Friday, October 29, 2010

"ಉರುಕುಂದಪ್ಪಾ ! ನಿನ್ನ ಮರೆಯೋದು ಹೆಂಗಪ್ಪಾ?"(ಬ್ಲಾಗಿನ ನೂರನೇ ಬರಹ )

ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಸಮಯ.O.P.D.ಯಲ್ಲಿ ರೋಗಿಗಳನ್ನು ನೋಡುತ್ತಿದ್ದೆ.ನಮ್ಮ ಆಸ್ಪತ್ರೆಯ ಅಟೆಂಡರ್ ತಾಯಪ್ಪ ಒಳಬಂದು ಮಾಮೂಲಿಯಂತೆ ತಲೆ ಕೆರೆಯುತ್ತಾ ನಿಂತ.'ಏನು ತಾಯಪ್ಪಾ'ಎಂದೆ.ಅದಕ್ಕವನು 'ಊರಿಂದ ನಮ್ಮಣ್ಣ ಬಂದಾನ್ರೀ ಸರ್' ಎಂದು ಹಲ್ಲುಬಿಟ್ಟ. ಊರಿನಿಂದ ಸಂಬಂಧಿಗಳನ್ನು ಆಸ್ಪತ್ರೆಗೆಕರೆತರುವುದುಮಾಮೂಲಾಗಿತ್ತು.'ಒಳಗೆ ಕರಿ'ಎಂದೆ.
ಸುಮಾರು 65 ವರ್ಷಗಳ ಕೃಶವಾದ ಶರೀರದ ವ್ಯಕ್ತಿಯೊಬ್ಬ ಒಳಗೆ ಬಂದು ,ತಲೆಗೆ ಕಟ್ಟಿದ ರುಮಾಲನ್ನು ಬಿಚ್ಚಿ ಕಂಕುಳಿನಲ್ಲಿ ಸಿಗಿಸಿಕೊಂಡು ,ಕೈಕಟ್ಟಿ ,ನಿಂತ.'ಏನಪ್ಪಾ ನಿನ್ನ ಹೆಸರು'ಎಂದೆ. 'ನಾನ್ರೀ ಎಕಲಾಸ್ ಪುರದ ಉರುಕುಂದಪ್ಪ' ಎಂದ.ಹೆಸರು ಕೇಳಿ ನನಗೆ ಒಂದು ನಿಮಿಷ ಶಾಕ್ ಹೊಡೆದಂತಾಗಿತ್ತು!ಮಾತು ಹೊರಡದೆ ಮೌನವಾಗಿ ಕುಳಿತೆ.ಆತನೇ ಮಾತು ಮುಂದುವರೆಸಿ 'ನೀವು ಆಚಾರ್ ಸಾಹೇಬರ
ಎರಡನೇ ಮಗ, ಅಲ್ಲೇನ್ರೀ ?'ಎಂದ.ನನ್ನ ತಂದೆಯ ಹೆಸರನ್ನು ಹೇಳಿದ್ದಲ್ಲದೇ,ನನ್ನನ್ನೂ ಗುರುತು ಹಿಡಿದಿದ್ದ! ಅನುಮಾನವೇ ಇಲ್ಲ !ಅದೇ ವ್ಯಕ್ತಿ .ನನ್ನ ಎದೆ ಬಡಿತ ಜೋರಾಯಿತು! ಸುಮಾರು ಮೂವತ್ತು ವರ್ಷಗಳ ನಂತರ ಅವನನ್ನು ಭೇಟಿಯಾಗುತ್ತಿದ್ದೆ .ಆದರೂ ಖಾತ್ರಿ ಪಡಿಸಿಕೊಳ್ಳಲು 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀಯ ಉರುಕುಂದಪ್ಪ?'ಎಂದು ಕೇಳಿದೆ.ಅದಕ್ಕವನು' ಈಗೆಲ್ಲೂ ಕೆಲಸಕ್ಕೆ ಹೊಗೂದಿಲ್ರೀ ಸಾಹೇಬ್ರೆ.ನಿಮ್ಮ ಅಪ್ಪಾವ್ರ ಕೆಳಗೆ ಅಗಸೀಹಾಳ್ ಫಾರಂ ನಲ್ಲಿ ಕೆಲಸ ಮಾಡ್ತಾ ಇದ್ದೇರಿ .ನೀವೆಲ್ಲಾ ಸಣ್ಣಾವರಿದ್ದಾಗ ಬಾವ್ಯಾಗೆ ಈಸಾಡೋಕೆ ಬರೋವಾಗ ಅಲ್ಲೇ ತೋಟದಾಗ ಕೆಲ್ಸಾ ಮಾಡಿಕೋತ ಇರುತ್ತಿದ್ದೆನಲ್ರೀ ?ಮರ್ತೀರೇನ್ರೀ----ಸಾಹೇಬ್ರೆ?'ಎಂದ.ಅದನ್ನೆಲ್ಲಾ ಹೇಗೆ ಮರೆಯೋಕೆ ಸಾಧ್ಯ?ಅದರಲ್ಲೂ ,ಈ ವ್ಯಕ್ತಿಯನ್ನು ಜೀವಮಾನವಿಡೀ ಮರೆಯೋಕೆ ಸಾಧ್ಯವೇ !!?ನನ್ನ ಗಂಟಲು ಕಟ್ಟಿತು.ಅವನ ಕೈ ಹಿಡಿದು 'ಕೂತ್ಕೋ ಉರುಕುಂದಪ್ಪ 'ಎಂದೆ .'ಐ ------ಬ್ಯಾಡ್ರೀ ಸಾಹೇಬರೇ,ನಿಂತಕಂಡಿರ್ತೀನ್ ಬಿಡ್ರೀ----,ನಮ್ ದೊಡ್ ಸಾಹೇಬರ ಮಗ "ದಾಗ್ದಾರ್ ಸಾಬ್" ಅಗ್ಯಾನೆ ಅಂತ ತಿಳಿದು ಕುಶಿ ಆತ್ರೀ .ನೋಡಾಕ್ ಬಂದೀನ್ರೀ'ಎಂದ.ಮನಸ್ಸು ಒಂದು ಕ್ಷಣ ನನ್ನ ಬಾಲ್ಯದ ದಿನಗಳಿಗೆ ಜಾರಿತು. ನಮ್ಮ ತಂದೆ ರಾಯಚೂರಿನ ಹತ್ತಿರವಿರುವ ಅಗಸೀಹಾಳ ಎಂಬ ಹಳ್ಳಿಯ ಪಕ್ಕದಲ್ಲಿದ್ದ 'ಕೃಷಿಸಂಶೋಧನಾ ಕೇಂದ್ರ' ದಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲಿ ತೋಟದಲ್ಲಿ ದೊಡ್ಡದೊಂದು ಬಾವಿ ಇತ್ತು.ಅದು ಮಾಮೂಲು ಬಾವಿಗಳಂತೆ ನೀರು ಸೇದುವ ಬಾವಿಯಾಗಿರಲಿಲ್ಲ.ಮೆಟ್ಟಿಲು ಗಳಿದ್ದ ದೊಡ್ಡ ಬಾವಿ.ಸುಮಾರು ಮೂವತ್ತು ಅಡಿ ಅಗಲ ,ನಲವತ್ತು ಅಡಿ ಆಳವಿತ್ತು .