ಚಕ್ರವ್ಯೂಹದಿಂದ ಹೊರ ಬರುವುದನ್ನು ನಾವೇ ಕಂಡು ಕೊಳ್ಳಬೇಕು.ನಿಮ್ಮೆಲ್ಲರ ಪ್ರೀತಿ ,ಆದರ,ಸ್ನೇಹ ಮತ್ತು ಶುಭ ಹಾರೈಕೆ ಮತ್ತೆ ನನ್ನ ಬರಹಕ್ಕೆ ಹೊಸ ಕಸುವನ್ನೂ,ಚೈತನ್ಯವನ್ನೂ ತುಂಬಲಿ.ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲಾಗುತ್ತಿಲ್ಲ.ಕ್ಷಮೆ ಇರಲಿ.ನಮಸ್ಕಾರ.

Saturday, December 17, 2011

"ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ?"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)

Sunday, December 11, 2011

"ಜಗವೆಲ್ಲ ಮಲಗಿರಲು....!!! "

ಸುಮಾರು  ಮೂವತ್ತು ವರ್ಷಗಳ  ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು.  ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು  ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ  ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ  ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ  ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ  ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ  ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ  ನೀನು ಬದುಕಿದ್ದರೆನಮಗೆ ಅಷ್ಟೇ  ಸಾಕು'ಎಂದು  ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ  ಹಲವಾರು ಕನ್ಸಲೇಟ್  ಗಳಿಗೆ  ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು  ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ  ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ'  ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ  ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.
(ಸುಮಾರು ಒಂದು ವರ್ಷದ ಹಿಂದೆ ಹಾಕಿದ ಪೋಸ್ಟ್ ಇದು.ಹೊಸ ಓದುಗರಿಗಾಗಿ ಮತ್ತೆ ಹಾಕಿದ್ದೇನೆ.)

Wednesday, December 7, 2011

"ತಣ್ಣಗಿರಿಸಾತ್ಮವನು...."

ಕಡ್ಡಿಯನ್ನು ಗುಡ್ಡ ಮಾಡಿ
ಗುಡ್ಡವನ್ನು ವೃಥಾ
ಅಗೆದದ್ದೇ,ಅಗೆದದ್ದು!
ನೆಮ್ಮದಿಯ  ಸಿಹಿನೀರಾಗಲೀ 
ಅರಿವಿನ ಊಟೆಯಾಗಲೀ
ದಕ್ಕಿತೇ ದಣಿವು ನೀಗಲು?
ಬದಲಿಗೆ ಸಂಚಯ 
ರಾಶಿ ರಾಶಿ,ಗುಡ್ಡೆ ಗುಡ್ಡೆ 
ವ್ಯರ್ಥ ಚಿಂತೆಯ ಮಣ್ಣು!
ನಿದ್ದೆ ಬಾರದೆ ಅಳುವ 
ತೊಟ್ಟಿಲಿನ ಕೂಸನ್ನು 
ಗಂಟೆಗಟ್ಟಲೆ
ತೂಗಿದ್ದೇ ,ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!
ಸಾಗರದಲೆಗಳಂತೆ ಭೋರ್ಗರೆದ
ತಿಂಗಳುಗಟ್ಟಲೆಯ  
ಚಿಂತೆಯ ಮೊರೆತ
ನೀರಿನ ಆವಿಯಂತೆ 
ಕ್ಷಣ ಒಂದರಲೇ ಮಾಯ!
ಕಾಯಬೇಕು ಆ ಸಮಯಕ್ಕೆ!
ಒಂಬತ್ತು  ತಿಂಗಳ ನರಳಿಕೆಯ 
ಸುಖಪ್ರಸವದ ಸುಮುಹೂರ್ತಕ್ಕೆ!
ಸಮಯ ಬಂದಾಗ..........,
ಎಲ್ಲವೂ ಸುಸೂತ್ರ!!

Sunday, December 4, 2011

"ಧ್ಯಾನದಲ್ಲಿ ಫ್ಲಶ್ ಮಾಡಿ!" ( Flush Meditatively ! )

