ಸುಮಾರು ಅರವತ್ತು ವರ್ಷಗಳ ಹಿಂದಿನ ಮಾತು .ಆಗೆಲ್ಲಾ ಆಟೋಗಳ ಆಟಾಟೋಪ ಇರಲಿಲ್ಲ.ಅದು ಜಟಕಾಗಳ ಜಮಾನ. ನನ್ನ ಪರಿಚಿತ ವಯೋವೃದ್ಧರೊಬ್ಬರು ಮದುವೆಯಾದ ಹೊಸದರಲ್ಲಿ ಜಟಕಾ ಬಂಡಿಯೊಂದರಲ್ಲಿ ತಮ್ಮ ನವ ವಧುವಿನೊಡನೆ ಹೊರಗೆ ಹೊರಟಿದ್ದರು.ಹೆಂಡತಿಗೆ ಆಗಿನ್ನೂ ಹದಿನೇಳುವರ್ಷ.ಇವರಿಗೆ ಇಪ್ಪತ್ತೆರಡು . ಮೊದಲೇ ನಾಚಿಕೆ ಸ್ವಭಾವದ ಹೆಣ್ಣು.ಗಂಡನ ಪಕ್ಕಸಂಕೋಚದಿಂದ ಮುದುರಿಕೊಂಡು ಕುಳಿತಿದ್ದರು.ಗಂಡನಿಗೆ ಸಹಜವಾಗಿ ಅವರ ಪಕ್ಕ ಸರಿದು ಕುಳಿತು ಕೊಳ್ಳಬೇಕೆಂಬ ಬಯಕೆ.ಇವರು ಅವರ ಪಕ್ಕಕ್ಕೆ ಸರಿದಂತೆಲ್ಲಾ ಅವರು ನಾಚಿಕೆಯಿಂದ ಹಿಂದಕ್ಕೆ ಸರಿಯುತ್ತಿದ್ದರು.ಹೀಗೆ ಹಿಂದಕ್ಕೆ ಸರಿದೂ,ಸರಿದೂ ಅವರಿಗೆ ಗೊತ್ತಿಲ್ಲದ ಹಾಗೆ ಜಟಕಾದ ಮುಂಭಾಗದಲ್ಲಿ ಕುಳಿತಿದ್ದ ಜಟಕಾ ಸಾಬಿಯ ಪಕ್ಕಕ್ಕೆ ಬಂದು ಬಿಟ್ಟಿದ್ದರು!ಗಂಡ ಸಿಟ್ಟಿನಿಂದ 'ನನಗಿಂತಾ ನಿನಗೆ ಆ ಜಟಕಾ ಸಾಬೀನೆ ಹೆಚ್ಚಾ?'ಎಂದು ರೇಗಿದರು .ಜಟಕಾ ಸಾಬಿ ತನ್ನ ಉರ್ದು ಮಿಶ್ರಿತ ಕನ್ನಡ ದಲ್ಲಿ "ಏನಮ್ಮಾ....! ನೀವು ನಮ್ದೂಕೆ ಪಕ್ಕ ಯಾಕೆ ಬಂದ್ರಿ ? ಸಾಹೇಬರ ಪಕ್ಕ ಜಾಕೇ ಬೈಟೋ ! 'ಎಂದು ಬೇರೆ ಹೇಳಿಬಿಟ್ಟನಂತೆ. ಪಾಪ ಅವರು ಅಲ್ಲಿಂದ ಸರಿದು ಜಟಕಾದ ಮಧ್ಯ ಭಾಗದಲ್ಲಿ ನಾಚಿಕೆ ಮತ್ತು ಅವಮಾನಗಳಿಂದ ಮೈ ಹಿಡಿಮಾಡಿಕೊಂಡು ಕುಳಿತರು ! ಈಗಲೂ ಅವರು ಆ ಘಟನೆಯನ್ನು ನೆನೆಸಿಕೊಂಡು 'ನನಗಿಂತ ಆ ಜಟಕಾ ಸಾಬಿಯೇ ಇವಳಿಗೆ ಹೆಚ್ಚು ಇಷ್ಟ ಆಗಿದ್ದಾ"ಎಂದು ಹೆಂಡತಿಯನ್ನು ರೇಗಿಸುತ್ತಾರೆ.ಇವರೂ ಸುಮ್ಮನಿರದೆ "ಹೌದು, ನಿಮಗಿಂತಾ ಅವನೇ ಎಷ್ಟೋ ಚೆನ್ನಾಗಿದ್ದಾ !"ಎಂದು,ಸೇಡು ತೀರಿಸಿಕೊಳ್ಳುತ್ತಾರೆ! ಅವರ ಸರಸ,ಇವರ ಹುಸಿ ಮುನಿಸು,ಮಾಗಿದ ಅವರಿಬ್ಬರ ದಾಂಪತ್ಯಕ್ಕೆ ಇನ್ನಷ್ಟು ಮೆರಗನ್ನು ಕೊಡುತ್ತದೆ !!