ಅದಕ್ಕೆ ಏತ ಕಟ್ಟಿ ತೋಟಕ್ಕೆ ನೀರು ಬಿಡುತ್ತಿದ್ದರು.ನನ್ನ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು.ಎಲ್ಲಾ ಹುಡುಗರ ಜೊತೆ ನಾನೂ ಬಾವಿಗೆ ಈಜು ಕಲಿಯಲು ಹೋಗುತ್ತಿದ್ದೆ.ಇನ್ನೂ ಅಷ್ಟು ಸರಿಯಾಗಿ ಈಜು ಬರುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾನು ಬಾವಿಯಲ್ಲಿ ಈಜುತ್ತಿರಬೇಕಾದರೆ ,ಮೇಲಿನಿಂದ ಹಾರಿಬಂದ ಹುಡುಗನೊಬ್ಬ ನನ್ನ ಮೇಲೆಯೇ ಡೈವ್ ಹೊಡೆದ.ಈಜು ಬಾರದ ನಾನು,ಸೀದಾ ಬಾವಿಯ ತಳ ಸೇರಿದೆ.ನನಗೆ ಅರೆ ಬರೆ ಎಚ್ಚರ.ಯಾರೋ ನೀರಿನೊಳಗೆ ಬಂದು ನನ್ನ ಜುಟ್ಟು ಹಿಡಿದು ಮೇಲಕ್ಕೆ ಎಳೆಯುತ್ತಿದ್ದರು.ನಾನು ಕೈ ಕಾಲು ಬಡಿಯುತ್ತಾ ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿದ್ದೆ.ನೀರಿನ ಬುಳು ಬುಳು ಶಬ್ದ ಕೇಳಿಸುತ್ತಿತ್ತು.ಪೂರ್ಣ ಎಚ್ಚರವಾಗಿ ಕಣ್ಣು ಬಿಟ್ಟಾಗ,ಬಾವಿಯ ದಂಡೆಯ ಮೇಲೆ ಮಲಗಿದ್ದೆ.ಯಾರೋ ಎದೆ ,ಹೊಟ್ಟೆ ,ಅಮುಕಿ ನೀರು ಹೊರಗೆ ತೆಗೆಯುತ್ತಿದ್ದರು.ಮೂಗಿನಿಂದ,ಬಾಯಿಯಿಂದ ಪಿಚಕಾರಿಯಿಂದ ನೀರು ಚಿಮ್ಮುವಂತೆ ನೀರು ಚಿಮ್ಮುತ್ತಿತ್ತು.ನಾನು ಬಾವಿಯ ನೀರಿನಲ್ಲಿ ಮುಳುಗಿ ಮೇಲೆ ಬರದೇ ಇದ್ದಾಗ,ಯಾರೋಹುಡುಗರು ಅಲ್ಲೇ ತೋಟದಲ್ಲಿ ಕೆಲಸಮಾಡುತ್ತಿದ್ದ ಎಕಲಾಸ್ ಪುರದ ಉರುಕುಂದಪ್ಪನನ್ನು ಕರೆದಿದ್ದರು.ಉರುಕುಂದಪ್ಪ ತೋಟದ ಕೆಲಸ ಮಾಡಿ ,ಮಾಂಸ ಖಂಡಗಳು ಹುರಿಗೊಂಡಿದ್ದ ಬಲವಾದ ಆಳು.ತಕ್ಷಣವೇ ಬಾವಿಗೆ ಹಾರಿದ ಉರುಕುಂದಪ್ಪ,ಬಾವಿಯ ತಳದಿಂದ ನನ್ನ ಜುಟ್ಟು ಹಿಡಿದು ಮೇಲೆ ಎಳೆದು ತಂದು ನನ್ನ ಜೀವ ಉಳಿಸಿದ್ದ!ಅದೇ ಉರುಕುಂದಪ್ಪ ಈಗ ಮೂವತ್ತು ವರ್ಷಗಳ ನಂತರ ವಯಸ್ಸಿನಿಂದ,ಕುಡಿತದಿಂದ ಕೃಶ ಕಾಯನಾಗಿದ್ದ .ಬಹಳ ಬಲವಂತ ಮಾಡಿದ ಮೇಲೆ ರೋಗಿಗಳು ಕೂರುವ ಸ್ಟೂಲಿನ ಮೇಲೆ ಕುಳಿತ.'ಏನಾನ ತ್ರಾಸು ಇದೆಯಾ ಉರುಕುಂದಪ್ಪಾ?ಎಂದೆ.'ಹೌದ್ರೀ ಸಾಹೇಬ್ರೇ----,ಭಾಳಾ ನಿತ್ರಾಣ ಆಗೈತ್ರೀ.ಕೈ ಭಾಳಾ ಹರೀತೈತ್ರೀ ---'ಎಂದ.ನನ್ನ ಜೀವವನ್ನು ಉಳಿಸಿದ ಆ ಕೈಗಳನ್ನು ಮುಟ್ಟಿ ನೋಡಿದೆ. ಅವುಗಳಿಗೆ ಮನಸ್ಸಿನಲ್ಲೇ ನಮಸ್ಕರಿಸಿದೆ.'ಆ ಕೈಗಳು ಅಂದು ಸಹಾಯ ಮಾಡದಿದ್ದರೆ ನಾನೆಲ್ಲಿ ಬದುಕಿರುತ್ತಿದ್ದೆ!'ಎನಿಸಿ ಮನದಲ್ಲಿ ಧನ್ಯತಾ ಭಾವ ಮೂಡಿತ್ತು .'ಎನಿತು ಜನುಮದಲಿ, ಎನಿತು ಜೀವರಿಗೆ ,ಎನಿತು ನಾವು ಋಣಿಯೋ!ನಿಜದಿ ನೋಡಿದರೆ ,ಬಾಳು ಎಂಬುದು ,ಋಣದ ರತ್ನ ಗಣಿಯೋ!'ಎಂಬ ಕವಿಯ ವಾಣಿ ನೆನಪಾಯಿತು.ಅವನನ್ನು ಅಮೂಲಾಗ್ರವಾಗಿ ಪರೀಕ್ಷೆ ಮಾಡಿ ,ಒಂದು ತಿಂಗಳಿಗಾಗುವಷ್ಟು ಮಾತ್ರೆ ,ಟಾನಿಕ್ಕುಗಳನ್ನು ಕೊಡಿಸಿದೆ.ಮತ್ತೇನಾದರೂ ಬೇಕಾದರೆ ನನ್ನನ್ನು ಬಂದು ಕಾಣುವಂತೆ ಹೇಳಿದೆ.ಅವನ ಮುಖದಲ್ಲಿ ,ಕೃತಜ್ಞತಾ ಭಾವವಿತ್ತು.ನಾನು ಜೀವನ ಪರ್ಯಂತ ಸ್ಮರಿಸಿ,ನಮಿಸಬೇಕಾದ ನನ್ನ ಜೀವ ರಕ್ಷಕ,ನನಗೇ ಎರಡೆರಡು ಸಲ ನಮಸ್ಕಾರ ಮಾಡಿ ಹೋದ!ಮನಸ್ಸಿನಲ್ಲೇ 'ಎಕಲಾಸ್ ಪುರದ ಉರುಕುಂದಪ್ಪಾ, ನಿನ್ನನ್ನು ಮರೆಯೋದು ಹೆಂಗಪ್ಪಾ!'ಎಂದು ಕೊಂಡೆ.



