Monday, April 18, 2011

"ಸಂತೋಷವೇ ........ಪೂಜೆ,ಪ್ರಾರ್ಥನೆ ,ಧ್ಯಾನ !!!"

ನಮ್ಮ ದಿನ ನಿತ್ಯದ ಜೀವನ ,ಸಣ್ಣ ಸಣ್ಣ ಸಂಗತಿಗಳಿಂದ ತುಂಬಿದೆ.ನೀವು ಯಾವುದೇ ಸಣ್ಣ ಕೆಲಸವನ್ನು ಉಲ್ಲಾಸದಿಂದ ಉತ್ಸಾಹದಿಂದ ಆಸ್ಥೆಯಿಂದ ಮಾಡಿದ್ದೇ ಆದರೆ,ಆ ಸಣ್ಣ ಸಣ್ಣ ಸಂಗತಿಗಳೇ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರ ಬಲ್ಲವು.ನೀವು ಊಟ ಮಾಡುವುದಾಗಿರಲಿ,ನೆಲ ಒರೆಸುವುದಾಗಿರಲಿ,ಯಾವುದೇ ದಿನ ನಿತ್ಯದ ಕೆಲಸವಾಗಿರಲೀ ,ಅದನ್ನೇ ಸಂತೋಷದಿಂದ ಮಾಡಿದರೆ ಅದೇ ಪ್ರಾರ್ಥನೆಯಾಗುತ್ತದೆ!!ನಿಮ್ಮ ಪ್ರೀತಿ ಪಾತ್ರರಿಗೆ ನೀವು ಸಂತಸದಿಂದ ಅಡಿಗೆ ಮಾಡಿದರೆ ಅದೇ ಧ್ಯಾನವಾಗುತ್ತದೆ !! 

ಸಣ್ಣ ಸಣ್ಣ ಕೆಲಸ ಕಾರ್ಯಗಳಲ್ಲೂ ,ಸಂತಸ ಮತ್ತು ನೆಮ್ಮದಿಯನ್ನು ಕಾಣುವುದೇ ಅರ್ಥ ಪೂರ್ಣ ಜೀವನದ ಗುಟ್ಟು!! ನೀವು ಮಾಡುವ ಪ್ರತಿ ಕೆಲಸದಲ್ಲೂ ನಿಮ್ಮನ್ನು ನೀವು ಸಂತೋಷದಿಂದ ತೊಡಗಿಸಿ ಕೊಳ್ಳುವುದೇ ದೇವರ ಪೂಜೆಯಾಗುತ್ತದೆ.ನಿಮ್ಮ ಜೀವನದ ಕರಾಳ ರಾತ್ರಿ ಮುಗಿದು,ಸಂತಸದ ಸೂರ್ಯೋದಯವಾಗಲಿ!!!
LET  EVERY WORK OF YOUR'S BE  A CULTIVATION  OF HAPPINESS!!! AND CULMINATE IN HAPPINESS !!!
(ಓಶೋ ಪ್ರವಚನ ಒಂದರ ಭಾವಾನುವಾದ)

Sunday, April 17, 2011

" ಈ ಕ್ಷಣದಲ್ಲಿ ........ಸಂತಸದಿಂದಿರಿ!!"

ನಮ್ಮೆಲ್ಲಾ ತೊಂದರೆಗಳಿಗೆ ನಮ್ಮ ಮನಸ್ಸು ಈ ಕ್ಷಣದಲ್ಲಿ
ಇಲ್ಲದೆ ಇರುವುದೇ ಕಾರಣ ಎಂಬುದು ಹಲವಾರು
ಆಧ್ಯಾತ್ಮಿಕ ಗುರುಗಳ ಅಭಿಪ್ರಾಯ..................

ಈ ಕ್ಷಣಕ್ಕೆ ಏನೂ ತೊಂದರೆ ಇಲ್ಲದಿದ್ದರೂ ,ಮನಸ್ಸು 
ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನೋ,
ಯಾರೋ ಮಾಡಿದ ಅವಮಾನವನ್ನೋ ನೆನೆ ನೆನೆದು 
ಕುದಿಯುತ್ತಿರುತ್ತದೆ...................ಈ ಕ್ಷಣದಲ್ಲಿ!

ಅಂದರೆ ,ಯಾವುದೂ ಚಿಂತೆ ಇಲ್ಲದೆ ಆರಾಮವಾಗಿ
ಇರಬೇಕಾದ ಮನಸ್ಸು ಬೇಡದ ಯಾವುದೋ ವಿಷಯದ 
ಬಗ್ಗೆ ಪ್ರಕ್ಷುಬ್ಧ ಗೊಂಡು,ಈಗಿನ ಕ್ಷಣವನ್ನು ಹಾಳುಮಾಡುತ್ತಿರುವುದು
ನಮ್ಮ ಗಮನಕ್ಕೆ ಬರುವುದೇ ಇಲ್ಲ!

ಈಗಿನ ಕ್ಷಣದಲ್ಲಿ ಏನೂ ಚಿಂತೆ ಇಲ್ಲದಿದ್ದರೂ,ಕೆಲವೊಮ್ಮೆ 
ನಮ್ಮ ಮನಸ್ಸು ಭವಿಷ್ಯದ ಬಗ್ಗೆಯೂ ಋಣಾತ್ಮಕ 
ಚಿಂತನೆಯಲ್ಲೇ ತೊಡಗಿಸಿಕೊಂಡು ಕೊರಗುತ್ತದೆ.
ನಾನು ಪರೀಕ್ಷೆಯಲ್ಲಿ ಪಾಸಾಗದಿದ್ದರೆ?
ನನಗೆ ಏನಾದರೂ ಅಪಘಾತವಾಗಿ ಬಿಟ್ಟರೆ?
ನಾನು  ಬ್ಯಾಂಕ್ ಲೋನ್ ತೀರಿಸಲಾಗದಿದ್ದರೆ?ನನ್ನ ಖಾಯಿಲೆ 
ವಾಸಿಯಾಗದಿದ್ದರೆ? ಇತ್ಯಾದಿ ,ಇತ್ಯಾದಿ................

