Thursday, January 27, 2011

"ಆಲೋಚನೆಗಳ ಸಂಕೋಲೆಗಳಿಂದ ಬಿಡುಗಡೆ!"

ನಾನು ಮಾತನಾಡುತ್ತಲಿದ್ದೆ.ಎದುರಿಗಿದ್ದ ವ್ಯಕ್ತಿ  ಕೇಳಿಸಿ ಕೊಳ್ಳುವಂತೆ ಆಗೊಮ್ಮೆ ಈಗೊಮ್ಮೆ ಹಾಂ,ಹೂಂ .......,ಎನ್ನುತ್ತಿದ್ದ.ಯಾವುದೋ ಆಲೋಚನೆಯಲ್ಲಿ ಮುಳುಗಿ ಹೋಗಿದ್ದ.ನಾನು ಹೇಳಿದ್ದು ಒಂದೂ ಅರ್ಥವಾಗಿರಲಿಲ್ಲ!ನಮ್ಮಲ್ಲಿ ಬಹಳಷ್ಟು ಜನ ಹೀಗೆಯೇ ಅಲ್ಲವೇ?ಹಿಂದೆಂದೋ ನಡೆದ ಘಟನೆಯೋ,ಯಾರೋ ನಮ್ಮನ್ನು ಇಪ್ಪತ್ತು ವರುಷಗಳ ಕೆಳಗೆ ಕುಟಕಿ ಆಡಿದ ಮಾತೋ,ಹೀಯಾಳಿಸಿ ಅವಮಾನ ಮಾಡಿದ್ದೋ,ಬೇಡವೆಂದರೂ ಮತ್ತೆ ,ಮತ್ತೆ ಮರುಕಳಿಸಿ ನಮಗೇ ಗೊತ್ತಿಲ್ಲದಂತೆ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಿರುತ್ತದೆ.ಅಥವಾ ಭವಿಷ್ಯದಲ್ಲಿ ನನಗೆ ಕ್ಯಾನ್ಸರ್ ಬಂದರೆ ಏನು ಮಾಡುವುದು !?ಹಾರ್ಟ್ ಅಟ್ಯಾಕ್ ಆದರೆ ಏನು ಗತಿ ಎನ್ನುವ ಚಿಂತೆಗಳು ಕಾಡುತ್ತವೆ.ಭೂತಕಾಲದ ಭೂತವೋ,ಭವಿಷ್ಯದ ಭಯವೋ ,ಯಾವುದೋ ಒಂದು ,ಒಟ್ಟಿನಲ್ಲಿ ಮನುಷ್ಯನನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ.ಈ ಘಳಿಗೆಯಲ್ಲಿ ಅರ್ಥ ಪೂರ್ಣವಾಗಿ ಬದುಕುವುದನ್ನು ನಾವಿನ್ನೂ ಕಲಿತೇ ಇಲ್ಲ !ನಾವು ಬದುಕಿರುವುದೇ ಈ ಘಳಿಗೆಯಲ್ಲಿ ಅಲ್ಲವೇ?ಅದರಲ್ಲೇ ಸಂಪೂರ್ಣವಾಗಿ ,ನಿರಾಳವಾಗಿ ಬದುಕಲು ಸಾಧ್ಯವಿಲ್ಲವೇ?
ECKHART TOLLE ಯವರ ' THE POWER OF NOW ' ಮತ್ತು 'STILLNESS SPEAKS' ಎನ್ನುವ ಎರಡು ಅದ್ಭುತ ಪುಸ್ತಕಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.STILLNESS SPEAKS ನಿಂದ ಕೆಲವು ಆಯ್ದ ಸಾಲುಗಳು ನಿಮಗಾಗಿ;
1)The human condition: lost in thought .

2)Most people spend their entire life imprisoned with in the confines of their own thoughts. They never go beyond a narrow,mind-made,personalized sense that is conditioned by the past.
In you,as in each human being,there is a dimension of consciousness,far  deeper than thought.It is the very essence of who you are.We may call it presence or awareness.

3)Love,joy,creative ideas,and lasting inner peace cannot come in to your life except through that awareness or that unconditioned dimension of conciousness.

4)Recognize your thoughts as only thoughts.Be just a witness without any judgment or reaction.

