Saturday, June 29, 2013

"ಸಾಮಾನ್ಯನೊಬ್ಬನ ಅಸಾಮಾನ್ಯ ಸಾಹಸ ಗಾಥೆ !!!! "

ಅವನ ಹೆಸರು ದಶರಥ್ ಮಾಂಜಿ.ಅವನೊಬ್ಬ ಸಾಧಾರಣ ಅನಕ್ಷರಸ್ಥ ,ಹಿಂದುಳಿದ ವರ್ಗದ ಕೂಲಿ ಕಾರ್ಮಿಕ.ಆದರೆ ಅವನು ಸಾಧಿಸಿದ ಕೆಲಸ ಅದ್ಭತ ಮತ್ತು ಅಸಾಧಾರಣ!!!! ನಮ್ಮ ದೇಶದಲ್ಲೇ ಏಕೆ ,ಪ್ರಪಂಚದಲ್ಲೇ ಅಂತಹ ದಾಖಲೆಯನ್ನು ಯಾರೂ ಸಾಧಿಸಿಲ್ಲ.ಅವನ ಸಾಧನೆಯನ್ನು ಶಹಜಾನ್  ತಾಜ್ ಮಹಲ್ ಕಟ್ಟಿದ ಸಾಧನೆಗಿಂತ ಹಿರಿದಾದ ಸಾಧನೆ ಎನ್ನುವವರಿದ್ದಾರೆ.

ದಶರಥ್ ಮಾಂಜಿಯ ಊರು ಬಿಹಾರದ ಗಯಾ ಜಿಲ್ಲೆಯ ಅತೀ ಹಿಂದುಳಿದ ಹಳ್ಳಿ ಘೆಲೋರ್ .ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯವಾಗಲೀ ಅಥವಾ ಇನ್ನಿತರ ಯಾವುದೇ ಸೌಲಭ್ಯವಾಗಲೀ ಇರಲಿಲ್ಲ.ಹಳ್ಳಿಯ ಮುಂದೆ ದೊಡ್ಡ ಕಲ್ಲಿನ ಬೆಟ್ಟವೊಂದು ಇವರ ಎಲ್ಲಾ ಸೌಕರ್ಯಗಳಿಗೂ ಅಡ್ಡಿಯಾಗಿತ್ತು.ಹತ್ತಿರದ ಊರು ವಜೀರ್ ಗಂಜ್ ಗೆ ಹೋಗಲು ಬೆಟ್ಟವನ್ನು ಬಳಸಿಕೊಂಡು ಎಪ್ಪತ್ತು ಕಿಲೋಮೀಟರ್ ದಾರಿ ಕ್ರಮಿಸ ಬೇಕಾಗಿತ್ತು.

ಒಂದು ಬಾರಿ ದಶರಥ್ ಮಾಂಜಿಯ ಹೆಂಡತಿಗೆ ತೀವ್ರ ಅನಾರೋಗ್ಯವಾಗಿ ,ಸಮಯಕ್ಕೆ ಸರಿಯಾಗಿ ಅವಳಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸಬೇಕಾಯಿತು.ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ದಶರಥ್ ಮಾಂಜಿಯ ಮೇಲೆ ಈ ಘಟನೆ ಬಹಳ ಆಘಾತಕಾರಿ ಪರಿಣಾಮ ಬೀರಿತು.ಆ ರಾತ್ರಿಯೇ ದಶರಥ್ ಮಾಂಜಿ ಒಂದು ನಿರ್ಧಾರಕ್ಕೆ ಬಂದ.ತನ್ನ ಬಳಿ ಇದ್ದ ಆಡುಗಳನ್ನು ಮಾರಿ ,ಬೆಟ್ಟ ಕಡಿಯುವ ಸಲಕರಣೆಗಳಾದ ,ಸುತ್ತಿಗೆ,ಉಳಿ,ಪಿಕಾಸಿ,
ಹಾರೆ,ಸಲಿಕೆ ಮುಂತಾದುವುಗಳನ್ನು ಖರೀದಿ ಮಾಡಿದ.

