Monday, April 30, 2012

"ಉಸಿರಾಟದ ಬಗ್ಗೆ ಸ್ವಲ್ಪಗಮನ ಹರಿಸಿ"

ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಹರಿಸುವುದಿಲ್ಲ.ಅದು ನಮ್ಮ ಗಮನಕ್ಕೆ ಬರದೆ ತನ್ನ ಪಾಡಿಗೆ ತಾನು ನಡೆಯುವ ಕ್ರಿಯೆ.ನಾವು ಸಾಮಾನ್ಯವಾಗಿ ಮಾಡುವ ಉಸಿರಾಟ(Thoracic breathing) ನಮ್ಮ ಶ್ವಾಶ ಕೋಶಗಳ ಮೇಲಿನ ಸ್ವಲ್ಪ ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಕೆಳ ಭಾಗದ ಶ್ವಾಸ ಕೋಶದ ಬಹಳಷ್ಟು ಪುಟ್ಟ ಪುಟ್ಟ ಗಾಳಿಯ ಚೀಲಗಳು (alveoli or air sacks) ತೆರೆದುಕೊಳ್ಳುವುದೇ ಇಲ್ಲ ! ನಮ್ಮ ಗಡಿಬಿಡಿಯ ದಿನಚರಿಯಲ್ಲಿ ನಮಗೆ ಸರಿಯಾಗಿ ಉಸಿರಾಡಲೂ ಪುರಸೊತ್ತಿಲ್ಲ!! ಬಹಳಷ್ಟು ರೋಗಗಳನ್ನು ಸರಿಯಾದ ಉಸಿರಾಟದಿಂದ ಗುಣ ಪಡಿಸಬಹುದು ಎನ್ನುವುದು ಬಹಳಷ್ಟು ವೈದ್ಯರ ಅಭಿಮತ.ದೀರ್ಘ ಉಸಿರಾಟದಲ್ಲಿ ಉಸಿರನ್ನು ಒಳಕ್ಕೆ ಎಳೆದು ಕೊಂಡಾಗ (Abdominal breathing) ವಪೆ ಅಥವಾ Diaphragm ಹೊಟ್ಟೆಯ ಭಾಗವನ್ನು ಕೆಳಕ್ಕೆ ತಳ್ಳಿ ಉಬ್ಬುವಂತೆ ಮಾಡುತ್ತದೆ. ಉಸಿರನ್ನು ಹತ್ತು ಎಣಿಕೆಯವರಗೆ ಹಾಗೆಯೇ ಎದೆಯ ಒಳಗೆ ಹಿಡಿದಿಟ್ಟುಕೊಂಡು,ನಂತರ ನಿಧಾನವಾಗಿ ಹೊರಗೆ ಬಿಡಿ(ಹೃದಯದ ತೊಂದರೆ ಇರುವವರು ಉಸಿರನ್ನು ಹಿಡಿದು ಇಟ್ಟು ಕೊಳ್ಳುವುದು ಅಥವಾ 'ಕುಂಭಕ'ದ ಬಗ್ಗೆ ತಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು).ನಮ್ಮ ಸಾಮಾನ್ಯವಾದ ಉಸಿರಾಟ ಹನ್ನೆರಡರಿಂದ ಹದಿನೈದರವರಗೆ ಇರುತ್ತದೆ. ನಿಧಾನವಾಗಿ ಮೇಲೆ ಹೇಳಿದ ರೀತಿಯ ಉಸಿರಾಟದಿಂದ ನಿಮಿಷಕ್ಕೆ ಮೂರರಿಂದ ನಾಲಕ್ಕು ಸಲ ಉಸಿರಾಟವಾಗುತ್ತದೆ. ಈ ರೀತಿಯ ಹತ್ತರಿಂದ ಹದಿನೈದು ನಿಮಿಷ ಉಸಿರಾಟದಿಂದ ಎಷ್ಟೋ ಉಪಯೋಗಗಳಿವೆ! ಕೋಶಗಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಲ್ಲದೆ ,ಅರಿವಿನಿಂದ ಉಸಿರಾಟ ನಡೆಸುವುದರಿಂದ ನೀವು ಈ ಕ್ಷಣದಲ್ಲಿ ಇರುತ್ತೀರಿ !You are in the present moment! ಆ ಸಮಯದಲ್ಲಿ ನಿಮ್ಮನ್ನು ಬೇಡದ ಚಿಂತೆಗಳು,ಆಲೋಚನೆಗಳು ಕಾಡುವುದಿಲ್ಲ.ಸರಿಯಾದ ಉಸಿರಾಟದಿಂದ ಎಷ್ಟೊಂದು ಉಪಯೋಗಳಿವೆ ಅಲ್ಲವೇ? ನೀವು ಈಗಾಗಲೇ ಪ್ರಾಣಾಯಾಮ ಮಾಡುತ್ತಿದ್ದರೆ ನಿಮಗೆ ಸರಿಯಾದ ಉಸಿರಾಟದ ಉಪಯೋಗ ಗೊತ್ತೇ ಇದೇ. ನಮ್ಮ ಪ್ರಾಣ ದಾಯಕ ಉಸಿರಿನ ಬಗ್ಗೆ ಇನ್ನಾದರೂ ಸ್ವಲ್ಪ ಗಮನ ಹರಿಸೋಣವೇ?