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಚಿತ್ರ ಕಲಾ ಪರಿಷತ್ ಗೆ ಹೋಗಿದ್ದೆ.ಅಲ್ಲೊಂದು ಚಿತ್ರಕಲಾ ಪ್ರದರ್ಶನ ನೋಡಿಕೊಂಡು ವಾಪಸ್ ಬರುತ್ತಿದ್ದಾಗ ಅಲ್ಲೇ 'ಓಶೋ ಮೆಡಿಟೇಶನ್ ಸೆಂಟರ್'ಎನ್ನುವ ಬೋರ್ಡ್ ಕಾಣಿಸಿತು.ಸರಿ,ಒಮ್ಮೆ ನೋಡಿಕೊಂಡು ಬರೋಣ ಎಂದು ಒಳ ಹೊಕ್ಕೆ.ಅದನ್ನು ನೋಡಿಕೊಳ್ಳುತ್ತಿದ್ದ ಸುಮಾರು ಎಂಬತ್ತು ವರ್ಷಗಳ ವಯೋ ವೃದ್ಧರ ಮುಖದಲ್ಲಿ ಅಪೂರ್ವ ಕಾಂತಿ ಇತ್ತು.ಅವರು ಆಚಾರ್ಯ ರಜನೀಶರಿಗೆ ಬಹಳ ಆಪ್ತರಾಗಿದ್ದವರು.ಹತ್ತಿರದಿಂದ ಬಲ್ಲವರು.ಬೆಂಗಳೂರಿನ ಸೆಂಟರ್ ಅನ್ನು ಸುಮಾರು ಮೂವತ್ತು ವರ್ಷಗಳಿಂದ ಅವರೇ ನೋಡಿಕೊಳ್ಳುತ್ತಿದ್ದಾರೆ .ಅವರ ನಡವಳಿಕೆಯಲ್ಲಿ ಒಂದು ವಿಶಿಷ್ಟ ರೀತಿಯ ಸೌಮ್ಯತೆ ಇತ್ತು .ಅಲ್ಲಿದ್ದ ಲೈಬ್ರರಿಯಲ್ಲಿ ಕೆಲ ಪುಸ್ತಕಗಳನ್ನು ಖರೀದಿಸಿದೆ.ಅಲ್ಲೇ ಇದ್ದ ಧ್ಯಾನ ಮಂದಿರದಲ್ಲಿ ಕುಳಿತು ಧ್ಯಾನ ಮಾಡಿದಾಗ ಮನಸ್ಸಿಗೆ  ಯಾವುದೋ ಅಲೌಕಿಕ ಆನಂದದ ಅನುಭೂತಿಯಾಯಿತು.ಅಲ್ಲಿದ್ದ ಪ್ರಶಾಂತ ವಾತಾವರಣ ವಿಶಿಷ್ಟವೆನಿಸಿತ್ತು.ಅಲ್ಲೇ ಹಿಂದೆ ಇದ್ದ ಟಾಯ್ಲೆಟ್ಟಿಗೆ ಹೋದೆ.ಅಲ್ಲಿ ಫ್ಲಷ್ ಮಾಡುವ ಜಾಗದಲ್ಲಿ 'FLUSH  MEDITATIVELY ' ಎನ್ನುವ ಬೋರ್ಡ್ ಇತ್ತು! 
ಕುತೂಹಲದಿಂದ ಅಲ್ಲಿಯ ಮೇಲ್ವಿಚಾರಕರಲ್ಲಿ  ಅದರ ಪ್ರಸ್ತಾಪ ಮಾಡಿದೆ.ಅದಕ್ಕೆ ಅವರು ನಗುತ್ತ ಕೊಟ್ಟ ಉತ್ತರ ಬಹಳ ಅರ್ಥ ಪೂರ್ಣವಾಗಿತ್ತು.'ನೀವು ಏನೋ ಯೋಚನೆ ಮಾಡುತ್ತಾ ಜೋರಾಗಿ flush ಮಾಡಿದರೆ ಅದರ ಹಿಡಿಯೇ ಕಿತ್ತು ಹೋಗಬಹುದು.ಧ್ಯಾನದಲ್ಲಿ ಇರುವುದು ಎಂದರೆ ಸಂಪೂರ್ಣ ಎಚ್ಚರದಲ್ಲಿ ಇರುವುದು ಎಂದರ್ಥ.ನೀವು ಯಾವುದೇ ಕೆಲಸ ಮಾಡುವಾಗ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಇರಿ ಎನ್ನುವುದನ್ನು ನೆನಪಿಸುವುದಕ್ಕೆ ಆ ರೀತಿ ಬೋರ್ಡ್ ಹಾಕಿದ್ದೇವೆ. ಧ್ಯಾನದ ಸ್ಥಿತಿಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ಮತ್ತು ಕೆಟ್ಟ ಆಲೋಚನೆಗಳನ್ನೂ flush ಮಾಡಿ 'ಎಂದು ಮಾರ್ಮಿಕವಾಗಿ ನಕ್ಕರು ! ಅವರ ಅರ್ಥ ಪೂರ್ಣ ಮಾತುಗಳ ಬಗ್ಗೆ ಯೋಚಿಸುತ್ತಾ ಮನೆಯ ದಾರಿ ಹಿಡಿದೆ.

Saturday, November 19, 2011

"ಅಂತಃ -ಕುರುಕ್ಷೇತ್ರ"

ನಾನೂ ನೀಲಕಂಠನಾಗಬೇಕಿದೆ!
ನನ್ನ  ಸುತ್ತ ಮುತ್ತಲಿರುವ 
ನೋವಿನ  ಗರಳ ಕುಡಿದೂ 
ನಗು ನಗುತ್ತಾ ಬದುಕುತ್ತಿರುವ 
ಹಲ  ಕೆಲವು  
ನಂಜುಂಡ  ನಂಜುಂಡಿಯರಂತೆ!
ಅವರವರಿಗಿದೆ  ಅವರವರದೇ 
ಒಡಲಾಳದ  ಜ್ವಾಲೆ!
ಸಹನೆ ಗುಪ್ತ ಗಾಮಿನಿ ! 
ಖಿನ್ನತೆಯ  ಕಾಳಿಂಗನ ಮೆಟ್ಟಿ 
ಎದೆಯಾಳದಿ  ಹೆಪ್ಪುಗಟ್ಟಿದ 
ಹಿಮದ  ಹೆಬ್ಬಂಡೆಗಳು ಕರಗಿ 
ಮನದೊಳಗೇ ಕೊರೆಯುವ 
ಚಿಂತೆಯ  ಕಂಬಳೀ  ಹುಳ 
ಪತಂಗವಾಗಿ  ಮಾರ್ಪಟ್ಟು 
ಬಣ್ಣದ  ಪಕ್ಕಗಳ ತೊಟ್ಟು 
ಆನಂದದ  ಲೋಕದಲ್ಲಿ 
ಹಾರಾಡಬೇಕಿದೆ. 
ನಾವೇ ಸೃಷ್ಟಿಸಿಕೊಂಡ
ಮನದ ಕೊಳಗೇರಿಯಲ್ಲೊಂದು 
ನಂದನವನ  
ತಲೆ ಎತ್ತಬೇಕಿದೆ!
 

Saturday, November 5, 2011

"ಸ್ಕ್ಯಾನಿಂಗ್ ರಿಪೋರ್ಟ್!!!"