ಮಾರನೇ ದಿನದಿಂದಲೇ ಬೆಟ್ಟ ಕಡಿದು ದಾರಿ ಮಾಡುವ ಕೆಲಸವನ್ನು ಒಬ್ಬನೇ ಶುರು ಮಾಡಿದ.ಇದು ಸುಮಾರು 1960 ರ  ಶುರು.ಇವನ ಕೆಲಸವನ್ನೂ,ಇವನ ಮಾತನ್ನೂ ಕೇಳಿ ಊರಿನ ಜನ ಇವನನ್ನು ಹುಚ್ಚನೆಂದರು."ಒಬ್ಬನೇ ಬೆಟ್ಟ ಕಡಿಯಲು ಸಾಧ್ಯವೇ?"ಎಂದು ನಕ್ಕರು,ಅಪಹಾಸ್ಯ ಮಾಡಿದರು.ಆದರೆ ಇದು ಯಾವುದರಿಂದಲೂ ದಶರಥ್ ವಿಚಲಿತ ನಾಗಲಿಲ್ಲ.ಅವನ ನಿರ್ಧಾರ ಅಚಲವಾಗಿತ್ತು. ಹಗಲು ರಾತ್ರಿ ಎನ್ನದೇ ಕಲ್ಲಿನ ಬೆಟ್ಟ ಕಡಿದು ರಸ್ತೆ ಮಾಡುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಊರು ಬಿಟ್ಟು ಬೆಟ್ಟದ ಬಳಿಯೇ ಒಂದು ಗುಡಿಸಿಲು ಕಟ್ಟಿಕೊಂಡ.ಬರ ಬರುತ್ತಾ ಜನಕ್ಕೆ ಅವನ ಮಹಾನ್ ಕಾರ್ಯದ ಅರಿವಾಗಿ ಅವನಿಗೆ ನೀರು,ಆಹಾರ ತಂದು ಕೊಡುವ ಸಣ್ಣ ಪುಟ್ಟ ಸಹಾಯ ಮಾಡ ತೊಡಗಿದರು. ಸತತ ಇಪ್ಪತ್ತೆರಡು ವರ್ಷ ಏಕಾಂಗಿಯಾಗಿ ಕೆಲಸಮಾಡಿದ ದಶರಥ್ ಮಾಂಜಿ ,1982 ರಲ್ಲಿ ತನ್ನ ಮಹಾನ್ ಕಾರ್ಯದಲ್ಲಿ ಸಫಲನಾಗಿದ್ದ.ಆ ಕಲ್ಲಿನ ಬೆಟ್ಟದಲ್ಲಿ ಒಂದು ಕಿಲೋಮೀಟರ್ ಉದ್ದದ ,ಮೂವತ್ತು ಅಡಿ ಅಗಲದ ,ಇಪ್ಪತ್ತೈದು ಅಡಿ ಎತ್ತರದ ರಸ್ತೆ ನಿರ್ಮಾಣವಾಗಿತ್ತು.ಹತ್ತಿರದ ಊರು ವಜೀರ್ ಗಂಜಿನ ಎಪ್ಪತ್ತು ಕಿಲೋಮೀಟರ್ ದಾರಿ ಬರೀ ಏಳು ಕಿಲೋ ಮೀಟರ್ ಗೆ ಇಳಿದಿತ್ತು.ಆದರೆ ಅವನ ಈ ಮಹಾನ್ ಸಾಧನೆಯನ್ನು ಕಾಣಲು ಅವನ ಹೆಂಡತಿ ಫಾಗುಣೆ ದೇವಿ ಬದುಕಿರಲಿಲ್ಲ.