ಹಿಂದೆ ನಡೆದ ವಿಷಯದ ಬಗ್ಗೆಯೋ,ಭವಿಷ್ಯದ ಬಗ್ಗೆ 
ಚಿಂತೆಯೋ,ಒಟ್ಟಿನಲ್ಲಿ ಕೊರಗುತ್ತಿರುವುದೇ ಒಂದು 
ಅಭ್ಯಾಸವಾಗಿಬಿಡುವಸಾಧ್ಯತೆ ಇರುವುದರಿಂದ ,ಅರೆ 
ಇದೇನಿದು ನನ್ನ ಜೀವನದಲ್ಲಿಖುಷಿಯೇ ಇಲ್ಲವಲ್ಲಾ !
ಬದುಕು ಎಂದರೆ ಇಷ್ಟೇನಾ!!?ಎನಿಸಬಹುದು.

ಈ  ಕ್ಷಣದಲ್ಲಿ ಮನಸ್ಸು ಏನನ್ನೋ ನೆನೆದು ಚಿಂತಾ ಮಗ್ನ
ವಾಗಿರುವುದರಿಂದ,ಈಗ ಮಾಡುತ್ತಿರುವ ಕೆಲಸವನ್ನು
ಗಮನವಿಟ್ಟು,ಸಂತಸದಿಂದ ಮಾಡುವುದು ಸಾಧ್ಯವಾಗುವುದಿಲ್ಲ!
ಸರಿಯಾಗಿ ಮಾಡದ ಕರ್ಮದ ಫಲವೂ ಸರಿಯಾಗಿ ಇರುವುದಿಲ್ಲ!
ಈ ಕೆಟ್ಟ ಕರ್ಮ ಫಲದ ಬಗ್ಗೆ ಮತ್ತೆ ಮುಂದೊಂದು ದಿನ 
ನೆನೆ ನೆನೆದು ಕೊರಗುತ್ತೇವೆ....................!!!

ಈ ವಿಷವೃತ್ತದಿಂದ ಹೊರ ಬರುವುದು ಹೇಗೆ?
ಈ ಕ್ಷಣದಲ್ಲಿ ನನ್ನ ಮನಸ್ಸು ಸಂತೋಷದಿಂದ ಇದೆಯೇ ,
ಅಥವಾ ಸಂತಸ ಹಾಳು ಮಾಡುವಂತಹ ವಿಷಯದ ಬಗ್ಗೆ 
ಚಿಂತೆ ಮಾಡುತ್ತಲೋ,ಮನಸ್ಸು ನೋಯುವಂತಹ
ವಿಷಯದ ಬಗ್ಗೆ ಯಾರೊಡನೆಯೋಮಾತಾಡುತ್ತಲೋ,ಚರ್ಚೆ
ಮಾಡುತ್ತಲೋ ಇದ್ದೇನೆಯೇ ಅಥವಾ ಅಂತಹ ದೃಶ್ಯಗಳನ್ನು 
 ಟಿ.ವಿ.ಯಲ್ಲಿ ನೋಡುತ್ತಿದ್ದೆನೆಯೇ  ಎಂದು ಆಗಾಗ ಚೆಕ್
ಮಾಡಿಕೊಳ್ಳುವುದೇ ಮಾರ್ಗ.ಇದು ಇಂದಿನ AASTHAA 
ಚಾನೆಲ್ ನಲ್ಲಿ ಬಂದ Awakening with Bramhakumaari's
ಎನ್ನುವ ಕಾರ್ಯ ಕ್ರಮ ದಲ್ಲಿ Sister Shivani  ಹೇಳಿದ ಮಾತು.

ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ತಿಳಿಸಿ.........

Saturday, April 16, 2011

"ಅಪರಿಚಿತನೊಬ್ಬನ ....ಪ್ರೇಮ ಕಥೆ!!!"

ಇದು ಸುಮಾರು ಒಂದು ವಾರದ ಹಿಂದೆ ನಡೆದ ಕಥೆ..............
ಏನೂ ಏರಿಳಿತಗಳಿಲ್ಲದೆ ಮಾಮೂಲಾಗಿ ನಡೆಯುತ್ತಿರುವ  ಜೀವನ ಇದ್ದಕ್ಕಿದ್ದಂತೆ ವಿಚಿತ್ರ ತಿರುವುಗಳನ್ನು ಪಡೆದು ಕೊಳ್ಳುತ್ತದೆ.ಒಂದೆರಡು ಗಂಟೆಗಳ ಮೊದಲು,ಒಬ್ಬ ಅಪರಿಚಿತ ವ್ಯಕ್ತಿಯೊಬ್ಬನ ಜೀವನದ ನಿರ್ಣಾಯಕ ಘಟ್ಟದಲ್ಲಿ ನಾನೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಕನಸು ಮನಸಿನಲ್ಲೂ ನೆನಸಿರಲಿಲ್ಲ..........
ನನ್ನ ಆಪ್ತ ಸ್ನೇಹಿತ ರಾಜಣ್ಣನ ಮಾತು ನೆನಪಿಗೆ ಬಂತು.......
'ಸರ್ ,ಇಲ್ಲಿ ಯಾವುದೂ ಆಕಸ್ಮಿಕವಲ್ಲ.The whole universe is a quantum soup of energy or consciousness.Every thing is predestined.Time and space really don't exist......'
ಹೀಗೂ  ಇರಬಹುದೇ? ಎಂದು ಎಷ್ಟೋ ಸಲ ಅನಿಸಿದ್ದುಂಟು..............