Friday, October 28, 2011
Tuesday, October 25, 2011
"ಹಬ್ಬದೂಟ .....ಘಮ್ಮಗೆ !! ನೆನೆಸಿಕೊಂಡ್ರೆ ಸುಮ್ಮಗೆ !! "
"ಎಲ್ಲರಿಗೂ ............ದೀಪಾವಳಿ ಹಬ್ಬದ ............ಶುಭಾಶಯಗಳು .......
ಮನೆಯಲಿ.......ಹಬ್ಬ !!
ಅಬ್ಬಬ್ಬಾ.................!!
ಏನು ತಿಂಡಿ!ಏನೆಲ್ಲಾ ಊಟ!!
ಬೆಳಿಗ್ಗೆಗೆ ತಿಂಡಿಯ ತಳಪಾಯ!
ಎರಡು ಇಡ್ಲಿ ಮತ್ತು
ಎರಡೇ ಎರಡು ವಡೆ !
ಎರಡೇ ಎರಡು ವಡೆ !
ಮಧ್ಯಾಹ್ನದ ಊಟಕ್ಕೆ ,
ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ
ಸಾಥ್ ................!
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ
ಗಸ ಗಸೆ
ಪಾ
ಯ
ಸ
Z Z Z Z Z Z Z Z.NIDDE.....!!!
ಮೆಲ್ಲಗೆ ಏಳುತ್ತಿತ್ತು
ಏಳಂತಸ್ತಿನ..........ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ
ಸಾಥ್ ................!
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ
ಗಸ ಗಸೆ
ಪಾ
ಯ
ಸ
Z Z Z Z Z Z Z Z.NIDDE.....!!!
Sunday, October 23, 2011
"ಅಪ್ಪಾ ....ಹಂಗಂದ್ರೆ ಏನಪ್ಪಾ ? "
ಮಕ್ಕಳು ಮುಗ್ಧರು.ಸ್ವಾಭಾವಿಕವಾಗಿ ಅವರಿಗೆ ಕುತೂಹಲ ಹೆಚ್ಚು.ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಂದಿರನ್ನು ಏನು ?ಎತ್ತ?ಯಾಕೆ ?ಎಲ್ಲಿ ?ಎನ್ನುವ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿರುತ್ತಾರೆ.ಕೆಲವೊಮ್ಮೆ ಅವರ ಅಭಾಸವಾಗುಂತಹ ಪ್ರಶ್ನೆಗಳಿಗೆ ಏನು ಉತ್ತರ ಕೊಡುವುದು ಎಂದು ತಿಳಿಯದೆ ಪೋಷಕರು ಕಣ್ಣು ಕಣ್ಣು ಬಿಡುತ್ತಿರುತ್ತಾರೆ.ನನ್ನ ಮಗನೂ ಸಣ್ಣ ವಯಸ್ಸಿನಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಪ್ರಶ್ನೆ ಕೇಳುತ್ತಿದ್ದ.ಯಾವುದೋ ಕನ್ನಡ ಸಿನಿಮಾ ಒಂದಕ್ಕೆ ಹೋಗಿದ್ದೆವು.ಹೀರೋ ಮತ್ತು ಹೀರೋಯಿನ್ 'ಮದುವೆಯ ನಂತರ ಹನಿ ಮೂನಿಗೆ ಎಲ್ಲಿಗೆ ಹೋಗುವುದು' ಎನ್ನುವ ಅತೀ ಗಹನವಾದ ವಿಷಯದ ಬಗ್ಗೆ ಚರ್ಚೆನಡೆಸುತ್ತಿದ್ದರು.ಸುತ್ತಮುತ್ತ ಇದ್ದ ನಿಶ್ಯಬ್ಧದ ನಡುವೆ "ಅಪ್ಪಾ ಹನಿ ಮೂನೆಂದರೆ ಏನಪ್ಪಾ?"ಎನ್ನುವ ನನ್ನ ಮಗನ ಜೋರು ಗಂಟಲಿನ ಪ್ರಶ್ನೆ ತೂರಿಬಂತು!ಸುತ್ತಮುತ್ತಲಿದ್ದವರೆಲ್ಲಾ ಸಿನಿಮಾ ನೋಡುವುದು ಬಿಟ್ಟು ನಮ್ಮತ್ತ ನೋಡಿ ಜೋರಾಗಿ ನಗಲು ಶುರುಮಾಡಿದರು.ಮಗ ಅಷ್ಟಕ್ಕೇ ಬಿಡದೆ"ಅಪ್ಪಾ ಹೇಳಪ್ಪಾ, ಅಪ್ಪಾ ಹೇಳಪ್ಪಾ"ಎಂದು ಪೀಡಿಸತೊಡಗಿದ.ಮುಂದೆ ಇನ್ನೂ ಹೆಚ್ಚಿನ ಆಭಾಸದ ಪ್ರಶ್ನೆಗಳನ್ನು ಕೇಳಬಹುದೆಂದು ಹೆದರಿ, 'ಹೇಳುತ್ತೇನೆ ಬಾ' ಎಂದು ಹೊರಗೆ ಕರೆದುಕೊಂಡು ಹೋದೆ.ನಂತರ ಅವನಿಗೆ ಏನು ಸಮಜಾಯಿಷಿ ನೀಡಿದೆನೋ ನೆನಪಿಲ್ಲ.ಈಗಿನ ತಂದೆ ತಾಯಂದಿರು ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋದಾಗ ಏನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾಗಬಹುದೋಎನ್ನುವುದನ್ನು ನೆನೆಸಿಕೊಂಡರೇ ಭಯವಾಗುತ್ತದೆ. ನಿಮಗೂ ಇಂತಹ ಅನುಭವಗಳಾಗಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ನಮಸ್ಕಾರ.