ನಂತರ ಬಿಹಾರ್ ಸರ್ಕಾರ ಅವನನ್ನು ಸನ್ಮಾನಿಸಿತು.ಇಂತಹ ,ಯಾರೂ  ಕಂಡು ,ಕೇಳಿರದ,ಸಾಹಸವನ್ನು ಏಕಾಂಗಿಯಾಗಿ ಮಾಡಿದ ದಶರಥ್ ಮಾಂಜಿ ಆಗಸ್ಟ್ 17,2007 ರಲ್ಲಿ ತೀರಿಕೊಂಡ.ಹೆಂಡತಿಯ ಮೇಲಿನ ಅಪ್ರತಿಮ ಪ್ರೀತಿ ಕಲ್ಲಿನ ಬೆಟ್ಟದಲ್ಲಿಯೇ ಒಂದು ದಾರಿ ನಿರ್ಮಿಸಿ ,ಜಗತ್ತೇ ವಿಸ್ಮಯ ಪಡುವಂತೆ ಮಾಡಿದೆ.ದಶರಥ್ ಮಾಂಜಿಯ ಕಥೆಯನ್ನು  ಹಲವಾರು ನಿರ್ಮಾಪಕರು ಸಿನಿಮಾ ತಯಾರಿಸಿದ್ದಾರೆ.ಅವನ ಹೆಸರಿನಲ್ಲಿ ಅವನ ಹಳ್ಳಿಯಲ್ಲೊಂದು ಆಸ್ಪತ್ರೆಯಾಗಿದೆ.ಈಗ ಆ ರಸ್ತೆಯಲ್ಲಿ ಹಲವಾರು ವಾಹನ ಗಳು ಓಡಾಡುತ್ತವೆ.ಈಗ ಆ ಹಳ್ಳಿಯ ಜನ 'ಬಾಬ'ದಶರಥ್ ಮಾಂಜಿಯನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ನಿಜಕ್ಕೂ ದಶರಥ್ ಮಾಂಜಿಯದು ಒಂದು ಸಾರ್ಥಕ ಜೀವನವಲ್ಲವೇ!!!? ಸಣ್ಣ ಪುಟ್ಟ ಸವಾಲಿಗೂ ಎದೆ ಗುಂದುವ ನಮ್ಮಂತಹ ಸಾಮಾನ್ಯರಿಗೆ ದಶರಥ್ ಮಾಂಜಿ ಆದರ್ಶ ಪ್ರಾಯನಾಗಿದ್ದಾನೆ!!! ನಮಸ್ಕಾರ.

Thursday, June 27, 2013

"ಚಾಕೊಲೇಟ್ ಕೋನ್ ಐಸ್ ಕ್ರೀಂ ಕಥೆ !!!!"

ಅವನೊಬ್ಬ ಸುಮಾರು ಹದಿನಾಲಕ್ಕು ವರ್ಷದ ಕೂಲಿ ಹುಡುಗ. ಅವನಿಗೆ ಬಹಳ ದಿನಗಳಿಂದ 'ಚಾಕೊಲೇಟ್ ಕೋನ್ ಐಸ್ ಕ್ರೀಂ' ತಿನ್ನ ಬೇಕೆಂಬ ಆಸೆ ಇತ್ತು. ಒಂದುದಿನ ತನ್ನ ಬಳಿ  ಕೂಡಿಟ್ಟಿದ್ದ ಚಿಲ್ಲರೆ ಹಣವನ್ನೆಲ್ಲಾ ಸೇರಿಸಿ, ತಾನು ದಿನವೂ ಹಾದು  ಹೋಗುತ್ತಿದ್ದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಹೋಗಿ ಕುಳಿತ. ಅವನು  ಅಂತಹ ಹೋಟೆಲ್ ಗೆ ಹೋಗಿದ್ದು ಅದೇ ಮೊದಲನೇ ಸಲವಾದ್ದರಿಂದ ಸ್ವಲ್ಪ ಗಾಭರಿ ಗೊಂಡಿದ್ದ. ಹಣೆಯಲ್ಲಿ ಬೆವರಿತ್ತು.ಅವನು ಹಾಕಿಕೊಂಡಿದ್ದ  ಕೊಳಕು ಬಟ್ಟೆಅಲ್ಲಲ್ಲಿ ಹರಿದಿತ್ತು.


