Monday, August 30, 2010

"ನೂರು ಗ್ರಾಂ -ಗೋಡಂಬಿ !"

ನ್ನ ಮಗರಾಯ ಆಗಿನ್ನೂ ಒಂದನೇ ತರಗತಿಯಲ್ಲಿದ್ದ.ಅವನ ಅಮ್ಮ ಅವನ ಕೈಯಲ್ಲಿ ಹತ್ತಿರದಲ್ಲಿದ್ದ ಅಂಗಡಿಯಿಂದ ಸಣ್ಣ ಪುಟ್ಟ ಸಾಮಾನುಗಳನ್ನುತರಿಸುತ್ತಿದ್ದಳು.ಚಿಲ್ಲರೆಯನ್ನೂ,ಸಾಮಾನುಗಳನ್ನೂ ಜೋಪಾನವಾಗಿ ತರುತ್ತಿದ್ದ.ಅವರಮ್ಮನಿಗೆ ಅವನ ಜಾಣತನದ ಮೇಲೆ ಸಾಕಷ್ಟು  ನಂಬಿಕೆ ಇತ್ತು.ಯಾವುದೋ ಹಬ್ಬಕ್ಕೆ ಬೇಕೆಂದು ಅವನ ಕೈಯಲ್ಲಿ ದುಡ್ಡು ಕೊಟ್ಟು ನೂರು ಗ್ರಾಂ ಗೋಡಂಬಿ ತರಲು ಅಂಗಡಿಗೆ ಕಳಿಸಿದಳು.ಮಗರಾಯ ವಾಪಸ್ ಬಂದಾಗ ಕೋನ್ ಆಕಾರದಲ್ಲಿ ದಾರದಿಂದ ಸುತ್ತಿದ್ದ ಪೇಪರ್ ಪೊಟ್ಟಣ ಹಾಗೇ ಇತ್ತು!ನನ್ನ ಹೆಂಡತಿ ಪೊಟ್ಟಣ ಬಿಚ್ಚಿ ನೋಡಿ ಗಾಭರಿಯಾದಳು.ಏಕೆಂದರೆ ,ಆ ಪೊಟ್ಟಣದಲ್ಲಿ ಇದ್ದದ್ದು ಒಂದೇ ಒಂದು ಗೋಡಂಬಿ! 'ಇದೇನೋ ದೀಪೂ!ನೂರು ಗ್ರಾಂ ತಾ ಎಂದರೆ ,ಒಂದೇ ಒಂದುಗೋಡಂಬಿ ತಂದಿದ್ದೀಯಾ!ಎಲ್ಲಾದರೂ ಬೀಳಿಸಿಕೊಂಡು ಬಂದೆಯೇನೋ ?'ಎಂದು ಕೇಳಿದಳು.ಮಗರಾಯ ಕೂಲಾಗಿ 'ಇಲ್ಲಮ್ಮಾ,ಪೊಟ್ಟಣದ ಕೆಳಗೆ ತೂತು ಮಾಡಿ ಮೊದಲು ಒಂದೇ ಒಂದು ಗೋಡಂಬಿ ತಿಂದೆ.ಆಮೇಲೆ ತಿಂತಾನೆ ಇರಬೇಕು ಅನ್ನಿಸಿತು 'ಎಂದು ಉತ್ತರ ಕೊಟ್ಟು ತುಂಟ ನಗೆನಕ್ಕ ! ಅವನಮ್ಮ ಏನು ಮಾಡಬೇಕೋ ತೋಚದೆ,ಕಣ್ಣು ಕಣ್ಣು ಬಿಟ್ಟಳು!

Saturday, August 28, 2010

'ಒಲುಮೆಯ ಹೂವೇ!ನೀ ಹೋದೆಎಲ್ಲಿಗೆ?'

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ ಬಹಳ 
ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ ನಾನು ನನಗೆ ಪ್ರಿಯವಾದ 
'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .
ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು.ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಅವರನ್ನು ನೋಡಲು ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.
'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ,ನನಗೋಸ್ಕರ ಒಂದು  ಸಲ  ಆ ಹಾಡು ಹಾಡಿ ಬಿಡಿ ಸರ್ ' ಎಂದರು!
ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು  ಅನಿವಾರ್ಯವಾಗಿ ಹಾಡಲೇ ಬೇಕಾಯಿತು.
ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!
'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ 
ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ  ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕ 
ನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.
  

Thursday, August 26, 2010

"ಇಲಿಗಳಿಗೇನು ತಿಂಡಿ ?"