Tuesday, April 24, 2012

"ನನ್ನ ಜೀವನದಲ್ಲಿ ಹೀಗೊಬ್ಬ ಹೀರೋ !!!"

ಇದು ಸುಮಾರು ಹತ್ತು ವರುಷಗಳ ಹಿಂದೆ ನಡೆದ ನನ್ನ ಸ್ನೇಹಿತರೊಬ್ಬರ ಕಥೆ.ಅವರ ಹೆಸರು ಇಲ್ಲಿ ಅಪ್ರಸ್ತುತ.ಆದರೆ ಅವರದು ಎಂತಹ ಅದ್ಭುತ ವ್ಯಕ್ತಿತ್ವವೆಂದರೆ ,ಅದನ್ನು ಬಣ್ಣಿಸಲು ನನ್ನ ಶಬ್ಧ ಭಂಡಾರ ಸಾಲದು !ಸುಮಾರು ನಲವತ್ತೈದು ವರ್ಷಗಳಷ್ಟು ವಯಸ್ಸಾಗಿದ್ದರೂ ಅವರ ಜೀವನೋತ್ಸಾಹ ಎಳ್ಳಷ್ಟೂ ಕುಗ್ಗಿರಲಿಲ್ಲ!ಸದಾ ಚಟುವಟಿಕೆಯಿಂದ,ಲವಲವಿಕೆಯಿಂದ ಪುಟಿಯುತ್ತಿದ್ದ ವ್ಯಕ್ತಿ.ಆಫೀಸಿಗೆ ಹೋಗುವ ಮುಂಚೆ ಮತ್ತು ಆಫೀಸಿನಿಂದ ಬಂದ ನಂತರ ಪಿ.ಯು.ಸಿ.ಹುಡುಗರಿಗೆ ಉಚಿತವಾಗಿ ಪಾಠ ಹೇಳುತ್ತಿದ್ದರು.ಅವರಿದ್ದಲ್ಲಿ ಹಾಸ್ಯ ,ನಗು!ಉತ್ಸಾಹ ಭರಿತ ಜೋರು ದನಿ.ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದೆ. ನನ್ನ ಹಿಂದೆ ಹೊಚ್ಚ ಹೊಸ ಸ್ಯಾಂಟ್ರೋ ಕಾರೊಂದು ನಿಂತಿತು.'ಬನ್ನಿ ಡಾಕ್ಟ್ರೆ...... ನನ್ನ ಹೊಸಾ ಕಾರು ಹೇಗಿದೆ ,ಡ್ರೈವ್ ಮಾಡಿ ನೋಡಿ' ಎಂದು ಕರೆದರು.'ಅಯ್ಯೋ ಬೇಡ ಬಿಡೀ ಸರ್ ,ಇನ್ನೂ ಅಷ್ಟು ಸರಿಯಾಗಿ ಡ್ರೈವಿಂಗ್ ಬರುವುದಿಲ್ಲಾ.ಹೊಸಾ ಕಾರುಬೇರೆ !',ಎಂದು ಹೇಳಿ ಮುನ್ನಡೆದೆ.'ಹೋ ...ಹೋ ..ಡಾಕ್ಟರ್ ಆಗಿ ಇಷ್ಟೊಂದು ಭಯ ಪಟ್ಟರೆ ಹೇಗೆ ಸರ್?'ಎಂದು ಜೋರಾಗಿ ನಗುತ್ತಾ,ಡ್ರೈವ್ ಮಾಡಿಕೊಂಡು ಮುಂದೆ ಹೋದರು. ಇದಾದ ಎರಡು ತಿಂಗಳಿಗೆ ಯಾರದೋ ಮದುವೆಗೆ ರಾಯಚೂರಿನಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ತಾವೇ ಡ್ರೈವ್ ಮಾಡುತ್ತಾ ತಮ್ಮ ಮನೆಯವರೊಂದಿಗೆ ಹೊರಟರು.ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಿರುವೊಂದರಲ್ಲಿ ಅಕಸ್ಮಾತ್ತಾಗಿ ಎದುರಿಗೆ ಬಂದ ಲಾರಿಯೊಂದನ್ನು ತಪ್ಪಿಸಲು ಹೋಗಿ ಕಾರು ಪಕ್ಕದಲ್ಲಿದ್ದ ಸುಮಾರು ಹತ್ತು ಅಡಿ ಆಳದ ಹಳ್ಳಕ್ಕೆ ಪಲ್ಟಿ ಹೊಡೆಯಿತು.