Wednesday, May 30, 2012

"ಧ್ಯಾನದ ನಿಜವಾದ ಪರಿಣಿತಿ!!!"

ಆಧ್ಯಾತ್ಮಿಕ ಆಸಕ್ತಿ ಇರುವ ಜಿಜ್ಞಾಸು ಒಬ್ಬನಿಗೆ ಸರಿಯಾದ "ಧ್ಯಾನ"ಮಾಡುವ ವಿಧಾನವನ್ನು ಕಲಿಯ ಬೇಕೆಂದು ಮನಸ್ಸಾಯಿತು.ಹಲವಾರು ಗುರುಗಳ ಬಳಿ ಹಲವಾರು ಧ್ಯಾನದ ಮಾರ್ಗಗಳನ್ನು ಕಲಿತರೂ,ಅವನಿಗೆ ಸಮಾಧಾನ ವಾಗಲಿಲ್ಲ.ಸೂಕ್ತ ಗುರುವನ್ನು ಹುಡುಕುತ್ತಾ, ಕಡೆಗೆ "ಜೆನ್"ಗುರುವೊಬ್ಬರ ಬಳಿ ಬಂದ.ಗುರು ಅವನಿಗೆ ಧ್ಯಾನದ ಅತೀ ಉತ್ತಮ ವಿಧಾನವನ್ನು ಹೇಳಿಕೊಡುವುದಾಗಿ ಒಪ್ಪಿಕೊಂಡ.ಅಲ್ಲಿಯ ತನಕ ಆಶ್ರಮದ ಕೆಲಸಗಳನ್ನು ಮಾಡುತ್ತಿರಬೇಕೆಂದು ತಿಳಿಸಿದ.ಆದರೆ ಹಲವಾರು ತಿಂಗಳುಗಳೇ ಕಳೆದರೂ ಗುರು ಅವನಿಗೆ ಧ್ಯಾನದ ಬಗ್ಗೆ ಏನನ್ನೂ ತಿಳಿಸಲಿಲ್ಲ.ಕಡೆಗೆ ಶಿಷ್ಯನೇ ತಾನು ಅಲ್ಲಿಗೆ ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದ.ಗುರು"ಹೌದಲ್ಲವೇ!!ಹಾಗಿದ್ದರೆ ನಾಳೆಯಿಂದ 'ಧ್ಯಾನ'ದ ಬಗ್ಗೆ ತಿಳಿಯಲು ತಯಾರಾಗಿರು"ಎಂದ.ಮಾರನೇ ದಿನ ಶಿಷ್ಯ ಏನೋ ಕೆಲಸ ಮಾಡುತ್ತಿದ್ದಾಗ ಗುರು ಹಿಂದಿನಿಂದ ಸದ್ದಾಗದಂತೆ ಬಂದು ಒಂದು ದಪ್ಪ ದೊಣ್ಣೆಯಿಂದ ಜೋರಾಗಿ ಪೆಟ್ಟು ಕೊಟ್ಟ. ಹಟಾತ್ತನೆ ನಡೆದ ಧಾಳಿಯಿಂದ ಶಿಷ್ಯ ಗಾಭರಿಗೊಂಡ.ಅದಕ್ಕೆಗುರು ಹೇಳಿದ "ಇದು ಧ್ಯಾನದ ಮೊದಲ ಹಂತ.ನೀನು ಸದಾ ಎಚ್ಚರದಲ್ಲಿರಬೇಕು.ನಾನು ಯಾವಾಗ ಬೇಕಾದರೂ ಬಂದು ಪೆಟ್ಟು ಕೊಡಬಹುದು.ಸದಾ ಎಚ್ಚರದಲ್ಲಿದ್ದರೆ ನೀನು ಪೆಟ್ಟಿನಿಂದ ತಪ್ಪಿಸಿಕೊಳ್ಳಬಹುದು".ಹಲವಾರು ಸಲ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಗುರುವಿನ ಪೆಟ್ಟಿನಿಂದ ತಪ್ಪಿಸಿಕೊಳ್ಳುವ ಪರಿಣಿತಿ ಬಂತು. ನಂತರ ಗುರು "ನೀನೀಗ ಧ್ಯಾನದ ಎರಡನೇ ಹಂತ ಕಲಿಯಲು ಯೋಗ್ಯನಾಗಿದ್ದೀಯ.