1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ,ಹೊಸನಗರ ತಾಲೂಕಿನ,ಚಕ್ರಾನಗರದ ಕೆ.ಪಿ.ಸಿ.ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದೆ.ನಾವು ಇದ್ದ ಮನೆ ಶೀಟುಗಳ ಸೂರುಳ್ಳ ಮನೆಯಾಗಿತ್ತು.ವಿಪರೀತ ಇಲಿಗಳ ಕಾಟ.ಇಲಿಗಳು ಎಲ್ಲೆಂದರಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದವು.ಇಲಿಗಳನ್ನು ಹುಡುಕಿಕೊಂಡು ಎಲ್ಲಾ ತರದ ಹಾವುಗಳೂ ಬರುತ್ತಿದ್ದವು.ಎರಡು  ಮೂರು ಸಲ ನಾಗರ ಹಾವುಗಳು ಸೂರಿನಲ್ಲಿ ಸೇರಿಕೊಂಡು ,ಶೀಟುಗಳನ್ನೇ ತೆಗೆಯಬೇಕಾಗಿ ಬಂತು.ಮಲೆನಾಡು ಅಷ್ಟಾಗಿ ಪರಿಚಯವಿರದ ನಮಗೆ ಪಜೀತಿಯೋ ಪಜೀತಿ.ಮಕ್ಕಳು ಇನ್ನೂ ಸಣ್ಣವರಿದ್ದರು.ಮಗ ಮೂರನೇ ತರಗತಿಯಲ್ಲಿದ್ದರೆ ,ಮಗಳು ಎಲ್.ಕೆ.ಜಿ.ಯಲ್ಲಿದ್ದಳು.ಹಾವಿನ ಹೆದರಿಕೆಯಿಂದ ರಾತ್ರಿಯೆಲ್ಲಾ ನಿದ್ರೆ ಬರದೆ ಸೂರು ನೋಡುತ್ತಾ ಮಲಗುವುದೇ ಆಗುತ್ತಿತ್ತು.
ಈ ಇಲಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಎರಡು ಇಲಿ ಬೋನುಗಳನ್ನು ತಂದು ,ಅದರಲ್ಲಿ ಚಪಾತಿ ತುಂಡು,ಕೊಬ್ಬರಿ ತುಂಡುಗಳನ್ನಿಟ್ಟು,ಬೋನುಗಳನ್ನು ಬೇರೆ ಬೇರೆ ಜಾಗದಲ್ಲಿಟ್ಟೆ.ಏನಿಟ್ಟರೂ ಬೋನಿಗೆ ಇಲಿಗಳಂತೂ ಬೀಳುತ್ತಿರಲಿಲ್ಲ ! ಯಾರೋ' ಇಲಿಗಳಿಗೆ ಕರಿದ ತಿಂಡಿ ಅಂದರೆ ಇಷ್ಟ!ಬಜ್ಜಿ ,ಬೋಂಡ ಮಾಡಿ ಬೋನಿನಲ್ಲಿ ಇಡಿ ಸರ್ 'ಎಂದರು. ಸರಿ ಅಂದಿನಿಂದ ದಿನಾ ಸಂಜೆ ನನ್ನ ಹೆಂಡತಿ ಇಲಿಗಳಿಗಾಗಿ ಕರಿದ ತಿಂಡಿ ಮಾಡಲು ಶುರು ಮಾಡಿದಳು!ಒಂದು ದಿನ ಮೆಣಸಿನಕಾಯಿ ಬಜ್ಜಿಯಾದರೆ,ಮತ್ತೊಂದು ದಿನ ಆಲೂ ಬೋಂಡಾ !ಮಕ್ಕಳಿರುವ ಮನೆ .ಸ್ವಲ್ಪ ಮಾಡಿದರೆ ಆಗುತ್ತೆಯೇ?ಮಕ್ಕಳಿಗೂ ಇರಲಿ ಅಂತ ಹೆಚ್ಚಾಗಿಯೇ ಮಾಡುತ್ತಿದ್ದಳು.ಇಲಿಯ ಹೆಸರಿನಲ್ಲಿ ನಮಗೆಲ್ಲಾ ದಿನವೂ ತರ ತರದ ಕರಿದ ತಿಂಡಿಗಳ ಹಬ್ಬ!
ನನ್ನ ಮಗ ಸ್ಕೂಲಿನಿಂದ ಬಂದ ತಕ್ಷಣ ,ಬ್ಯಾಗ್ ಬಿಸಾಡಿ ,'ಅಮ್ಮಾ ಇವತ್ತು ಇಲಿಗೆ ಏನು ತಿಂಡಿ?'ಎಂದು ಕೇಳಲು ಶುರು ಮಾಡಿದ!ನಾನೂ ತಮಾಷೆಗೆ ಆಗಾಗ 'ಏನೇ ಇವತ್ತು ಇಲಿಗೆ ಏನು ವಿಶೇಷ?'ಎಂದು ಕೇಳುತ್ತಿದ್ದೆ.ಒಂದೆರಡು ಸಲ ಬೋನಿಗೆ ಬಿದ್ದ ಇಲಿಗಳು ಹುಶಾರಾದವು!ಅದು ಹೇಗೋ ತಿಂಡಿ ಮಾತ್ರ ತಿಂದು ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದವು! ಕರಿದ ತಿಂಡಿ ತಿಂದೂ ತಿಂದೂ,ಇಲಿಗಳ ಜೊತೆಗೇ ನಾವೂ ಗುಂಡಗಾದೆವು!

Tuesday, August 24, 2010

"ಕೋಣನ ಕುಂಟೆಯ ಕಿಂದರ ಜೋಗಿ!!"

ಇವನ  ದಿನನಿತ್ಯದ  ಒಡನಾಟ  ,
ಇಟ್ಟಿಗೆ ಸಿಮೆಂಟಿನ ಜೊತೆಯಾದರೂ ,
ಇವನು -------ಸಾಮಾನ್ಯನಲ್ಲ!
ಇಂವ ---------------------,
ಸ್ನೇಹ ಲೋಕದ ,ಮಾಂತ್ರಿಕ!!
ಬ್ಲಾಗ್ ಲೋಕದ ಗಾರುಡಿಗ!!