ಇವರು 'ಸೀಟ್ ಬೆಲ್ಟ್ 'ಹಾಕಿರದೆ ಇದ್ದದ್ದರಿಂದ ಕಾರಿನಿಂದಾಚೆ ಎಸೆಯಲ್ಪಟ್ಟರು.ಮಿಕ್ಕವರೆಲ್ಲಾ ಸೀಟ್ ಬೆಲ್ಟ್ ಹಾಕಿದ್ದರಿಂದ ಕಾರಿನಲ್ಲೇ ಇದ್ದರು. ಇವರು ಎದ್ದು ಕಾರಿನಲ್ಲಿದ್ದವರಿಗೆ ಸಹಾಯ ಮಾಡಬೇಕೆಂದು ಏಳಲು ಪ್ರಯತ್ನಿಸಿದರೂ ಏಳಲಾಗಲಿಲ್ಲ.ಕಾರಿನಲ್ಲಿದ್ದ ಇತರರಿಗೆ ಹೆಚ್ಚೇನೂ ಪೆಟ್ಟಾಗಿರಲಿಲ್ಲ.ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸೊಂಟದ ಮೇಲು ಭಾಗದಲ್ಲಿ spinal chord injury ಆಗಿತ್ತು.ಆಪರೇಶನ್ ಮಾಡಿದರೂ ಪ್ರಯೋಜನವಾಗಲಿಲ್ಲ.ಸೊಂಟದ ಕೆಳ ಭಾಗದಲ್ಲಿ ಅವರಿಗೆ ಯಾವುದೇ,ಚಲನೆಯಾಗಲೀ ,ಸ್ಪರ್ಶ ಜ್ಞಾನ ವಾಗಲೀ ಇರಲಿಲ್ಲ.ಮೂತ್ರವನ್ನು ತಾವೇ 'catheter' pass ಮಾಡಿಕೊಂಡು ತೆಗೆದುಕೊಳ್ಳಬೇಕು! ಕೈಗೆ glove ಹಾಕಿಕೊಂಡು ತಮ್ಮ ಮಲವನ್ನೂ ತಾವೇ ಹೊರತೆಗೆಯಬೇಕಾದ ಪರಿಸ್ಥಿತಿ. ಅವರು ಹೋಗದ ಆಸ್ಪತ್ರೆಯಿಲ್ಲ.ಮಾಡದ ವೈದ್ಯವಿಲ್ಲ.ಪಕ್ಕಾ ಆಶಾವಾದಿ.ಮನೆಯಲ್ಲಿಯೇ ಎರಡು ಮೂರು ತಾಸು paralyse ಆದ ಭಾಗಕ್ಕೆ physio therapy exercises ಮಾಡುತ್ತಿದ್ದರು.ಎರಡು ಮೂರು ತಿಂಗಳಲ್ಲಿಯೇ ಮತ್ತೆ ಅವರ ಚೈತನ್ಯ ಪೂರ್ಣ ನಗು ಮುಖದಲ್ಲಿ ಕಾಣಿಸಿಕೊಂಡಿತ್ತು.ಆಫೀಸಿಗೆ ವೀಲ್ ಚೇರಿನಲ್ಲಿ ಹೊಗಿಬರತೊಡಗಿದರು. ಈಗಲೂ ಅವರ physical condition ಹಾಗೆಯೇ ಇದೆ .ಆಗ ಟೆಂತ್ ಓದುತ್ತಿದ್ದ ಮಗ ಈಗ ಸ್ವತಹ ವೈದ್ಯ ನಾಗಿದ್ದಾನೆ. ನಾನು ಆ ಊರಿನಿಂದ ವರ್ಗವಾಗಿ ಬಂದು ಏಳು ವರ್ಷಗಳಾದವು.ಇತ್ತೀಚಿಗೆ ಅವರ ಫೋನ್ ಬಂದಾಗ ಅವರ ಮಾಮೂಲು ಚೈತನ್ಯ ಪೂರ್ಣ ಜೋರು ದನಿಯಲ್ಲಿ ಅವರು "ಇಲ್ಲೇ ಬಂದು ಬಿಡಿ ಡಾಕ್ಟ್ರೆ......... I MISS YOU A LOT ! " ಎಂದಾಗ ನನ್ನ ಕಣ್ಣಂಚಿನಲ್ಲಿ ನೀರಿತ್ತು. ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Friday, April 20, 2012