Friday, October 21, 2011
"ಬುದ್ಧಿವಂತಿಕೆ "
ನಮ್ಮ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮಾಲಿಂಗ ಓದಿರುವುದು ಬರೀ ಏಳನೇ ತರಗತಿಅಷ್ಟೇ!.ಆದರೆ ಅವನ ಬುದ್ಧಿಯ ಹರಿತ, ನೋಡಿದರಷ್ಟೇ ನಂಬಿಕೆ ಬರುವುದು.ಓದಿಗೂ ಬುದ್ಧಿಗೂ ಯಾವುದೇ ಸಂಬಂಧ ಇಲ್ಲ ಎನ್ನುವ ನನ್ನ ಅನಿಸಿಕೆಗೆ ನಮ್ಮ ಮಾಲಿಂಗ ಒಳ್ಳೇ ಉದಾಹರಣೆ.ಏನನ್ನಾದರೂ ಒಮ್ಮೆ ನೋಡಿದರೆ ಅದನ್ನು ತಕ್ಷಣ ಕಲಿತಿರುತ್ತಾನೆ.
Tailoring,carpentry,electrical repair,ಸೀರೆಗೆ ಫಾಲ್ಸ್ ಹಾಕುವುದು,ಗಿಣಿ ಪಾರಿವಾಳಗಳನ್ನು ಸಾಕುವುದು,ಅವನ ಹವ್ಯಾಸಗಳು ಒಂದೇ ಎರಡೇ!ಒಂದೇ ಒಂದು ನಿಮಿಷವೂ ಸುಮ್ಮನಿರುವ ಪಾರ್ಟಿಯಲ್ಲ!ಅವನ ಸಮಯ ಪ್ರಜ್ಞೆ ಅದ್ಭುತ!ಎಲ್ಲಾ ದಿನ ನಿತ್ಯದ ಸಮಸ್ಯೆಗೂ ಅವನಲ್ಲಿ ಉತ್ತರವಿರುತ್ತದೆ.ಮೊನ್ನೆ ನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗಿನ ಜಿಪ್ ನ ಹಿಡಿ ಕಿತ್ತುಹೋಯಿತು.ಕಿತ್ತು ಹೋದ ಜಿಪ್ಪಿನ ಜೊತೆಯೇ ಎರಡು ದಿನ ಗುದ್ದಾಡಿ ನನ್ನ ಉಗುರು ಕಿತ್ತು ಹೋಗಿತ್ತು.ನಾನು ಒದ್ದಾಡುತ್ತಿರುವುದು ಮಾಲಿಂಗನ ಗಮನಕ್ಕೆ ಬಂತು.ತಕ್ಷಣ ನನ್ನ ಕೀ ಬಂಚಿನಲ್ಲಿದ್ದ ಸ್ಟೀಲ್ ರಿಂಗ್ ಒಂದನ್ನು ತೆಗೆದು ಬ್ಯಾಗಿನ ಜಿಪ್ಪಿಗೆ ಸಿಗಿಸಿ ಒಂದು ಸೊಗಸಾದ ಜಿಪ್ಪಿನ ಹಿಡಿ ತಯಾರು ಮಾಡಿಕೊಟ್ಟಿದ್ದ!ಈಗ ಬ್ಯಾಗಿನ ಜಿಪ್ಪು ತೆಗೆಯುವಾಗ ಮತ್ತು ಹಾಕುವಾಗಲೆಲ್ಲಾ ಮನಸ್ಸು ಕೃತಜ್ಞತೆಯಿಂದ ಮಾಲಿಂಗನನ್ನು ನೆನೆಯುತ್ತದೆ!ಈಗ ನೀವೇ ಹೇಳಿ.Rank ಬಂದವರು ಮಾತ್ರ ಬುದ್ಧಿವಂತರೇ?