5)Here is a new spiritual practice for you:don't take your thoughts too seriously.Just be watchful.

6)Thinking was given to us as an instrument to be used.But the instrument is using most of us!

7)Whenever you are immersed in compulsive thinking,you are avoiding the present.you don't want to be  where you are .Here ,now. 

 8)Our basic delusion is our identification with the thought.

9)Spiritual awakening is awakening from the dream of thought.

10)The realm of conciousness is much vaster than thought can grasp.when you no longer believe everything you think ,you step out of thought and see clearely that the thinker is not who you are.

ಆಲೋಚನೆಗಳ ಸಂಕೋಲೆಯಿಂದ ಬಿಡುಗಡೆ ಹೊಂದಿ ,ನಾವೆಲ್ಲಾ ನೆಮ್ಮದಿಯಿಂದ ,ನಿರಾಳವಾಗಿ ಇರುವಂತಿದ್ದರೆ ಬದುಕು ಎಷ್ಟು ಸುಂದರ !.........ಅಲ್ಲವೇ? ಇನ್ನಷ್ಟು ಆಧ್ಯಾತ್ಮಿಕ ಲೇಖನಗಳನ್ನೂ,ಮನಸ್ಸಿನ ಅದ್ಭುತ ಜಗತ್ತಿನ ಬಗ್ಗೆಯೂ ಬರೆಯಬೇಕೆಂದು ಕೊಡಿದ್ದೇನೆ.ಇಂಗ್ಲೀಷಿನಲ್ಲಿ ಇದೇ ಬ್ಲಾಗಿನಲ್ಲಿ ಬರೆದರೆ ಪರವಾಗಿಲ್ಲವೇ?ಇನ್ನೊಂದು ಬೇರೆ ಬ್ಲಾಗ್ ತೆರೆಯ ಬೇಕೇ? ಲೇಖನ ಇಷ್ಟವಾಯಿತೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
 

Sunday, January 9, 2011

"ಹೀಗೊಂದು ಮರೆಯದ ರಾತ್ರಿ !"

1972 ರಲ್ಲಿ ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ.ಬಳ್ಳಾರಿಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ನಮ್ಮ ಹಾಸ್ಟೆಲ್ ಪಕ್ಕವೇ ಇದ್ದುದರಿಂದ,ಅಪ್ಪ ಅಮ್ಮನನ್ನು ನೋಡಬೇಕು ಎನಿಸಿದಾಗ ಇದ್ದಕ್ಕಿದ್ದಂತೆ ಡಿಸೈಡ್ ಮಾಡಿ ಟ್ರೈನ್ ಹತ್ತಿ ರಾಯಚೂರಿಗೆ ಹೊರಟುಬಿಡುತ್ತಿದ್ದೆ.ಆಗೆಲ್ಲಾ ಫೋನುಗಳ ಸಂಪರ್ಕ ಕೂಡ ಇರಲಿಲ್ಲ.ಈಗ ಮೊಬೈಲ್ ಇಲ್ಲದೆ ಒಂದು ನಿಮಿಷವೂ ಇರಲಾಗುವುದಿಲ್ಲ!ವಾಪಸ್ ಬರುವಾಗ ರಾತ್ರಿ  ಹನ್ನೊಂದು ಗಂಟೆ ಸುಮಾರಿಗೆ ರಾಯಚೂರಿನಲ್ಲಿ  ದಾದರ್ -ಮದ್ರಾಸ್ ಎಕ್ಸ್ಪ್ರೆಸ್ ಟ್ರೈನ್ ಹತ್ತಿ, ಗುಂತಕಲ್ ಸ್ಟೇಷನ್ ನಲ್ಲಿ ಇಳಿದು ಬೇರೆ platform ನಲ್ಲಿ ನಿಂತಿರುತ್ತಿದ್ದ ಗುಂಟೂರ್ -ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನಿನಲ್ಲಿ ಯಾವುದಾದರೂ ಖಾಲಿ ಇದ್ದ ಬೋಗಿಯಲ್ಲಿ ಮೇಲಿನ ಲಗೇಜ್ ಇಡುವ ಜಾಗ ಹಿಡಿದು ಮಲಗಿಬಿಟ್ಟರೆ,ಬೆಳಗಿನ ಆರೂವರೆ ಸುಮಾರಿಗೆ ಬಳ್ಳಾರಿ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ನಲ್ಲಿ ಇಳಿದು ಐದು ನಿಮಿಷದಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ಇರುತ್ತಿದ್ದೆ.
ಒಮ್ಮೆ ಹೀಗೇ ಡಿಸೆಂಬರಿನಲ್ಲಿ ರಾಯಚೂರಿಗೆ ಹೋಗಿ,ಟ್ರೈನಿನಲ್ಲಿ ವಾಪಸ್ ಬರುತ್ತಿದ್ದೆ.ಮಾಮೂಲಿನಂತೆ ಗುಂತಕಲ್ಲಿನಲ್ಲಿ ದಾದರ್ ಟ್ರೈನ್ ಇಳಿದು platform ಬದಲಿಸಿ ಆಗಲೇ ಬಂದು ನಿಂತಿದ್ದ ಗುಂಟೂರ್ -ಹುಬ್ಬಳ್ಳಿ ಟ್ರೈನಿನಲ್ಲಿ ಖಾಲಿ ಇದ್ದ ಬೋಗಿಯೊಂದರ ಮೇಲಿನ ಜಾಗ ಹಿಡಿದು ತಲೆಗೆ ಮಫ್ಲರ್ ಸುತ್ತಿಕೊಂಡು ಶಾಲು ಹೊದ್ದು, ಬೆಚ್ಚಗೆ ಮಲಗಿದಾಗ ರಾತ್ರಿ ಸುಮಾರು ಒಂದೂವರೆಯಾಗಿತ್ತು.