"ಸಾಮಾನ್ಯರಲ್ಲೊಬ್ಬ ಅಸಾಮಾನ್ಯ !!!"

ಸುಮಾರು ಎಂಟು  ತಿಂಗಳಿಂದ ಅವನನ್ನು ನೋಡುತ್ತಿದ್ದೆ .ವಯಸ್ಸು ಸುಮಾರು ನಲವತ್ತರ ಆಸುಪಾಸು ಇರಬಹುದು.ಪ್ರತಿದಿನವೂ  ಸಂಜೆ ವಾಕಿಂಗ್ ಹೋಗುವಾಗ  ರಸ್ತೆಯಲ್ಲಿ ಸಿಗುತ್ತಿದ್ದ.ಒಂದು ದಿನವೂ ತಪ್ಪಿಸುತ್ತಿರಲಿಲ್ಲ.ಛಳಿಯಿರಲಿ ,ಮಳೆ ಇರಲಿ ,ಬೇಸಿಗೆ ಇರಲಿ ಅವನು ರಸ್ತೆಯಲ್ಲಿ ಕಾಣಿಸುತ್ತಿದ್ದ.ಕೆಲವೊಮ್ಮೆ ಬೆಳಗಿನ ಜಾವ ನಾನು ಕಾರಿನಲ್ಲಿ ಹೋಗುವಾಗ ಅವನು ನಿಧಾನವಾಗಿ ನಡೆಯುತ್ತಾ ಹೋಗುವುದು ಕಾಣಿಸುತ್ತಿತ್ತು.ಅವನು ತನ್ನ ಎಡ ಕೈಯನ್ನು  ಬಲ ಕೈಯಿಂದ ಹಿಡಿದು ಕೊಂಡು ,ಎಡಗಾಲನ್ನು ಎಳೆಯುತ್ತಾ ನಿಧಾನವಾಗಿ  ಸಾಗುವುದನ್ನು ಕಂಡರೆ ಅವನ ದೇಹದ ಎಡ ಭಾಗ ಪಾರ್ಶ್ವ ವಾಯುವಿನಿಂದ ಪೀಡಿತವಾಗಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು.ಅವನ ದೃಢ ನಿರ್ಧಾರ ,ಛಲ,ದೇಹವನ್ನು ಕಷ್ಟಪಟ್ಟು ಎಳೆದಾಡಿಕೊಂಡು ಸಾಗುವ ರೀತಿ ,ಮನ ಕಲಕುವಂತಿತ್ತು.ವಾಕಿಂಗ್ ಮಾಡಲು ಆಲಸ್ಯವಾದಾಗಲೆಲ್ಲಾ ಅವನನ್ನು ನೆನಸಿಕೊಂಡರೆ,ಆಲಸ್ಯವೆಲ್ಲಾ ಓಡಿ  ಹೋಗುತ್ತಿತ್ತು.ಸ್ಟ್ರೋಕ್ ಆಗಿರುವ ಅವನೇ ಒಂದು ದಿನವೂ ತಪ್ಪಿಸದಿರುವಾಗ ನನಗೇನು ಧಾಡಿ ಎಂದು ಕೊಂಡು ವಾಕಿಂಗ್ ಹೊರಡುತ್ತಿದ್ದೆ.