Monday, October 17, 2011
"ಗಡಿಯಾರ!! "
ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ
ಸಣ್ಣದೊಂದು ಮೂದಲಿಕೆ!
ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!
Sunday, October 16, 2011
"ಕವಿತೇ....ನೀನೆಲ್ಲಿ ಅವಿತೇ?!!!"
ಕವಿತೆಯೆಂದರೆ
ಹೀಗೇ ಎಂದು
ಹೇಳುವುದು ಹ್ಯಾಗೇ ?
ಕವಿತೆ ಎಂದರೆ ......
ಸಂಜೆಗೆಂಪು ಬಾನಲ್ಲಿ
ಭಗವಂತನ ಕಾಣದ
ಕೈಯ ಸಹಿಯಂತಿರುವ
ಬೆಳ್ಳಕ್ಕಿ ಸಾಲು !
ಸವಿಯಾದೊಂದು ನಿದ್ದೆ ಮಾಡಿ
ಎದ್ದ ಆಹ್ಲಾದ!
ಕವಿತೆಯೆಂದರೆ......
ಚಿಂತಾಮಣಿಯಲ್ಲಿ
ಕಂಡ ಆ ಮುಖ!
'ಫಳ್'ಎಂದು ಕ್ಯಾಮೆರಾದ
ಫ್ಲಾಶ್ ನಂತೆ ಬೆಳಗಿದ
ಆ ಕಿರು ನಗು!
ಎಲ್ಲೋ ಹಚ್ಚಿದ ಅಗರು
ಗಾಳಿಯಲ್ಲಿ ಅಲೆ ಅಲೆಯಾಗಿ
ತೇಲಿ ಬಂದು...............,
ನಮ್ಮನ್ನೂ ಅದರೊಡನೆ
ತೇಲಿಸಿದ ಹಾಗೆ!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!
Saturday, October 15, 2011
"ನೀ ದೊಡ್ಡ ಶಾಣ್ಯಾ ಇದ್ದೀ...!!!"
ಅಪ್ಪಾ ತಂದೀ.............!
ಕಾಣದ ಹಾಂಗ ಕುಂತ ನೀ,
ದೊಡ್ ಶಾಣ್ಯಾ ಇದ್ದೀ !
ಹುಡುಗಿದ್ದಾಗ............,
ಆಟಕ್ ಹಚ್ಚಿದಿ.............!
ಹರೇ ಬಂದಾಗ, ಕಣ್ಣಾಗೆಲ್ಲಾ
ಬರೇ ಹುಡಿಗ್ಯಾರ್ನಿಟ್ಟಿ !
ವಯಸ್ಸಿನಾಗ ಹೆಗಲ ಮ್ಯಾಲ
ಸಂಸಾರದ ನೊಗ ಕಟ್ಟಿ
ಕಷ್ಟಗಳ ಚಾಟೀ ಬೀಸಿ
ಹೈರಾಣ್ ಮಾಡಿಟ್ಟಿ!
ಸಂಸಾರ ಅಂಬೋದು
ನಿಸ್ಸಾರ ಆದಾಗ ,
'ಸಾಕೋ ರಂಗಾ'
ಅನ್ನೋ ಹಾಂಗ,
ಬ್ಯಾನೀ...... ಕೊಟ್ಟಿ!
ಮುದಿಯಾದಾಗ ......,
ಕಂತೀ,ಕಂತೀ .......
ಕಂತೀ,ಕಂತೀ .......
ಚಿಂತೀ ಇಟ್ಟಿ !
ಒಟ್ಟಾಗ..................,
ನಿನ್ನ ತಂಟೀಕ್ ಬರದ ಹಾಂಗ
ಮಾಡಿಟ್ಟಿ..................!
ಒಟ್ಟಾಗ......ಇಟ್ಟಿ !
ಬರೀ ಇಷ್ಟರಾಗಾ .........
ಮುಗೀತಲ್ಲೋ ತಂದೀ!
ನಿನ್ನ ಚಿಂತೀ ಮಾಡೂದು
ಯಾವ ಕಾಲಕ್ಕಂದೀ.....?!!!
Friday, October 14, 2011
"ಎದೆಗೂ,ಎದೆಗೂ ನಡುವೆ ಕಡಲು !!"
ಗಂಟಲೊಳಗಿನ ಬಿಸಿ ತುಪ್ಪ
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಹತ್ತಿರದ ಬಂಧುಗಳು!