ನೀನು ನಿದ್ದೆ ಮಾಡುವಾಗ ಬಂದು ಪೆಟ್ಟು ಕೊಡುತ್ತೇನೆ.ನೀನು ನಿದ್ದೆಯಲ್ಲೂ 'ಧ್ಯಾನಸ್ಥ' ಎಂದರೆ ಎಚ್ಚರದ ಸ್ಥಿತಿ ಯಲ್ಲಿರಬೇಕು"ಎಂದ.ಹಲವಾರು ಸಲ ನಿದ್ದೆಯಲ್ಲಿದ್ದಾಗ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಅದರಲ್ಲೂ ಪರಿಣಿತಿ ಬಂತು.ನಂತರ ಧ್ಯಾನದ ಮೂರನೇ ಹಂತದಲ್ಲಿ ನಿಜವಾದ ಖಡ್ಗ ವನ್ನು ಉಪಯೋಗಿಸುವುದಾಗಿಯೂ ,ಸ್ವಲ್ಪ ಎಚ್ಚರ ತಪ್ಪಿದರೂ ಅದು ಅವನ ಪ್ರಾಣಕ್ಕೇ ಕುತ್ತು ತರಬಹುದೆಂದೂ ಗುರು ಹೇಳಿದ.ಈ ಪರೀಕ್ಷೆಯಲ್ಲಿ ಒಮ್ಮೆಯೂ ಎಚ್ಚರ ತಪ್ಪುವಂತಿರಲಿಲ್ಲ!!!ಶಿಷ್ಯ ಈ ಕೊನೆಯ ಹಂತದ ಕಠಿಣ ಪರೀಕ್ಷೆಯಲ್ಲೂ ಗೆದ್ದ.ಗುರುವಿಗೆ ತುಂಬಾ ಸಂತೋಷವಾಯಿತು.ಶಿಷ್ಯನಿಗೆ"ಈಗ ನೀನು ಧ್ಯಾನದ ಎಲ್ಲಾ ಹಂತಗಳಲ್ಲೂ ನಿಜವಾದ ಪರಿಣಿತಿ ಪಡೆದಿದ್ದೀಯ.ನಾಳೆ ನೀನು ಊರಿಗೆ ಹೊರಡಬಹುದು"ಎಂದ. ಶಿಷ್ಯನಿಗೆ "ಗುರುವು ತನ್ನನ್ನು ಎಂತೆಂತಹ ಕಠಿಣ ಪರೀಕ್ಷಗಳಿಗೆ ಒಡ್ಡಿದನಲ್ಲಾ!!!ತಾನೊಮ್ಮೆ ಇವನಿಗೊಂದು ಪೆಟ್ಟು ಕೊಟ್ಟು ಪರೀಕ್ಷೆ ಮಾಡಬೇಕು"ಎನ್ನುವ ಆಲೋಚನೆ ಮನಸ್ಸಿನಲ್ಲಿ ಬಂತು.ಅವನ ಆಲೋಚನೆ ಯನ್ನು ತಕ್ಷಣವೇ ಗ್ರಹಿಸಿದ ಗುರು "ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾನು ಸದಾ ಎಷ್ಟು ಎಚ್ಚರದಲ್ಲಿ ಇರುತ್ತೇನೆ ಎಂದರೆ,ಬೇರೆಯವರ ಆಲೋಚನೆಗಳೂ ನನಗೆ ತಿಳಿಯುತ್ತವೆ"ಎಂದ!!! ಶಿಷ್ಯನಿಗೆ ಮಾತೇ ಹೊರಡಲಿಲ್ಲ !!! ತಾನಿನ್ನೂ ಸಾಧಿಸುವುದು ಬಹಳಷ್ಟಿದೆ ಎಂದುಕೊಂಡು ಗುರುವಿಗೆ ನಮಿಸಿ ತನ್ನೂರಿಗೆ ಹೊರಟ.