ಅವನು ಸುಮಾರು ಇಪ್ಪತಾರು ವರ್ಷ  ವಯಸ್ಸಿನ ಸುಂದರ ಯುವಕ.ಆ ಕಣ್ಣುಗಳಲ್ಲಿ ಅದೇನೋ ವಿಶಿಷ್ಟ ಆಕರ್ಷಣೆ ಇದೆ ಎನಿಸಿತು.ಕಾಮತ್ ಯಾತ್ರಿ ನಿವಾಸದಲ್ಲಿ ಊಟದ ಟೇಬಲ್ ಮುಂದೆ ಎದುರು ಬದುರು ಕುಳಿತು ಊಟಕ್ಕೆ ಆರ್ಡರ್ ಮಾಡಿ ಮಾತಾಡುತ್ತಿದ್ದೆವು.

ಅವನ ಪರಿಚಯವಾಗಿ ಇನ್ನೂ ಒಂದು ಗಂಟೆಯಾಗಿತ್ತಷ್ಟೇ.......!
 'ಸೀ ಬರ್ಡ್' ಬಸ್ ನಲ್ಲಿ  ಊರಿಗೆ  ಟಿಕೆಟ್ ಬುಕ್ ಮಾಡಿಸಿಕೊಂಡು ,ಇನ್ನೇನು ಆಟೋ ಹತ್ತಿ ವಿಜಯನಗರಕ್ಕೆಮನೆಗೆ  ಹೊರಟಿದ್ದೆ.
ಸ್ವಪ್ನ ಬುಕ್ ಸ್ಟಾಲ್'ಗೆ ಒಮ್ಮೆ ಭೇಟಿ ಕೊಡೋಣ ಎನಿಸಿ ಅಲ್ಲಿಗೆ ಹೋಗಿ ಮೊದಲನೇ ಮಹಡಿಯಲ್ಲಿದ್ದ ಆಧ್ಯಾತ್ಮಿಕ ಪುಸ್ತಕಗಳತ್ತ ಕಣ್ಣು ಹಾಯಿಸುತ್ತಿದ್ದೆ. ಅಲ್ಲೇ ಆ ಯುವಕನ ಪರಿಚಯವಾಗಿದ್ದು...............

ರಾಶಿ ,ರಾಶಿ 'ಓಶೋ'ಪುಸ್ತಕಗಳನ್ನು ಜೋಡಿಸಿ ಇಟ್ಟುಕೊಂಡಿದ್ದ.........
ಯಾವುದನ್ನು ಖರೀದಿಸಬೇಕೋ ತಿಳಿಯದೆ  ಪರದಾಡುತ್ತಿದ್ದ........
'ಒಂದೇ ಸಲ ಇಷ್ಟೆಲ್ಲಾ ಪುಸ್ತಕಗಳನ್ನು ಯಾಕೆ ಖರೀದಿಸುತ್ತೀರಿ .........?
ಸ್ವಲ್ಪ ಖರೀದಿಸಿ ,ಇಷ್ಟವಾದರೆ ಮತ್ತಷ್ಟು ಖರೀದಿಸಬಹುದಲ್ಲಾ.....'ಎಂದೆ.
'ಸರ್ ನಾನು ಅಮೇರಿಕಾದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ........
ಒಂದುವಾರ ರಜಾ ಹಾಕಿ ಇಲ್ಲಿಗೆ ಬಂದಿದ್ದೇನೆ.ಬರೋ ಮಂಗಳವಾರ ವಾಪಸ್ ಹೋಗ ಬೇಕು. 
ಅಲ್ಲಿ ಈ ಪುಸ್ತಕಗಳು ಸಿಗುವುದಿಲ್ಲ.ಸಿಕ್ಕರೂ ಬೆಲೆ ಜಾಸ್ತಿ .ಅದಕ್ಕೇ ಒಂದು ವರ್ಷಕ್ಕಾಗುವಷ್ಟು ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದೇನೆ 'ಎಂದ. ಅವನ ಪುಸ್ತಕಗಳಿಗೆ ನನ್ನ ಕಾರ್ಡ್ ಉಪಯೋಗಿಸಿ ಸುಮಾರು ಮುನ್ನೂರು ರೂಪಾಯಿಗಳಷ್ಟು ಡಿಸ್ಕೌಂಟ್ ಅನ್ನೂ  ಕೊಡಿಸಿದೆ.........

ನಾನು ಹೊರಟು ನಿಂತಾಗ  'ಬನ್ನಿ ಸಾರ್ ,ಯಾತ್ರಿನಿವಾಸ್ ನಲ್ಲಿ ಊಟ ಮಾಡಿ ಹೋಗೋಣ.ಹೇಗಿದ್ದರೂ ನನ್ನ ಬೈಕ್ ಇದೆ.ನಾನೂ ವಿಜಯನಗರದ ಕಡೆ ಹೋಗುತ್ತಿರುವುದರಿಂದ ನಿಮ್ಮ ಮನೆಗೆ ಡ್ರಾಪ್  ಕೊಡುತ್ತೇನೆ'ಎಂದ..........