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ
ಮುಸುಕಿನ ಗುದ್ದಾಟದ
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ
ಅಲೆಗಳ ಹೊಡೆತಕ್ಕೆ
ಆತ್ಮೀಯತೆಯ ಸೇತುವಿನ
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ
ಮುಂಜಿಯಲ್ಲೋ,
ವೈಕುಂಠ ಸಮಾರಾಧನೆಯಲ್ಲೋ
ವೈಕುಂಠ ಸಮಾರಾಧನೆಯಲ್ಲೋ
ಎದುರೆದುರು ಸಿಕ್ಕಾಗ
ಹುಳ್ಳಗೆ ನಕ್ಕು 'ಹಾಯ್'ಎಂದು
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ
ನಿರಾಳವಾಗಿ 'ಬೈ'ಎಂದು ಬಿಡೋಣ!!
Wednesday, October 12, 2011
"ಕಹಿ ನೆನಪುಗಳಿಗೆ ಸಾವಿಲ್ಲ"
ಕನಸಿನಲ್ಲೂ ಬೆಚ್ಚಿ
ಅಳುವಂತೆ ಮಾಡುವ
ನಿಮ್ಮ ನೆನಪು ......,
ಆಳದಲ್ಲೆಲ್ಲೋ ಮುರಿದು
ಮುಲುಗುಡಿಸುವ ಮುಳ್ಳು!
ವರುಷಗಳು ಉರುಳಿದಂತೆ
ನೆನಪುಗಳು ಮಾಸುತ್ತವೆಂಬುದೆಲ್ಲಾ
ಬರೀ........... ಸುಳ್ಳು!
ಕೀವಾಗಲೊಲ್ಲದು
ಹೊರಬರಲೊಲ್ಲದು!
ಹಸಿಯಾಗಿ, ಬಿಸಿಯಾಗಿ
ಕಾಯಾಗಿ,ಕಲ್ಲಾಗಿ
ಕಾಡಿಸುತ್ತದೆ ಸದಾ
ನಿಮ್ಮ ಮಾತಿನ ಬತ್ತಳಿಕೆಯಿಂದ
ಬಿಟ್ಟ ಬಾಣಗಳ
ಗಾಯದ ನೆನಪು!
ಗಾಯದ ನೆನಪು!
ಅಂತ್ಯ ಹಾಡಲೇ ಬೇಕಿದೆ ನಾನು,
ಇದು ಕೊಡುವ ನೋವಿಗೆ
ಅಂತರಂಗದ ಕಾವಿಗೆ
ದಿನ ನಿತ್ಯದ ಸಾವಿಗೆ
ಈ ಗೋಳಿನ ಹಾಡಿಗೆ .
ಅಯ್ಯೋ ....ನೆನಪುಗಳೇ
ಬಿಡಿಯಪ್ಪ....ನನ್ನನ್ನು!
ಬಿಡಿಯಪ್ಪ....ನನ್ನನ್ನು!
ಬಿಡಿ........ನನ್ನ ಪಾಡಿಗೆ!!
Tuesday, October 11, 2011
"ಸಂಪೂರ್ಣ ಶರಣಾಗತಿ"-ಒಂದು ವಿಶಿಷ್ಟ ಅನುಭವ!!
1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು
Saturday, October 8, 2011
"ದಾರಿ ......ಯಾವುದಯ್ಯಾ!!!?"
ದಾರಿಗಳಲ್ಲಿ ಹಲವು ದಾರಿ !
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ ದಾರಿ!
ಬಡವನಿಗೆ ಪಾಪ
ಎಲ್ಲವೂ ದುಬಾರಿ !
ಬಡವನಿಗೆ ಪಾಪ
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ
ಅವರವರು ನಡೆದೂ ನಡೆದೂ
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ ಅಲ್ಲವೇ
ದಾಸರು ದಾರಿ ಕಾಣದೇ
ಕೊನೆಗೆ ................,
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!
Wednesday, October 5, 2011
"ನಕ್ಕು ಬಿಡಿ"
ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ ಸೇರಬೇಕು!
3) ಮುಲ್ಲಾ ನಾಸಿರುದ್ದೀನ್ ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.
Sunday, October 2, 2011
" ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"
ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)
Saturday, October 1, 2011
"ಮರೆವಿನಲ್ಲೂ ...ಸುಖವಿದೆ !!"
ವೃದ್ಧ ದಂಪತಿಗಳಿಬ್ಬರೇ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರೆ.ಮಕ್ಕಳಿಬ್ಬರೂ ಅಮೇರಿಕಾ ಸೇರಿದ್ದಾರೆ. ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು. 'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!