(ಇದು ನನ್ನ ಬ್ಲಾಗಿನ ನೂರನೇ ಬರಹ.ಓದಿ ಪ್ರೋತ್ಸಾಹಿಸಿದ ಎಲ್ಲಾ ಸಹ ಬ್ಲಾಗಿಗರಿಗೂ,ಎಲ್ಲಾ ಓದುಗರಿಗೂ ನಮನಗಳು)

Thursday, October 28, 2010

"ಮೂಗಿನಲ್ಲಿ ಕಾದಿತ್ತು ವಿಸ್ಮಯ!!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ  ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ  ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ  ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ  ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

Saturday, October 23, 2010

"ಬದುಕಿನ ಪಯಣ"

ಸುಮಾರು  ಮೂವತ್ತು ವರ್ಷಗಳ  ಹಿಂದಿನ ಮಾತು.ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ,ಮೇ ತಿಂಗಳ ಒಂದು ದಿನ.ತಾರೀಕು ಸರಿಯಾಗಿ ನೆನಪಿಲ್ಲ.ರಾತ್ರಿ ಸುಮಾರು ಹತ್ತು ಗಂಟೆ .ವಿಪರೀತ ಸೆಕೆ.ನಿಲ್ದಾಣದಲ್ಲಿ ಜನಗಳ ಜಾತ್ರೆ.ಬೆಳಗ್ಗೆಯೆಲ್ಲಾ ದೆಹಲಿಯ ಸುಡು ಬಿಸಿಲಿಗೆ ಸುಟ್ಟು ಕರಕಲಾಗಿದ್ದೆ.ಹೋದ ಕೆಲಸ ಕೈ ಗೂಡದೆ ಮನಸ್ಸಿಗೆ ನೋವಾಗಿತ್ತು.  ಎಲ್ಲಾ ರೈಲುಗಳೂ ಭರ್ತಿಯಾಗಿದ್ದರಿಂದ,'ವಿಶೇಷ'ರೈಲೊಂದರಲ್ಲಿ ಬೆಂಗಳೂರಿಗೆ ಬರ್ತ್ ಒಂದನ್ನು ರಿಸರ್ವ್ ಮಾಡಿಸಿದ್ದೆ.ಆ 'ವಿಶೇಷ'ರೈಲು ಒಂದು ಗಂಟೆ ತಡವಾಗಿ ಬಂತು.ಟ್ರೈನು ಬಂದಾಗ ಬೋಗಿಯಲ್ಲಿ ದೀಪವಿರಲಿಲ್ಲ.ರಿಸರ್ವೇಶನ್ ಇಲ್ಲದವರೆಲ್ಲಾ ಎಲ್ಲಾ ಸೀಟುಗಳನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು.ರಿಸರ್ವೇಶನ್ ಇದ್ದವರು ತಗಾದೆ ತೆಗೆದಿದ್ದರು.ಟಿ.ಟಿ.ಯ ಪತ್ತೆಯೇ ಇರಲಿಲ್ಲ.ಹೇಳುವರು,ಕೇಳುವರು ಇಲ್ಲದೆ ಗದ್ದಲವೋ ಗದ್ದಲ.ಕೆಲವರು ಕೈ ಕೈ ಮಿಲಾಯಸಲು ಶುರು ಮಾಡಿದರು.ನಮ್ಮ ದೇಶದ ಅರಾಜಕತೆಯನ್ನು ಬಿಂಬಿಸುವ ಒಂದು ಮಿನಿ ಅಸೆಂಬ್ಲಿ ಯಂತಿತ್ತು  ಆ ಬೋಗಿ.ಅಷ್ಟರಲ್ಲಿ ದೇವ ಧೂತನಂತೆ ಮೇಲೆ ಮಲಗಿದ್ದ ಗಡ್ಡಧಾರಿ ವಿದೇಶಿ ಯುವಕನೊಬ್ಬ  ಮೆಲ್ಲಗೆ ಕೆಳಗಿಳಿದು ಬಂದ.ಎಲ್ಲರಿಗೂ ಕೈಮುಗಿದ.ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ,'ದಯಮಾಡಿ ಜಗಳವಾಡಬೇಡಿ'ಎಂದು ಬೇಡಿಕೊಂಡ.ಜಗಳವಾಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ತನ್ನ ಮೇಲಿನ ಬರ್ತ್ ಬಿಟ್ಟುಕೊಟ್ಟ.ಟ್ರೈನ್ ಹೊರಟು ಅಲ್ಲಿ ಶಾಂತಿ ನೆಲಸುವವರೆಗೂ ತನ್ನ ಬ್ಯಾಕ್ ಪ್ಯಾಕ್ ತಗುಲಿಸಿಕೊಂಡು ಅಲ್ಲೇ  ನಿಂತಿದ್ದ.ಅವನ ಮುಖದಲ್ಲಿ ಅಪೂರ್ವ ಕಾಂತಿಯಿತ್ತು.ಕಂಡೂ ಕಾಣದಂತೆ ಮುಗುಳು ನಗೆ ಇತ್ತು.ನನ್ನ ಪಕ್ಕ ಸ್ವಲ್ಪ  ಜಾಗ ಮಾಡಿ ಕೊಟ್ಟು, ಕುಳಿತುಕೊಳ್ಳುವಂತೆ ಹೇಳಿದೆ.ಬ್ಯಾಕ್ ಪ್ಯಾಕ್ ಕೆಳಗಿಟ್ಟು ನನ್ನ ಪಕ್ಕ ಕುಳಿತ.ಎಲ್ಲರಿಗೂ ಅವನ ಬಗ್ಗೆ ಕುತೂಹಲ.ನಿಧಾನವಾಗಿ ತನ್ನ ಬಗ್ಗೆ ಹೇಳ ತೊಡಗಿದ.ಅವನದು ಇರಾನ್ ನಲ್ಲಿ ಒಂದು ಸಣ್ಣ ಊರು.