ಯಾತ್ರಿ ನಿವಾಸದಲ್ಲಿ  ಊಟ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವನು 'ಸರ್ ನನ್ನದೊಂದು ವೈಯಕ್ತಿಕ ಸಮಸ್ಯೆ ಯಿದೆ .........,ನಿಮಗೆ ಬೇಸರವಿಲ್ಲ ಎಂದರೆ ಹೇಳುತ್ತೇನೆ.ನೀವು ಸಾಕಷ್ಟು ಅನುಭವವುಳ್ಳವರು.ನಿಮ್ಮನ್ನು ನೋಡಿ,ನಿಮ್ಮ ಜೊತೆ ಮಾತನಾಡಿದಾಗ ನಿಮ್ಮಿಂದ ನನ್ನ ಸಮಸ್ಯೆಗೆ  ಪರಿಹಾರ ಸಿಗಬಹುದು ಎನಿಸಿತು ' ಎಂದ............
'ಅದೇನು ಸಮಸ್ಯೆ ಹೇಳಿ.......ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೆ ಇರುತ್ತದೆ.ಅದನ್ನು ನಾವು ಕಂಡುಕೊಳ್ಳಬೇಕು  ಅಷ್ಟೇ 'ಎಂದೆ.ಸಮಸ್ಯೆ ಎಷ್ಟು ಗಹನವಾಗಿದೆ ಎಂಬುದರ ಅರಿವೂ  ನನಗಿರಲಿಲ್ಲ.

'ಸಾರ್ ಮೂರು ವರ್ಷಗಳ ಹಿಂದೆ ಅಮೆರಿಕಾಗೆ ಹೋಗುವ ಮೊದಲು ನಮ್ಮ ಪಕ್ಕದ ಮನೆ ಹುಡುಗಿಯ ಜೊತೆ ಸ್ನೇಹವಾಯಿತು.ಅವಳೂ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದಳು.ಅವಳು ಇಲ್ಲೇ ಬೆಂಗಳೂರಿನಲ್ಲೇ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದಾಳೆ.ಪರಿಚಯ ಪ್ರೇಮಕ್ಕೆ ತಿರುಗಿತು.ನಮ್ಮಿಬ್ಬರದೂ ಬೇರೆ ಜಾತಿ.ಅವಳಿಗೆ ತಾಯಿ ಮತ್ತು ತಂಗಿ ಯೊಬ್ಬಳಿದ್ದಾಳೆ.ನಾವಿಬ್ಬರೂ ಮುಂದಿನ ವರ್ಷ ಮದುವೆಯಾಗಬೇಕು ಎಂದುಕೊಂಡಿದ್ದೆವು.ನಮ್ಮ ಮನೆಯಲ್ಲಿ ಅಪ್ಪ ,ಅಮ್ಮ ತಂಗಿ ಇದ್ದಾರೆ. ಇಬ್ಬರ ಮನೆಯಲ್ಲೂ ನಾವಿಬ್ಬರೂ ಪ್ರೀತಿಸುತ್ತಿರುವುದೂ ,ಮದುವೆ ಆಗಬೇಕೆಂದು ಕೊಂಡಿರುವುದೂ ಗೊತ್ತಿತ್ತು.ಒಂದು ತಿಂಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಇತ್ತು ಸರ್............'ಎಂದು ಕಥೆ ನಿಲ್ಲಿಸಿ ,ಸ್ವಲ್ಪ ನೀರು ಕುಡಿದು ಗಂಟಲು ಸರಿಮಾಡಿ ಕೊಂಡ.ಕಣ್ಣಾಲಿಗಳು ತುಂಬಿ ಬಂದವು.

ಈಗ  ಒಂದು ತಿಂಗಳಿಂದ ಅವಳ ತಾಯಿ ಬದಲಾಗಿದ್ದಾರೆ.ನನಗಿಂತ ಒಳ್ಳೆಯ ಹುದ್ದೆಯಲ್ಲಿರುವ,ಎರಡರಷ್ಟು ಸಂಬಳ ತರುವ ,ಅವರದೇ ಜಾತಿಯ ಸುಂದರ ಹುಡುಗನ ಜೊತೆ ನನ್ನ ಹುಡುಗಿಯನ್ನು ಮದುವೆ ಆಗಲು ಬಲವಂತ ಮಾಡುತ್ತಿದ್ದಾರೆ.  ಆ ಹುಡುಗನ ಜೊತೆ ಮದುವೆಗೆ ಒಪ್ಪದೇ ,ಹೋದ ವಾರ ನನ್ನ ಹುಡುಗಿ ನಿದ್ದೆ ಗುಳಿಗೆಗಳನ್ನು  ನುಂಗಿ ಆಸ್ಪತ್ರೆಗೆ ಸೇರಿದ್ದಾಳೆ ಎಂದು ತಿಳಿದು ,ಒಂದು ವಾರ ರಜದ ಮೇಲೆ ಬಂದಿದ್ದೇನೆ ಸರ್.
 ನೆನ್ನೆ ನನ್ನ ತಂದೆ ತಾಯಿಯರನ್ನು ಅವರ ಮನೆಗೆ  ನಮ್ಮಿಬ್ಬರ ಮದುವೆಯ ಬಗ್ಗೆ ಮಾತು ಕತೆ ನಡೆಸಲು ಕರೆದುಕೊಂಡು ಹೋಗಿದ್ದೆ. ಅವರ ತಾಯಿ ನಮ್ಮೊಡನೆ ಬಹಳ ಕೆಟ್ಟದಾಗಿ ನಡೆದು ಕೊಂಡರು. ನಾನೇದರೂ ಅವಳನ್ನು ಮದುವೆ ಆದರೆ ಅವರು ನಮ್ಮ ಮನೆ ಮುಂದೆ ಬಂದು ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳುವುದಾಗಿ ಹೆದರಿಸಿದರು.ಬಾಯಿಗೆ ಬಂದಂತೆ ಕೂಗಾಡಿದರು.ನಮ್ಮ ಮನೆಯವರೆಲ್ಲಾ ಬಹಳವಾಗಿ  ನೊಂದುಕೊಂಡಿದ್ದಾರೆ.ಇದೆಲ್ಲಾ ಬೇಕಿತ್ತಾ?ಎನ್ನುತ್ತಿದ್ದಾರೆ 'ಎಂದು ಮಾತು ನಿಲ್ಲಿಸಿದ. ಸ್ವಲ್ಪ ಸಮಯ ಮೌನವಾಗಿದ್ದು 'ಈಗ ನಾನೇನು ಮಾಡಬೇಕು ಸರ್?ನನ್ನ ಸ್ನೇಹಿತರೆಲ್ಲಾ ನಾಳೆಯೇ ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಆಗಿಬಿಡು.ಆಮೇಲೆ ಏನಾಗುತ್ತೋ ನೋಡಿಕೊಳ್ಳೋಣ ಎನ್ನುತ್ತಿದ್ದಾರೆ'ಎಂದ.