ಸಮವಸ್ತ್ರ ಧರಿಸಿದ್ದ ವೇಯ್ಟರ್  ಬಂದು ಟೇಬಲ್ ಮೇಲೆ ಒಂದು ನೀರಿನ ಲೋಟ ಕುಕ್ಕಿ ,ಆ ಕೂಲಿ ಹುಡುಗನನ್ನು ಇವನು ಇಲ್ಲಿ ಯಾಕೆ ಬಂದ ಎನ್ನುವಂತೆ ಕೆಕ್ಕರಿಸಿ ನೋಡಿ,"ಏನೋ.... ,ಏನು ಬೇಕು ?"ಎಂದು ಒರಟು ದನಿಯಲ್ಲಿ ಕೇಳಿದ. ಅದಕ್ಕೆ ಆ ಹುಡುಗ "ಅಂಕಲ್ ನನಗೆ ಚಾಕೊಲೇಟ್ ಕೋನ್ ಐಸ್ ಕ್ರೀಂ  ತಿನ್ನ ಬೇಕು ಅಂತ ಆಸೆ. ಅದನ್ನು ಕೊಡಿ ಅಂಕಲ್"ಎಂದ. ವೇಯ್ಟರ್ "ಅದಕ್ಕೆ ಇಪ್ಪತ್ತೈದು ರೂಪಾಯಿ. ಅಷ್ಟು ಹಣ ನಿನ್ನ ಹತ್ತಿರ ಇದೆಯಾ?"ಎಂದ. ಹುಡುಗ ತಾನು ತಂದಿದ್ದ ಚಿಲ್ಲರೆ ಹಣವನ್ನು ಟೇಬಲ್ ಟೇಬಲ್ ಮೇಲೆ ಹಾಕಿ ಎಣಿಸ ತೊಡಗಿದ. "ವೇಯ್ಟರ್ ಸಿಟ್ಟಿನಿಂದ "ಹಣ ಇಲ್ಲದಿದ್ದರೆ ಇಲಿಗ್ಯಾಕೆ ಬರಬೇಕು"ಎಂದು ಗೊಣಗುತ್ತಾ ಇನ್ನೊಂದು ಟೇಬಲ್ ಗೆ ಹೊದ. ಸ್ವಲ್ಪ ಹೊತ್ತಿನ ನಂತರ ಹುಡುಗನ ಬಳಿ  ಬಂದು ಏನು ಎನ್ನುವಂತೆ ನೋಡಿದ. ಹುಡುಗ ವೇಯ್ಟರ್ ನನ್ನು ನೋಡುತ್ತಾ "ಅಂಕಲ್,ನನ್ನ ಹತ್ತಿರ ಇಪ್ಪತ್ತೈದು ರೂಪಾಯಿ ಇಲ್ಲ. ಇಪ್ಪತ್ತು ರೂಪಾಯಿಗೆ ಯಾವುದಾದರೂ ಐಸ್  ಕ್ರೀಂ ತಂದು ಕೊಡಿ" ಎಂದ. ವೇಯ್ಟರ್ ಮತ್ತೆ ಸಿಟ್ಟಿನಿಂದ ಏನೋ ಗೊಣಗಿಕೊಂಡು ಹೋಗಿ ಕಪ್ ಐಸ್ ಕ್ರೀಂ ಒಂದನ್ನು ತಂದಿಟ್ಟು ಹೊದ.

ಹುಡುಗ ಐಸ್ ಕ್ರೀಂ  ತಿಂದು ವೇಯ್ಟರ್  ತಂದಿಟ್ಟ ಬಿಲ್ಲಿನ ಜೊತೆ ಹಣ ಇಟ್ಟು  ಹೊರಗೆ  ಹೋದ . ವೇಯ್ಟರ್ ಬಿಲ್ಲಿನ ಹಣ ತೆಗೆದು ಕೊಳ್ಳಲು ಬಂದವನು ಅವಾಕ್ಕಾಗಿ ನಿಂತ. ಅಲ್ಲಿ ಬಿಲ್ಲಿನ ಹಣ ಇಪ್ಪತ್ತು ರೂಪಾಯಿಯ ಜೊತೆಗೆ,ವೇಯ್ಟರ್ ಗೆಂದು ಐದು ರೂಪಾಯಿ ಟಿಪ್ಸ್ ಅನ್ನೂ ಸೇರಿಸಿ ಇಪ್ಪತ್ತೈದು ರೂಪಾಯಿ ಇಟ್ಟಿದ್ದ ಹುಡುಗ !!! ವೇಯ್ಟರ್ ಗೆ ತಾನು  ಹುಡುಗ ನೊಡನೆ ಒರಟಾಗಿ  ನಡೆದು ಕೊಂಡ ರೀತಿಯ   ಬಗ್ಗೆ ತುಂಬಾ ಪಶ್ಚಾತ್ತಾಪ ವಾಗಿತ್ತು. ತನಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು!!!!