ಅವನು ಯಾರೋ ,ಏನೋ ,ಪರಿಚಯವಿರಲಿಲ್ಲ.ನೆನ್ನೆ ನಾನೂ ನನ್ನ ಜೊತೆ ವಾಕಿಂಗ್ ಬರುವ ಸ್ನೇಹಿತರೂ ಅವನನ್ನು ಮಾತನಾಡಿಸಿದಾಗ ಅವನ ವಿಷಯ ಕೇಳಿ ಮಾತೇ ಹೊರಡಲಿಲ್ಲ!!ಅವನೊಬ್ಬ ಗಾರೆ ಕೆಲಸ ಮಾಡುವ ಮೇಸನ್ ಆಗಿದ್ದ.ಸುಮಾರು ಒಂದು ವರ್ಷಗಳ ಕೆಳಗೆ ದೇಹದ ಎಡ ಭಾಗಕ್ಕೆ'ಸ್ಟ್ರೋಕ್'(ಪಾರ್ಶ್ವ ವಾಯು)ಆಗಿ ದೇಹದ ಎಡ ಭಾಗ ಸಂಪೂರ್ಣ ನಿಷ್ಕ್ರಿಯವಾಗಿತ್ತು.ಎರಡು ತಿಂಗಳು ಮನೆಯಲ್ಲಿ ಮಲಗಿದ್ದಲ್ಲೇ ಮಲಗಿದ್ದ.ನಂತರ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕಷ್ಟಪಟ್ಟು ನಡೆಯಲು ಶುರು ಮಾಡಿದ.ಈಗ ದಿನಾ ಬೆಳಿಗ್ಗೆ ನಾಲಕ್ಕು ಗಂಟೆಗೆ ಮನೆ ಬಿಡುತ್ತಾನೆ.ಸುಮಾರು ಆರು ಕಿ.ಮಿ.ನಡೆಯುತ್ತಾನೆ!ಸಂಜೆ ಸುಮಾರು ಎರಡರಿಂದ ಮೂರು ಕಿ.ಮಿ.ನಡೆಯುತ್ತಾನೆ!ಸಾಕಷ್ಟು ಸುಧಾರಿಸಿದ್ದೇನೆ ಎನ್ನುತ್ತಾನೆ.ಇನ್ನಾರು ತಿಂಗಳಿಗೆ ಸಂಪೂರ್ಣ ಗುಣವಾಗಿ ಕೆಲಸಕ್ಕೆ ಹಿಂದಿರುಗುವ ಭರವಸೆ ಅವನಿಗಿದೆ.ಹಠಾತ್ತಾಗಿ ಎರಗಿ ಬಂದ ದೌರ್ಭಾಗ್ಯಕ್ಕೆ ಅಳುತ್ತಾ,ಕೊರಗುತ್ತಾ ಕೂರದೇ,ಛಲದಿಂದ ಹೋರಾಡುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?ಇಂತಹ ಸಾಮಾನ್ಯರಿಂದಲೂ ನಾವು ಕಲಿಯ ಬೇಕಾದ ಅಸಾಮಾನ್ಯ ಗುಣಗಳು ಸಾಕಷ್ಟಿವೆ ಎನಿಸುವುದಿಲ್ಲವೇ? ನಿಮ್ಮ ಅನಿಸಿಕೆ ತಿಳಿಸಿ

Tuesday, April 10, 2012

"ಯಾರಾದರೂ ನಮ್ಮತ್ತ ಚಪ್ಪಲಿ ಎಸೆದರೆ?"