Sunday, May 27, 2012

"ಯಾರೋ ಹೇಳಿದರು ಅಂತ ಎಡವಟ್ಟು ಮಾಡಿಕೊಂಡರು !!!"

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Friday, May 25, 2012

"ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)

Monday, May 21, 2012

"ನೀ ...ನನ್ನ ನೋಡಿ ಎದಕ್ ನಕ್ಕೀ? "

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದದ್ದು.ನಮಗಾಗ ಮೊದಲ ಎಮ್.ಬಿ.ಬಿ.ಎಸ್.ಪರೀಕ್ಷೆಯ ದಿನಗಳು.ರಾತ್ರಿಯೆಲ್ಲಾ ಕೂತು ಓದುತ್ತಿದ್ದರಿಂದ ,ರಾತ್ರಿ ಸುಮಾರು ಹನ್ನೆರಡರ ವೇಳೆಗೆ "ಟೀ ಬ್ರೇಕ್ "ಗೆಂದು ನಮ್ಮ ಹಾಸ್ಟೆಲ್ ನ ಎದುರು 'ಹರಟೆ ಕಟ್ಟೆಯ' ಬಳಿ ಸೇರುತ್ತಿದ್ದೆವು .ಹೀಗೇ ಒಂದು ದಿನ ಟೀ ಕುಡಿದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಹರಟೆ ಹೊಡಿಯುತ್ತಿದ್ದೆವು. ಪಕ್ಕದ ಹಾಸ್ಟೆಲ್ ನಿಂದ ನಮ್ಮ ಸೀನಿಯರ್ ಹಡಪದ್ ಬರುತ್ತಿದ್ದರು.ಅವರನ್ನು ಒಬ್ಬ ವ್ಯಕ್ತಿ ಹಿಂಬಾಲಿಸುತ್ತಿದ್ದ.ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಕುರಿತು ಹಡಪದ್ "ಲೇ...!!! ಸುಮ್ನಾ ಹೋಗೋ ಯಪ್ಪಾ...!!!ಯಾಕ್ ಹಿಂಗ ಕಾಡಾಕ ಹತ್ತೀ? ನಿನ್ನ ನೋಡಿ ನಾ ಯಾಕ ನಗಲೋ?ಮತ್ತ ನನ್ನ ಹಿಂದೆ ಬಂದರ ಒದೀತೀನಿ ನೋಡು ಮಗನಾ !!!" ಎಂದು ಜೋರಾಗಿ ಕೂಗುತ್ತಿದ್ದರು. ನಾವು ಹಡಪದ ರನ್ನು ಏನೆಂದು ವಿಚಾರಿಸಿದಾಗ ತಿಳಿದಿದ್ದು ಇಷ್ಟು. ರಾತ್ರಿ ಸುಮಾರು ಎಂಟು ಘಂಟೆಯ ವೇಳೆಗೆ ಹಡಪದ್,ಅವರ ಸ್ನೇಹಿತರೊಬ್ಬರ ಜೊತೆ ಮೆಸ್ಸಿನಲ್ಲಿ ಊಟ ಮಾಡುತ್ತಿದ್ದರು.ಅವರ ಸ್ನೇಹಿತ ಹೇಳಿದ ಯಾವುದೋ ಜೋಕಿಗೆ ಇವರು ಜೋರಾಗಿ ನಕ್ಕರು.