ಇದರಲ್ಲಿ ನಮ್ಮೆಲ್ಲರಿಗೂ ಒಂದು ಪಾಠವಿದೆ ಅಲ್ಲವೇ? ನಾವು ಬಾಹ್ಯ ರೂಪಕ್ಕೆ ಬೆಲೆ ಕೊಡದೆ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡ ಬೇಕಲ್ಲವೇ ? ಎಲ್ಲರಿಗೂ ನಮಸ್ಕಾರ.

Wednesday, June 26, 2013

" ಹೀಗೊಂದು ಅದ್ಭುತ ಝೆನ್ ಕಥೆ !!!!"

ಹೀಗೊಂದು ಝೆನ್ ಕಥೆ.ಗುರು ಮತ್ತು ಶಿಷ್ಯರಿಬ್ಬರೂ ಒಂದು ಮುಂಜಾನೆ,ತುಂಬಿ ಹರಿಯುತ್ತಿದ್ದ ಹೊಳೆಯೊಂದನ್ನು ದಾಟಲು ಶುರು ಮಾಡಿದರು. ಸುಂದರ ಯುವತಿಯೊಬ್ಬಳು ಶಿಷ್ಯನನ್ನು,ಹೊಳೆಯನ್ನು ದಾಟಲು ತನಗೆ ಸಹಾಯ ಮಾಡುವಂತೆ ಕೋರಿದಳು. ಶಿಷ್ಯ  ತಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟುವಂತಿಲ್ಲವೆಂದೂ,ಸಹಾಯ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಮುಂದೆ ನಡೆದ. ನಂತರ ಯುವತಿ ಗುರುವಿನ ಸಹಾಯವನ್ನು ಯಾಚಿಸಿದಳು.

 ಗುರು ಒಂದು  ಮಾತನ್ನೂ ಆಡದೆ ಆ ಯುವತಿಯನ್ನು ಎತ್ತಿಕೊಂಡು ಹೊಳೆಯನ್ನು ದಾಟಿಸಿ ಆಚೆ ದಡದಲ್ಲಿ ಬಿಟ್ಟು ,ತನ್ನ  ಶಿಷ್ಯ ನೊಡನೆ ಪ್ರಯಾಣ ವನ್ನು  ಮುಂದುವರಿಸಿದ. ಸಂಜೆ ಗುರು ಶಿಷ್ಯರಿಬ್ಬರೂ ಆಶ್ರಮ ಒಂದರಲ್ಲಿ ತಂಗಿದರು. ಶಿಷ್ಯ ಸಿಟ್ಟಿನಿಂದ ಗುರುವನ್ನು "ನೀವು ಮಾಡಿದ್ದು ತಪ್ಪಲ್ಲವೇ?" ಎಂದು ಪ್ರಶ್ನಿಸಿದ. ಗುರುವಿಗೆ ಶಿಷ್ಯನ ಸಿಟ್ಟಿನ ಕಾರಣ ಅರ್ಥವಾಗದೇ ,ಮುಗ್ಧತೆಯಿಂದ"ನಾನೇನು ತಪ್ಪು ಮಾಡಿದೆ?"ಎಂದು ಕೇಳಿದ.

ಅದಕ್ಕೆ ಶಿಷ್ಯ "ನೀವು ಬೆಳಿಗ್ಗೆ ಆ ಹೆಂಗಸನ್ನು ಮುಟ್ಟಿದ್ದು ತಪ್ಪಲ್ಲವೆ?ನಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟಬಹುದೇ?" ಎಂದು ಸಿಟ್ಟಿನಿಂದ ಕೇಳಿದ. ಅದನ್ನು ಕೇಳಿ ಗುರು ಗಹ ಗಹಿಸಿ ನಕ್ಕು, ಶಿಷ್ಯನನ್ನು ಉದ್ದೇಶಿಸಿ, "ಅಲ್ಲಪ್ಪಾ ಶಿಷ್ಯ ..... ,ನಾನು ಆ ಹೆಂಗಸನ್ನು ಬೆಳಿಗ್ಗೆಯೇ ಆಚೆ ದಡ ದಲ್ಲಿ ಇಳಿಸಿ ಮರೆತು ಬಿಟ್ಟೆ. ಆದರೆ ನೀನು ಅವಳನ್ನು ನಿನ್ನ ಮನಸ್ಸಿನಲ್ಲಿ ಇನ್ನೂ ಹೊತ್ತು ತಿರುಗುತ್ತಿದ್ದೀ ಯಲ್ಲಾ  !!!!"ಎಂದು ಮತ್ತೆ ನಗತೊಡಗಿದ.