ಅವನು ಸುಮಾರು ಇಪ್ಪತ್ತೆರಡರ ಯುವಕ.ಹಲವು ದಿನಗಳಿಂದ ಇದ್ದಕ್ಕಿದ್ದಂತೆ ಎಡಗಡೆ ಪಕ್ಕೆಯ ಭಾಗದಲ್ಲಿ ವಿಪರೀತ ನೋವು ಬರುತ್ತಿದೆ ಎಂದು ಹೇಳಿಕೊಂಡು ನಮ್ಮ ಆಸ್ಪತ್ರೆಗೆ ಬಂದ.ಮೂತ್ರ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳು ಕಂಡು ಬಂದಿದ್ದರಿಂದ ಅವನ ಕಿಡ್ನಿ ಯಲ್ಲಿ ಏನಾದರೂ ಕಲ್ಲುಗಳಿವೆಯೇ(Renal calculi) ಎಂದು ನೋಡಲು ಅವನನ್ನು ಶಿವಮೊಗ್ಗೆಯ ಸ್ಕ್ಯಾನಿಂಗ್ ಸೆಂಟರ್ ಒಂದಕ್ಕೆ 'ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್' ಗಾಗಿ ಕಳಿಸಿದೆವು.ಯುವಕ ಮಾರನೇ ದಿನ ಸ್ಕ್ಯಾನಿಂಗ್ ರಿಪೋರ್ಟ್ ತೆಗೆದುಕೊಂಡು ಬಂದ.ನಾವು ಅಂದುಕೊಂಡಿದ್ದಂತೆ ಅವನ ಎಡಗಡೆಯ ಕಿಡ್ನಿಯಲ್ಲಿ ಸಣ್ಣ ಸಣ್ಣ ಹರಳುಗಳಿದ್ದವು. ಆ ರಿಪೋರ್ಟ್ ಪ್ರಿಂಟ್ ಆಗಿದ್ದ format ನಲ್ಲಿತ್ತು.ಅದರಲ್ಲಿ ಎಲ್ಲಿ ತೊಂದರೆ ಇದೆಯೋ ಅದರ ಬಗ್ಗೆ ಬರೆದು ಮಿಕ್ಕ ಕಾಲಂ ಗಳಲ್ಲಿ normal ಎಂದು ಬರೆದು ಕಳಿಸುವುದು ಅವರ  ರೂಢಿ.ಆದರೆ ಈ ರೀತಿ routine ಆಗಿ ಕಾಲಂ ಗಳನ್ನು ತುಂಬಿ ಕಳಿಸಿದರೆ ಆಗುವ ಆಭಾಸವನ್ನು ನೀವೇ ನೋಡಿ. ಅದರಲ್ಲಿದ್ದ ಮಿಕ್ಕ ಕಾಲಂ ಗಳ ರಿಪೋರ್ಟ್ ಈ ರೀತಿ ಇತ್ತು:
Rt.Kidney;normal
Liver;normal,
Gall bladder:normal
UTERUS(ಗರ್ಭಕೋಶ): NORMAL
OVARIES(ಅಂಡಾಶಯಗಳು): NORMAL
ಗಂಡಸೊಬ್ಬನ ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಗರ್ಭ ಕೋಶ ಮತ್ತು ಅಂಡಾಶಯಗಳು NORMAL ಎಂದು ರಿಪೋರ್ಟ್!!ಅವನ ಈ ರಿಪೋರ್ಟ್ ನೋಡಿ ನಮ್ಮ ಮಹಿಳಾ ವೈಧ್ಯಾಧಿಕಾರಿಗಳು ಬಿದ್ದು,ಬಿದ್ದು ನಗುತ್ತಿದ್ದರು.ನಾನೂ ನಗುತ್ತಲೇ ನನ್ನ ಚೇಂಬರ್ ಗೆ ಹೋದೆ.
 

Thursday, November 3, 2011

"ಎಲೇಲೆ ರಸ್ತೇ!ಏನೀ ಅವ್ಯವಸ್ಥೆ?!"

ಪಾಪಿ ಚಿರಾಯು !
ಈ ಕೆಟ್ಟ ರಸ್ತೆಯ ಹಾಗೆ !
ಒಂದು ಕಡೆಯಿಂದ 
ಮರಮ್ಮತ್ತು ನಡೆಯುತ್ತಿದ್ದಂತೆ 
ಮತ್ತೊಂದು ಕಡೆಯಿಂದ 
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ 
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ 
ಜಲ್ಲಿ ಕಲ್ಲಿನ ಹಿಂದೆ 
ಕೋಟಿಗಟ್ಟಲೆ ಹಣದ 
ಲೂಟಿಯ ಕಥೆ!
ಟಾರಿನಂತೆಯೇ 
ಕೊತ ಕೊತನೆ ಕುದಿವವರ  
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ !
ಇದ್ದ  ಬದ್ದ 
ಇಂಚಿಂಚು ಜಾಗವನ್ನೂ 
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ 
ಹಳ್ಳ ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು 
ಧರಣಿ ಕೂತಿವೆಯೇ ಹೇಗೆ !?
ಎಷ್ಟು ಹೇಳಿದರೂ ಅಷ್ಟೇ!
ಎಷ್ಟು ಹಳಿದರೂ ಅಷ್ಟೇ !
ಇದು ತೀರದ, ಮುಗಿಯದ 
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ 
ಬವಣೆಗಳ ಹಾಗೆ !!!

Tuesday, November 1, 2011

"ಕನ್ನಡಮ್ಮನ ಅಳಲು"

ಇಂದು ಕನ್ನಡ ರಾಜ್ಯೋತ್ಸವ.ಎಲ್ಲೆಲ್ಲೂ ಕನ್ನಡದ ಕಲರವ!ಮನಸ್ಸುಖುಷಿಯಿಂದ  ಗರಿಗೆದರಿ ಹಾರಾಡುತ್ತದೆ.ಈ ನೆಲ ,ಈ ಜಲ,ಈ ಭಾಷೆಯ ವೈವಿಧ್ಯಮಯ ಸೊಗಡು, ನೆನಸಿಕೊಂಡರೆ ಮೈ ನವಿರೇಳುತ್ತದೆ!ಕನ್ನಡ ಸಾಹಿತ್ಯವಂತೂ ನನಗೆ ಅಚ್ಚುಮೆಚ್ಚು! ಆದರೂ ಕೆಲವೊಮ್ಮೆ ಅವಿದ್ಯಾವಂತ ಕನ್ನಡಿಗರ ಸ್ಥಿತಿ ನೋಡಿ ಮನ ಕಲಕುತ್ತದೆ.ಸುಮಾರು ಆರು ವರ್ಷಗಳ  ಹಿಂದೆ ನಡೆದ ಮನ ಮಿಡಿಯುವ ಘಟನೆಯೊಂದು ನೆನಪಿನ ಮೂಲೆಯೊಂದರಲ್ಲಿ ಉಳಿದುಬಿಟ್ಟಿದೆ.ಈ ದಿನ ಆ ಘಟನೆ ಮತ್ತೆ ,ಮತ್ತೆ ನೆನಪಾಗುತ್ತಿದೆ.ನನ್ನ ಬ್ಲಾಗಿನಲ್ಲಿ ಇದರ ಬಗ್ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದಿದ್ದೆ.ಈ ದಿನ ಮತ್ತೆ ಬರೆಯಬೇಕಿನಿಸಿದೆ.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿ ಹೆಂಗಸೊಬ್ಬಳು ತನ್ನ ಎರಡು ಮಕ್ಕಳನ್ನು ಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೇನ್ರಿ?'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ನಾನು ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ!'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!
ಇದನ್ನು' ಕನ್ನಡಮ್ಮನ ಅಳಲು'ಎನ್ನೋಣವೇ?ಈಗ ಸ್ಥಿತಿ ಸ್ವಲ್ಪ ಸುಧಾರಿಸಿರಬಹುದು.ಆದರೂ ,ಕನ್ನಡ ನಾಡು ,ನುಡಿ ಮತ್ತು ಕನ್ನಡ ಜನರಿಗಾಗಿ ನಾವೇನು ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಇದಲ್ಲವೇ?ಎಲ್ಲ ಕನ್ನಡಿಗರಿಗೂ ಶುಭವಾಗಲಿ ಎಂದು ಹಾರೈಸೋಣ.

