Saturday, September 25, 2010

ಮೆಚ್ಚಿದ ಕವನ -"ಶೋಧನೆ"(ಡಾ.ಜಿ.ಎಸ್.ಎಸ್)

ನಾನು ಬಹುವಾಗಿ ಇಷ್ಟಪಟ್ಟ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು.ಬಹಳ ದಿನಗಳ ನಂತರ ಅವರ ಸಮಗ್ರ ಕವಿತೆಗಳನ್ನುಓದಲು ಕೈಗೆತ್ತಿಕೊಂಡೆ.ಅದರಲ್ಲಿ 'ದೀಪದ ಹೆಜ್ಜೆ'ಸಂಕಲನದಲ್ಲಿರುವ "ಶೋಧನೆ"ಕವಿತೆಇಷ್ಟವಾಯಿತು.ನಿಮ್ಮೊಡನೆಹಂಚಿಕೊಂಡಿದ್ದೇನೆ;
"ಶೋಧನೆ "
ನುಗ್ಗು ಎದೆಯೊಳಸುಳಿಯ ತಳದಾಳಕೆ 
ನೋವಿನಕ್ಷಯಪಾತ್ರೆಯ ಒಡಲಾಳಕೆ
ಬಿಡು ಒಳಗೆ ಬಿಡು ಪಾತಾಳ ಗರುಡ 
ಅದೋ ನೋಡ ನೋಡ 

ಯಾರು ಯಾರೋ ಸೇರಿ ಇರಿದ ಚೂರಿಯ ತುಣುಕು 
ಅಣುಕು ಮಿಣುಕು !
ನೂರಾನೆ ಕಾಲುಗಳು ನುಗ್ಗು ನುರಿ ಮಾಡಿರುವ 
ಬಿಂದಿಗೆಯ ಸರಕು !
ಎದೆಯ ಮಿದುವಾಸಿನಲಿ ಕಾವು ಪಡೆಯುತಲಿದ್ದ
ಮೊಟ್ಟೆಗಳ ಹೋಳು !
ಮುಗಿಲೊಳಾಡಿದ ಹಲವು ಪಾರಿವಾಳಗಳ ರೆಕ್ಕೆ 
ನೂರು ಸೀಳು !

ಹಲವು ಬಾಗಿಲೊಳಲೆದು ತಿರಿದು ತುಂಬಿದ ಪಾತ್ರೆ -
ಯೊಡಕು ರಾಶಿ,
ಅಯ್ಯೋ ಪರದೇಶಿ!
ನೂರು ಚೆಲುವೆಯ ಮೊಗವ ತನ್ನ ಎದೆಯೊಳು ಹಿಡಿದ 
ಕನ್ನಡಿಯ ಚೂರು 
ಬರಿ ಕೆಸರು ಕೆಸರು!
ಎನಿತೊ ಬೆಳಕನು ಹಿಡಿದು ಕಡೆದಿಟ್ಟ ವಿಗ್ರಹದ 
ಭಗ್ನಾವಶೇಷ 
ಮತ್ತೇನ್ ವಿಶೇಷ ?------

ಇನ್ನು ಏನೇನಿಹುದೋ!ಇರಲಿ ಬಿಡು ,ತೆಗೆದೆದೆಯ 
ಕಲಕಬೇಡ,
ಹಳೆಯ ನೆನಪಿನ ಕೊಳವ ,ಕದಡಬೇಡ .  

Monday, September 20, 2010

"ಮರಳಿನ ಆಟ"

ಒಂದು ಸುಂದರ ಸಂಜೆ.ಮನೆಯ ಬಾಲ್ಕನಿಯಲ್ಲಿ ನಿಂತಿದ್ದೆ.ರಸ್ತೆಯ ಪಕ್ಕ ಹಾಕಿದ್ದ ಮರಳಿನ ರಾಶಿಯಲ್ಲಿ ಕೆಲ ಮಕ್ಕಳು ಖುಷಿಯಿಂದ ಆಟವಾಡುತ್ತಿದ್ದರು.ಕೈಯಮೇಲೆ ,ಕಾಲುಗಳ ಮೇಲೆ ಮರಳು  ಗುಪ್ಪೆಗಳನ್ನು ಕಟ್ಟಿ ,ಕೈಗಳಿಂದ ತಟ್ಟಿ ತಟ್ಟಿ ,ಮನೆ ,ಗುಡಿ ಗೋಪುರ ,ಕೋಟೆ ಕೊತ್ತಲಗಳನ್ನು ಕಟ್ಟಿದರು!ಎಲ್ಲಿಂದಲೋ ಬಣ್ಣ ಬಣ್ಣದ ಹೂವುಗಳನ್ನು ತಂದು ಅಲಂಕಾರ ಮಾಡಿದರು.ಕೈ ,ಕೈ ಹಿಡಿದು ಅವುಗಳ ಸುತ್ತ ಕುಣಿದಾಡಿದರು!ಕತ್ತಲಾಯಿತು.ಮನೆಗೆ ಮರಳುವ ಸಮಯ ಬಂತು.ಯಾವುದೇ ಅಳುಕಿಲ್ಲದೆ ,ಕಟ್ಟಿದಷ್ಟೇ ಸಂಭ್ರಮದಿಂದ ಎಲ್ಲವನ್ನೂ ಕೆಡಿಸಿ ಸಂತೋಷದಿಂದ ಮನೆಗೆ ಓಡಿದರು.ನಮ್ಮ ಬದುಕೂ ಹೀಗೇ ಅಲ್ಲವೇ?ಕರೆ ಬಂದಾಗ ,ನಾವು ಕಟ್ಟಿಕೊಂಡ ಆಸ್ತಿ ಪಾಸ್ತಿ,ಮನೆ ಮಠ,ಹಣ ವಸ್ತು ,ಒಡವೆ ,ಸಂಬಂಧಗಳು ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲವೇ?ಮಕ್ಕಳ ಮರಳು ಆಟದಲ್ಲಿ ನಮಗೊಂದು ಪಾಠವಿದೆ ಅನಿಸುವುದಿಲ್ಲವೇ?ಅವರ ಹಾಗೇ ಬದುಕಿನ ಆಟವನ್ನು ಸಂತೋಷದಿಂದ ಆಡಿ,ಯಾವುದಕ್ಕೂ ಅಂಟಿಕೊಳ್ಳದೆ ,ನಿಶ್ಚಿಂತೆಯಿಂದ ಎಲ್ಲವನ್ನೂ ಬಿಟ್ಟು ಹೋಗಲು ಸಾಧ್ಯವಾಗುವಂತಿದ್ದರೆ ! ಬದುಕಿನ ಸಂತೋಷ, ಸಂತೋಷವಾಗಿ ಬದುಕುವುದರಲ್ಲಿಯೇ ಇದೆಯಲ್ಲವೇ!ಎನಿಸಿ ,ಒಳಗೆ ಹೋಗಿ ಮನೆಯ ದೀಪ ಬೆಳಗಿಸಿದೆ.

Thursday, September 16, 2010

"ಕಟ್ ಮಾಡು, ಇಲ್ಲಾ ಎದ್ದು ಆಚೆ ಹೋಗು"

ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಕುಳಿತಿದ್ದೆ.ಸುಮಾರು ಐದು ವರ್ಷ ವಯಸ್ಸಿನ U.K.G.ಓದುತ್ತಿದ್ದ ,ಗುಂಗುರು ಕೂದಲಿನ ,ಅಗಲ ಕಣ್ಣುಗಳ ನಗು ಮುಖದ ಮುದ್ದು ಹುಡುಗಿ ಸ್ಮಿತಾ ,'ಗುಡ್ ಮಾರ್ನಿಂಗ್ ಅಂಕಲ್'ಎಂದು ಕಾನ್ವೆಂಟ್ ಶೈಲಿಯಲ್ಲಿ ರಾಗವಾಗಿ ಹೇಳುತ್ತಾ ಒಳ ಬಂದಳು.ಜೊತೆಗೇ ಬಂದ ಅವಳ ತಂದೆ ನನ್ನ ಎದುರಿನ ಕುರ್ಚಿಯಲ್ಲಿ ಕುಳಿತರು.ಅವಳಿಗೆ ಎರಡು ದಿನದಿಂದ ಬಲಗಿವಿ ನೋಯುತ್ತಿದೆ ಎಂದೂ,ಪರೀಕ್ಷೆ ಮಾಡಿಸಲು ಕರೆದು ಕೊಂಡು ಬಂದುದಾಗಿಯೂ ಹೇಳಿದರು.ಸ್ಮಿತಾಳನ್ನು ನನ್ನ ಎಡಗಡೆ ಇದ್ದ ಪರೀಕ್ಷೆ ಮಾಡುವ ಸ್ಟೂಲಿನ ಮೇಲೆ ಬಂದು ಕುಳಿತುಕೊಳ್ಳುವಂತೆ ಹೇಳಿದೆ.ಆ ವಯಸ್ಸಿನ ಹುಡುಗರು ಅಳುವುದು,ರಚ್ಚೆ ಮಾಡುವುದು ,ಪರೀಕ್ಷೆಮಾಡಲು ಸಹಕರಿಸದೆ ಇರುವುದು ಸಾಮಾನ್ಯ.ಆದರೆ ಈ ಹುಡುಗಿ ಮಾತ್ರ ನಗು ನಗುತ್ತಲೇ ಬಂದು ಕುಳಿತಳು.ನನ್ನ ಸಲಕರಣೆಗಳನ್ನೆಲ್ಲಾ ಜೋಡಿಸಿಕೊಂಡು ಇನ್ನೇನು ಕಿವಿ ಪರೀಕ್ಷೆ ಮಾಡುವುದಕ್ಕೆ ಸರಿಯಾಗಿ ಅವಳ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ರಿಂಗಣಿಸ ತೊಡಗಿತು.ಅದನ್ನು ಆತ ಕಿವಿಯ ಬಳಿ ಇಟ್ಟುಕೊಂಡು ಜೋರು ದನಿಯಲ್ಲಿ 'ಹಲೋ'ಎಂದ.ನನಗೆಒಳೊಗೊಳಗೇಇರಿಸುಮುರುಸು.ಸರಿ,ಆತ ತನ್ನ ಸಂಭಾಷಣೆಯನ್ನು ಮುಗಿಸಿ ಬಿಡಲಿ,  ಆಮೇಲೆಯೇ ಪರೀಕ್ಷೆ ಮಾಡೋಣ ಎಂದು ಸುಮ್ಮನೆ ಕುಳಿತೆ.ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು! ಆ ಪುಟ್ಟ ಹುಡುಗಿ ಸ್ಮಿತಾ ಅವರಪ್ಪನಿಗೆ "ಅಪ್ಪಾ,ಫೋನ್ ಕಟ್ ಮಾಡು------,ಇಲ್ಲ ಆಚೆ ಎದ್ದು ಹೋಗು disturb  ಮಾಡಬೇಡ"ಎಂದಳು.ಐದು ವರ್ಷದ ಹುಡುಗಿಯಿಂದ ಇಂತಹ ಪ್ರಬುದ್ಧ ಮಾತುಗಳನ್ನು ನಿರೀಕ್ಷಿಸಿರಲಿಲ್ಲ.ನಾನು ಅವಾಕ್ಕಾದೆ!ಅವರಪ್ಪ ಪೆಚ್ಚು ನಗೆ ನಗುತ್ತಾ ಆಚೆ ಎದ್ದು ಹೋದ! ಆ ಪುಟ್ಟ ಹುಡುಗಿಯ ಜವಾಬ್ದಾರಿಯುತ  ನಡವಳಿಕೆ ನನ್ನಲ್ಲಿ ಅಚ್ಚರಿ ಮೂಡಿಸಿತು!ಇನ್ನೊಬ್ಬರಿಗೆ ತೊಂದರೆ ಕೊಡ ಬಾರದೆಂಬ ಪರಿಜ್ಞಾನ ,ಸಾಮಾಜಿಕ ಕಳ ಕಳಿ,ದೊಡ್ಡವರು ಎನಿಸಿಕೊಂಡ ನಮ್ಮಲ್ಲಿ ಎಷ್ಟು ಜನಕ್ಕಿದೆ ಎನ್ನುವ ಪ್ರಶ್ನೆ ಕಾಡ ತೊಡಗಿತು. ಆ ಪುಟ್ಟ ಹುಡುಗಿಯಿಂದ ನಾವೆಲ್ಲಾ ಸಾಕಷ್ಟು ಪಾಠ ಕಲಿಯ ಬೇಕಿದೆಯಲ್ಲವೇ ?ಏನಂತೀರಿ?

Saturday, September 4, 2010

"ಕಿವಿಯಲ್ಲಿ ಗರ್ಭಪಾತ !!!"

ಒಮ್ಮೊಮ್ಮೆ  ಸಂವಹನ ಕ್ರಿಯೆ ,ಸರಿಯಾಗಿ ನಡೆಯದೆ ಇದ್ದಾಗ ಎಂತೆಂತಹ ಎಡವಟ್ಟುಗಳಾಗುತ್ತವೆ ಎನ್ನುವುದನ್ನು ಊಹಿಸಿ ಕೊಳ್ಳುವುದೂ ಅಸಾಧ್ಯ !ಕೆಲವು ತಿಂಗಳುಗಳ ಹಿಂದೆ 'ಪ್ರಜಾವಾಣಿಯಲ್ಲಿ' ಶ್ರೀ ಗುರುರಾಜ ಕರಜಗಿಯವರು ಬರೆದ ಘಟನೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುತ್ತೇನೆ.ಪುಣೆಯಲ್ಲಿ ಗಂಡ ,ಹೆಂಡತಿ ಒಟ್ಟಾಗಿ ಒಂದು ಕ್ಲಿನಿಕ್ ನಡೆಸುತ್ತಿದ್ದರು.ಗಂಡ 'ಸ್ತ್ರೀ ರೋಗ ತಜ್ಞ' ( male gynecologist). ಹೆಂಡತಿ'ಕಿವಿ,ಗಂಟಲು,ಮೂಗು 'ತಜ್ಞೆ (E.N.T.Specialist).ಕಿವಿಯಲ್ಲಿ wax ತೆಗೆಸಿಕೊಳ್ಳಲು ಬಂದ ಮಹಿಳೆಯೊಬ್ಬಳು ,ಪ್ರಮಾದದಿಂದ ಅಲ್ಲಿದ್ದ male gynecologist ಬಳಿ ಹೋಗುತ್ತಾಳೆ.ಅದೇ ವೇಳೆಗೆ ಯಾರೋ ನಾಲಕ್ಕು ತಿಂಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ಬರಬೇಕಿದ್ದ ಮಹಿಳೆಯ ನಿರೀಕ್ಷೆಯಲ್ಲಿದ್ದ ವೈದ್ಯ ಮಹಾಶಯ ಕಿವಿಯ ರೋಗಿಯನ್ನೇ, ಗರ್ಭಪಾತ ಮಾಡಿಸಲು ಬಂದವಳೆಂದು ತಪ್ಪು ತಿಳಿಯುತ್ತಾನೆ.ಅವರಿಬ್ಬರ ಸಂಭಾಷಣೆ ಈ ರೀತಿ ಸಾಗುತ್ತದೆ;
ವೈದ್ಯ ;'ಬನ್ನಿ ,ಬನ್ನಿ,ಆರಾಮಾಗಿ ಕುಳಿತುಕೊಳ್ಳಿ.Just relax.ಗಾಭರಿ ಪಡುವಂತಹುದು ಏನೂ ಇಲ್ಲ.'
ರೋಗಿ;'ಅಯ್ಯೋ!ಇದಕ್ಕೆಲ್ಲಾ ಗಾಭರಿ ಯಾಕೆ!ಮನೆಯಲ್ಲೇ ನಾನೇ ಪಿನ್ ಹಾಕಿ ತೆಗೆದು ಬಿಡ ಬೇಕೆಂದಿದ್ದೆ!'
ವೈದ್ಯ;ಗಾಭರಿಯಿಂದ 'ಛೆ !ಛೆ!ಏನಮ್ಮಾ ನೀವು!ಒಳ್ಳೇ ವಿದ್ಯಾವಂತೆ ತರ ಕಾಣ್ತೀರಾ !ಹೀಗೆಲ್ಲಾ ಮಾಡ್ತಾರಾ!?'
ರೋಗಿ;'ಪಕ್ಕದ ಮನೆ ಹೆಂಗಸು ಎಣ್ಣೆ ಕಾಯಿಸಿ ಬಿಡು.ಬಂದು ಬಿಡುತ್ತೆ ಎಂದಳು.ನನಗ್ಯಾಕೋ ಸರಿಕಾಣಲಿಲ್ಲ .'
ವೈದ್ಯ;ಹೌಹಾರಿ 'ಅಯ್ಯಯ್ಯೋ !ಅದೆಲ್ಲಾ ತಪ್ಪಲ್ವಾ?ನಿಮ್ಮ ಯಜಮಾನ್ರನ್ನೂ ಕರೆದು ಕೊಂಡು ಬರಬೇಕಿತ್ತು.ಇದಕ್ಕೆ ಅವರ ಒಪ್ಪಿಗೇನೂ ಬೇಕಿತ್ತು'ಎಂದರು.
ರೋಗಿ;ಇಷ್ಟು ಸಣ್ಣ ವಿಷಯಕ್ಕೆ ಅವರ ಒಪ್ಪಿಗೆ ಯಾಕೇ?ಅವರು ದುಬೈಗೆ ಹೋಗಿ ಒಂದು ವರ್ಷವಾಯಿತು.ನೀವು ತೆಗೀರಿ ,ಪರವಾಗಿಲ್ಲ.ನೋವಾಗುತ್ತಾ ಡಾಕ್ಟರ್?ಎಂದಳು.
ವೈದ್ಯ;'ಛೆ!ಛೆ! ಅಷ್ಟೇನೂ ನೋವಾಗೊಲ್ಲಾ.ಸ್ವಲ್ಪ ಬ್ಲೀಡಿಂಗ್ ಆಗಬಹುದು.ಸ್ವಲ್ಪ ತಲೆ ಸುತ್ತಬಹುದು.ಅಷ್ಟೇ.'
ರೋಗಿ;ಗಾಭರಿಯಾಗಿ 'ಬ್ಲೀಡಿಂಗ್ ಜಾಸ್ತಿಯಾಗುತ್ತಾ ಡಾಕ್ಟರ್?'
ವೈದ್ಯ;'ಹೆಚ್ಚೇನಿಲ್ಲ.ಮಾಮೂಲು ನಿಮ್ಮ ಪೀರಿಯಡ್ಸ್ ನಲ್ಲಿ ಆದಷ್ಟು.'  
ಕಿವಿಯಲ್ಲಿ ಪೀರಿಯಡ್ಸ್ ನಲ್ಲಿ ಆದಷ್ಟು ಬ್ಲೀಡಿಂಗ್ ಆಗುತ್ತೆ ಅಂದರೆ ಯಾರಿಗೆ ತಾನೇ ಗಾಭರಿಯಾಗೊಲ್ಲಾ?
ರೋಗಿ;'ಬರ್ತೀನಿ ಡಾಕ್ಟ್ರೆ ,ಈಗ ಸ್ವಲ್ಪ ಅರ್ಜೆಂಟ್ ಕೆಲಸ ಇದೆ.ಆಮೇಲೆ ಬಂದು ತೆಗೆಸ್ಕೊತೀನಿ' ಎಂದು ಹೇಳಿ ಓಟ ಕಿತ್ತಳು!       
ಸರಿಯಾದ ಸಂವಹನ ಕ್ರಿಯೆ ( communication skill) ಎಷ್ಟು ಮುಖ್ಯ ಅಲ್ಲವೇ ಸ್ನೇಹಿತರೇ? ಇಷ್ಟ ಆಯ್ತಾ?ನಮಸ್ಕಾರ.

Wednesday, September 1, 2010

"ಪ್ರಾರ್ಥನೆ"

ಕೃಷ್ಣಾ  ssss-----------!
ಇಗೋ ನನ್ನೆಲ್ಲಾ ಬುದ್ಧಿ ಶಕ್ತಿ ,
ಮಂತ್ರ, ತಂತ್ರ ,ಯುಕ್ತಿ !
ಎಲ್ಲಾ ನಿನಗೇ ಸಮರ್ಪಣೆ!
ನಿನ್ನಲ್ಲಿ ನನ್ನದಿಷ್ಟೇ ಪ್ರಾರ್ಥನೆ !
ಪಾರ್ಥನಿಗೆ ಸಾರಥಿಯಾದಂತೆ,
ನನ್ನ ಮನೋರಥದ ತೇಜಿಯ
ಇಗೋ ---,ನೀನೇ ಹಿಡಿ!
ಮನದ ಉದ್ಯಾನದಲಿ ಸದಾ 
ಆನಂದದ ಕೊಳಲನೂದುತಿರು!
ದುರಾಚಾರದ ,ದುರಾಲೋಚನೆಗಳ 
ಕಾಳಿಂಗ, ಹೆಡೆ ಎತ್ತಿದರೆ ,
ಮರ್ದಿಸಿ ,ನಾಟ್ಯವಾಡು!
ಕರ್ತವ್ಯ ನೆನಪಿಸುವ 
ಗೀತಾಚಾರ್ಯನಾಗು !
ಕೃಷ್ಣಾ ssss-------,ನಿನ್ನಲ್ಲಿ ,
ನನ್ನದಿಷ್ಟೇ ಪ್ರಾರ್ಥನೆ!
ಕತ್ತಲೆಯಿಂದ ಬೆಳಕಿನೆಡೆಗೆ ,
ನಡೆಸೆನ್ನನು   ದೇವನೆ!

'ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು'

ನಿಮ್ಮೆಲ್ಲರಿಗೂ 'ಕೊಳಲು' ಬ್ಲಾಗಿನಿಂದ 'ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು'.ಆ ಭಗವಂತನು ನಮ್ಮೆಲ್ಲಾ ಕಾರ್ಯಗಳಿಗೂ ಸಾರಥಿಯಾಗಿರಲೆಂದು (ಸಾಥಿ ಕೂಡ !)ಅವನಲ್ಲಿ ಪ್ರಾರ್ಥನೆ.