ಇವನ ತಂದೆ ಅಲ್ಲಿನ ಎಲೆಕ್ಟ್ರಿಸಿಟಿ ಬೋರ್ಡಿನ ನೌಕರನಾಗಿ ಆಗ ತಾನೆ ನಿವೃತ್ತಿ ಹೊಂದಿದ್ದ.ಇರಾನ್ ,ಇರಾಕ್ ನಡುವೆ ಯುದ್ದ ಶುರುವಾಗಿ ಕೆಲವು ವರ್ಷಗಳಾಗಿತ್ತು.ಇವನ ಊರಿನಿಂದ ಯುದ್ಧಕ್ಕೆ ಹೋದಇವನ  ಹಲವಾರು ಸ್ನೇಹಿತರು ಯುದ್ಧದಲ್ಲಿ ಸತ್ತಿದ್ದರು.ಇವನಿಗೂ ಯುದ್ಧಕ್ಕೆ ಸೇರುವಂತೆ ಕರೆ ಬಂದಿತ್ತು .ಇವನ ತಂದೆ ತಾಯಿಗಳಿಗೆ ತಮ್ಮ ಒಬ್ಬನೇ ಮಗನನ್ನು ಯುದ್ಧಕ್ಕೆ ಕಳಿಸಲು ಇಷ್ಟವಿರಲಿಲ್ಲ.ಅವನ ತಂದೆ  ರಿಟೈರ್ ಮೆಂಟಿನಿಂದ ಬಂದ ತನ್ನ ಎಲ್ಲಾ ಹಣವನ್ನೂ ಖರ್ಚು ಮಾಡಿ ,ಅವರಿವರನ್ನು ಹಿಡಿದು ಅವನಿಗೆ ಬೇರೆ ಯಾರದೋ ಹೆಸರಿನಲ್ಲಿ ಪಾಸ್ ಪೋರ್ಟ್ ಕೊಡಿಸಿ 'ನೀನು ಜೀವಂತವಾಗಿದ್ದರೆ ಸಾಕು ಮಗು.ಪ್ರಪಂಚ ವಿಶಾಲವಾಗಿದೆ. ಎಲ್ಲೋ ಒಂದು ಕಡೆ ನಿನಗೆ ಆಶ್ರಯ ಸಿಗುತ್ತದೆ.ಇಲ್ಲಿ ಯುದ್ಧದಲ್ಲಿ ಸಾಯಬೇಡ.ಎಲ್ಲೋ ಒಂದು ಕಡೆ  ನೀನು ಬದುಕಿದ್ದರೆನಮಗೆ ಅಷ್ಟೇ  ಸಾಕು'ಎಂದು  ಅವನನ್ನು ಅಲ್ಲಿಂದ ಸಾಗ ಹಾಕಿದ್ದ.ಅವನು ಮೊದಲು ಯಾವುದೋ ಬೇರೆ ದೇಶದಲ್ಲಿ ಸ್ವಲ್ಪ ದಿನ ಇದ್ದು, ಒಂದು ತಿಂಗಳ ಕೆಳಗೆ ದೆಹಲಿಗೆ ಬಂದಿದ್ದ.ಅಲ್ಲಿ ಫುಟ್ ಪಾತಿನಲ್ಲಿ ಮಲಗುತ್ತಾ ,ಬ್ರೆಡ್ಡು ,ಮೊಟ್ಟೆ ತಿಂದು ಹಸಿವೆ ನೀಗಿಕೊಳ್ಳುತ್ತಾ ಆಶ್ರಯಕ್ಕಾಗಿ  ಹಲವಾರು ಕನ್ಸಲೇಟ್  ಗಳಿಗೆ  ಅಲೆಯುತ್ತಾ ಒಂದು ತಿಂಗಳು ಕಳೆದಿದ್ದ.ಇನ್ನು ಕೆಲವು ದಿನಗಳಲ್ಲಿ ನಮ್ಮ ದೇಶ ಬಿಟ್ಟು ಹೋಗಬೇಕಾಗಿತ್ತು.ಇಲ್ಲಿಂದ ಶ್ರೀಲಂಕಾಗೆ ಹೋಗಿ ಅಲ್ಲಿ ಆಶ್ರಯಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ.ಯುದ್ಧ ನಿಂತ ಮೇಲೆ ಮನೆಗೆ ಹಿಂದಿರುಗುವುದಾಗಿಯೂ,ಯಾವು ದಾದರೂ ಕೆಲಸಕ್ಕೆ ಸೇರುವ ಮುನ್ನ ಸ್ವಲ್ಪ ದಿನ ಮನೆಯಲ್ಲಿದ್ದು ಕವಿತೆಗಳನ್ನು  ಓದುತ್ತಾ, ವಯಸ್ಸಾದ ಅಮ್ಮನಿಗೆ ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯಲು ಸಹಾಯಮಾಡುವುದಾಗಿ ಹೇಳಿದ.ಜೀವಂತವಾಗಿರುವುದೇ ಒಂದು ಸಂತಸದ ವಿಷಯವಲ್ಲವೇ?ಅದನ್ನು ಹೀಗೆ  ಪರಸ್ಪರ ಕಚ್ಚಾಡಿಕೊಂಡು ಹಾಳು ಮಾಡಿಕೊಳ್ಳುವುದುಸರಿಯೇ ?ಎಂದು ಕೇಳಿದ. ಹಾಗೆ ಹೇಳುವಾಗ ಅವನ ಕಣ್ಣುಗಳಲ್ಲಿ ನೀರಿತ್ತು.ರಾತ್ರಿ ಹನ್ನೆರಡಾಗುತ್ತಿತ್ತು.ಟ್ರೈನಿನ 'ಧಡ ಬಡ'  ಸದ್ದಿನ ಜೋಗುಳಕೆ ಹಲವರು ಕುಳಿತಲ್ಲೇ ತೂಕಡಿಸುತ್ತಿದ್ದರು.ಅವನು ತನ್ನ ಬ್ಯಾಕ್ ಪ್ಯಾಕ್ ಎತ್ತಿಕೊಂಡು ಟಾಯ್ಲೆಟ್ ನ ಹತ್ತಿರದ ಪ್ಯಾಸೇಜ್ ನಲ್ಲಿ  ,ಕೆಳಗೆ ನ್ಯೂಸ್ ಪೇಪರ್ ಹಾಸಿಕೊಂಡು ಅದರ ಮೇಲೆ ಕುಳಿತು ಚೀಲದಿಂದ ಕೊಳಲೊಂದನ್ನು ಹೊರತೆಗೆದು,ಜಗದ ಚಿಂತೆಗಳಿಗೆ ಇತಿಶ್ರೀ ಹಾಡುವಂತೆ ಇಂಪಾದ ರಾಗವೊಂದನ್ನು ನುಡಿಸ ತೊಡಗಿದ.ಟ್ರೈನಿನ ಕಿಟಕಿಯ ಹೊರಗೆ ನೋಡಿದೆ.ಓಡುವ ,ಮರ,ಗಿಡ,ಹೊಲ,ಗದ್ದೆಗಳ ಮೇಲೆ ತಣ್ಣಗೆ ಬೆಳದಿಂಗಳು ಹರಡಿತ್ತು. ಟ್ರೈನಿನ ಒಳಗೆ ಇಂಪಾದ ಕೊಳಲಿನ ನಾದ.'ಬುದ್ಧ,ಬುದ್ಧ ,ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ'ಎಂಬ ಕವಿತೆಯೊಂದರ ಸಾಲುಗಳು ನೆನಪಾದವು.