Sunday, October 30, 2011

"ನನ್ನ ರೊಕ್ಕಾ ನನಗ್ ಕೊಡ್ರೀ !!! "

ನನ್ನ ಸ್ನೇಹಿತ ಹೇಮಚಂದ್ರ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಧಿಕಾರಿ.ಕೆಲ ವರ್ಷಗಳ ಹಿಂದೆ ರಾಯಚೂರಿನ ಬಹಳ ಹಿಂದುಳಿದ ತಾಲ್ಲೂಕೊಂದರ ಹಳ್ಳಿಯಲ್ಲಿದ್ದ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ.ಒಂದು ದಿನ ಬ್ಯಾಂಕಿಗೆ ಅಜ್ಜನೊಬ್ಬ ಹಳೆಯ ರುಮಾಲೊಂದರಲ್ಲಿ ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಕಟ್ಟಿಕೊಂಡು ಬಂದು ,'ಯಪ್ಪಾ......, ನಾ ಸೇರಿಸಿಟ್ಟ ರೊಕ್ಕಾಇದರಾಗ  ಐತಿ.ಇದನ ನೀವು ಜ್ವಾಪಾನ ಮಾಡ್ತೀರೇನ್ ಯಪ್ಪಾ?' ಎಂದು ಕೇಳಿದ.ತಮ್ಮ ಬ್ಯಾಂಕ್ ಇರುವುದೇ ಅದಕ್ಕೆಂದೂ,ಅವನ ಹಣವನ್ನು ಜೋಪಾನವಾಗಿ ಇಡುವುದಲ್ಲದೇ ಅದಕ್ಕೆ ವರುಷಕ್ಕೆಇಷ್ಟು ಅಂತ ಬಡ್ಡಿಯನ್ನೂ ಸೇರಿಸಿಕೊಡುವುದಾಗಿ ಬ್ಯಾಂಕಿನವರು ಹೇಳಿದರು.'ಯಪ್ಪಾ ನನಗ ಬೇಕಂದಾಗ ನನ ರೊಕ್ಕಾ ನನಗ ಕೊಡ್ತೀರೆನ್ರೀ?'ಎಂದು ಎರೆಡೆರಡು ಬಾರಿ ಕೇಳಿಕೊಂಡ ಮೇಲೆ ತನ್ನ ಗಂಟನ್ನು ಬಿಚ್ಚಿ ಟೇಬಲ್ ಮೇಲಿಟ್ಟ.ಅದರಲ್ಲಿ ಐದು,ಹತ್ತು,ಇಪ್ಪತ್ತರ ಹಲವು ನೋಟುಗಳೂ,ಐವತ್ತು ನೂರರ ಕೆಲವು ನೋಟುಗಳೂ, ಒಂದು ರಾಶಿ ಚಿಲ್ಲರೆ ಹಣವೂ ಸೇರಿ ಎಲ್ಲಾ ಒಟ್ಟು ಐದು ಸಾವಿರದಷ್ಟು ಹಣ ಇತ್ತು.ಅದು ಅವನು ಬಹಳ ವರ್ಷಗಳಿಂದ ಕೂಡಿಟ್ಟ ಹಣವಾಗಿತ್ತು.ಅದನ್ನು ಅವನ ಮುಂದೆಯೇ ಎಣಿಸಿ,ಅರ್ಜಿಯಲ್ಲಿ  ಅವನ ಹೆಬ್ಬೆಟ್ಟು ಒತ್ತಿಸಿ ,ಐದು ಸಾವಿರಕ್ಕೆ ಒಂದು ವರ್ಷದ ಒಂದು  fixed deposit ಮಾಡಿ, ಅವನ ಕೈಯಲ್ಲಿ ಅದರ ದಾಖಲೆ  ಪತ್ರವನ್ನು ಕೊಟ್ಟು ಕಳಿಸಿದರು.ಆರು ತಿಂಗಳ ನಂತರ ಅಜ್ಜ ತನ್ನ ಮಗಳ ಮದುವೆ   ಇರುವುದರಿಂದ ತನಗೆ ಹಣದ ಅವಶ್ಯಕತೆ ಇರುವುದೆಂದೂ,ತನ್ನ ಹಣವನ್ನು ವಾಪಸ್  ತನಗೆ ಕೊಡಬೇಕೆಂದೂ ಕೇಳಿಕೊಂಡ.ಒಂದು ವರ್ಷಕ್ಕೆ ಎಫ್.ಡಿ.ಇಟ್ಟಿರುವುದರಿಂದ ಬಡ್ಡಿ ಹಣ ಪೂರ್ತಿ ಬರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅಜ್ಜ "ನನ್ ರೊಕ್ಕಾ ನನಗ ಪೂರಾ ಕೊಡಂಗಿಲ್ಲಾ  ಅಂದ್ರ ಏನ್ರೀ........? ಶಾಲೀ ಕಲ್ತಿಲ್ಲಾ ಅಂತಾ ಮೋಸಾ ಮಾಡ್ತೀರೇನು ?"ಎಂದು ಕೂಗಾಡಲು ಶುರು ಹಚ್ಚಿಕೊಂಡ.