ಅಜ್ಜ ಹೋಗಿದ್ದು ನೀರು ಕುಡಿಯೋಕೆ!ಕುಡಿದು ಬಂದಿದ್ದು ಕಾಫಿ!!ಅಜ್ಜಿ ತರಲು ಹೇಳಿದ್ದು ಫ್ರಿಡ್ಜ್ ನಲ್ಲಿದ್ದ ಕೇಕನ್ನು.ಅಜ್ಜ ತಂದಿದ್ದು ಬಿಸಿ ಬಿಸಿ ಬ್ರೆಡ್ ಟೋಸ್ಟ್.ಅಜ್ಜಿ ಕೂಡ ತಾನು ಹೇಳಿದ ಕೇಕನ್ನು ಮರೆತು ,ತಾನು ಹೇಳಿದ್ದು ಬ್ರೆಡ್ ಟೋಸ್ಟೇ ಎಂದುಕೊಂಡಿದ್ದಾಳೆ!
ಒಟ್ಟಿನಲ್ಲಿ ಜಗಳವಿಲ್ಲ!ಒಬ್ಬರ ತಪ್ಪನ್ನು ಇನ್ನೊಬ್ಬರು ಮರೆತು 'ಮರೆವೆ .....ಜೀವನ ..ಸಾಕ್ಷಾತ್ಕಾರ 'ಎನ್ನುತ್ತಾ ಸುಖವಾಗಿ ಬಾಳುತ್ತಿದ್ದಾರೆ!
Wednesday, September 28, 2011
ವೈದ್ಯಕೀಯದಲ್ಲಿ ಹಾಸ್ಯ-"ಮಜ್ಜಿಗೆ ಎನೀಮಾ"
ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ಆಗ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದೆ.ಮೆಡಿಸಿನ್ ಪೋಸ್ಟಿಂಗ್ ಇತ್ತು.ಒಂದು ದಿನ ಬೆಳಿಗ್ಗೆವಾರ್ಡಿನ ರೌಂಡ್ಸ್ ನಲ್ಲಿ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕಂಪ್ಲಿ ಯಿಂದ ಬಂದ ಸುಮಾರು ಎಪ್ಪತ್ತು ವರ್ಷ ವಯಸ್ಸಿನ ರೈತ,ಗೌಡಜ್ಜನಿಗೆ ಟ್ರೀಟ್ಮೆಂಟ್ ಹೇಳಿದರು.ಗೌಡಜ್ಜನಿಗೆ ಸುಮಾರು ದಿನಗಳಿಂದ ರಕ್ತ ಬೇಧಿಯಾಗುತ್ತಿತ್ತು.ಸುಮಾರು ಕಡೆ ತೋರಿಸಿಕೊಂಡು ಕಡೆಗೆ ಇಲ್ಲಿಗೆ ಬಂದಿದ್ದ.ನಮ್ಮ ಪ್ರೊಫೆಸರ್ ಅವನಿಗೆ 'ಅಲ್ಸರೇಟಿವ್ ಕೊಲೈಟಿಸ್' ಎನ್ನುವ ದೊಡ್ಡ ಕರುಳಿನ ಖಾಯಿಲೆಯಿದೆ ಎಂದು ರೋಗ ನಿರ್ಧಾರ(DIAGNOSIS) ಮಾಡಿ 'ಮಜ್ಜಿಗೆ ಎನೀಮ 'ಟ್ರೀಟ್ಮೆಂಟ್ ಕೊಡುವುದಕ್ಕೆ ಹೇಳಿದ್ದರು .ಆಗಿನ ಕಾಲದಲ್ಲಿ 'ಅಲ್ಸರೆಟಿವ್ ಕೊಲೈಟಿಸ್'ಖಾಯಿಲೆಗೆ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕೆಲವು ಮಾತ್ರೆಗಳನ್ನು ಪುಡಿ ಮಾಡಿ ರೋಗಿಯ ಕಡೆಯವರಿಂದ ಮಜ್ಜಿಗೆ ತರಿಸಿ,ಅದರಲ್ಲಿ ಮಾತ್ರೆಯ ಪುಡಿಯನ್ನು ಸೇರಿಸಿ ಗುದ ದ್ವಾರದ ಮೂಲಕ Retention Enema ಕೊಡುತ್ತಿದ್ದರು. ಈ ಟ್ರೀಟ್ ಮೆಂಟಿಗೆ ನಾವೆಲ್ಲಾ 'ಮಜ್ಜಿಗೆ ಎನೀಮ'ಟ್ರೀಟ್ಮೆಂಟ್ ಎನ್ನುತ್ತಿದ್ದೆವು.ಇದು ನಮ್ಮ ಯುನಿಟ್ಟಿನಲ್ಲಿ ಮಾತ್ರ ಚಾಲ್ತಿಯಲ್ಲಿ ಇದ್ದದ್ದರಿಂದ ಬೇರೆ ಯುನಿಟ್ಟಿನವರಿಗೆ ಹಾಸ್ಯದ ವಿಷಯವಾಗಿತ್ತು. ನಾನು ಕೇಸ್ ಶೀಟಿನಲ್ಲಿ ಟ್ರೀಟ್ಮೆಂಟ್ ಬರೆದು ಅಲ್ಲಿದ್ದ ನರ್ಸ್ ಗೆ ಟ್ರೀಟ್ಮೆಂಟ್ ಶುರು ಮಾಡುವಂತೆ ಹೇಳಿ ಬೇರೆಯ ವಾರ್ಡಿಗೆ ಹೋದೆ.