'ಆ ರೀತಿ ಮದುವೆ ಆಗುವುದು ನಿನಗೆ ಸರಿ ಅನಿಸುತ್ತಾ..................?'ಎಂದೆ.
'ಇಲ್ಲಾ ಸರ್.ಅದ್ಯಾಕೋ ನನ್ನ ಮನಸ್ಸು ಒಪ್ಪುತ್ತಿಲ್ಲ.ನನಗೂ,ನನ್ನ ಹುಡುಗಿಗೂ  ಮದುವೆಯಾಗಬೇಕಾದ ತಂಗಿಯರಿದ್ದಾರೆ.ಈ ರೀತಿ ಮದುವೆ ಆದರೆ ನಾಳೆ ಅವರ ಮದುವೆಗೆ ತೊಂದರೆ ಆಗುವುದಿಲ್ಲವೇ ಸಾರ್? '.......ಎಂದ. 
'ನೀನು ಹೇಳುವುದು ಸರಿ.ನಿನ್ನ ಮನಸ್ಸು ಒಪ್ಪದ ಕೆಲಸವನ್ನು ಖಂಡಿತಾ ಮಾಡಬೇಡ'ಎಂದೆ.
'ನಿಮ್ಮ ಸಲಹೆ ಏನು ಸರ್....?'ಎಂದು ಕೇಳಿ ನನ್ನನ್ನೇ ನೋಡುತ್ತಾ ಕುಳಿತ.
'ನೋಡು ,ನನಗೂ ನಿನ್ನ ವಯಸ್ಸಿನ ಮಕ್ಕಳಿದ್ದಾರೆ.ನೀನು ಈ ರೀತಿ ನಾಳೆ ಮದುವೆಯಾಗಿ ನಿನ್ನ ಹುಡುಗಿಯನ್ನು ಇಲ್ಲೆಯೇ ಬಿಟ್ಟು  ಮಾರನೆ ದಿನವೇ ಅಮೇರಿಕಾಗೆ ಹೋಗುವುದು ಸರಿಯಲ್ಲ.ಮದುವೆ ಎನ್ನುವುದು ನಿಮ್ಮಿಬ್ಬರ ವೈಯಕ್ತಿಕ ವಿಷಯವಾದರೂ ಎರಡೂ ಕುಟುಂಬಗಳ ಒಪ್ಪಿಗೆ,ಒತ್ತಾಸೆ,ಇದ್ದರೆ ಒಳಿತು ಎನಿಸುತ್ತದೆ.ನಿನ್ನ ಹುಡುಗಿ ಮಾನಸಿಕವಾಗಿ ನಿನ್ನ ಜೊತೆ ಧೃಢವಾಗಿ  ನಿಲ್ಲ ಬೇಕು.ಬೇರೆ ಯಾರನ್ನೂ, ಯಾರದೇ ಬಲವಂತಕ್ಕೂ ,ಯಾವುದೇ ಕಾರಣಕ್ಕೂ  ಮದುವೆ ಆಗಲು  ಒಪ್ಪ ಬಾರದು. ಎರಡೂ ಮನೆಯವರನ್ನೂ  ಒಪ್ಪಿಸಿ ,ಆರು ತಿಂಗಳೋ, ಒಂದು ವರ್ಷವೋ  ತಡೆದು ಮದುವೆ  ಆಗುವುದು ಒಳಿತು.Rash decisions give rash results.ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನುನಿರ್ಧಾರ ನಿನ್ನ ಸ್ವಂತದ್ದು 'ಎಂದೆ.
'ನಿಮ್ಮ ಹತ್ತಿರ ಮಾತನಾಡಿದ ಮೇಲೆ ಮನಸ್ಸು ಎಷ್ಟೋ ಹಗುರವಾಯಿತು ಸರ್ ' ಎಂದು ಎದ್ದ.
'ನಾನು ಹೇಳಿದ್ದು ಎಷ್ಟು ಸರಿ..ಯಾವುದು ಸರಿ! ಯಾವುದು ತಪ್ಪು !' ಎನ್ನುವ ಜಿಜ್ಞಾಸೆ ನನ್ನನ್ನು ಕಾಡತೊಡಗಿತು.
ಬೈಕಿನಲ್ಲಿ  ಮನೆಯ ಹತ್ತಿರ ಡ್ರಾಪ್ ಮಾಡಿ ಹೋಗುತ್ತಿದ್ದ ಅವನನ್ನೇ ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ.ಭಾರ ಮನಸ್ಸಿನಿಂದ ಗೇಟು ತೆರೆದು ಮನೆ ಕಡೆ ಹೆಜ್ಜೆ ಹಾಕಿದೆ.