ಅವನನ್ನು ಒಳಗೆ ಕರೆದು ಮ್ಯಾನೇಜರ್ ಅವರ ಚೇಂಬರ್ ನಲ್ಲಿ ಕೂರಿಸಿ , ಅವನ ಅಸಲು ಹಣ ಐದು ಸಾವಿರವನ್ನು ಪೂರ್ತಿ ಕೊಡುವುದಾಗಿಯೂ ,ಬಡ್ಡಿಯ ಹಣ ಸ್ವಲ್ಪ ಕಡಿಮೆ ಬರುವುದೆಂದೂ ಅವನಿಗೆ ತಿಳಿಸಿ ಹೇಳಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕಾಯಿತು. ಅವನು ಒಪ್ಪಿದ ಮೇಲೇ ರಸೀದಿಗಳಿಗೆ ಅವನ ಹೆಬ್ಬೆಟ್ಟು ಒತ್ತಿಸಿಕೊಂಡುಅಸಲು ಐದು ಸಾವಿರ ( ಐದುನೂರರ ಹತ್ತು ನೋಟುಗಳು) ಮತ್ತು ಬಡ್ಡಿ ಹಣ  ನಾನ್ನೂರು ಚಿಲ್ಲರೆ  ಅವನ ಮುಂದಿಟ್ಟು ತೆಗೆದು ಕೊಂಡು ಹೋಗುವಂತೆ ತಿಳಿಸಿದರು.ಅಜ್ಜ ಆ ಹಣ ಮುಟ್ಟಲು ಸುತರಾಂ ಒಪ್ಪಲಿಲ್ಲ."ಇದು ನಾ ಕೊಟ್ಟ ರೊಕ್ಕ ಅಲ್ರೀ! ಈ ರೊಕ್ಕ ಬ್ಯಾಡ್ರೀ.......,ನಾ ಕೊಟ್ಟ  ರೊಕ್ಕನ  ನನಗ ವಾಪಸ್  ಕೊಡ್ರೀ ಸಾಹೇಬ್ರಾ  !"ಎಂದು ಗಂಟು ಬಿದ್ದ.ಇದು ಅವನು ಕೊಟ್ಟ ಹಣದಷ್ಟೇ ಮೊತ್ತದ ಹಣವೆಂದೂ,ಎಲ್ಲಾ ಒಂದೇ ಎಂದೂ ಎಷ್ಟು ತಿಳಿಸಿ ಹೇಳಿದರೂ ಅಜ್ಜ "ನಾ ಕೊಟ್ಟ ರೊಕ್ಕ ಎಲ್ಲಿ ಹೋತು?ಜ್ವಾಪಾನ ಮಾಡತೀವಿ ಅಂತ ತಗಂಡರಲ್ರೀ ! ನಮ್ಮ ರೊಕ್ಕ ನಮಗಾ ಕೊಡಂಗಿಲ್ಲಾ  ಅಂದ್ರ ಹ್ಯಾಂಗ್ರೀ ?"ಎಂದು ಕೂಗಾಡುತ್ತಾ ಹೋಗಿ ಊರ ಗೌಡನನ್ನು ಕರೆದುಕೊಂಡು ಬಂದ.ಊರ ಗೌಡ ವ್ಯವಹಾರಸ್ಥ.ಬ್ಯಾಂಕ್ ಅಧಿಕಾರಿಗಳು ನಡೆದದ್ದನ್ನು ತಿಳಿಸಿದ ಮೇಲೆ ಅವನಿಗೆ ಎಲ್ಲಾ ಅರ್ಥವಾಯಿತು. ಅವನು ಅಧಿಕಾರಿಗಳಿಗೆ ಕಣ್ಣು ಸನ್ನೆ ಮಾಡಿ "ಇದು ಬ್ಯಾಡ್ರೀ ಸರ್ ,ಹತ್ತು ರೂಪಾಯಿಯ ಹೊಸಾ ನೋಟು ಬಂದವಲ್ಲಾ,ಅವನ್ನು ತರ್ರೀ "ಎಂದ.ಅಷ್ಟೂ ಹಣಕ್ಕೂ ಹತ್ತು ರೂಪಾಯಿಗಳ ಹೊಸ ನೋಟು ಕೊಟ್ಟರು.ಗೌಡ ಅಜ್ಜನ ಕಡೆ ತಿರುಗಿ "ಅಜ್ಜಾ ....,ನೀ ಕೊಟ್ಟ ಹಣ ಎಲ್ಲ ಹಳೇದಾಗಿದ್ವು .ಸ್ವಚ್ಛ ಆಗಿ ಬರಲಿಕ್ಕೆ ದಿಲ್ಲಿಗೆ ಹೊಗ್ಯಾವೆ.ಅವು ಬರಲಿಕ್ಕೆ ಇನ್ನೂ  ಒಂದು ವರ್ಷ ಹಿಡೀತೈತಿ.ಅಷ್ಟರ ಮಟ ನೀ ತಡೀತೀಯೇನು?ಆಗಂಗಿಲ್ಲಾ !ಹೌದಲ್ಲೋ?  ಇವು  ಸ್ವಚ್ಛ ಆಗಿ ಈಗಷ್ಟೇ ಬಂದ ಹೊಸ ರೊಕ್ಕ.ನಿನಗಂತಾ  ಕೊಡಿಸೀನಿ. ಬಾಯಿ ಮುಚ್ಕಂಡು ತಕ್ಕಂಡು ಹೋಗು"ಎಂದ.ಗೌಡ ಹೇಳಿದ ಮಾತು ಅಜ್ಜನಿಗೆ ಒಪ್ಪಿಗೆ ಆಯಿತು.ಹತ್ತರ ಹೊಸ ನೋಟುಗಳನ್ನು ಅಜ್ಜ ತನ್ನ ರುಮಾಲಿನಲ್ಲಿ ಕಟ್ಟಿಕೊಂಡು ಸಂತಸದಿಂದ "ನೀ ಇದ್ದೀ ಅಂತ ಎಲ್ಲಾ ಸುಸೂತ್ರ ಆತು ನೋಡು ಗೌಡ"ಎಂದು ಗೌಡನ ಉಪಕಾರವನ್ನು ಕೊಂಡಾಡುತ್ತಾ  ಹೋದನಂತೆ. ಇಷ್ಟು ಹೇಳಿ ಹೇಮಚಂದ್ರ "ಹೇಗಿದೆ ನಮ್ಮ ಹಳ್ಳಿ ಅನುಭವ?"ಎಂದ.ನಾನು ಮಾತು ಹೊರಡದೆ ದಂಗಾಗಿದ್ದೆ!ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ...."ಹೀಗೂ ...ಉಂಟೆ !"