ಅರ್ಧ ಗಂಟೆಯಲ್ಲೇ ಗೌಡಜ್ಜನ ವಾರ್ಡಿನಿಂದ ನನಗೆ ಕರೆ ಬಂತು.ಗೌಡಜ್ಜ ನೋವಿನಿಂದ ಬೊಬ್ಬಿಡುತ್ತಿದ್ದ.ಅವನ ಬಾಯಿಂದ ಹಳ್ಳಿ ಭಾಷೆಯ ಬೈಗಳು ಪುಂಖಾನು ಪುಂಖವಾಗಿ ಹೊರ ಬರುತ್ತಿದ್ದವು. "ಸಾಯ್....ಕೊಲ್ತಾರಲೇ ಸೂಳೀ ಮಕ್ಳು!! ಇದ್ಯಾವ ಸೀಮೆ ಔಷದೀಲೇ.....ಯಪ್ಪಾ ....ಸಾಯ್ತೀನೋ , ಮುಕುಳ್ಯಾಗ ಉರಿಯಕ್ ಹತ್ತೈತಲೇ !!!"ಎಂದು ಕೂಗುತ್ತಿದ್ದ .ತನ್ನ ಮಗನನ್ನು "ನೀನ್ಯಾವ ಹುಚ್ಚು ಸೂಳೀ ಮಗನಲೇ ...........ಇಲ್ಲೀಗೆ ನನ್ ...ಎದಕ್ ಕರ್ಕಂಡ್ ಬಂದೀಯಲೇ .......ದಡ್..ಸೂಳೀ ಮಗನೆ!!!'ಎಂದು ಬಾಯಿಗೆ ಬಂದ ಹಾಗೆ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ವಾರ್ಡಿನ ಇತರೆ ರೋಗಿಗಳು ಎದ್ದು ಕೂತು ತಮಾಷೆ ನೋಡುತ್ತಿದ್ದರು. ನರ್ಸ್ ಗಳು ಏನು ಮಾಡಲೂ ತೋಚದೆ, ಮಲಯಾಳಿ ರೀತಿಯ ಕನ್ನಡದಲ್ಲಿ 'ಎಂತ ಆಯ್ತೆ ಮಾರಾಯ್ತಿ!?'ಎಂದು ಮಾತನಾಡುತ್ತ ,ಅತ್ತಿಂದಿತ್ತ ಸರ ಬರನೆ ಏನೂ ಮಾಡದೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಗೌಡಜ್ಜನ ಪರದಾಟ ನೋಡಿ ನನಗೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು.ನರ್ಸ್ "ನಾನು ಎಂತದ್ದೂ ಮಾಡಿಲ್ಲಾ ಡಾಕ್ಟ್ರೆ.......ಪೇಶಂಟ್ ನ ಮಗ ...ಮಜ್ಜಿಗೆ ತಂದದ್ದು...ನಾನು ಅದರಲ್ಲಿ ಮಾತ್ರೆಯ ಪುಡಿಯನ್ನು ಮಿಕ್ಸ್ ಮಾಡಿ ಎನೀಮಾ ಕೊಟ್ಟದ್ದು !!......ಅಷ್ಟೇ!! "ಎಂದು ಮೊದಲೇ ಅಗಲವಾಗಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ಭಯ ಭೀತಳಾಗಿ ನಿಂತಳು.ಗೌಡಜ್ಜನ ಮಗ "ಸಿಸ್ಟರ್ ಮಜ್ಜಿಗೀ ತಾ ಅಂದರ್ರೀ ........ನಾನು ಈ ತಂಬಗೀ ತುಂಬಾ ಆಸ್ಪತ್ರೀ ಎದುರಿನ ಹೋಟೆಲ್ಲಿನಾಗೆ,ಹತ್ತು ರೂಪಾಯಿ ಮಜ್ಜಿಗಿ ತಂದು ಕೊಟ್ಟೀನ್ರೀ !!!"ಎಂದ.'ಹೋಟೆಲಿನ ಮಜ್ಜಿಗಿ!!!........' ನನಗೆ ಜ್ಞಾನೋದಯವಾಯಿತು!! ಗೌಡಜ್ಜನ ಮಗ "ಇನ್ನೂ ಮಜ್ಜಿಗೀ ಉಳಿದೈತೆ ನೋಡ್ರೀ"ಎಂದು ತಂಬಿಗೆಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ಮಜ್ಜಿಗೆ ತೋರಿಸಿದ.ಅದು ಹೋಟೆಲ್ಲಿನಲ್ಲಿ ಸಿಗುವ 'ಕುಡಿಯುವ ಮಸಾಲಾ ಮಜ್ಜಿಗೆ!'