ನಗುತ್ತಾ ಅವರಿಗೆ ಅರಿವಿಲ್ಲದಂತೆ ಸಹಜವಾಗಿ ಅವರ ದೃಷ್ಟಿ , ಎದುರು ಕೂತಿದ್ದ ಈ ವ್ಯಕ್ತಿಯ ಮೇಲೆ ಬಿತ್ತು. ಆ ವ್ಯಕ್ತಿ, ಅವರು ತನ್ನನ್ನೇ ನೋಡಿ ನಗುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡ.ಇವರು ಎಷ್ಟು ಹೇಳಿದರೂ ಕೇಳಲು ತಯಾರಿರಲಿಲ್ಲ.ರಾತ್ರಿ ಸುಮಾರು ಎಂಟು ಘಂಟೆಯಿಂದ ಅವರನ್ನು ಹಿಂಬಾಲಿಸುತ್ತಾ "ನನ್ನನ್ನು ನೋಡಿ ಎದಕ್ ನಕ್ಕೀ ?"ಎಂದು ಪ್ರಶ್ನೆ ಕೇಳುತ್ತಾ ಗಂಟು ಬಿದ್ದಿದ್ದ.ಹಡಪದ್"ನಾ ನಿನ್ನ ನೋಡಿ ನಕ್ಕಿಲ್ಲೋ ಯಪ್ಪಾ....!!"ಎಂದು ಒಂದು ಸಾವಿರ ಸಲ ಹೇಳಿದರೂ ,ಅವನು ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ.ಅವನದು ಒಂದೇ ಪ್ರಶ್ನೆ "ನನ್ನ ನೋಡಿ ಎದಕ್ ನಕ್ಕೀ?".ಕಾಲೇಜಿನ ಕ್ಯಾಂಪಸ್ಸಿನ ತುಂಬೆಲ್ಲಾ ಹೀಗೇ ರಾತ್ರಿ ಎಂಟರಿಂದ ಹನ್ನೆರಡರವರೆಗೂ,ಅವನು ಅದೇ ಪ್ರಶ್ನೆ ಕೇಳುತ್ತಾ ,ಅವರು ಅದೇ ಉತ್ತರ ಕೊಡುತ್ತಾ ಸುತ್ತುತ್ತಿದ್ದರು.ಹಡಪದ್ ಎಲ್ಲೇ ಹೋದರು ಆ ವ್ಯಕ್ತಿ ಹಿಂಬಾಲಿಸುತ್ತಿದ್ದ.ಟಾಯ್ಲೆಟ್ ಒಳಗೆ ಹೋಗಿ ಅರ್ಧ ಘಂಟೆ ಬಾಗಿಲು ಹಾಕಿಕೊಂಡರೂ ಅವನು ಬಾಗಿಲ ಹೊರಗೇ ಕಾಯುತ್ತಿದ್ದನಂತೆ!!ನಾವೆಲ್ಲಾ ಸೇರಿ ಆ ವ್ಯಕ್ತಿಗೆ ಸಮಾಧಾನ ಹೇಳುತ್ತಿದ್ದೆವು.ಅಷ್ಟರಲ್ಲಿ ಹಡಪದ್ ಅವನ ಕಣ್ಣು ತಪ್ಪಿಸಿ ಕತ್ತಲಲ್ಲಿ ಮರೆಯಾಗಿದ್ದರು. ಅವನು ನಮ್ಮಿಂದ ಬಿಡಿಸಿಕೊಂಡು ಮತ್ತೆ ಅವರನ್ನು ಹುಡುಕುತ್ತಾ ಹೊರಟ !!ನಾವೆಲ್ಲಾ ಹಡಪದ್ ರ ಫಜೀತಿ ಯನ್ನು ನೆನೆಸಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾ ನಮ್ಮನಮ್ಮ ರೂಮುಗಳಿಗೆ ಓದಲು ಹೊರಟೆವು.ಮೊನ್ನೆ ನಾನು ನನ್ನ ಗೆಳೆಯ ಸೇರಿದಾಗ ಈ ಘಟನೆ ನೆನಪಾಗಿ ನಕ್ಕಿದ್ದೂ ನಕ್ಕಿದ್ದೆ.ಅದನ್ನು ನಿಮ್ಮಜೊತೆ ಹಂಚಿಕೊಳ್ಳುತ್ತಿದ್ದೇನೆ .ನೀವೂ ನಕ್ಕು ಹಗುರಾಗಿ.ನಮಸ್ಕಾರ.