ಕೋಣನ ಕುಂಟೆಯಲ್ಲೇ ಕುಳಿತು 
ಮಾಡಿದ ನೋಡಿ ,ಮೋಡಿ!!
ಯಾಂತ್ರಿಕ ಜೀವನಕ್ಕೆ ಬೇಸತ್ತು ,
ಬಳಲಿ,ಬೆಂಡಾಗಿ,ಬಸವಳಿದ ಜೀವವ,
ಕೈ ಬೀಸಿ,ಕರೆದಿತ್ತು -----------,
ಇವನೂದಿದ ಸ್ನೇಹದ -----,
ಮೋಹನ  ಮುರಳಿ !

ಕೆಲಸವನೆಲ್ಲ ಬದಿಗೊತ್ತಿ ,
ಓಡಿದೆವು ನಾವೆಲ್ಲಾ 
'ಬೃಂದಾವನ'ನಗರಕ್ಕೆ !
'ನಯನ'ಸಭಾಂಗಣಕ್ಕೆ.
ನಕ್ಕು ,ನಲಿಯುವುದಕ್ಕೆ!
ಸ್ನೇಹ  ಸುಧೆಯ ---------,
ಮೊಗೆ ಮೊಗೆದು ಕುಡಿಯುವುದಕ್ಕೆ!


ಈ ಗಾರುಡಿಗ ಸಾಮಾನ್ಯನಲ್ಲ!
ಇವನ ಸ್ನೇಹ  ಆಕಾಶ!
ನಮ್ಮ ನರ ನಾಡಿಗಳಲ್ಲೂ 
ಅದು ವಿದ್ಯುತ್ತಾಗಿ ಹರಿದು 
ನಮ್ಮ ಬದುಕೂ 'ಪ್ರಕಾಶ'!!!

Monday, August 23, 2010

' ಖುಷಿಯ -ಕ್ಷಣಗಳು !!'




ಎಲ್ಲರ ಹಲ್ಲುಗಳೂ ಹೇಗೆ ಮಿಂಚುತ್ತಿವೆ ನೋಡಿ!.........ಫಳ...ಫಳ ...ಅಂತಾ ! ಯಾವುದೋ ....ಟೂತ್ ಪೇಸ್ಟಿಗೆ advertisement ಕೊಟ್ಟ ಹಾಗೆ!!! ಎಲ್ಲರಿಗೂ ಏನೋ ಖುಷಿ !!ಏನೋ ಆನಂದ !! ಅದನ್ನು ಬಣ್ಣಿಸೋದು ಹೇಗೆ?
ಏನೂ ನಿರೀಕ್ಷಣೆ  ಇಟ್ಟುಕೊಳ್ಳದೆ,ಎಲ್ಲರ ಸಂತೋಷವನ್ನು ತಾನೂ ಅನುಭವಿಸಿದಾಗ ಸಿಗುವ ಸಂತೋಷವೇ 
ನಿಜವಾದ ಸಂತೋಷ ಅಂತ ಅನಿಸುತ್ತದೆ.ಈ ಸಂತೋಷ ನಿನ್ನೆ 'ನಯನ'ಸಭಾಂಗಣದಲ್ಲಿ  ಶಿವೂ ಮತ್ತು ಆಜಾದ್ ರವರ 
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಮ್ಮೆಲ್ಲರ ಅನುಭವ.ಈ ಕಾರ್ಯ ಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟು ,ನಮ್ಮೆಲ್ಲರ 
ಸಂತೋಷಕ್ಕೆ ಕಾರಣರಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.

Thursday, August 19, 2010

'ಬೇಸಿಗೆಯ -ತಂಗಾಳಿ'

ನಾ  ಇರ ಬಯಸುತ್ತೇನೆ ಹೀಗೇ !
ಬೇಸಿಗೆಯ ತಂಗಾಳಿಯಂತೆ!
ಅಲ್ಲಿ ಇಲ್ಲಿ ಸುತ್ತಿ ಸುಳಿದು ,
ಅಬ್ಬರಿಸದೇ ,ಬೊಬ್ಬಿರಿಯದೇ,
ಹಿತವಾಗಿ ಬೀಸಿ ----------,
ಬೆಂದ ಮನಗಳ ತಣ್ಣಗಾಗಿಸಿ ,
ನೊಂದ ಮನಗಳಿಗೆ ಮುಲಾಮಾಗಿ,
ಸ್ನೇಹಿತರಿಗೆ ಸಲಾಮಾಗಿ ,
ಮಾಗಿ,ತೂಗಿ,ಮಾತಿನಲ್ಲಿ ,
ಬಿರಿದ ಮನಸುಗಳ ಬೆಸೆಯುತ್ತಾ,
ಸ್ನೇಹಗಳ ಹೊಸೆಯುತ್ತಾ,
ಮುದದಿಂದ ಬೀಸುತ್ತಾ ,
ರೋಗಿಗಳಿಗೆ ಪ್ರಾಣವಾಯುವಾಗಿ,
ಸಕಲರಿಗೆ ಸಹಜ ಉಸಿರಾಟವಾಗಿ ,
ಅಬ್ಬರವಿರದೇ,ಆಡಂಬರವಿರದೇ,
ಹಿತವಾಗಿ,ಮಿತವಾಗಿ ಬೀಸಿ,
ಸದ್ದಿಲ್ಲದೇ ಮರೆಯಾಗ ಬಯಸುತ್ತೇನೆ ,
ಗೊತ್ತೇ -------ಆಗದಂತೆ !
ಇರಲೇ -------ಇಲ್ಲವೆಂಬಂತೆ!!
ಬೇಸಿಗೆಯ ------ತಂಗಾಳಿಯಂತೆ!!!