Friday, October 28, 2011

"ಜಟಕಾದಲ್ಲಿ ಹೀಗೊಂದು ರೋಮ್ಯಾನ್ಸ್"

ಸುಮಾರು ಅರವತ್ತು ವರ್ಷಗಳ ಹಿಂದಿನ ಮಾತು .ಆಗೆಲ್ಲಾ ಆಟೋಗಳ ಆಟಾಟೋಪ ಇರಲಿಲ್ಲ.ಅದು ಜಟಕಾಗಳ ಜಮಾನ. ನನ್ನ ಪರಿಚಿತ ವಯೋವೃದ್ಧರೊಬ್ಬರು ಮದುವೆಯಾದ ಹೊಸದರಲ್ಲಿ ಜಟಕಾ ಬಂಡಿಯೊಂದರಲ್ಲಿ ತಮ್ಮ ನವ ವಧುವಿನೊಡನೆ ಹೊರಗೆ ಹೊರಟಿದ್ದರು.ಹೆಂಡತಿಗೆ ಆಗಿನ್ನೂ ಹದಿನೇಳುವರ್ಷ.ಇವರಿಗೆ ಇಪ್ಪತ್ತೆರಡು . ಮೊದಲೇ ನಾಚಿಕೆ ಸ್ವಭಾವದ ಹೆಣ್ಣು.ಗಂಡನ ಪಕ್ಕಸಂಕೋಚದಿಂದ ಮುದುರಿಕೊಂಡು ಕುಳಿತಿದ್ದರು.ಗಂಡನಿಗೆ ಸಹಜವಾಗಿ ಅವರ ಪಕ್ಕ ಸರಿದು ಕುಳಿತು ಕೊಳ್ಳಬೇಕೆಂಬ ಬಯಕೆ.ಇವರು ಅವರ ಪಕ್ಕಕ್ಕೆ ಸರಿದಂತೆಲ್ಲಾ ಅವರು ನಾಚಿಕೆಯಿಂದ  ಹಿಂದಕ್ಕೆ ಸರಿಯುತ್ತಿದ್ದರು.ಹೀಗೆ ಹಿಂದಕ್ಕೆ ಸರಿದೂ,ಸರಿದೂ ಅವರಿಗೆ ಗೊತ್ತಿಲ್ಲದ ಹಾಗೆ  ಜಟಕಾದ ಮುಂಭಾಗದಲ್ಲಿ ಕುಳಿತಿದ್ದ ಜಟಕಾ ಸಾಬಿಯ ಪಕ್ಕಕ್ಕೆ ಬಂದು ಬಿಟ್ಟಿದ್ದರು!ಗಂಡ ಸಿಟ್ಟಿನಿಂದ 'ನನಗಿಂತಾ ನಿನಗೆ ಆ ಜಟಕಾ ಸಾಬೀನೆ ಹೆಚ್ಚಾ?'ಎಂದು ರೇಗಿದರು .ಜಟಕಾ ಸಾಬಿ ತನ್ನ ಉರ್ದು ಮಿಶ್ರಿತ ಕನ್ನಡ ದಲ್ಲಿ "ಏನಮ್ಮಾ....! ನೀವು ನಮ್ದೂಕೆ ಪಕ್ಕ ಯಾಕೆ  ಬಂದ್ರಿ ? ಸಾಹೇಬರ  ಪಕ್ಕ ಜಾಕೇ ಬೈಟೋ ! 'ಎಂದು ಬೇರೆ ಹೇಳಿಬಿಟ್ಟನಂತೆ. ಪಾಪ ಅವರು  ಅಲ್ಲಿಂದ ಸರಿದು ಜಟಕಾದ ಮಧ್ಯ ಭಾಗದಲ್ಲಿ ನಾಚಿಕೆ ಮತ್ತು  ಅವಮಾನಗಳಿಂದ ಮೈ ಹಿಡಿಮಾಡಿಕೊಂಡು ಕುಳಿತರು ! ಈಗಲೂ ಅವರು ಆ ಘಟನೆಯನ್ನು ನೆನೆಸಿಕೊಂಡು 'ನನಗಿಂತ ಆ ಜಟಕಾ ಸಾಬಿಯೇ ಇವಳಿಗೆ ಹೆಚ್ಚು ಇಷ್ಟ ಆಗಿದ್ದಾ"ಎಂದು ಹೆಂಡತಿಯನ್ನು ರೇಗಿಸುತ್ತಾರೆ.ಇವರೂ ಸುಮ್ಮನಿರದೆ "ಹೌದು, ನಿಮಗಿಂತಾ ಅವನೇ ಎಷ್ಟೋ  ಚೆನ್ನಾಗಿದ್ದಾ !"ಎಂದು,ಸೇಡು ತೀರಿಸಿಕೊಳ್ಳುತ್ತಾರೆ! ಅವರ ಸರಸ,ಇವರ ಹುಸಿ ಮುನಿಸು,ಮಾಗಿದ ಅವರಿಬ್ಬರ ದಾಂಪತ್ಯಕ್ಕೆ ಇನ್ನಷ್ಟು  ಮೆರಗನ್ನು ಕೊಡುತ್ತದೆ !!

Tuesday, October 25, 2011

"ಹಬ್ಬದೂಟ .....ಘಮ್ಮಗೆ !! ನೆನೆಸಿಕೊಂಡ್ರೆ ಸುಮ್ಮಗೆ !! "


"ಎಲ್ಲರಿಗೂ ............ದೀಪಾವಳಿ ಹಬ್ಬದ ............ಶುಭಾಶಯಗಳು .......



ಮನೆಯಲಿ.......ಹಬ್ಬ !!
ಅಬ್ಬಬ್ಬಾ.................!!
ಏನು ತಿಂಡಿ!ಏನೆಲ್ಲಾ ಊಟ!!
ಬೆಳಿಗ್ಗೆಗೆ ತಿಂಡಿಯ ತಳಪಾಯ!
ಎರಡು ಇಡ್ಲಿ ಮತ್ತು
ಎರಡೇ ಎರಡು  ವಡೆ !
ಮಧ್ಯಾಹ್ನದ ಊಟಕ್ಕೆ ,
ಮೆಲ್ಲಗೆ ಏಳುತ್ತಿತ್ತು
ಏಳಂತಸ್ತಿನ..........
ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು 
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ 
ಸಾಥ್ ................! 
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ 
ಗಸ ಗಸೆ
ಪಾ 
ಯ 
ಸ 
Z Z Z Z Z Z Z Z.NIDDE.....!!!