Wednesday, May 16, 2012

"ಕೋತಿಗಳು ಮಾತ್ರ ನೆನಪಾಗ ಬಾರದು!!!"

ಕಾಶಿಯಲ್ಲಿ ಒಬ್ಬ ಮಹಾ ವಿಧ್ವಾಂಸನಿದ್ದ .ವೇದ ಶಾಸ್ತ್ರ ಪುರಾಣಗಳೆಲ್ಲಾ ,ಅವನ ನಾಲಿಗೆಯ ತುದಿಯಲ್ಲಿದ್ದವು.ಆದರೂ ಹೆಚ್ಚಿನ ಆಧ್ಯಾತ್ಮ ಸಾಧನೆಗಾಗಿ,ಸತ್ಯದ ಸಾಕ್ಷಾತ್ಕಾರಕ್ಕಾಗಿ ಟಿಬೆಟ್ಟಿನಲ್ಲಿದ್ಧ ಬೌದ್ಧ ಗುರುವನ್ನು ಹುಡುಕಿ ಹೊರಟ.ಗುರುವನ್ನು ಕಂಡು ಹೆಚ್ಚಿನ ಆಧ್ಯಾತ್ಮ ಸಾಧನೆಯ ತನ್ನ ಇಂಗಿತವನ್ನು ತಿಳಿಸಿದ.ಗುರು ಅದಕ್ಕೆ ಒಪ್ಪಿ 'ಬುದ್ಧಂ ಶರಣಂ ಗಚ್ಚಾಮಿ,ಧರ್ಮಂ ಶರಣಂ ಗಚ್ಚಾಮಿ ,ಸಂಗಂ ಶರಣಂ ಗಚ್ಚಾಮಿ' ಎನ್ನುವ ಮಂತ್ರವನ್ನು ಮೂರು ಬಾರಿ ಹೇಳಿದರೆ ಸಾಕೆಂದೂ,ಅದರಿಂದ ಉನ್ನತ ಆಧ್ಯಾತ್ಮ ಸಾಧನೆ ಸಾಧ್ಯವೆಂದು ತಿಳಿಸಿದ.ಪಂಡಿತನಿಗೆ'ಆಧ್ಯಾತ್ಮ ಸಾಧನೆ ಇಷ್ಟು ಸುಲಭವೇ?!! ಅದಕ್ಕೋಸ್ಕರ ತಾನು ಇಷ್ಟೆಲ್ಲಾ ಕಷ್ಟ ಪಟ್ಟು ಗುರುವನ್ನು ಹುಡುಕಿ ಕೊಂಡು ಇಷ್ಟು ದೂರ ಬರಬೇಕಾಯಿತೆ?!!'ಎನಿಸಿ ಧ್ಯಾನಕ್ಕೆ ಕುಳಿತು ಕೊಂಡ.ಗುರು 'ಆದರೆ ಇಲ್ಲೊಂದು ಸಣ್ಣ ತೊಂದರೆ ಇದೆ.ಧ್ಯಾನ ಮಾಡುವಾಗ ಯಾವುದೇ ಕಾರಣಕ್ಕೂ ಕೋತಿಗಳು ಮಾತ್ರ ನೆನಪಾಗ ಬಾರದು.ಕೋತಿಗಳು ನೆನಪಾದರೆ ಮತ್ತೆ ಧ್ಯಾನವನ್ನು ಶುರುಮಾಡಬೇಕು'ಎಂದ.ವಿಧ್ವಾಂಸ 'ತನ್ನಂತಹ ಮಹಾ ಪಂಡಿತನಿಗೆ ಕೋತಿಗಳು ಏಕೆ ನೆನಪಾಗುತ್ತವೆ ?ಗುರುಗಳು ಎಲ್ಲೋ ತಮಾಷೆ ಮಾಡುತ್ತಿರಬೇಕು"ಎಂದುಕೊಂಡು ಧ್ಯಾನಕ್ಕೆ ಕುಳಿತ.ಸ್ವಲ್ಪ ಹೊತ್ತಿನಲ್ಲಿಯೇ ಕೋತಿಗಳು ನೆನಪಾದವು.ಮತ್ತೆ ಮೊದಲಿನಿಂದ ಧ್ಯಾನ ಶುರು ಮಾಡಿದ.ಮತ್ತೆ ಕೋತಿಗಳು ನೆನಪಾದವು.ಬರ ಬರುತ್ತಾ ಮನಸ್ಸಿನ ತುಂಬೆಲ್ಲಾ ಕೋತಿಗಳೇ ತುಂಬಿ ಹೋದವು.ಕುಂತಲ್ಲಿ ನಿಂತಲ್ಲಿ ಕೋತಿಗಳ ಧ್ಯಾನವಾಯಿತು.ಕನಸಿನಲ್ಲೂ ಬರೀ ಕೋತಿಗಳೇ!!! ಪಂಡಿತನಿಗೆ ಮನಸ್ಸಿನ ಶಾಂತಿಯೇ ಇಲ್ಲದಂತಾಗಿ ಅಲ್ಲಿಂದ ಮೊದಲು ಬಿಡಿಸಿಕೊಂಡು ಹೋದರೆ ಸಾಕಾಗಿತ್ತು.ಅಂಜಲೀ ಬದ್ಧನಾಗಿ ಗುರುವಿನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ.ಅದಕ್ಕೆ ಗುರು ಆಧ್ಯಾತ್ಮ ಸಾಧನೆಗೆ ಮನಸ್ಸಿನ ಹತೋಟಿ ಮೊದಲ ಮೆಟ್ಟಿಲೆಂದೂ,ಅದನ್ನು ಸಾಧಿಸುವ ರೀತಿಯನ್ನು ಹಂತ ಹಂತವಾಗಿ ಕಲಿಯ ಬೇಕೆಂದೂ,ಅದಕ್ಕೆ ಸಾಕಷ್ಟು ತಾಳ್ಮೆ ,ಶ್ರದ್ಧೆ ಮತ್ತು ಸಾಧನೆ ಬೇಕೆಂದು ತಿಳಿಸಿದ.ವರ್ಷಗಳ ಸಾಧನೆಯ ನಂತರ ಪಂಡಿತನಿಗೆಆಧ್ಯಾತ್ಮದ ಅರಿವಿನಸಾಕ್ಷಾತ್ಕಾರವಾಯಿತು.ಆಧ್ಯಾತ್ಮದ ಮೊದಲ ಹಂತವೇ ಮನಸ್ಸಿನ ನಿಗ್ರಹ!ಅಲ್ಲವೇ?ನಿಮ್ಮ ಅಭಿಪ್ರಾಯ ತಪ್ಪದೇ ತಿಳಿಸಿ. (ಸಾಧಾರಿತ)