Monday, April 11, 2011

"ಮತ್ತಷ್ಟು..... ನಗು!"

(ನೆನ್ನೆ ಭಾನುವಾರ ಕನ್ನಡಪ್ರಭದಲ್ಲಿ ಬಂದ ಮತ್ತಷ್ಟು ಜೋಕುಗಳು.)
೧)ಬಾರ್ ನಲ್ಲಿ ಕಂಡ ಬೋರ್ಡ್;
All our waiters are married.They know how to take orders!
೨) ಬೆಂಗಳೂರಿನ ಖಾಸಗಿ ಸೈಟಿನಲ್ಲಿ ಕಂಡ ಬೋರ್ಡ್;
No tress passing without permission.
೩)ಕಾರನ್ನು ವಾಶ್ ಮಾಡುವ ಗ್ಯಾರೇಜ್ ಮುಂದಿನ ಬೋರ್ಡ್;
If you cannot read this,it is time to wash your car.
೪)ಸಿನೆಮಾ ಥಿಯೇಟರ್ ಮುಂದಿನ ಬೋರ್ಡ್;
CHILDREN'S SHOW TODAY.ADULTS ARE PERMITTED ONLY IF CARRYING CHILDREN.
೫)PIZZA HUT OPEN FROM TODAY. SORRY FOR THE  INCONVENIENCE.
೬)WANTED; A HAIR CUTTER.Excellent growth potential!   
೭)ಡ್ರೈ ಕ್ಲೀನರ್ ಅಂಗಡಿಯ ಮುಂದಿನ ಬೋರ್ಡ್;
ನಿಮ್ಮ ಬಟ್ಟೆಗಳನ್ನು ವಾಶಿಂಗ್ ಮಿಶಿನ್ ನಲ್ಲಿ ಹಾಕಿ ಹರಿದು ಹಾಕುವುದಿಲ್ಲ.ಅದನ್ನು ನಾವು ಕೈಯಲ್ಲೇ ಮಾಡುತ್ತೇವೆ.
೮)ನಾಯಿ ಮಾರಾಟಕ್ಕಿದೆ .ಏನನ್ನು ಕೊಟ್ಟರೂ ತಿನ್ನುತ್ತದೆ.ಮಕ್ಕಳೆಂದರೆ ತುಂಬಾ ಇಷ್ಟ!
೯)ಸಮಾಧಿ ಸಾಹಿತ್ಯ;ನೀನು ಸತ್ತು ನಮ್ಮ ಆತ್ಮಕ್ಕೆ ಶಾಂತಿ ಕಲ್ಪಿಸಿದಕ್ಕಾಗಿ ಚಿರ ಋಣಿ !
೧೦)ಮತ್ತೊಂದು ಸಮಾಧಿ ಸಾಹಿತ್ಯ;ನೀನು ಸತ್ತಿದ್ದು ಬಹಳ ದುಃಖಕರ.ಮತ್ತೆ ವಾಪಸ್ಸು ಬರಲಾರೆ ಎಂಬುದೇ  ಸಮಾಧಾನಕರ!       

Monday, April 4, 2011

"ನಕ್ಕು .....ಹಗುರಾಗೋಣ "