ಅದರಲ್ಲಿ ಚೆನ್ನಾಗಿ ಅರೆದು ಹಾಕಿದ ಹಸೀ ಮೆಣಸಿನ ಕಾಯಿ,ಕೊತ್ತಂಬರಿ,ಕರಿಬೇವು ತೇಲುತ್ತಿತ್ತು!!! ಸಿಸ್ಟರ್, ಕುಡಿಯುವ ಮಜ್ಜಿಗೆಯನ್ನೇ ಸರಿಯಾಗಿ ನೋಡದೆ ಎನೀಮಾಗೆ ಉಪಯೋಗಿಸಿ ಬಿಟ್ಟಿದ್ದರು!! ಗೌಡಜ್ಜನ ಬೊಬ್ಬೆಗೆ ಖಾರದ ಮಜ್ಜಿಗೆಯೇ ಕಾರಣವೆಂದು ಗೊತ್ತಾಗಿತ್ತು.ಆದರೆ ಕಾಲ ಮಿಂಚಿತ್ತು!!ಖಾರದ ಮಜ್ಜಿಗೆ ಗೌಡಜ್ಜನ ಗುದ ದ್ವಾರದಲ್ಲಿ ತನ್ನ ಕೆಲಸ ಶುರು ಮಾಡಿತ್ತು!! ನಿಜಕ್ಕೂ ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ!!!!! ಪ್ರೊಫೆಸರ್ ಅವರನ್ನೇ ಕೇಳೋಣವೆಂದು ಕೊಂಡು ಓ.ಪಿ.ಡಿ ಕಡೆ ಓಡಿದೆ.
Thursday, September 22, 2011
"ಹೀಗೊಂದು ಅವಿಸ್ಮರಣೀಯ ಅನುಭವ!"
ಇಂದು ಮುಂಜಾನೆ ಸುಮಾರು ಹನ್ನೊಂದು ಗಂಟೆಗೆ ಆಸ್ಪತ್ರೆಯ O.P.D. ಯಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ.ಸುಮಾರು ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಕೊಡಿಸಲು ಅವನ ತಾಯಿ ಕರೆದುಕೊಂಡು ಬಂದಿದ್ದರು.ಆ ಹುಡುಗನ್ನು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋಡಿದ್ದರಿಂದ ಅವನ ಓದಿನ ಬಗ್ಗೆ ವಿಚಾರಿಸಿದೆ.ಹುಡುಗ ಸಾಗರದಲ್ಲಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ .ಅವನನ್ನು ಪರೀಕ್ಷೆ ಮಾಡಿ ಔಷದಿ ಬರೆದು ಕೊಟ್ಟೆ.ಹೋಗುವಾಗ ಅವನ ತಾಯಿ "ಸರ್.....,ಹದಿನೆಂಟು ವರ್ಷದ ಹಿಂದೆ ಚಕ್ರಾನಗರದಲ್ಲಿದ್ದಾಗ
ಈ ಹುಡುಗನ ಡೆಲಿವರಿ ಮಾಡಿದ್ದು ನೀವೇ ಸರ್.ನಿಮಗೆ ನೆನಪಿಲ್ಲಾ ಅಂತ ಕಾಣುತ್ತೆ.ಮಗು ಹುಟ್ಟಿದ ತಕ್ಷಣ ಉಸಿರಾಟವಿಲ್ಲದೆ ಮೈ ಎಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು.ನೀವು ತಕ್ಷಣ ಬಾಯಿಯಿಂದ ಮಗುವಿನ ಬಾಯಿಗೆ ಉಸಿರು ಕೊಟ್ಟು ಮಗುವನ್ನು ಉಳಿಸಿ ಕೊಟ್ಟಿರಿ.ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯೋದಿಲ್ಲಾ ಸರ್"ಎಂದು ಕಣ್ಣಿನಲ್ಲಿ ನೀರು ತಂದು ಕೊಂಡರು.ಹುಡುಗ ಬಗ್ಗಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.ಇದ್ದಕ್ಕಿದ್ದಂತೆ ಅವನು ನನ್ನ ಕಾಲು ಮುