Saturday, February 18, 2012

"ನಿಮ್ಮ ಮನಸ್ಸು ಸುಂದರವಾಗಿದ್ದರೆ, ಈ ಜಗತ್ತೇ ಸುಂದರ!!!"

ನನ್ನ ಬ್ಲಾಗ್  ಸ್ನೇಹಿತ ಬಾಲೂ ಸರ್ ಅವರ ಬ್ಲಾಗ್ 'ನಿಮ್ಮೊಳಗೊಬ್ಬ ಬಾಲು'ಅವರ ಬ್ಲಾಗಿನ ಧ್ಯೇಯ ವಾಕ್ಯ 'ನಿಮ್ಮ ಮನಸ್ಸು ಸುಂದರವಾಗಿದ್ದರೆ ,ಜಗತ್ತೇ ಸುಂದರ!!'ಎನ್ನುವ ಮಾತುಗಳು ನನಗೆ ಸದಾ ನೆನಪಾಗುತ್ತಿರುತ್ತವೆ .ಆ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆಯಲ್ಲವೇ!. The  world is neither good nor bad,our perception makes it so.'The mind in itself can create a hell or a heaven!'ನಾವು ಹೊರಗಿನ ಸಂದರ್ಭಗಳಿಂದ ,ಘಟನೆಗಳಿಂದ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ ಎನ್ನುತ್ತೇವೆ.ಆದರೆ ಆ ಘಟನೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ನಮ್ಮ ನೆಮ್ಮದಿ ಹಾಳಾಗುತ್ತದೆಯೇ ಹೊರತು ಆ ಘಟನೆಗಳಿಂದಲ್ಲ.ಸಾಧ್ಯವಿದ್ದಷ್ಟೂ ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬೇಡಿ.ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನಾಡಬೇಡಿ.ಯಾವುದೇ NEGATIVE VIBRATION ಅದರ ಮೂಲವಾದ ನಮ್ಮ ಮನಸ್ಸನ್ನೇ ಹಾಳು ಮಾಡುತ್ತದೆ.ಸದಾ ಕಾಲ ಮನಸ್ಸು ಶಾಂತಿಯಿಂದ,ನೆಮ್ಮದಿಯಿಂದ  ,ಸಂತೋಷದಿಂದ ಇರುವಂತೆ ನೋಡಿಕೊಳ್ಳಿ.THIS SHOULD BE  A ONE POINT PROGRAMME OF YOUR LIFE TIME..ಈ ಒಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡಿ.ಮತ್ತೆಲ್ಲಾ ವಿಷಯಗಳೂ ತಮ್ಮಷ್ಟಕ್ಕೆ ತಾವೇ ಬದಲಾಗುತ್ತವೆ.If you can make your mind beautiful,the world will definitely be beautiful.'ದೃಷ್ಟಿಯಂತೆ ಶೃಷ್ಟಿ'ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ.ಬಸವಣ್ಣನವರು ನೂರಾರು ವರುಷಗಳ ಹಿಂದೆಯೇ ಹೇಳಿದಂತೆ ಲೋಕದ ಡೊಂಕ ತಿದ್ದುವ ಮೊದಲು ನಮ್ಮ ಮನದ ಡೊಂಕುಗಳನ್ನು ತಿದ್ದಿಕೊಳ್ಳೋಣ.ನಮ್ಮ ನಮ್ಮ ಮನಗಳ ಸಂತೈಸಿಕೊಳ್ಳೋಣ.ನಮ್ಮ ಆಲೋಚನೆಗಳನ್ನು ಮೊದಲು ಸರಿಪಡಿಸಿಕೊಳ್ಳೋಣ.
'ಈ ಕ್ಷಣದಲ್ಲಿ ಇರುವುದನ್ನು 'ರೂಢಿಸಿ ಕೊಳ್ಳುವುದರಿಂದಲೂ, ಧ್ಯಾನದಿಂದಲೂ ,ಸದಾ ಧನಾತ್ಮಕ ಚಿಂತನೆಗಳಿಂದಲೂ (positive thinking), ನಮ್ಮ ಮನಸ್ಸನ್ನು ಸುಂದರವಾಗಿಸಿಕೊಂಡು ,ಈ ಜಗತ್ತನ್ನೂ ಸುಂದರಗೊಳಿಸೋಣ.

Saturday, February 11, 2012

"ಸಂತಸದ ಜೀವನಕ್ಕೆ ಸರಳ ಸೂತ್ರಗಳು"

೧) ಕೀಳರಿಮೆ ಬಿಡಿ. ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿದಂತೆ "ತರಚುಗಾಯವ ಕೆರೆದು ಹುಣ್ಣನಾಗಿಪ ಕಪಿಯಂತೆ,ಕೊರತೆಯೊಂದನ್ನು ನೆನೆನೆದು ಕೊರಗಿ,ಮನದಲ್ಲಿ ನರಕ"ಸೃಷ್ಟಿಸಿಕೊಳ್ಳದಿರಿ.ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮ ಗುಣಗಳು ಇದ್ದೇ ಇರುತ್ತವೆ.ಅವನ್ನು ಮೊದಲು ನಾವು ಗುರುತಿಸಿಕೊಳ್ಳಬೇಕಷ್ಟೇ !
೨)ನಿಮ್ಮ ಮನಸ್ಸಿನಿಂದ ನಿಮ್ಮ ಹಳೆಯ ತಪ್ಪುಗಳು,ಸೋಲುಗಳು,ಬೇಸರಗಳು,ಪರರ ನಿಂದನೆಗಳು,ಹೀಗಳಿಕೆಗಳು ಮತ್ತು ಅವಮಾನಗಳನ್ನು ಎತ್ತಿ ಆಚೆಗೆ ಬಿಸಾಡಿ.ಅವನ್ನೆಲ್ಲಾ ಮೊದಲು ಬಿಟ್ಟುಹಾಕಿ.ನೀವು ಯಾರಿಗೂ,ಯಾವುದರಲ್ಲೂ ಕಮ್ಮಿ ಇಲ್ಲಾ ಎನ್ನುವ ಆತ್ಮ ವಿಶ್ವಾಸವನ್ನು ಹುಟ್ಟು ಹಾಕಿ.
೩)ನಿಮ್ಮ ಬಗ್ಗೆ ನೀವೇ ಮರುಕ ಪಡುವುದನ್ನು (self pity) ಮೊದಲು ನಿಲ್ಲಿಸಿ.ನಿಮ್ಮಲ್ಲಿ ಏನಿಲ್ಲ ಎನ್ನುವುದಕ್ಕಿಂತ ಏನೆಲ್ಲಾ ಇದೆ ಎನ್ನುವುದನ್ನು ಮೊದಲು ಗಮನಕ್ಕೆ ತಂದು ಕೊಳ್ಳಿ.ನೀವು ಏನು ಮಾಡಲಾರಿರಿ ಎನ್ನುವುದಕ್ಕಿಂತ ಏನನ್ನು ಮಾಡಬಲ್ಲಿರಿ ಎನ್ನುವುದರ ಕಡೆ ಗಮನಕೊಡಿ.
೪)ಸದಾ ಕಾಲ ನಿಮ್ಮ ಬಗ್ಗೆಯೇ ಚಿಂತಿಸುವುದನ್ನು ನಿಲ್ಲಿಸಿ.ನಿಮ್ಮ ರೋಗಗಳ ಬಗ್ಗೆ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಅವು ಭೂತಾಕಾರವಾಗಿ ಬೆಳೆಯುತ್ತವೆ.ನಿಮ್ಮಿಂದ ಯಾರಿಗಾದರೂ ಸಣ್ಣದೊಂದು ಸಹಾಯವಾಗಬಹುದೇ ನೋಡಿ.ಅವರಿಂದ ಏನನ್ನೂ ಬಯಸದೆ ಸಹಾಯ ಮಾಡುವುದು ಉತ್ತಮ.
೫)ಶಾಂತಿ,ಸಮಾಧಾನ,ಮತ್ತು ಆನಂದದ ಬಗ್ಗೆ ಸದಾ ಯೋಚಿಸುವುದನ್ನು ರೂಢಿಸಿಕೊಳ್ಳಿ.ಈ ಉತ್ತಮ ಗುಣಗಳು ನಿಮ್ಮ ಅಭ್ಯಾಸವಾಗಲಿ.
೬)ನಾವು ಅಂದು ಕೊಂಡಿದ್ದಕ್ಕಿಂತ ಹೆಚ್ಚು ದೈವಿಕತೆ ನಮ್ಮೊಳಗಿದೆ.ನಮ್ಮ ಅಹಂಕಾರ ಮಾಯವಾದಾಗ  ನಾವು ದೈವಿಕವಾಗಿರುತ್ತೇವೆ.ನಾವು ದೈವಿಕವಾಗಿದ್ದಾಗ ಪರಿಶುದ್ಧರಾಗಿರುತ್ತೇವೆ.ಆರೋಗ್ಯದಿಂದಿರುತ್ತೇವೆ.ನಾವು ಧ್ಯಾನದಲ್ಲಿ ಮುಳುಗಿದಾಗ ನಮ್ಮ ಅಹಂಕಾರ ಮಾಯವಾಗಿ ನಾವು ದೈವಿಕ ಸಂಪರ್ಕದಲ್ಲಿರುತ್ತೇವೆ.ನಾವು ನಿದ್ದೆ ಹೋದಾಗ ನಮ್ಮ ಅಹಂಕಾರವೂ ನಿದ್ರಿಸಿರುತ್ತದೆ.ನಮ್ಮ ಹುದ್ದೆ ,ಸಂಪತ್ತು,ಸ್ಥಾನ ಮಾನ,ಕಾಡುವುದಿಲ್ಲ.ನಾವು ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.ನಾವು ಮತ್ತೊಬ್ಬರ ಆರೈಕೆಯನ್ನು ಮನಸ್ಸಿಟ್ಟು ಮಾಡಿದಾಗ ದೈವಿಕತೆಯಲ್ಲಿ ಮುಳುಗಿರುತ್ತೇವೆ.ನಾವು ಎಲ್ಲರನ್ನೂ ಅವರಂತೆಯೇ ಸ್ವೀಕರಿಸಿದಾಗ ದೈವಿಕತೆ ಮೂಡುತ್ತದೆ.ನಮ್ಮ ದೇಹದ ಪ್ರತಿಯೊಂದು ಜೀವ ಕೋಶದಲ್ಲೂ ಪ್ರೀತಿ ತುಂಬಿ ಹರಿಯುತ್ತದೆ.ನಾವು ಈಗಿನ ಕ್ಷಣವನ್ನು ಸಂಪೂರ್ಣವಾಗಿ ಸ್ವೀಕರಿಸಿದಾಗ ಆ ಶ್ರೇಷ್ಠ ಶಕ್ತಿಯೊಂದಿಗೆ ಒಂದಾಗಿರುತ್ತೇವೆ.
೭)ನಾನು ಸಂತಸದಿಂದ ಇದ್ದೇನೆ,ಸಂತೃಪ್ತಿಯಿಂದ ಇದ್ದೇನೆ,ಆ ದೇವರ ಆಶೀರ್ವಾದದಿಂದ ನನಗೆ ಯಾವ ಕೊರತೆಯೂ ಇಲ್ಲ ಎಂದುಕೊಂಡು ಧ್ಯಾನ ಮಾಡಿ.ಎಲ್ಲದರಿಂದ ಮುಕ್ತವಾದ ಶಾಂತಿಯ ನದಿ ನಿಮ್ಮಲ್ಲಿ ಹರಿಯುತ್ತದೆ.ಅದುವೆ ದೈವಿಕತೆ!