Sunday, October 17, 2010

"ಅಧಿಕ ರಕ್ತದೊತ್ತಡ "

ವೈದ್ಯಲೋಕದ ವಿಚಿತ್ರಗಳು ,ಹೇಳಿದಷ್ಟೂ ಇದೆ .ಎಷ್ಟೊಂದು ರೋಗಗಳು!ಎಷ್ಟೊಂದು ವೈವಿಧ್ಯತೆ !ಒಂದೇ ರೋಗ ಒಬ್ಬೊಬ್ಬ ರೋಗಿಯಲ್ಲೂ ಒಂದೊಂದು ತರಹ !ಕೆಲವರಿಗೆ ರಕ್ತದ ಒತ್ತಡ ಸ್ವಲ್ಪ ಹೆಚ್ಚಾದರೂ, ತಲೆ ತಿರುಗುವುದು,ತಲೆ ವಿಪರೀತ ನೋಯುವುದೂ ಕಾಣಿಸಿಕೊಳ್ಳುತ್ತವೆ. ಕೆಲವರ ಬಿ.ಪಿ.ಯನ್ನು ಚೆಕ್ ಮಾಡಿ, ವೈದ್ಯರಾದ  ನಮ್ಮ ಬಿ.ಪಿ.ಹೆಚ್ಚಾದರೂ ಅವರಿಗೆ ಯಾವ ರೀತಿಯ ತೊಂದರೆಯೂ  ಇಲ್ಲದೆ,'ಅರ್ಜೆಂಟ್ ಕೆಲಸವಿದೆ ಸಾರ್ ,ಇನ್ನೊಮ್ಮೆಬಂದು ಔಷಧಿ ತೆಗೆದುಕೊಳ್ಳುತ್ತೇನೆ' ಎಂದುಹೇಳಿ ಏನೂ ಆಗದವರಂತೆ ಝಾಡಿಸಿಕೊಂಡು ಎದ್ದು ಹೊರಟುಬಿಡುತ್ತಾರೆ. ಬಿ.ಪಿ.ಹೆಚ್ಚಾಗಿರುವುದರಿಂದ ಅವನಿಗೇನಾಗುತ್ತೋ ಎಂದು ನಾವು ವೈದ್ಯರು ಗಾಭರಿಯಾಗಬೇಕಷ್ಟೇ! ಕೆಲವರು ಖಾಯಿಲೆ ಬಗ್ಗೆ ಅಷ್ಟು ಕೇರ್ ಲೆಸ್ ಆಗಿದ್ದರೆ,ಮತ್ತೆ ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಡಾಕ್ಟರ್ ಗಳನ್ನು ಬದಲಾಯಿಸುತ್ತಾ ,ಖಾಯಿಲೆಯನ್ನೇ ಒಂದು  ಹಾಬಿಯನ್ನಾಗಿ ಮಾಡಿಕೊಂಡು ತಮಗೂ,ತಮ್ಮ ಮನೆಯವರಿಗೂ ದೊಡ್ಡ ತಲೆ ನೋವಾಗುತ್ತಾರೆ!
ಆ ದಿನ ಸಂಜೆ ಸುಮಾರು ಐದು ಗಂಟೆ. ಓ.ಪಿ.ಡಿ.ಯಲ್ಲಿ ಸುಮಾರು  ರೋಗಿಗಳು ನನ್ನ ಪರೀಕ್ಷಾ ಕೊಠಡಿಯ ಹೊರಗೆ ಕಾಯುತ್ತಿದ್ದರು.ಆ ವ್ಯಕ್ತಿಗೆ ಸುಮಾರು ಮೂವತ್ತೈದು ವರ್ಷ ವಯಸ್ಸು.ಅವರು ನಮ್ಮ ರಾಯಚೂರು ಥರ್ಮಲ್ ಪವರ್ ಸ್ಟೇಶನ್ ನ ಯೂನಿಯನ್ ಒಂದರ  ಲೀಡರ್ ಆಗಿದ್ದರು. ಸುಮಾರಾಗಿ ಪರಿಚಯವಿತ್ತು. 'ಸ್ವಲ್ಪ ತಲೆ ನೋವಿದೆ  ಸಾರ್ ,ಏನಾದರು ಮಾತ್ರೆ ಕೊಡಿ 'ಎಂದರು.ನಾನು 'ಒಂದು ಸಲ ಬಿ.ಪಿ.ಚೆಕ್ ಮಾಡಿಬಿಡೋಣ'ಎಂದೆ.'ಈಗ ಅದೇನೂ ಬೇಡ ಸಾರ್.ಸ್ವಲ್ಪ ತಲೆನೋವಿದೆ,ಏನಾದರೂ ಮಾತ್ರೆ ಕೊಡಿ .ಇನ್ನೊಂದು ಸಲ ಬಂದು ಬಿ.ಪಿ.ಚೆಕ್ ಮಾಡಿಸಿ ಕೊಳ್ಳುತ್ತೇನೆ,ಅರ್ಜೆಂಟಾಗಿ ಐದೂವರೆ ಬಸ್ಸಿಗೆ ಬೆಂಗಳೂರಿಗೆ ಹೋಗಬೇಕಿದೆ 'ಎಂದರು.ಒಂದೇ ನಿಮಿಷದಲ್ಲಿ ನೋಡಿಬಿಡುತ್ತೇನೆ ಎಂದು ಬಲವಂತ ಮಾಡಿ  ಬಿ.ಪಿ.ಚೆಕ್ ಮಾಡಿದೆ.ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ.ಅಷ್ಟು ಹೆಚ್ಚಿನ ರಕ್ತದ ಒತ್ತಡವನ್ನು ಅದಕ್ಕೂ ಮುಂಚೆ ನಾನು ನೋಡಿರಲೇ ಇಲ್ಲ!ಬಿ.ಪಿ.260/140 mm hg.ಇತ್ತು !ಈ ಆಸಾಮಿ ನೋಡಿದರೆ ಸ್ವಲ್ಪ ಮಾತ್ರ  ತಲೆ ನೋವು ಎನ್ನುತ್ತಿದ್ದಾನೆ!