Sunday, October 23, 2011

"ಅಪ್ಪಾ ....ಹಂಗಂದ್ರೆ ಏನಪ್ಪಾ ? "

ಮಕ್ಕಳು ಮುಗ್ಧರು.ಸ್ವಾಭಾವಿಕವಾಗಿ ಅವರಿಗೆ ಕುತೂಹಲ ಹೆಚ್ಚು.ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಂದಿರನ್ನು ಏನು ?ಎತ್ತ?ಯಾಕೆ ?ಎಲ್ಲಿ ?ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿರುತ್ತಾರೆ.ಕೆಲವೊಮ್ಮೆ ಅವರ ಅಭಾಸವಾಗುಂತಹ ಪ್ರಶ್ನೆಗಳಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಪೋಷಕರು ಕಣ್ಣು ಕಣ್ಣು ಬಿಡುತ್ತಿರುತ್ತಾರೆ.ನನ್ನ ಮಗನೂ ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದ.ಯಾವುದೋ ಕನ್ನಡ ಸಿನಿಮಾ ಒಂದಕ್ಕೆ ಹೋಗಿದ್ದೆವು.ಹೀರೋ ಮತ್ತು ಹೀರೋಯಿನ್ 'ಮದುವೆಯ ನಂತರ ಹನಿ ಮೂನಿಗೆ ಎಲ್ಲಿಗೆ ಹೋಗುವುದು' ಎನ್ನುವ ಅತೀ ಗಹನವಾದ ವಿಷಯದ ಬಗ್ಗೆ ಚರ್ಚೆನಡೆಸುತ್ತಿದ್ದರು.ಸುತ್ತಮುತ್ತ ಇದ್ದ ನಿಶ್ಯಬ್ಧದ ನಡುವೆ "ಅಪ್ಪಾ ಹನಿ ಮೂನೆಂದರೆ ಏನಪ್ಪಾ?"ಎನ್ನುವ ನನ್ನ ಮಗನ ಜೋರು ಗಂಟಲಿನ ಪ್ರಶ್ನೆ ತೂರಿಬಂತು!ಸುತ್ತಮುತ್ತಲಿದ್ದವರೆಲ್ಲಾ ಸಿನಿಮಾ ನೋಡುವುದು ಬಿಟ್ಟು ನಮ್ಮತ್ತ ನೋಡಿ ಜೋರಾಗಿ ನಗಲು ಶುರುಮಾಡಿದರು.ಮಗ ಅಷ್ಟಕ್ಕೇ ಬಿಡದೆ"ಅಪ್ಪಾ ಹೇಳಪ್ಪಾ, ಅಪ್ಪಾ ಹೇಳಪ್ಪಾ"ಎಂದು ಪೀಡಿಸತೊಡಗಿದ.ಮುಂದೆ ಇನ್ನೂ ಹೆಚ್ಚಿನ ಆಭಾಸದ ಪ್ರಶ್ನೆಗಳನ್ನು ಕೇಳಬಹುದೆಂದು ಹೆದರಿ, 'ಹೇಳುತ್ತೇನೆ ಬಾ' ಎಂದು ಹೊರಗೆ ಕರೆದುಕೊಂಡು ಹೋದೆ.ನಂತರ ಅವನಿಗೆ ಏನು ಸಮಜಾಯಿಷಿ ನೀಡಿದೆನೋ ನೆನಪಿಲ್ಲ.ಈಗಿನ ತಂದೆ ತಾಯಂದಿರು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋದಾಗ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದೋಎನ್ನುವುದನ್ನು  ನೆನೆಸಿಕೊಂಡರೇ ಭಯವಾಗುತ್ತದೆ. ನಿಮಗೂ ಇಂತಹ ಅನುಭವಗಳಾಗಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.

Friday, October 21, 2011

"ಬುದ್ಧಿವಂತಿಕೆ "

ನಮ್ಮ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ  ಮಾಲಿಂಗ  ಓದಿರುವುದು ಬರೀ ಏಳನೇ ತರಗತಿಅಷ್ಟೇ!.ಆದರೆ ಅವನ ಬುದ್ಧಿಯ ಹರಿತ, ನೋಡಿದರಷ್ಟೇ ನಂಬಿಕೆ ಬರುವುದು.ಓದಿಗೂ ಬುದ್ಧಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ನನ್ನ ಅನಿಸಿಕೆಗೆ ನಮ್ಮ ಮಾಲಿಂಗ ಒಳ್ಳೇ ಉದಾಹರಣೆ.ಏನನ್ನಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣ ಕಲಿತಿರುತ್ತಾನೆ.
Tailoring,carpentry,electrical repair,ಸೀರೆಗೆ ಫಾಲ್ಸ್ ಹಾಕುವುದು,ಗಿಣಿ ಪಾರಿವಾಳಗಳನ್ನು ಸಾಕುವುದು,ಅವನ ಹವ್ಯಾಸಗಳು  ಒಂದೇ ಎರಡೇ!ಒಂದೇ ಒಂದು ನಿಮಿಷವೂ ಸುಮ್ಮನಿರುವ ಪಾರ್ಟಿಯಲ್ಲ!ಅವನ ಸಮಯ ಪ್ರಜ್ಞೆ ಅದ್ಭುತ!ಎಲ್ಲಾ ದಿನ ನಿತ್ಯದ ಸಮಸ್ಯೆಗೂ ಅವನಲ್ಲಿ ಉತ್ತರವಿರುತ್ತದೆ.ಮೊನ್ನೆ ನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗಿನ ಜಿಪ್ ನ ಹಿಡಿ ಕಿತ್ತುಹೋಯಿತು.ಕಿತ್ತು ಹೋದ ಜಿಪ್ಪಿನ ಜೊತೆಯೇ ಎರಡು ದಿನ ಗುದ್ದಾಡಿ ನನ್ನ ಉಗುರು ಕಿತ್ತು ಹೋಗಿತ್ತು.ನಾನು ಒದ್ದಾಡುತ್ತಿರುವುದು ಮಾಲಿಂಗನ ಗಮನಕ್ಕೆ ಬಂತು.ತಕ್ಷಣ ನನ್ನ ಕೀ ಬಂಚಿನಲ್ಲಿದ್ದ ಸ್ಟೀಲ್ ರಿಂಗ್ ಒಂದನ್ನು ತೆಗೆದು ಬ್ಯಾಗಿನ  ಜಿಪ್ಪಿಗೆ ಸಿಗಿಸಿ ಒಂದು ಸೊಗಸಾದ ಜಿಪ್ಪಿನ ಹಿಡಿ ತಯಾರು ಮಾಡಿಕೊಟ್ಟಿದ್ದ!ಈಗ  ಬ್ಯಾಗಿನ  ಜಿಪ್ಪು ತೆಗೆಯುವಾಗ ಮತ್ತು ಹಾಕುವಾಗಲೆಲ್ಲಾ ಮನಸ್ಸು ಕೃತಜ್ಞತೆಯಿಂದ ಮಾಲಿಂಗನನ್ನು ನೆನೆಯುತ್ತದೆ!ಈಗ ನೀವೇ ಹೇಳಿ.Rank ಬಂದವರು ಮಾತ್ರ ಬುದ್ಧಿವಂತರೇ?