ನಾವು ಯಾರನ್ನಾದರೂ ಭೇಟಿ ಯಾದಾಗ ಅವರು ನಮ್ಮತ್ತ ತಮ್ಮ ಚಪ್ಪಲಿ ಎಸೆದಾಗ ನಮಗೆಷ್ಟು ಅವಮಾನವಾಗಬಹುದು ಎನ್ನುವುದನ್ನು ನೆನೆಸಿ ಕೊಳ್ಳಲೂ ಸಾಧ್ಯವಿಲ್ಲ.ಅವಮಾನದಿಂದ,ಕೋಪದಲ್ಲಿ ನಾವೂ ಅಂತಹುದೇ ಯಾವುದೋ ಎಡವಟ್ಟುಕೆಲಸವನ್ನು ಮಾಡುವ ಸಾಧ್ಯತೆಯೇ ಹೆಚ್ಚು.ಆದರೆ ಅಂತಹ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಅದನ್ನೂ ಜಾಣ್ಮೆಯಿಂದ ಉಪಯೋಗಿಸಿಕೊಂಡ ಮಹನೀಯರೊಬ್ಬರ ಉಲ್ಲೇಖ ಇಂದಿನ 'ಕನ್ನಡ ಪ್ರಭ'ದಿನಪತ್ರಿಕೆಯಲ್ಲಿದೆ. ಪಂಡಿತ ಮದನ ಮೋಹನ ಮಾಳವೀಯರು ೧೯೧೬ ರಲ್ಲಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ವಂತಿಗೆ ಹಣ ಕೇಳಲು ಜನರ ಬಳಿ ಹೋಗುತ್ತಿದ್ದರು.ಹೈದರಾಬಾದಿನಲ್ಲಿ ಅಂದಿನ ನಿಜಾಮರ ಬಳಿ ಹೋದಾಗ,ಅವರ ಭಂಡ ಧೈರ್ಯ ಕಂಡು ನಿಜಾಮರು ಸಿಟ್ಟಿನಿಂದ ಅವರತ್ತ ತಮ್ಮ ಚಪ್ಪಲಿ ಬಿಸುಟರು.ಮಾಳವೀಯರು ಸ್ವಲ್ಪವೂ ಸಿಟ್ಟಿಲ್ಲದೆ, ಆ ಒಂಟಿ ಚಪ್ಪಲಿಯನ್ನೇ ತೆಗೆದು ಕೊಂಡು ಹೊರ ಹೋದರು.ಮಾರನೇ ದಿನ ಹೈದರಾಬಾದಿನ ಪ್ರಮುಖ ಬೀದಿಯಲ್ಲಿ, ನಿಜಾಮನ ಒಂಟಿ ಚಪ್ಪಲಿಯನ್ನೇ ಹರಾಜಿಗಿಟ್ಟರು!ಈ ವಿಷಯ ನಿಜಾಮರಿಗೂ ತಿಳಿದು, ಹರಾಜಿನಲ್ಲಿ ತಮ್ಮ ಚಪ್ಪಲಿ ಕಡಿಮೆ ಬೆಲೆಗೆ ಮಾರಾಟವಾದರೆ ತಮಗೇ ಅವಮಾನ ವಾಗುತ್ತದೆ ಎಂದು, ತಮ್ಮವರೊಬ್ಬನನ್ನು ಕಳಿಸಿ ಆ ಒಂಟಿ ಚಪ್ಪಲಿಯನ್ನು ಹೆಚ್ಚಿನ ಬೆಲೆಗೆ ಕೊಂಡು ಕೊಂಡರಂತೆ !ನಮ್ಮ ಹಿರಿಯರ ಜಾಣ್ಮೆ ನಿಜಕ್ಕೂ ಮೆಚ್ಚುವಂತಹುದು !!! ಅಲ್ಲವೇ? (ಆಧಾರ;ಇಂದಿನ 'ಕನ್ನಡ ಪ್ರಭ' ದಿನಪತ್ರಿಕೆ)

Saturday, April 7, 2012

"ಔಷಧಿಯಿಲ್ಲದೆ ಆರೋಗ್ಯ ಸಾಧ್ಯವಿಲ್ಲವೇ?"