Tuesday, August 17, 2010

'ಸ್ನೇಹದಲ್ಲಿ ಇರೋ ಸುಖ ಗೊತ್ತೇಇರಲಿಲ್ಲ'

ಸ್ನೇಹದಲ್ಲಿ,ಅದೂ ಬ್ಲಾಗ್ ಸ್ನೇಹದಲ್ಲಿ ,ಇಂತಹ ಸುಖ,ಸಂತೋಷ,ಆನಂದ ಇದೆಯೆಂದು ,ನಿಜಕ್ಕೂ ಗೊತ್ತಿರಲಿಲ್ಲ! ಓಹ್!! ಅದು ಕನಸೇ ?ಎಂದು ಮೈ ಚಿವುಟಿ ನೋಡಿಕೊಳ್ಳು ವಂತಾಗುತ್ತದೆ !ನಿಜಕ್ಕೂ this is not an exaggeration .ಆಗಸ್ಟ್ 14  ಮತ್ತು 15 ನಿಜಕ್ಕೂ ನನ್ನ  ಜೀವನದಲ್ಲಿ ಬಹಳ ದಿನ ನೆನಪಿನಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ.ಡಿ.ವಿ.ಜಿ.ಯವರ  ಮಂಕು ತಿಮ್ಮನ ಕಗ್ಗದಲ್ಲಿ ಒಂದು ಕವನ ಹೀಗಿದೆ;

ಒಮ್ಮೆ ಹೂದೋಟದಲಿ,ಒಮ್ಮೆ ಕೆಳೆ ಕೂಟದಲಿ
ಒಮ್ಮೆ ಸಂಗೀತದಲಿ ,ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ,ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿ ಯಾಗೋ ಮಂಕು ತಿಮ್ಮ .

'ಕೆಳೆ ಕೂಟದಲಿ'ಎಂದರೆ ಸ್ನೇಹಿತರ ಜೊತೆಯಲ್ಲಿ ಬ್ರಹ್ಮಾನುಭವಿ ಯಾಗುವುದು ಹೇಗೆಂದು ಅರ್ಥ ವಾಗಿರಲಿಲ್ಲ.ಆದರೆ ಆ ಮಾತುಗಳು ಈ ಎರಡು ದಿನದಲ್ಲಿ ಅನುಭವಕ್ಕೆ ಬಂತು ಎಂದು ಧೈರ್ಯವಾಗಿ ಹೇಳಬಲ್ಲೆ.ಈ ಒಂದು ಆನಂದದ ಅನುಭವ ನನಗೆ ಹಿಂದೆಂದೂ ಸಿಕ್ಕಿರಲಿಲ್ಲವೆಂದು ಖಂಡಿತವಾಗಿ ಹೇಳಬಹುದು.
ಆಗಸ್ಟ್ ಹದಿನಾಲ್ಕರನಂದು ನಾನು,ನಾಭಿ ಬ್ಲಾಗಿನ ನಾರಾಯಣ್ ಭಟ್,ಇಟ್ಟಿಗೆ ಸಿಮೆಂಟು ಬ್ಲಾಗಿನ ನಮ್ಮೆಲ್ಲರ ಮೆಚ್ಚಿನ ಪ್ರಕಾಶಣ್ಣ ,ಮನದಾಳದಿಂದ ಬ್ಲಾಗಿನ ಪ್ರವೀಣ್ ಗೌಡ ,ಈ ನಾಲ್ಕು ಜನ ಸಪ್ನಾ ಬುಕ್ ಹೌಸಿನಲ್ಲಿ ಮಧ್ಯಾಹ್ನ  ಸುಮಾರು ಹನ್ನೆರಡು ಗಂಟೆಯ ವೇಳೆಗೆ ಭೇಟಿಯಾದೆವು .ಪ್ರಕಾಶಣ್ಣ ಅವರ ಸೂಜಿಗಲ್ಲಿನಂತಹ ವ್ಯಕ್ತಿತ್ವ ಯಾರನ್ನಾದರೂ ಮೋಡಿ ಮಾಡಿ ಬಿಡುತ್ತದೆ.ಅವರ ಮಾತು,ಹಾಸ್ಯ ,ಆತ್ಮೀಯತೆ ,ಸ್ನೇಹ ನಮ್ಮನ್ನೆಲ್ಲ ಮಂತ್ರ ಮುಗ್ಧರನ್ನಾಗಿ  ಮಾಡಿತ್ತು!ಸುಮಾರು ಆರು ಗಂಟೆಗಳ ಕಾಲ ,ಮಾತು ,ನಗು,ಹರಟೆ .ನಗು,ಮತ್ತಷ್ಟು -----ಇನ್ನಷ್ಟು ನಗು.ಅದು ಕೊಟ್ಟ ಆನಂದವನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಅವರ ಮನೆಯವರು ತೋರಿದ ಆದರ ಮತ್ತು ಆಥಿತ್ಯಕ್ಕೆ ನಾನು ಚಿರ ಋಣಿ .ಮರು ದಿನ ಸಿಕ್ಕವರು ವಿ.ಆರ್.ಭಟ್,ಪರಾಂಜಪೆ,ನಾಗರಾಜ್.ಕೆ.,ಮತ್ತು ಪ್ರವೀಣ್ ಗೌಡ.ಇವರೆಲ್ಲರ ಮುಗ್ಧ,ಸ್ನಿಗ್ಧ ಸ್ನೇಹಕ್ಕೆ ಯಾವುದು ಸಾಟಿ? ಓ ದೇವರೇ ,ನಿನ್ನ ಗಣಿಯಲ್ಲಿ ಎಂತೆಂತಹ ರತ್ನಗಳು!ಎಂದು ಮನದಲ್ಲೇ ವಂದಿಸಿದೆ.  ವಿ.ಆರ್.ಭಟ್ಟರು ಜ್ಞಾನದ ಸಾಗರ!
ಮೊಗೆದಷ್ಟೂ ಇದೆ ಅವರಲ್ಲಿರುವ ಜ್ಞಾನದ ಗಂಗೆ!ಅವರ ಜ್ಞಾನ ಭಂಡಾರಕ್ಕೆ ಮೂಕ ವಿಸ್ಮಿತನಾಗಿದ್ದೆ.ಪರಾಂಜಪೆ ಅದ್ಭುತ ಸ್ನೇಹ ಜೀವಿ!ಮಿತ ಭಾಷಿ.ಹೆಚ್ಚು ಮಾತನಾಡದೆ observe ಮಾಡುತ್ತಾ sponge ನಂತೆ ಎಲ್ಲವನ್ನೂ absorb ಮಾಡುತ್ತಿದ್ದರು!ಇನ್ನು ನಾಗರಾಜ್ ಮತ್ತು ಪ್ರವೀಣ್ ನನ್ನ ಮಗನ ವಯಸ್ಸಿನ ಹುಡುಗರು.ಅವನಂತೆಯೇ ಈ ಕಣ್ಮಣಿಗಳು ನನ್ನ  ಹೃದಯಕ್ಕೆ ತುಂಬಾ ಹತ್ತಿರವಾದರು!ಅವರ ಮನಸ್ಸುಗಳು ಮುಂಜಾನೆಯ ಮಂಜಿನ ಹನಿಗಳಂತೆ ಸುಂದರ!ಅವರ್ಣನೀಯ! ಮನೆಗೆ ಬಂದಾಗ ,ಜಿ.ಎಸ್.ಶಿವ ರುದ್ರಪ್ಪ ಅವರ ಈ ಗೀತೆ ನೆನಪಾಯಿತು;