ಅಷ್ಟು ಹೆಚ್ಚು ರಕ್ತದ ಒತ್ತಡಕ್ಕೆ,ರಕ್ತ ನಾಳಗಳು ಬರ್ಸ್ಟ್ ಆಗಿ ಎಲ್ಲಿ ಬೇಕಾದರೂ ರಕ್ತ ಸ್ರಾವವಾಗಬಹುದು!ಈ ವ್ಯಕ್ತಿ ದೇಹದೊಳಗೊಂದು time bomb ಇಟ್ಟುಕೊಂಡು ಓಡಾಡುತ್ತಿದ್ದಾನೆ ಎನಿಸಿ ಅಚ್ಚರಿಯಾಯಿತು! ರೋಗಿಗಿಂತ ಡಾಕ್ಟರ್ ಆದ ನನಗೇ ಹೆಚ್ಚು ಗಾಭರಿ  ಆಗಿತ್ತು!ಮೇಲೆ ಮಾತ್ರ ಏನೂ ಆಗದವನಂತೆ ಇರಬೇಕಾದ ಅನಿವಾರ್ಯತೆ !ಮತ್ತೆ ನಾಲಕ್ಕು ಸಲ ಬೇರೆ ,ಬೇರೆ ಬಿ.ಪಿ.ಉಪಕರಣಗಳಲ್ಲಿ ,ಬೇರೆಯವರ ಹತ್ತಿರ ಚೆಕ್ ಮಾಡಿಸಿದರೂ ಬಿ.ಪಿ.ಅಷ್ಟೇ ಇತ್ತು .ಹೆಚ್ಚಿನ ವ್ಯತ್ಯಾಸವೇನೂ ಕಂಡು ಬರಲಿಲ್ಲ.ಅವರನ್ನು ತಕ್ಷಣ ಅಡ್ಮಿಟ್ ಮಾಡಿಕೊಂಡು ಅವರ ಮನೆಯವರನ್ನು ಕರೆಸಿದೆ.ಎರಡು ದಿನ ಗಳಲ್ಲಿ ಬಿ.ಪಿ.150/90 mm hg ಗೆ ಇಳಿಯಿತು.ಕೆಲವೊಮ್ಮೆ ಕಿಡ್ನಿಯಲ್ಲಿ ಏನಾದರೂ ತೊಂದರೆ ಇದ್ದರೆ ಅಷ್ಟೊಂದು ಸಣ್ಣ ವಯಸ್ಸಿಗೆ ಅಷ್ಟು ಹೆಚ್ಚಿನ ರಕ್ತದ ಒತ್ತಡ ವಿರುತ್ತದೆ.ಅದಕ್ಕೆ 'ಸೆಕೆಂಡರಿ ಹೈಪರ್ ಟೆನ್ಶನ್',ಎನ್ನುತ್ತಾರೆ.(ಮಾಮೂಲಾಗಿ ಕಾಣಿಸಿಕೊಳ್ಳುವ ಬಿ.ಪಿ.ಗೆ ,'ಪ್ರೈಮರಿ ಹೈಪರ್ ಟೆನ್ಶನ್',ಎನ್ನುತ್ತಾರೆ.)ಅವರನ್ನು ಮತ್ತೆ ಮುಂದಿನ ತಪಾಸಣೆ ಗಳಿಗಾಗಿ ,ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ರೆಫರ್ ಮಾಡಲಾಯಿತು. ಮತ್ತೆ ಮುಂದೇನಾಯಿತು ಎಂದು ನನಗೆತಿಳಿಯಲಿಲ್ಲ,ಏಕೆಂದರೆ ನನಗೆ ಬೇರೆ ಜಾಗಕ್ಕೆ ವರ್ಗವಾಯಿತು.ಐದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಅಂಬಿಕಾ ನಗರದಲ್ಲಿ ಆ ವ್ಯಕ್ತಿಯ ಭೇಟಿಯಾಯಿತು.ಆ ವ್ಯಕ್ತಿ ನನ್ನನ್ನು ನೋಡಿದ ತಕ್ಷಣ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು.ನನ್ನಿಂದ ಏನು ಎಡವಟ್ಟು  ಆಯಿತೋ ಎಂದು ಗಾಭರಿಯಾಯಿತು.ಆಮೇಲೆ ಸಮಾಧಾನ ಮಾಡಿಕೊಂಡು ಹೇಳತೊಡಗಿದರು 'ಸಾರ್,ನೀವು ನನ್ನನ್ನು ಕಿಡ್ನಿ ಫೌಂಡೆಶನ್ ಗೆ ಕಳಿಸಿದಿರಿ.ಅಲ್ಲಿ ನನಗೆ ಕಿಡ್ನಿ ಫೈಲ್ಯೂರ್ ಆಗಿದ್ದು ಗೊತ್ತಾಯಿತು .ನನಗೆ ಕಿಡ್ನಿ ಟ್ರಾನ್ಸ್ ಪ್ಲ್ಯಾಂಟ್ ಮಾಡಿದರು.ನನ್ನ ಹೆಂಡತಿಯೇ ನನಗೆ ಕಿಡ್ನಿ ಡೊನೇಟ್ ಮಾಡಿದಳು .ಆ ದಿನ ನೀವು ಬಲವಂತದಿಂದ ನನ್ನ  ಬಿ.ಪಿ.ಚೆಕ್ ಮಾಡದಿದ್ದರೆ ನಾನು ಬದುಕುತ್ತಿರಲಿಲ್ಲಾ ಸಾರ್.ನಿಮ್ಮ ಉಪಕಾರ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲಾ' ಎಂದು ನನ್ನ ಕೈ ಹಿಡಿದು ಮತ್ತೆ ಕಣ್ಣಲ್ಲಿ ನೀರು ತುಂಬಿಕೊಂಡರು .ನಾನು ಮಾತು ಹೊರಡದೆ ಮೂಕ ವಿಸ್ಮಿತನಾಗಿದ್ದೆ.