Monday, October 17, 2011

"ಗಡಿಯಾರ!! "

ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ 
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ  !
ಸೆಕೆಂಡಿನ ಮುಳ್ಳಿನ ಹಾಗೆ 
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ 
ಗಾಣದೆತ್ತಿನ ದುಡಿತ !
ಅವಳ ನಿರಂತರ 
ಪ್ರೀತಿಯ ತುಡಿತವೇ 
ನಮ್ಮ ಸಂಸಾರದ 
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ 
ಅವಸರದ ಓಟ !
ಇನ್ನು,ಅರವತ್ತರದ ಸನಿಹದ 
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ 
'ಎಷ್ಟು ಸ್ಲೋ', ಎಂಬ 
ಸಣ್ಣದೊಂದು ಮೂದಲಿಕೆ! 
ಪ್ರೀತಿಯ ಬ್ಯಾಟರಿ ಮುಗಿದಾಗ 
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ! 
ಮತ್ತೆ ಪ್ರೀತಿಯ ಹೊಸ ಚೈತನ್ಯ 
ಮರು ಚಾಲನೆ  ನೀಡುವ ತನಕ!!
ಮತ್ತದೇ ಓಟದ ಮಾಟ !!!

Sunday, October 16, 2011

"ಕವಿತೇ....ನೀನೆಲ್ಲಿ ಅವಿತೇ?!!!"

ಕವಿತೆಯೆಂದರೆ 
ಹೀಗೇ ಎಂದು 
ಹೇಳುವುದು ಹ್ಯಾಗೇ ?
ಕವಿತೆ ಎಂದರೆ ......
ಸಂಜೆಗೆಂಪು ಬಾನಲ್ಲಿ 
ಭಗವಂತನ ಕಾಣದ
ಕೈಯ ಸಹಿಯಂತಿರುವ
ಬೆಳ್ಳಕ್ಕಿ ಸಾಲು !
ಸವಿಯಾದೊಂದು ನಿದ್ದೆ ಮಾಡಿ 
ಎದ್ದ ಆಹ್ಲಾದ!
ಕವಿತೆಯೆಂದರೆ......
ಚಿಂತಾಮಣಿಯಲ್ಲಿ 
ಕಂಡ ಆ ಮುಖ!
'ಫಳ್'ಎಂದು ಕ್ಯಾಮೆರಾದ 
ಫ್ಲಾಶ್ ನಂತೆ ಬೆಳಗಿದ 
ಆ ಕಿರು ನಗು!
ಎಲ್ಲೋ ಹಚ್ಚಿದ ಅಗರು 
ಗಾಳಿಯಲ್ಲಿ ಅಲೆ ಅಲೆಯಾಗಿ
ತೇಲಿ ಬಂದು...............,
ನಮ್ಮನ್ನೂ ಅದರೊಡನೆ 
ತೇಲಿಸಿದ ಹಾಗೆ!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!


Saturday, October 15, 2011

"ನೀ ದೊಡ್ಡ ಶಾಣ್ಯಾ ಇದ್ದೀ...!!!"

ಅಪ್ಪಾ ತಂದೀ.............!
ಕಾಣದ ಹಾಂಗ ಕುಂತ ನೀ,
ದೊಡ್  ಶಾಣ್ಯಾ ಇದ್ದೀ !
ಹುಡುಗಿದ್ದಾಗ............,
ಆಟಕ್ ಹಚ್ಚಿದಿ.............!
ಹರೇ ಬಂದಾಗ, ಕಣ್ಣಾಗೆಲ್ಲಾ
ಬರೇ ಹುಡಿಗ್ಯಾರ್ನಿಟ್ಟಿ  !
ವಯಸ್ಸಿನಾಗ ಹೆಗಲ ಮ್ಯಾಲ
ಸಂಸಾರದ ನೊಗ ಕಟ್ಟಿ 
ಕಷ್ಟಗಳ ಚಾಟೀ ಬೀಸಿ 
ಹೈರಾಣ್ ಮಾಡಿಟ್ಟಿ!
ಸಂಸಾರ ಅಂಬೋದು 
ನಿಸ್ಸಾರ ಆದಾಗ ,
'ಸಾಕೋ ರಂಗಾ'
ಅನ್ನೋ ಹಾಂಗ,
ಬ್ಯಾನೀ...... ಕೊಟ್ಟಿ!
ಮುದಿಯಾದಾಗ ......,
ಕಂತೀ,ಕಂತೀ .......
ಚಿಂತೀ ಇಟ್ಟಿ !
ಒಟ್ಟಾಗ..................,
ನಿನ್ನ ತಂಟೀಕ್ ಬರದ ಹಾಂಗ 
ಮಾಡಿಟ್ಟಿ..................!
ಒಟ್ಟಾಗ......ಇಟ್ಟಿ  !
ಬರೀ ಇಷ್ಟರಾಗಾ .........
ಮುಗೀತಲ್ಲೋ ತಂದೀ!
ನಿನ್ನ ಚಿಂತೀ ಮಾಡೂದು 
ಯಾವ ಕಾಲಕ್ಕಂದೀ.....?!!!