ನಾವೆಲ್ಲರೂ ಆ ಶಿಷ್ಯನಂತೆಯೇ ಅಲ್ಲವೇ ?ಎಂದೋ ನಡೆದ ವಿಷಯಗಳ ಭಾರವನ್ನು ಮನಸ್ಸಿನಲ್ಲಿ  ಅನಾವಶ್ಯವಾಗಿ ಹೊತ್ತು ತಿರುಗುತ್ತಿಲ್ಲವೇ? ಈ ಕಥೆಯಲ್ಲಿ ನಮಗೆಲ್ಲಾ ಒಂದು ಅದ್ಭುತ ಪಾಠವಿದೆ ಎಂದು ಅನಿಸಿದ್ದಿರಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಮಸ್ಕಾರ.

Sunday, June 23, 2013

"ಮಾನಸಿಕ ನೆಮ್ಮದಿಗೆ 'ಕ್ಷಾಂತಿ' ಎನ್ನುವ ಮದ್ದು !!!! "

ನೆಮ್ಮದಿಯಾಗಿ ಬದುಕಲಿಕ್ಕೆ ಏನು ಬೇಕು?ನಮ್ಮಲ್ಲಿ ಬಹಳಷ್ಟು ಜನ ಯಾಕೆ ಅಶಾಂತಿಯಿಂದ ,ಅದರಿಂದ ಉಂಟಾಗುವ ದೈಹಿಕ ತೊಂದರೆಗಳಿಂದ ಜೀವನವಿಡೀ ಕಳೆಯುತ್ತೇವೆ?ನೆಮ್ಮದಿ ಅನ್ನುವುದು ಮನಸ್ಸಿಗೆ ಸಂಭಂದಿಸಿದ ಸಂಗತಿ ಎನ್ನುವುದು ಸರಳ ತಿಳಿವಳಿಕೆ. ಹಾಗಿದ್ದೂ ನಮ್ಮ ಆದ್ಯತೆ ದೈಹಿಕ ಅಗತ್ಯಗಳ ಪೂರೈಕೆಯತ್ತಲೇ ಇರುತ್ತದೆ. ಹಾಗಾಗಿ ನೆಮ್ಮದಿ ಎನ್ನುವುದು ನಮಗೆಲ್ಲಾ ಮರೀಚಿಕೆಯಾಗಿದೆ.