ಇಂದು ವಿಶ್ವ ಅರೋಗ್ಯ ದಿನಾಚರಣೆ.ನಿರಾಳವಾಗಿ ಇರುವವರು ಅಪರೂಪವೇನೋ ಎನ್ನುವವಷ್ಟು ಸರ್ವೇ ಸಾಮಾನ್ಯವಾಗಿ ಬಹಳಷ್ಟು ಜನ ಏನೋ ಮಾನಸಿಕ ಒತ್ತಡದಲ್ಲಿರುವಂತೆ ಕಾಣುತ್ತದೆ.ಬಹಳಷ್ಟು ಜನಕ್ಕೆ ಏನೋ ತಳಮಳ,ಏನೋ ಆತಂಕ ! ಔಷಧವಿಲ್ಲದೆ ಆರೋಗ್ಯವಾಗಿರುವುದು ಅಪರೂಪವೆನಿಸಿಬಿಟ್ಟಿದೆ.ಔಷಧಿಗಳನ್ನು ಉಪಯೋಗಿಸದೆ ನಿಯಮಿತ ಆಹಾರ,ಸಾಕಷ್ಟು ವ್ಯಾಯಾಮ,ಧ್ಯಾನ,ಪ್ರಾಣಾಯಾಮ ಮತ್ತು ಯೋಗಾಸನಗಳಿಂದ ಮಾನಸಿಕ ನೆಮ್ಮದಿ ಪಡೆದು ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.
ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದರು !ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್,ನಮ್ಮ ಕೆಲಸಾನೆ ಹಾಗಿದೆ!'ಎಂದರು.ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.ಅವರ ಈ ಮಾತುಗಳನ್ನು ಕೇಳಿ 'ನಾವು ಎಂಥಾ ಸ್ಥಿತಿಗೆ ಬಂದು ನಿಂತಿದ್ದೇವೆ!'ಎಂದು ಅಚ್ಚರಿಯಾಯಿತು.ಔಷಧ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?'what is used less and less ultimately becomes useless 'ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.ಹೆಚ್ಚಿನ ಓಡಾಟ ,ಚಟುವಟಿಕೆ ಇಲ್ಲದೆ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗಂತೂ ಶರೀರ ಆರೋಗ್ಯವಾಗಿ ಇರಬೇಕಾದರೆ ಸ್ವಲ್ಪ ಮಟ್ಟಿಗೆ ವ್ಯಾಯಾಮ ಬೇಕೇ ಬೇಕು.ಮಾನಸಿಕ ಶಾಂತಿ,ನೆಮ್ಮದಿ, ಒಟ್ಟು ಆರೋಗ್ಯಕ್ಕೆ ಮೂಲ ಭೂತ ಅಗತ್ಯ.ಯಾವುದೇ ಕಾರಣಕ್ಕೂ ನಿಮ್ಮ ನೆಮ್ಮದಿ ಹಾಳು ಮಾಡಿ ಕೊಳ್ಳ ಬೇಡಿ.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದೇ ಒಂದು ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಮಾನಸಿಕ ಆರೋಗ್ಯಕ್ಕಾಗಿ ಯೋಗ,ಧ್ಯಾನ ಮತ್ತು ಪ್ರಾಣಾಯಾಮವನ್ನೂ ಅಳವಡಿಸಿಕೊಂಡರೆ ಇನ್ನೂ ಒಳಿತು.ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಆರೋಗ್ಯಕ್ಕೆ ಮಾರಕ.ಸರಿಯಾದ ಆಹಾರ,ಆರೋಗ್ಯಕರ ಹವ್ಯಾಸಗಳು ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

Monday, April 2, 2012

"ತಪ್ಪು ರೈಲಿನಲ್ಲಿ "

ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)