ಎಲ್ಲೋ ಹುಡುಕಿದೆ ,ಇಲ್ಲದ ದೇವರ
ಕಲ್ಲು ಮಣ್ಣು ಗಳ  ಗುಡಿಯೊಳಗೆ !
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ !

ಈ ರೀತಿಯ ಸ್ನೇಹವನ್ನೂ ,ಸಂತೋಷವನ್ನೂ ,ಆನಂದವನ್ನೂ ಕೊಟ್ಟು ,ಡಿ.ವಿ.ಜಿ.ಯವರು ಹೇಳಿದಂತೆ 'ಕೆಳೆ ಕೂಟದ' ಬ್ರಹ್ಮಾನು ಭವವನ್ನು
ಮಾಡಿಸಿದಂತಹ ಬ್ಲಾಗಿನ ಸ್ನೇಹಿತರಾದ  ಪ್ರಕಾಶಣ್ಣ,ವಿ.ಆರ್.ಭಟ್,ಪ್ರವೀಣ್ ,ಪರಾಂಜಪೆ,ಎನ್.ಆರ್.ಭಟ್,ಮತ್ತು ನಾಗರಾಜ್ ,ಇವರೆಲ್ಲಾ
ನೂರು ವರುಷ ಸುಖದಿಂದ,ಸಂತೋಷದಿಂದ ,ಹೀಗೇ ನಗು ನಗುತ್ತಾ ಬಾಳಲಿ ಎಂದು ಆ ದೇವನಲ್ಲಿ ನನ್ನ ಪ್ರಾರ್ಥನೆ.

Friday, August 13, 2010

'ನನಗಾಗಿಯಾದರೂ ------ನೀ ತಣ್ಣಗಿರು'

ಹಲವಾರು ಜನ ತಮ್ಮ ಜೀವನದಲ್ಲಿ ಕೆಲ ವ್ಯಕ್ತಿಗಳನ್ನು ಎಷ್ಟೊಂದು ದ್ವೇಷಿಸುತ್ತಾರೆಂದರೆ ಆ ವ್ಯಕ್ತಿಗಳನ್ನು ನೆನಸಿಕೊಂಡರೆ ಇವರ ರಕ್ತ ಕುದಿಯ ತೊಡಗುತ್ತದೆ.'Forget and forgive'ಎನ್ನುವುದು ಒಣ ವೇದಾಂತವಲ್ಲ.ಇವು ನಮ್ಮನ್ನು ನಾವು ದೈಹಿಕವಾಗಿ ,ಮಾನಸಿಕವಾಗಿ ಆರೋಗ್ಯವಾಗಿ ಇಟ್ಟುಕೊಳ್ಳುವ ಸೂತ್ರ! ದ್ವೇಷ ,ಅಸೂಯೆ ,ಇವೇ ಮುಂತಾದವು ನಮ್ಮನ್ನು ಒಳಗೊಳಗೇ ಸುಟ್ಟು ಹಾಳು ಮಾಡುತ್ತವೆ.ಇದಕ್ಕೆ ವ್ಯತಿರಿಕ್ತವಾಗಿ ಪ್ರೀತಿ,ಸ್ನೇಹ ,ವಿಶ್ವಾಸಗಳಂತಹ ಸದ್ಭಾವನೆಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.ಹಲವಾರು ಜನ ಈ ರೀತಿ ನರಳುತ್ತಿರುವುದನ್ನು ನೋಡಿ ,ಪ್ರೇರಿತವಾದ ಕವನ ಇದು ;
'ನನಗಾಗಿಯಾದರೂ --ನೀ --ತಣ್ಣಗಿರು !' 

ನಾನು ನಿನ್ನ ಮನಸಾ ದ್ವೇಷಿಸಿ ,
ಶತಬಾರಿ-------------  ಶಪಿಸಿ, 
ಹಿಡಿ ಶಾಪ-------------- ಹಾಕಿ ,
ನಿನ್ನ------- ಮರೆಯ ಬೇಕೆಂದು
ಶತ ಪ್ರಯತ್ನ----- ಮಾಡಿದರೂ ,
ನೀನು ರಕ್ತಬೀಜಾಸುರನಂತೆ ,
ನನ್ನ ನೆನಪಲ್ಲಿ ಮತ್ತೆ ಮತ್ತೆ ಹುಟ್ಟಿ ,
ನನ್ನಲೇ ------------ಚಿಗಿತು!
ಕವಲು ಕವಲಾಗಿ ಟಿಸಿಲೊಡೆದು !
ನನ್ನ ನರ ನಾಡಿಗಳಲ್ಲಿ ಬೆಳೆದು !
ರಕ್ತ ಮಾಂಸ ಗಳಲ್ಲಿ ಬೆರೆತು !
ನನ್ನೊಳಗೇ ಹೆಮ್ಮರವಾಗಿ,
ನನ್ನಿರವನ್ನೇ----- ಆಕ್ರಮಿಸಿ ! 
ನನ್ನ ಉಪಶಾಂತಿಯನ್ನೇ ನುಂಗಿ!
ನೀನು ಖಳನಂತೆ ನಗುವ ನಗು ,
ಕೋಶ ಕೋಶದಲ್ಲಿ ಮಾರ್ದನಿಸಿ ,
ಬದುಕು ನನಗೆ-------- ನರಕ! 
ಆದ್ದರಿಂದ ,ನನಗಾಗಿಯಾದರೂ ,
ನೀನು-------- ತಣ್ಣಗಿರಲೆಂದು,
ಮನಸಾ -------ಹಾರೈಸುತ್ತೇನೆ!
ಆಗ -----------ನೀನೆಲ್ಲೋ 
ನನ್ನೊಳಗಿನ ಮೂಲೆಯೊಂದರಲ್ಲಿ ,
ಆರಿದ ಕೆಂಡವಾಗಿ ತಣ್ಣಗಿರುತ್ತಿ!
ಸುಡದೆ --------ಸುಮ್ಮನಿರುತ್ತಿ!
ಅದರಿಂದ------ನನಗೂ ,ನಿನಗೂ,
ಸರ್ವರಿಗೂ ---------ನೆಮ್ಮದಿ!

Tuesday, August 10, 2010

'ಸೂರ್ಯ -ಕಿರಣ '



ರಾತ್ರಿಯೆಲ್ಲಾ -----------,
ನಿದ್ದೆಯ ಹಾಸಿಗೆಯಲ್ಲಿ
ಕನಸಿನ ಛಾದರ
ಹೊದ್ದು ಮಲಗಿ ---,
ಬೆಳಗಾಗೆದ್ದು ------,
ಛಾದರ ಒದ್ದು ,
ಕಣ್ಣು ಬಿಟ್ಟಾಗ,
ಕಿಟಕಿಯ ಸಂದಿಯಿಂದ
ಸೂರ್ಯ -------,
ಕಣ್ಣು ಮಿಟುಕಿಸಿ ,
ರಾತ್ರಿಯೆಲ್ಲಾ ----,
ನೀನೀಕಡೆ ನಿದ್ದೆ !
ಆಕಡೆ  ನಾನಿದ್ದೆ !
ಎಂದು ನಕ್ಕು ,
ಹೊಳೆವ ಕಿರಣಗಳ ,
ಹಲ್ಲು ಬಿಟ್ಟ !

Sunday, August 8, 2010

'ಬಾಳ -ಗುಡಿ'

ಬಾಳು ಬೀಳಾಗುವುದು ಬೇಡ !
ಪಾಳು ಗುಡಿಯಾಗಿ ,
ಬಾವಲಿಗಳು ತೂರಾಡಿ ,
ಕಸ ಕಡ್ಡಿ ,ಜೊಂಡು ಬೆಳೆದು,
ತೊಂಡು ಮೇಯುವ ,
ಪುಂಡು ದನಗಳ ,
ಬೀಡಾಗುವುದೂ ಬೇಡ! 
ಜ್ಞಾನವೆಂಬ ಪೊರಕೆಯಲ್ಲಿ 
ಅಜ್ಞಾನದ ಕಸ ಗುಡಿಸಿ ,
ದ್ವೇಷ ರೋಷಗಳ ಕಳೆ ಕಿತ್ತು 
ಪ್ರೀತಿ ಜ್ಯೋತಿಯ ಬೆಳಗಿಸಿ ,
ಸ್ನೇಹವೆಂಬ ಕಂಬಗಳ ನೆಟ್ಟು ,
ಸಚ್ಚಾರಿತ್ರದ ಸುಣ್ಣ ಬಳಿದು , 
ನಲ್ ನುಡಿಗಳ ಮಂತ್ರಘೋಶ 
ಕೇಳಿ ಬರುತಿರಲಿ ಎಂದೂ !
ಕರುಣಾಮೃತದ  ತೀರ್ಥವದು 
ದೊರಕುತಿರಲಿ ಎಂದೆಂದೂ!

Friday, August 6, 2010

'ಎಲೆಲೇಲೆ -------ರಸ್ತೇ!!!'

ಎಲೆಲೇಲೆ ---------ರಸ್ತೇ !
ಏನೀ -------ಅವ್ಯವಸ್ಥೆ !!?
ಮೈಮೇಲೆಲ್ಲಾ ---ಹಳ್ಳ!
ಮಳೆ ಬಂದ್ರೆ -----ಕೊಳ್ಳ !
ದಾಟ ಬೇಕಂದ್ರೆ ನಿನ್ನ 
ಈಜ್  ಬರಬೇಕು ಮುನ್ನ!
ಅಪರೂಪಕ್ಕೆ ಮರಮ್ಮತ್ತು!
ಹಣ ನುಂಗೋ ಮಸಲತ್ತು!
ಲಾರಿ ಅನ್ನೋ ದೆವ್ವ !
ಮೈಮೇಲ್ ಬಂತಲ್ಲವ್ವಾ!
ಪಕ್ಕದಲ್ ಒಂದಷ್ಟು ಕಲ್ಲು!
ರಿಪೇರಿಯೆಲ್ಲಾ ಮಳ್ಳು!
ಟೆಲಿಫೋನ್ ನವರು ಅಗೆದು !
ಡ್ರೈನೇಜ್ ನವರು ಬಗೆದು!
ನಿನ್ನ ರೂಪ ಕೆಡಿಸಿ !
ಪ್ಯಾಚ್ ವರ್ಕ್ ಸೀರೆ ಉಡಿಸಿ!
ಹೊಡೆದರು ಕೋಟಿ,ಕೋಟಿ!
ನಿನ್ ಹೆಸರಲ್ಲಿ ಲೂಟಿ!
ಎಲೆಲೇಲೆ -------ರಸ್ತೇ!
ಏನೀ ----------ಅವ್ಯವಸ್ಥೆ !
ನಿನ್  ಹಾಗೇ ಈ  ವ್ಯವಸ್ಥೆ !
ಬರೀ ---------ಅವ್ಯವಸ್ಥೆ!


Wednesday, August 4, 2010

"ಮಕ್ಕಳು"

CHILDREN ;
Your children are not your children.
They are the sons and daughters of
Life longing for itself.
They come through you but not
from you.,And though they are with you ,
yet they belong not to you .
           KHALIL GIBRAN (1883-1931)
           (The Prophet)
     
             ' ಮಕ್ಕಳು '
ಮಕ್ಕಳು -------------------!
ಇವರು   ಜೀವ ಜಾಲದ ----- ,
ಅನಂತ ಸಾಧ್ಯತೆಗಳ ಒಕ್ಕಲು !
ನಮ್ಮ ಮೂಲಕವೇ ಹರಿದರೂ ,
ಈ ನಿರಂತರ ಜೀವ ವಾಹಿನಿ ,
ನಮ್ಮಿಂದ ಬಂದಿದ್ದಲ್ಲ---------!
ನನ್ನಜ್ಜ ,ಮುತ್ತಜ್ಜ,ಮೂಲಜ್ಜರೆಲ್ಲಾ ,
ನನ್ನ ಮಕ್ಕಳ ಮೂಲಕ ಹರಿದು ,
ನಾಳೆ ಅವರ ಮೊಮ್ಮಕ್ಕಳು,
ಮರಿ , ಮರಿಮಕ್ಕಳಲ್ಲೂ -----,
ಹರಿ ಹರಿದು ಬರುತ್ತಿರುತ್ತಾರೆ!
ಆ ಕಾಣದ ಬಿಲ್ಲು ಗಾರ,
ನಮ್ಮ ದೇಹವ ಬಿಲ್ಲಾಗಿಸಿ ---,
ಅನಂತದತ್ತ ಬಿಟ್ಟ ಬಾಣಗಳು ಅವರು!
ಅವರಿಗೆ ನಿಮ್ಮ ಪ್ರೀತಿ ಕೊಡಿ ,
ಅವರಂತೆ ಅವರು ಅರಳಲು ಬಿಡಿ!
ಸಾಧ್ಯವಾದರೆ ನಾವು ಅವರಂತೆ ,
ನಿತ್ಯ ನೂತನವಾಗೋಣ-------!
ಅವರನ್ನು ನಮ್ಮಂತೆ--------,
ಹಳತಾಗಿಸುವುದ ----ಬಿಡೋಣ !
ಜೀವ ಪ್ರವಾಹ ಹರಿಯಲಿ ಮುಂದಕ್ಕೆ !
ಕಾಲ ಚಲಿಸುವುದಿಲ್ಲ ಹಿಂದಕ್ಕೆ !

(ಇದು ನನ್ನ ಬ್ಲಾಗಿನ 75 ನೇ ಪ್ರಕಟಣೆ.ನಾನು ಬ್ಲಾಗ್ ಶುರು ಮಾಡಿದ್ದು 2010 february ಯಲ್ಲಿ.ನನಗೆ ಬ್ಲಾಗ್ ಲೋಕದ ಪರಿಚಯವೇ ಇರಲಿಲ್ಲ..ನನ್ನ ಆತ್ಮೀಯ ಸ್ನೇಹಿತ ನಾರಾಯಣ ಭಟ್ಟರ ಸ್ನೇಹ ಪೂರ್ವಕ ಒತ್ತಾಸೆ ಇಲ್ಲದಿದ್ದರೆ ನಾನು ಬ್ಲಾಗ್ ಶುರು ಮಾಡುತ್ತಿರಲಿಲ್ಲ.ಅವರಿಗೆ ನನ್ನ ಕೃತಜ್ಞತೆಗಳು.ನನ್ನ ಬ್ಲಾಗ್ ಶುರು ಮಾಡಿಕೊಟ್ಟವರು ನನ್ನ ಪತ್ನಿ ಪದ್ಮ ಮತ್ತು ಮಗಳು ಪಲ್ಲವಿ.ನನಗೆ ಮೊದ ಮೊದಲು ಟೈಪ್ ಮಾಡಲೂ ಬರುತ್ತಿರಲಿಲ್ಲ.ತನ್ನೆಲ್ಲಾ ಮನೆ ಕೆಲಸದ ನಡುವೆ ನನ್ನ ಕಿರಿಕಿರಿಯನ್ನೂ ಸಹಿಸಿಕೊಂಡು ಸುಮಾರು ಬರಹಗಳನ್ನು ಬ್ಲಾಗಿಸಿದ ನನ್ನ ಅರ್ಧಾಂಗಿಗೆ ನನ್ನ ನಮನಗಳು.ಇನ್ನು ,ಕಾಣದ ನನ್ನಲ್ಲಿ ಇಷ್ಟೊಂದು ಸ್ನೇಹ,ಪ್ರೀತಿ ಅಭಿಮಾನಗಳನ್ನು ತೋರಿಸಿ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ ಎಲ್ಲಾ ಸಹಬ್ಲಾಗಿಗರಿಗೂ ಅನಂತ ವಂದನೆಗಳು.)

Sunday, August 1, 2010

'ನಡು ವಯಸ್ಸು'

'ನಡು ವಯಸ್ಸು' ಎಂದರೆ 
ನಡು ಭಾಗ ಸೇಬಿನಂತಾಗಿ !
ತಿನ್ನದಿದ್ದರೂ ತೇಗುವಂತಾಗಿ!
ನಡೆಯುವುದೇ ಪ್ರಯಾಸವಾಗಿ !
ಕಾರಣವಿಲ್ಲದೇ ಆಯಾಸವಾಗಿ !
ಬಿ.ಪಿ,ಶುಗರ್ರು --------,
ಬೆಲೆಗಳಂತೆ ಗಗನಕ್ಕೇರಿ 
ಹಿಡಿತಕ್ಕೇ ಸಿಗದಂತಾಗಿ !
ಮಕ್ಕಳು ಮಾತು ಕೇಳದೇ
ಬರೀ ರೇಗುವಂತಾಗಿ---- ,
ಸಂಗಾತಿಗೆ ಬದುಕು ------,
ಸುಖವಿಲ್ಲದೆ ಏಗುವಂತಾಗಿ!
ಮೊದಲಿನ ಮಿಂಚಿನ ಓಟ ಹೋಗಿ 
ಬದುಕು ತೆವಳುತ್ತಾ ಸಾಗಿ !
ಅಂತಾಗಿ,ಇಂತಾಗಿ,ಎಂತೋ ಆಗಿ 
ಕೊನೆಗೆ ಮಧ್ಯ ವಯಸ್ಸು
ಮನೆ ಮಂದಿಗೆಲ್ಲಾ  ಸಾಕಾಗಿ ,
ತಲೆ ಚಿಟ್ಟು ಹಿಡಿಸುವ --------,
ಕಾ, ಕಾ ,ಎನ್ನುವ -----ಕಾಗಿ !

(ಇದು ನಡುವಯಸ್ಸಿನ ಒಂದು ವಿಡಂಬನಾತ್ಮಕ ಚಿತ್ರಣವಷ್ಟೇ.ಆದರೆ ಇದಕ್ಕೆ ಅಪವಾದ ಎಂಬಂತೆ ಅರವತ್ತರಲ್ಲೂ ಹರೆಯದವರನ್ನೂ  ನಾಚಿಸುವಂತಹ ಆರೋಗ್ಯ ಮತ್ತು ಅಂಗ ಸೌಷ್ಠವ ಇರುವವರೂ ಇದ್ದಾರೆ.ಎಲ್ಲರ ಜೊತೆ ಹೊಂದಿಕೊಂಡು ಸೊಗಸಾದ ಬಾಳ್ವೆ ನಡೆಸುತ್ತಿರುವವರೂ ಇದ್ದಾರೆ.ಎಲ್ಲರ ಬಾಳೂ ಹಸನಾಗಲಿ  ಎನ್ನುವ ಹಾರೈಕೆ ನನ್ನದು.ನಮಸ್ಕಾರ .)