(ಸಾಧಾರಿತ.ಭಾಗ(೬)ಮತ್ತು (೭)ಇಂದಿನ ಪ್ರಜಾವಾಣಿಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು' ಎಂಬ ಬರಹದಿಂದ ಆಯ್ದುಕೊಂಡಿದ್ದು.)

Thursday, February 9, 2012

"ನನ್ನ ಬ್ಲಾಗಿಗೆ ಎರಡು ವರ್ಷದ ಹರ್ಷ!!"

ಮೊನ್ನೆ ಮೊನ್ನೆ ಬ್ಲಾಗ್ ಶುರು ಮಾಡಿದ ಹಾಗಿದೆ.ಮೊನ್ನೆಗೆ ನನ್ನ ಬ್ಲಾಗಿಗೆ ಎರಡು ವರ್ಷ ತುಂಬಿದೆ.ಸುಮಾರು 184 ಬರಹಗಳು ಪ್ರಕಟವಾಗಿವೆ.ಸುಮಾರು 176 ಜನ  followers ಆಗಿದ್ದಾರೆ.ಬ್ಲಾಗ್ ಎನ್ನುವುದು ಏನು ಎಂದೇ ತಿಳಿಯದವನು ಅವರಿವರ ಸಹಾಯದಿಂದ ಕಷ್ಟ ಪಟ್ಟು ಶುರು ಮಾಡಿದೆ.ಈಗ ಹಿಂದಿರುಗಿ ನೋಡಿದರೆ ಇಷ್ಟೆಲ್ಲಾ ಬರಹಗಳನ್ನು ಹೇಗೆ ಬರೆದೆ ಎನ್ನುವುದು ತಿಳಿಯುತ್ತಿಲ್ಲ.ಇದಕ್ಕೆ ನಿಮ್ಮೆಲ್ಲರ ನಿರಂತರ ಪ್ರತಿಕ್ರಿಯೆ,ಪ್ರೋತ್ಸಾಹಗಳೇ ಮುಖ್ಯ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.ಎಲ್ಲಾ ಬ್ಲಾಗಿಗರದೂ ಉದಾರ ಮನಸ್ಸು.ಬ್ಲಾಗಿನ ಬಾಂಧವ್ಯ ನನಗೆ ಉತ್ತಮ ಸ್ನೇಹಿತರನ್ನು ಕೊಟ್ಟಿದೆ.ನಿಮ್ಮೆಲ್ಲರ ಪ್ರೀತಿ ,ಸ್ನೇಹಕ್ಕೆ ನಾನು ಚಿರಋಣಿ.ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳು ನನಗೆ ನಿರಂತರವಾಗಿ ಸಿಗಲಿ ಎಂದು  ಆ ದೇವರಲ್ಲಿ ನನ್ನ ಪ್ರಾರ್ಥನೆ. ತಿಳಿಯದೆ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ.ಬ್ಲಾಗಿಗೆ ಬರುವುದನ್ನು ನಿಲ್ಲಿಸಿರುವ ಎಲ್ಲಾ ಬಂಧುಗಳಿಗೂ ನನ್ನ ಬ್ಲಾಗಿಗೆ  ಬರುವಂತೆ ವಿನಂತಿ.ಇಂತಿ ನಮನಗಳು.

Sunday, February 5, 2012

"ಕೊಳಲಿನ ....ಅಳಲು!"

ಕೊಳಲಿನಲಿ ಉಸಿರಿಲ್ಲ!
ಉಸಿರಿಲ್ಲದೆ ಬೇಸರದಿಂದ 
ನಿಡುಸುಯ್ಯಲೂ.....ಉಸಿರಿಲ್ಲ!
ಉಸಿರಿಲ್ಲದ ಬದುಕಿದು
ಎಂಥಾ ......ಬದುಕು?
ಖಾಲಿ ಬಿದಿರಿನ ಬದುಕು!
ಸಾಕಾಗಿದೆ 'ಶ-ಬರಿ'ತನ!
ರಾಗ ಹಾಕಿದೆ ಗಸ್ತು!
ಕೆಲಸವಿಲ್ಲದೇ ......ಸುಸ್ತು!
'ಗೋವುಗಳ'ಕಿವಿಗಳು
ಇಂಪಿಗಾಗಿ ಕಾದು ಸೋತಿವೆ!
ಎಲ್ಲಿ ಹೋದ ಕೃಷ್ಣ?
'ಗೋಪಿಯರ' ಚಿಂತೆಯಲಿ
ಮರೆತನೇ.....ಕೊಳಲ?
ಕೇಳುವನೆ ತನ್ನ ಅಳಲ...?
ಎಲ್ಲಿ ಹೋದ...... ಕೃಷ್ಣ?
ಎಲ್ಲಿ ಹೋದ..... ಕೃಷ್ಣ ?
ಬರೀ ಮೂರ್ತಿಯನೆ ಬಿಟ್ಟು!!
(ಕವಿತೆಯನ್ನು ಬರೆಯಲು ಪ್ರೇರಣೆ ನೀಡಿದ ಮಿತ್ರ ,ಕವಿ ,ಬದರಿನಾಥ್ ಪಲವಳ್ಳಿ ಯವರಿಗೆ ನಮನಗಳು.'ಶಬರಿ'ತನ ಅವರು ಬಳಸುವ ಪದ.ಅವರ ಅನುಮತಿ ಪಡೆಯದೇ ನಾನೂ ಬಳಸಿಕೊಂಡಿದ್ದೇನೆ.ಬದರಿ ಸರ್ ಕ್ಷಮೆ ಇರಲಿ .)