ಸಮಸ್ತ ಬ್ಲಾಗ್ ಬಾಂಧವರಿಗೂ ,ಎಲ್ಲಾ ಓದುಗರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.'ಖರ' ನಾಮ ಸಂವತ್ಸರ ಸಕಲ ಜನ ಸ್ತೋಮಕ್ಕೆ ಮಂಗಳವನ್ನುಂಟುಮಾಡಲಿ. ನೆನ್ನೆ 'ಕನ್ನಡ ಪ್ರಭದಲ್ಲಿ'ಬಂದ ವಿಶ್ವೇಶ್ವರ ಭಟ್ಟರ ,ಕೆಲ ಜೋಕುಗಳು ಇಲ್ಲಿವೆ. ಈ ಯುಗಾದಿ ಹಬ್ಬದಂದು ನೋವನ್ನೆಲ್ಲಾ ಮರೆತು ,ನಕ್ಕು ಹಗುರಾಗೋಣ ಬನ್ನಿ.
೧)ಹೇರ್ ಕಟಿಂಗ್ ಸಲೂನ್ ಮುಂದೆ ಕಾಣಿಸಿದ ಬೋರ್ಡ್;
ನಮ್ಮ ಬಿಸಿನೆಸ್ ಚೆನ್ನಾಗಿ ನಡೆಯಲು ನಿಮ್ಮ ತಲೆ ಬೇಕು.
೨)ಹೋಟೆಲಿನಲ್ಲಿ  ಕಾಣಿಸಿದ್ದು;
All drinking water in this hotel has been personally passed by the manager.
೩) ಆಸ್ಪತ್ರೆಯ ಪ್ರಸೂತಿ ಗೃಹದಲ್ಲಿ ಕಂಡ ಬೋರ್ಡ್;
No children allowed here.
೪)ಕಿರಾಣಿ ಅಂಗಡಿಯೊಂದರ ಮುಂದೆ ಇದ್ದ ಬೋರ್ಡ್;
ಬೇರೆ ಅಂಗಡಿಗಳಿಗೆ ಹೋಗಿ ಯಾಕೆ ಮೋಸ ಹೋಗುತ್ತೀರಾ? ನಮ್ಮ ಅಂಗಡಿಗೆ ಬನ್ನಿ.
೫)ಸಮಾಧಿಯ ಪ್ರವೇಶ ದ್ವಾರದಲ್ಲಿ ಕಂಡ ಬೋರ್ಡ್;
Persons are prohibited from picking flowers from any other grave other than their own grave!
೬)ಎಂಟು ವರುಷದ ಮಗನಿಗೆ ಉಗುರು ಕಡಿಯುವ ಚಟ. ನೆಂಟರೊಬ್ಬರ ಸಲಹೆಯಂತೆ ಹರಿದ್ವಾರದ ಯೋಗಾಶ್ರಮ ಒಂದರಲ್ಲಿ ಬಿಟ್ಟರು.ಒಂದು ತಿಂಗಳ ನಂತರ ನೆಂಟರು ಹುಡುಗನ ಬಗ್ಗೆ ವಿಚಾರಿಸಿದರು.'ಯೋಗಾಸನ ಕಲಿತ ಮೇಲೆ ಕೈಯ ಉಗುರು ಕಡಿಯುವುದನ್ನು ಬಿಟ್ಟಿದ್ದಾನೆ.ಯೋಗಾಸನ ಮಾಡುತ್ತಾ ಈಗ ಕಾಲಿನ ಉಗುರು ಕಡಿಯುತ್ತಾನೆ!'ಎಂದರು ಹುಡುಗನ ತಂದೆ!
೭)ರೋಗಿ; ಡಾಕ್ಟ್ರೆ ,ಯಾಕೆ ಎಲ್ಲರೂ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ ?
ಮನೋ ವೈದ್ಯ;NEXT,,,,,!

"ಲಕ್ಕಿ ರಂಗಣ್ಣ"


ನಾನು ಹಿಂದಿನ ಬ್ಲಾಗಿನಲ್ಲಿ ಬರೆದ ಲೇಖನದ ಹೀರೋ 'ಲಕ್ಕಿ ರಂಗಣ್ಣನವರು' ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೈ ಆದ ಮ್ಯಾಚಿನಲ್ಲಿ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿರುವ ಚಿತ್ರಗಳು. ಕ್ರಿಕೆಟ್ ಬಗ್ಗೆ ಇಂತಹ ಕೋಟ್ಯಾಂತರ ಅಭಿಮಾನಿಗಳ ಉತ್ಕಟ ಪ್ರೀತಿ,ನಾವು ವಿಶ್ವ ಕಪ್ ಗೆಲ್ಲಲಿ ಎಂಬ ಹಾರೈಕೆ,ಅದಕ್ಕೊಸ್ಕರ ತಾವು ಎಂತಹ ಕಷ್ಟ ಪಡಲು ಸಿದ್ಧರಾಗಿದ್ದುದು ,ಗೆದ್ದೇ ಗೆಲ್ಲುತ್ತಾರೆ ಎಂಬ ಅಚಲವಾದ ನಂಬಿಕೆ,ಎಲ್ಲವೂ ಸೇರಿ ಒಂದು ಬೃಹತ್ ಶಕ್ತಿಯಾಗಿ ನಮ್ಮ ಟೀಮಿಗೆ ಬೆನ್ನೆಲುಬಾಗಿ ನಿಂತು ನಮ್ಮ ಟೀಂ ವಿಶ್ವ ಕಪ್ ಗೆದ್ದಿದೆ ಎಂಬುದು ನನ್ನ ಅನಿಸಿಕೆ.ರಂಗಣ್ಣ ನಂತಹ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ,ವಿಶ್ವ ಕಪ್ ಕಿರೀಟ ವನ್ನು ತಮ್ಮ ಮುಡಿಗೇರಿಸಿಕೊಂಡ ನಮ್ಮ ಟೀಂ ಇಂಡಿಯಾಗೂ ಜೈ ಹೋ!!

Saturday, April 2, 2011

" ನೀ ಮಲಗಿದ್ದರೆ ......ಮ್ಯಾಚ್ ಗೆಲ್ತೀವಿ !!!

ಇವತ್ತು ವಿಶ್ವ ಕಪ್ ಕ್ರಿಕೆಟ್ಟಿನ ಫೈನಲ್ ಪಂದ್ಯ.ಇಡೀ ದೇಶಕ್ಕೇ ಕ್ರಿಕೆಟ್ಟಿನ ಸಮೂಹ ಸನ್ನಿ ಹಿಡಿದಿದೆ.ಪ್ರತಿಯೊಬ್ಬರಿಗೂ ತಾವೇ ಪಂದ್ಯ ಆಡುತ್ತಿರುವಷ್ಟು ಸಂಭ್ರಮ!ಎಲ್ಲರಿಗೂ ಈಗ ಕ್ರಿಕೆಟ್ ಹುಚ್ಚು!ಆದರೆ ಕೆಲವರಿಗೆ ಕ್ರಿಕೆಟ್ ಎಂದರೆ ಅತಿರೇಕದ ಪ್ರೀತಿ!!ಅಂಥವರಲ್ಲಿ ನಮ್ಮ ರಂಗಣ್ಣನೂ ಒಬ್ಬರು .ಕ್ರಿಕೆಟ್ಟೆಂದರೆ ಅವರಿಗೆ ಉಸಿರಿದ್ದ ಹಾಗೆ.ಆ ಒಂದು ಉತ್ಕಟ ಕ್ರಿಕೆಟ್ ಪ್ರೀತಿಯ ಜೊತೆ ಜೊತೆಗೇ ಅವರದೇ ಆದ ನಂಬಿಕೆಗಳೂ ಅಂಟಿಕೊಂಡಿವೆ.ಮೊನ್ನೆ ಪಾಕಿಸ್ತಾನ್ ವಿರುದ್ಧದ ಸೆಮಿ ಫೈನಲ್ ಪಂದ್ಯದ ದಿನ ಅವರ  ಮನೆಯಲ್ಲಿ ಆರಾಮವಾಗಿ ತಲೆಯ ಅಡಿ ಒಂದು ದಿಂಬು ಇಟ್ಟುಕೊಂಡು , ನೆಲದ ಮೇಲೆ ಮಲಗಿ ಟಿ.ವಿ.ಯಲ್ಲಿ ಮ್ಯಾಚ್ ವೀಕ್ಷಣೆ ಮಾಡುತ್ತಿದ್ದೆ.ರಂಗಣ್ಣ ತಮ್ಮ  ಲಕ್ಕಿ ಡ್ರೆಸ್ ಧರಿಸಿಕೊಂಡು ಸೋಫಾ ಖಾಲಿ ಇದ್ದರೂ ,ಸೋಫಾದ ಹಿಂದೆ ಒಂದು ಪ್ಲ್ಯಾಸ್ಟಿಕ್ ಸ್ಟೂಲ್ ಹಾಕಿಕೊಂಡು (ಅದು ಅವರ ಲಕ್ಕಿ ಸೀಟಂತೆ !)ಕುಳಿತು ಮ್ಯಾಚ್ ನೋಡುತ್ತಿದ್ದರು .ನಾನು ಮಲಗಿಕೊಂಡುಮ್ಯಾಚ್ ನೋಡುತ್ತಿದ್ದಾಗ ಸೆಹ್ವಾಗ್ ಬೌಂಡರಿ ಮೇಲೆ ಬೌಂಡರಿ ಬಾರಿಸ ತೊಡಗಿದ.ನೀರು ಕುಡಿಯೋಣವೆಂದು ನಾನು ಎದ್ದು ಕುಳಿತೆ.ನನ್ನ ದುರಾದೃಷ್ಟಕ್ಕೆ ಸೆಹ್ವಾಗ್ ಔಟಾಗಿ ಬಿಡಬೇಕೇ!!ನನ್ನ ಗ್ರಹಚಾರ ನೆಟ್ಟಗಿರಲಿಲ್ಲ !!"ನೀನು ಎದ್ದದ್ದಕ್ಕೇ ಸೆಹ್ವಾಗ್ ಔಟಾಗಿದ್ದು,ಮಲಗು, ಮಲಗು "ಎಂದರು  ರಂಗಣ್ಣ!! ಮ್ಯಾಚ್ ಇಡೀ ನಾನು ಅದೇ ರೀತಿ 'ಶ್ರೀ ರಂಗ ಪಟ್ಟಣದ ರಂಗನಾಥನ' ಪೋಸ್ ನಲ್ಲಿ ಮಲಗಿಯೇ ಇರಬೇಕಾಯಿತು!!ಮಧ್ಯದಲ್ಲಿ ಲ್ಯಾಂಡ್ ಲೈನಿಗೆ ಫೋನ್ ಬಂತು ಎಂದು ರಂಗಣ್ಣ ತಮ್ಮ ಲಕ್ಕಿ ಸೀಟು ಬಿಟ್ಟು ಎದ್ದು ಹೋಗಬೇಕಾಯಿತು.ಎದ್ದು ಹೋದ ತಕ್ಷಣ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮೇಲೆ ಮೇಲೆ ಔಟಾದರು."ಥೂ !!!ನಾನು ಈ ಸೀಟು ಬಿಟ್ಟಿದ್ದಕ್ಕೇ ಮಾರಾಯ ವಿಕೆಟುಗಳು ಹೀಗೆ ಬಿದ್ದಿದ್ದು'ಎಂದು ಫೋನ್ ಮಾಡಿದವರಿಗೆ ಹಿಡಿ ಶಾಪ ಹಾಕಿ,ತಮ್ಮ ಲಕ್ಕಿ ಸೀಟಿನ ಮೇಲೆ ಕುಳಿತರು.ಮ್ಯಾಚ್ ಮುಗಿಯುವವರೆಗೂ ತಮ್ಮ  ಲಕ್ಕಿ ಸೀಟ್ ಬಿಟ್ಟಿದ್ದರೆ ಕೇಳಿ!ಕೊನೆಗೂ ಟೀಮ್ ಇಂಡಿಯಾಗೆ ಜಯ ಸಿಕ್ಕಿದಾಗಲೇ ರಂಗಣ್ಣ ನೆಮ್ಮದಿಯ ನಿಟ್ಟುಸಿರು ಹಾಗೂ ತಮ್ಮ ಲಕ್ಕಿ ಸೀಟ್ ಬಿಟ್ಟಿದ್ದು!!! ನಿಮಗೂ ಈ ರೀತಿಯ ಅನುಭವಗಳಾಗಿವೆಯೇ?ನಮ್ಮೆಲ್ಲರೊಡನೆ ನೀವೂ ಹಂಚಿಕೊಳ್ಳಿ.ನಮಸ್ಕಾರ.