ಇದ್ದಕ್ಕಿದ್ದಂತೆ ಎಚ್ಚರವಾದಾಗ ,ಟೈಮ್ ನೋಡಿಕೊಂಡೆ.ಬೆಳಗಿನ ಜಾವ ಸುಮಾರು ಮೂರೂವರೆ ಗಂಟೆಯಾಗಿತ್ತು.ಟ್ರೈನಿನ ಗಡ,ಗಡಾ ಶಬ್ದ ಲಯ ಬದ್ಧವಾಗಿ ಕೇಳುತ್ತಿತ್ತು.ಟ್ರೈನಿನ ಮಂದ ಬೆಳಕಿನಲ್ಲಿ ನಿದ್ದೆ ಕಣ್ಣಿನಲ್ಲೇ ಪಕ್ಕಕ್ಕೆ ತಿರುಗಿ ನೋಡಿದೆ.ಹೆದರಿಕೆಯಿಂದಒಂದು ಕ್ಷಣ ಹೃದಯ ಬಾಯಿಗೆ ಬಂದಂತಾಯಿತು.ನಿದ್ದೆ ಹಾರಿ ಹೋಯಿತು.ನನ್ನ ಪಕ್ಕದಲ್ಲೇ ಕೆಳಗೆ 'ಹೀ'ಎಂದು ಹಲ್ಲು ಕಿರಿಯುತ್ತಾ ,ಬುದ್ಧಿ ವೈಕಲ್ಯಗೊಂಡಿದ್ದ  ಹೆಂಗಸೊಬ್ಬಳು  ನಿಂತಿದ್ದಳು!ಕೂದಲು ಕೆದರಿಕೊಂಡು,ಮಾಸಿ ,ಹರಿದ ಹಸಿರುಸೀರೆಯೊಂದನ್ನು ಉಟ್ಟು ,ಮೇಲೆ ಯಾರೋ ಟಿ.ಟಿ.ಉಪಯೋಗಿಸಿ ಎಸೆದ ಹಳೆಯ ಕರಿಯ ಕೋಟು ತೊಟ್ಟು,ತಲೆಗೆಲ್ಲಾ ಯಾವುದೋ ಹೂವುಗಳನ್ನು ಸಿಗಿಸಿಕೊಂಡು,ಮುಖಕ್ಕೆಲ್ಲಾ ಹರಿಶಿನ ಕುಂಕುಮ ಮೆತ್ತಿಕೊಂಡು,ವಿಚಿತ್ರವಾಗಿ ಕಾಣುತ್ತಿದ್ದ  ಬುದ್ಧಿ ವೈಕಲ್ಯಗೊಂಡ ಆ ಹುಚ್ಚು ಹೆಂಗಸು  ಮತ್ತು ನನ್ನನ್ನು ಬಿಟ್ಟು ಆ ಇಡೀ ಬೋಗಿಯಲ್ಲಿ ಮತ್ತೊಂದು ನರಪಿಳ್ಳೆ ಇರಲಿಲ್ಲ.ನಾನು ನನ್ನ ಬ್ಯಾಗ್ ಹಿಡಿದು ಮೆಲ್ಲಗೆ ಕೆಳಗಿಳಿಯಲು ತೊಡಗಿದ್ದು ನೋಡಿ ಆಕೆ ಜೋರಾಗಿ ಗಹ ಗಹಿಸಿ ನಕ್ಕಳು. ಅಪರಾತ್ರಿಯಲ್ಲಿ ಕೇಳಿದ ಆ ವಿಲಕ್ಷಣ ನಗುವಿನ ಶಬ್ಧದ ಅಲೆಗಳಿಗೆ ನನ್ನ ಮೈಯೆಲ್ಲಾ ಬೆವತು ,ಕೈ ಕಾಲು  ನಡುಗುತ್ತಿತ್ತು.ಕೆಳಗಿಳಿದು ಕೈಯಲ್ಲಿ ಬ್ಯಾಗ್ ಹಿಡಿದು ಟಾಯ್ಲೆಟ್ ಕಡೆ ಹೊರಟೆ.ಅವಳೂ  ಗಹಗಹಿಸಿ ನಗುತ್ತಾ ನನ್ನ ಹಿಂದೆಯೇ ಬಂದಳು.ಏನು ಮಾಡಲೂ ತೋಚದೆ ,ಟಾಯ್ಲೆಟ್ ಹೊಕ್ಕು ಬಾಗಿಲು ಹಾಕಿಕೊಂಡೆ.ಸುಮಾರು ಹೊತ್ತು ಜೋರಾಗಿ ಕೂಗುತ್ತಾ,ಏನೇನೋ ಮಾತುಗಳಾಡುತ್ತಾ,ಆಗಾಗ ವಿಲಕ್ಷಣವಾಗಿ ಗಹಗಹಿಸಿ ನಗುತ್ತಾ ,ಬಾಗಿಲು ಬಡಿಯುತ್ತಿದ್ದಳು.ನಿಜವಾದ ಹೆದರಿಕೆಯೆಂದರೆ ಏನೆಂದು ಆ ದಿನ ಅನುಭವವಾಗಿತ್ತು. ಬೆಳಗಿನ ಜಾವ ಐದೂವರೆ ವರೆಗೆ ಹೊರ ಬರಲು ಧೈರ್ಯ ಸಾಲದೇ ಟಾಯ್ಲೆಟ್ ನಲ್ಲೇ  ಇದ್ದು ,ಬಳ್ಳಾರಿ ರೈಲ್ವೇ ಸ್ಟೇಶನ್ ನಲ್ಲಿ ಟ್ರೈನ್ ನಿಂತಾಗ ಹೆದರುತ್ತಲೇ ಟಾಯ್ಲೆಟ್ ಬಾಗಿಲು ತೆರೆದು ಹೊರ ಬಂದೆ.ಪುಣ್ಯಕ್ಕೆ ಅವಳು ಮತ್ತೆ ಕಾಣಲಿಲ್ಲ.ರಾತ್ರಿಯ ಆ ನೀರವತೆಯಲ್ಲಿ ,ಯಾರೂ ಇಲ್ಲದ ಚಲಿಸುವ ರೈಲಿನಲ್ಲಿ ನಿದ್ದೆಯಿಂದ ಎಚ್ಚರವಾದಾಗ ಪಕ್ಕದಲ್ಲೇ ಕಂಡ ,'ಹೀ'ಎಂದು ಹಲ್ಲು ಕಿಸಿದ  ಆ ವಿಚಿತ್ರ ಮುಖವನ್ನು ನೆನಸಿಕೊಂಡರೆ  ಈಗಲೂ ನಡುಕ ಹುಟ್ಟುತ್ತದೆ.