ಈ ವಿಷಯದ ಬಗ್ಗೆ ಬೆಳಕು ಚೆಲ್ಲುವ, ಚೇತನಾ ತೀರ್ಥಹಳ್ಳಿಯವರು ಬರೆದ "ಆತ್ಮ ಕಾಂತಿಗೆ ಕ್ಷಾಂತಿ"ಎನ್ನುವ ಸುಂದರ ಲೇಖನ ನೆನ್ನೆಯ ವಿಜಯ ಕರ್ನಾಟಕದ 'ಬೋಧಿ ವೃಕ್ಷ'ದಲ್ಲಿ ಪ್ರಕಟವಾಗಿದೆ. ಸಾಧ್ಯವಾದರೆ ಪೂರ್ತಿ ಲೇಖನ ಓದಿ. ಆ ಲೇಖನದಲ್ಲಿ ಬರುವ "ಕ್ಷಾಂತಿ"ಎನ್ನುವ ಪದದ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪರಿಪೂರ್ಣತೆಯ ಪಥಿಕರ ಲಕ್ಷಣ ಗಳಲ್ಲಿ "ಕ್ಷಾಂತಿ"ಯೂ ಒಂದು . ಇದು ಅಪರೂಪದ ,ಆದರೆ ಮುಖ್ಯವಾದ ಗುಣ . ಬೌದ್ಧ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಒತ್ತು  ಕೊಡಲಾಗಿದೆ. ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ. ಇದು ಕೇವಲ ಕ್ಷಮಿಸುವ ಗುಣವಲ್ಲ.
ಆ ಗುಣದ ಮೂಲ ಬೀಜ . ಕ್ಷಾಂತಿ ಎಂದರೆ ಯಾವುದರಿಂದಲೂ  ಬಾಧೆಗೆ ಒಳಗಾಗದಿರುವ ಮನಸ್ಥಿತಿ !!! ಯಾವುದರಿಂದಲೂ ಹಿಮ್ಮೆಟ್ಟದೇ ದೃಢವಾಗಿ ನಿಲ್ಲುವ ಗುಣ . ಇದು ಸಹನೆ,ತಾಳ್ಮೆ ,ಧೈರ್ಯ,ದೃಢತೆ ಹಾಗೂ ಕ್ಷಮಾ ಗುಣ ಗಳ ಪ್ಯಾಕೇಜ್ ಇದ್ದಂತೆ !!! ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ ,ಅನು ದಿನದ ಬದುಕಿನಲ್ಲೂ "ಕ್ಷಾಂತಿ"ಯು ದಿವ್ಯ ಮಂತ್ರ ವಾಗ ಬಲ್ಲದು . ಇಂತಹ ಮನಃಸ್ಥಿತಿ ಅದ್ಭುತ ಅಲ್ಲವೇ!!!ಇದು ಸಾಧ್ಯವಾಗುವಂತಿದ್ದರೆ ಎಂತಹ ನೆಮ್ಮದಿ ಸಿಗಬಹುದು!!!! YOU JUST DON'T GET UPSET!!! YOU ARE  STRESS HARDY!!! JUST IMAGINE !!!

ಬದುಕಿನ ಓಟದಲ್ಲಿ ಎದುರಾಗುವ ದ್ವೇಷ ,ಅಸೂಯೆ ,ಕೋಪ,ಸಂಕುಚಿತ ಬುದ್ಧಿ ,ಈ ಎಲ್ಲದಕ್ಕೂ "ಕ್ಷಾಂತಿ"ಯು ಮದ್ದಾಗ ಬಲ್ಲದು. ನಮ್ಮೆಲ್ಲಾ ಸಮಸ್ಯೆಗಳ ಮೂಲ ಕಾರಣಕ್ಕೆ ಪರಿಹಾರ ಆಗ ಬಲ್ಲದು. ಪೂರ್ಣ ಲೇಖನವನ್ನು ತಪ್ಪದೇ ಓದಿ. ಕ್ಷಾಂತಿ ಎಂಬ ದಿವ್ಯ ಗುಣ ನಮ್ಮೆಲ್ಲರ ಆತ್ಮಕ್ಕೆ ಹೆಚ್ಚಿನ ಕಾಂತಿಯನ್ನು ನೀಡಲಿ.ಎಲ್ಲರಿಗೂ ನಮಸ್ಕಾರ.

Saturday, June 8, 2013

"ಒಂದಿಂಚು ಉದ್ದದ ಬೋಲ್ಟು ....!!!!"

ಒಂದಿಂಚು ಉದ್ದದ ಬೋಲ್ಟನ್ನು ನೋಡಿದರೆ ನಿಮಗೇನಾದರೂ ಗಾಭರಿ ಆಗುತ್ತದೆಯೇ ?

ಇದೆಂತಹ ಪ್ರಶ್ನೆ ಎಂದು ನಗಬೇಡಿ.

ನಾನಂತೂ ಹೌಹಾರಿದ್ದೆ !!!!

 ಆದದ್ದು ಇಷ್ಟು .ಒಂದು ವರ್ಷದ ಮಗುವೊಂದು  ಒಂದಿಂಚು ಉದ್ದದ ಬೋಲ್ಟ್ ಒಂದನ್ನು ನುಂಗಿದೆ

ಎಂದು ಅದರ ತಂದೆ ತಾಯಿ ಹೇಳಿದಾಗ ,ಮೊದಲು ನಾನು ನಂಬಿರಲಿಲ್ಲ. ನಂತರ ಮಗುವಿನ ಹೊಟ್ಟೆಯ ಎಕ್ಸ್ ರೇ

ತೆಗಿಸಿ ನೋಡಿದಾಗ ಒಂದಿಂಚಿನ ಬೋಲ್ಟು  ಮಗುವಿನ ಹೊಟ್ಟೆಯೊಳಗೆ ಅಡ್ಡಡ್ಡ ಮಲಗಿತ್ತು !!!

ಮಗು ಏನೂ ಅರಿಯದೆ ಕಿಲ ಕಿಲ ನಗುತ್ತಿತ್ತು !!!!!

ಮಗುವಿನ ತಂದೆ ತಾಯಿಯ ಮುಖದಲ್ಲಿ ಮುಂದೇನೋ ?!!ಎನ್ನುವ ಚಿಂತೆಯ ಕಾರ್ಮೋಡ.

ಆಗಲೇ ನಾನು ಹೌಹಾರಿದ್ದು. ಏನು ಮಾಡೋದು ......,ನನಗಾದ ಗಾಭರಿ ಅವರಿಗೆ ತೋರುವಂತಿಲ್ಲ !!!

"ಸಾರ್ ಬೋಲ್ಟ್ ಎಲ್ಲಾದರೂ ಸಿಕ್ಕಿ ಹಾಕಿ ಕೊಳ್ಳ ಬಹುದಾ? ಕರುಳನ್ನು ಕೊರೆದು ತೂತು ಮಾಡುವ ಚಾನ್ಸ್ ಇದೆಯಾ?"

ಸಹಜವಾಗಿ,ಅವರ ಗಾಭರಿ ಅವರಿಗೆ.

ಅವರೆಲ್ಲಾ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವ ಅನಿವಾರ್ಯ ನನ್ನದು !!!

"ಏನೂ ಗಾಭರಿಯಾಗಬೇಡಿ. ಏನೂ ಆಗುವುದಿಲ್ಲಾ.ನಾಳೆಯೋ,ನಾಡಿದ್ದೋ ಮಲದಲ್ಲಿ ಖಂಡಿತಾ ಹೊರಬರುತ್ತೆ.

ಆದರೂ ಕಾಡಿನ ಮಧ್ಯದ ಈ ಊರಿನಲ್ಲಿ ರಾತ್ರಿಯೇನಾದರೂ ತೊಂದರೆಯಾದರೆ ,ಆಗ ಮಗುವನ್ನು  ದೊಡ್ಡ ಆಸ್ಪತ್ರೆಗೆ

ಚಿಕೆತ್ಸೆಗೆ ಕರೆದೊಯ್ಯುವುದು ಕಷ್ಟ. ಹೇಗಿದ್ದರೂ ಈಗ ಮಗು ಆರಾಮವಾಗಿದೆ.ಮಗುವನ್ನು ತಕ್ಷಣ ತುರ್ತು ಚಿಕಿತ್ಸೆ

ಲಭ್ಯ ವಿರುವ ಆಸ್ಪತ್ರೆಯಲ್ಲೇ ಅಡ್ಮಿಟ್ ಮಾಡಿ ,ಎರಡು ದಿನ ನಿಗಾ ವಹಿಸುವು ಒಳಿತು " ಎಂದೆ. ಅವರಿಗೂ ಅದು ಸರಿ

ಎನಿಸಿತು. ಶಿವಮೊಗ್ಗದ  ಹೆಸರಾಂತ ಅಸ್ಪತ್ರೆಯೊಂದಕ್ಕೆ,ಮಗುವನ್ನು ಕಳಿಸಿ ಕೊಟ್ಟೆ .

ಎರಡು ದಿನದ ನಂತರ ಮಗುವಿನ ತಂದೆಯಿಂದ ಫೋನ್  ಬಂತು.

"ಸಾರ್ ಬೋಲ್ಟ್ ಹೊರ ಬಂತು!!!" ಅವನ ದನಿಯಲ್ಲಿ ಎಂತಹ ನಿರಾಳ!!!!

ನಾನೂ ನಿರಾಳವಾಗಿ ಉಸಿರಾಡಿದೆ !!!