Tuesday, October 12, 2010

"ಹಾರೈಕೆ"

ನನ್ನ ಎದೆಯಾಳದಲ್ಲಿ -----,
ಚುಚ್ಚುತ್ತಿರುವ ಮುಳ್ಳುಗಳೆಲ್ಲ
ಹೂವಾಗಿ ಅರಳಿ ---------,
ಸುಗಂಧ  ಬೀರಲಿ ಸುತ್ತ!
ಸಹ್ಯವಾಗಲಿ ಬದುಕು ,
ನನಗೂ ,ಸರ್ವರಿಗೂ .
ತಣ್ಣಗೆ ಒಳಗೇ ಕೊರೆಯುವ 
ನೋವಿನ ಮಂಜು ಕರಗಿ ,
ನೀರಾಗಿ ,ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ ,
ತಂಪೆರೆಯಲಿ ----!
ಸಂಬಂಧಗಳು ಬತ್ತಿರುವ 
ಈ ಮರುಧರೆಯ ಎದೆಗಳಲಿ 
ಮತ್ತೆ ಬಾಂಧವ್ಯಗಳ 
ಹೊಸ ಚಿಗುರೊಡೆದು 
ಕಳೆ ಇರದ ಬದುಕಿನ ಹೊಲ 
ನಳ,ನಳಿಸಲಿ---------,
ಎನ್ನುವ --------ಹಾರೈಕೆ!

Wednesday, October 6, 2010

"ಹೀಗೂ ಉಂಟೆ?"

ರಾತ್ರಿ ಸುಮಾರು ಹನ್ನೊಂದು ಗಂಟೆ ಸಮಯ.ರಾಯಚೂರಿನ ರೈಲ್ವೆ ಸ್ಟೇಷನ್ನಿನಲ್ಲಿ ದಾದರ್-ಚೆನ್ನೈ ಎಕ್ಸ್ ಪ್ರೆಸ್ ಟ್ರೈನಿಗೆ ಟಿಕೆಟ್ ಕೊಳ್ಳಲು ಹನುಮಂತನ ಬಾಲದಂತಹ ಉದ್ದನೆಯ ಕ್ಯೂ ನಲ್ಲಿ ನಿಂತಿದ್ದೆ.ಟ್ರೈನ್ ಪ್ಲಾಟ್ ಫಾರಮ್ಮಿಗೆ ಬರುವ ಸೂಚನೆಯಾಗಿ ಮೂರನೇ ಗಂಟೆ ಬಾರಿಸಿದರೂ ಕ್ಯೂ ಕರಗುವ ಸೂಚನೆ ಕಾಣದೆ ಪ್ರಯಾಣಿಕರಲ್ಲಿ ಗಡಿಬಿಡಿ,ಆತಂಕ ಶುರುವಾಯಿತು.ಎಲ್ಲರಂತೆ ನಾನೂ ಬೇಗ ಟಿಕೆಟ್ ಕೊಡುವಂತೆ ದನಿ ಸೇರಿಸಿದೆ.ಟಿಕೆಟ್ ಕೌಂಟರ್ ನಲ್ಲಿದ್ದ ಒಬ್ಬ ವ್ಯಕ್ತಿ  ನನ್ನ ದನಿ ಗುರುತು ಹಿಡಿದು ಕೌಂಟರ್ ನಿಂದ ಹೊರಗೆ ಬಂದು ,ನನ್ನ ಬಳಿ ಬಂದು "ಸಾರ್ ನೀವು ಡಾ.ಕೃಷ್ಣ ಮೂರ್ತಿಯವರಲ್ಲವೇ ?ಹತ್ತು ವರ್ಷಗಳ ಹಿಂದೆ ಶಕ್ತಿನಗರದಲ್ಲಿದ್ದಿರಿ .ಹೌದಲ್ಲವೇ ?"ಎಂದ.ನಾನು "ಹೌದು ,ಆದರೆ ನೀವು ಯಾರು ? ನನಗೆ ನಿಮ್ಮ ಪರಿಚಯವಿಲ್ಲವಲ್ಲ "ಎಂದೆ.ಅಷ್ಟರಲ್ಲಿ ಟ್ರೈನು ಪ್ಲಾಟ್ ಫಾರಮ್ಮಿಗೆ ಬಂದಿತ್ತು ."ಸಾರ್ ,ಅದೆಲ್ಲಾ ಆಮೇಲೆ ಹೇಳುತ್ತೀನಿ ,ನಿಮಗೆ ಎಲ್ಲಿಗೆ ಟಿಕೆಟ್ ಬೇಕು ಹೇಳಿ?" ಎಂದ.ನಾನು ಹೋಗ ಬೇಕಾದ ಸ್ಥಳದ ಹೆಸರು ಹೇಳಿದೆ.ತಕ್ಷಣವೇ ಹಣವನ್ನೂ ತೆಗೆದು ಕೊಳ್ಳದೆ,ನಾನು ಹೋಗಬೇಕಾದ ಸ್ಥಳಕ್ಕೆ ಟಿಕೆಟ್ ತಂದು ಸ್ಲೀಪರ್ ಬೋಗಿ ಯೊಂದರ ಟಿ.ಟಿ.ಗೆ ಹೇಳಿ ಸೀಟು ಕೊಡಿಸಿದ.ಎಷ್ಟೇ ಬಲವಂತ ಮಾಡಿದರೂ ಟಿಕೆಟ್ಟಿನ ಹಣ ತೆಗೆದುಕೊಳ್ಳಲಿಲ್ಲ . ನನಗೆ 'ಇವನು ಯಾರು?ನನಗೇಕೆ ಸಹಾಯ ಮಾಡುತ್ತಿದ್ದಾನೆ?' ಎಂದು ಅರ್ಥವಾಗಲಿಲ್ಲ.I was in a totally confused state.ನಾನು ಟ್ರೈನಿನಲ್ಲಿ ಕಿಟಕಿಯ ಬಳಿ ಕುಳಿತ ಬಳಿಕ, ಕಿಟಕಿಯ ಹೊರಗೆ ನಿಂತು ಆತ ಹೇಳಿದ "ಸಾರ್ ,ಹತ್ತು ವರ್ಷಗಳ ಹಿಂದೆ ನಾನು 'ಕೃಷ್ಣ ರೈಲ್ವೆ ಸ್ಟೇಷನ್' ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಮಗನಿಗೆ ಬೈಕ್ accident ಆಗಿ 'ಶಕ್ತಿನಗರ'ದ ಆಸ್ಪತ್ರೆಗೆ ರಾತ್ರಿ ಸುಮಾರು ಎರಡು ಗಂಟೆಗೆ ಕರೆದುಕೊಂಡು ಬಂದಾಗ ನೀವು  ಬಹಳ ಚೆನ್ನಾಗಿ ಟ್ರೀಟ್ ಮೆಂಟ್ ಕೊಟ್ಟಿರಿ.ಗಾಯಗಳಿಗೆ ಸುಮಾರು ಹೊತ್ತು ಸೂಚರ್ ಹಾಕಿದಿರಿ. ಹಣ ಕೊಡಲು ಬಂದಾಗ ತೆಗೆದು ಕೊಳ್ಳದೆ ಹಾಗೇ  ಕಳಿಸಿದಿರಿ.ನಿಮ್ಮ ಉಪಕಾರ ನಾನು ಯಾವತ್ತೂ ಮರೆಯೋಕೆ ಆಗೋಲ್ಲಾ ಸಾರ್.ಹತ್ತು ವರ್ಷಗಳಾದರೂ ನಿಮ್ಮ ದನಿ ನನಗೆ ಇನ್ನೂ ನೆನಪಿದೆ ನೋಡಿ!ನಿಮ್ಮ ದನಿಯಿಂದಲೇ ನಿಮ್ಮ ಗುರುತು ಹಿಡಿದೆ"ಎಂದ.ನಾನು ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ಅವಾಕ್ಕಾಗಿದ್ದೆ.ಅವನ ಮುಖದಲ್ಲಿ ಕೃತಜ್ಞತೆ ಇತ್ತು.
ಕಣ್ಣುಗಳಲ್ಲಿ ನೀರಿನ ಪಸೆ ಇತ್ತು.ಟ್ರೈನ್ ನಿಧಾನವಾಗಿ ಮುಂದೆ ಚಲಿಸಿದಂತೆ ಬೀಳ್ಕೊಡುವಂತೆ ಕೈ ಬೀಸಿದ.ನಾನೂ 'ಹೀಗೂ ಉಂಟೆ?'ಎಂದುಕೊಳ್ಳುತ್ತಾ ,ಕೈ ಬೀಸಿ ಬೀಳ್ಕೊಟ್ಟೆ .

Saturday, October 2, 2010

"ಮತ್ತೆ ಹುಟ್ಟಿ ಬಾ ----ಬಾಪೂ"

ಬಾಪೂ----------ಇಂದು,
ನ್ಯಾಯಕ್ಕಾಗಿ,ನೀತಿಗಾಗಿ, 
ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ ,
ಹೋರಾಡಿದ ನಿನ್ನ 
ಜನುಮ ದಿನ !
ಎಲ್ಲದಕ್ಕೂ  ನಿನ್ನ 
ಹೆಸರು ಹೇಳಿಕೊಂಡು ,
ತಕ್ಕಡಿ ಹಿಡಿದು ಕುಳಿತಿದ್ದಾರೆ 
ತಲೆಗೆ ಟೋಪಿ ಇಟ್ಟ  ಜನ!
ತಕ್ಕಡಿ ಕೆಳಗೆ ನೋಡು !
ಮೋಸ ಬಯಲಾಗುತ್ತೆ !
ನಿನ್ನ ಹೆಸರಿನ ಹಿಂದೆ ,
ಏನೆಲ್ಲಾ ದಂಧೆ
ನಡೆಯುತ್ತೆ ಅನ್ನೋದು 
ನಿನಗೇ ಗೊತ್ತಾಗುತ್ತೆ!
ನಿನ್ನ ರಾಮ ರಾಜ್ಯದ ಕನಸ 
ನನಸಾಗಿಸಲಾದರೂ-----,
ಸತ್ಯ ಅಹಿಂಸೆ ನ್ಯಾಯ ನೀತಿಗಳ 
ಅನುಷ್ಠಾನ ಗೊಳಿಸಲಾದರೂ,
ಮತ್ತೊಮ್ಮೆ ಹುಟ್ಟಿಬಾ ಬಾಪೂ!

Friday, October 1, 2010

"ಮೂಗಿನ ಬಗ್ಗೆ ಏನೂ ಕೇಳಬಾರದು!"

ನಾಲಕ್ಕು ವರ್ಷ ವಯಸ್ಸಿನ ತುಂಟ ಮಗ.ಅವನ ತರಲೆ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೈರಾಣಾದ ತಂದೆ.ಮಾರನೇ ದಿನ ಸ್ನೇಹಿತರೊಬ್ಬರನ್ನು ಊಟಕ್ಕೆ ಕರೆದಿದ್ದರು.ಮಗ ಏನು ಎಡವಟ್ಟು ಪ್ರಶ್ನೆ ಕೇಳಿ ಅವಮಾನ ಮಾಡಿಬಿಡುತ್ತಾನೋ ಎಂದು ಅವರಿಗೆ  ಒಳಗೊಳಗೇ ಭಯ.ಮೊದಲೇ ಮಗನಿಗೆ ಎಚ್ಚರಿಕೆ ನೀಡುವುದು ಒಳ್ಳೆಯದೆಂದು ಮಗನನ್ನು ಹತ್ತಿರಕ್ಕೆ ಕರೆದರು.ಪ್ರೀತಿಯಿಂದ "ನೋಡು ಪುಟ್ಟ ,ನಾಳೆ ಊಟಕ್ಕೆ ಬರುತ್ತಾರಲ್ಲಾ ಅಂಕಲ್,ಅವರ ಮೂಗಿನ ಬಗ್ಗೆ ನೀನು  ಏನೂ ಪ್ರಶ್ನೆ ಕೇಳಬಾರದು !ನನ್ನ ಮಾತು ಕೇಳಿದರೆ ನಿನಗೆ ಕ್ಯಾಡ್ಬರೀಸ್ ಚಾಕೊಲೇಟು ತಂದು ಕೊಡುತ್ತೀನಿ' ಎಂದು ಪುಸಲಾಯಿಸಿದರು.ಕ್ಯಾಡ್ಬರೀಸ್ ಆಸೆಗೆ ಮಗ ಏನೂ ಪ್ರಶ್ನೆ ಕೆಳುವುದಿಲ್ಲವೆಂದು ತಕ್ಷಣ  ಒಪ್ಪಿಕೊಂಡ.ಮಾರನೇ ದಿನ ಬಂದ ಅತಿಥಿಗಳು ಊಟಕ್ಕೆ ಕುಳಿತರು.ಮಗ ತದೇಕ ಚಿತ್ತನಾಗಿ ಅತಿಥಿಗಳ ಮುಖವನ್ನೇ ನೋಡುತ್ತಿದ್ದ.ತಂದೆಗೆ ಒಳೊಗೊಳಗೆ ಭಯ !ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು .ಮಗ ತಂದೆಯ ಕಡೆ ನೋಡುತ್ತಾ 'ಅಪ್ಪಾ'ಎಂದ.ಅವನನ್ನು ಸುಮ್ಮನಿರುವಂತೆ ಕಣ್ಣಿನಲ್ಲಿಯೇ ಗದರಿದರು.ಏನೂ ಪ್ರಯೋಜನವಾಗಲಿಲ್ಲ.ಮಗ ಪ್ರಶ್ನೆಯ ಬಾಣವನ್ನು ಪ್ರಯೋಗಿಸಿಯೇ ಬಿಟ್ಟ .'ಅಪ್ಪಾ ,ಅಂಕಲ್ ಮೂಗಿನ ಬಗ್ಗೆ ಏನೂ ಕೇಳಬೇಡ ಎಂದೆ!ಅಂಕಲ್ ಗೆ  ಮೂಗೇ ಇಲ್ಲಾ!!!!'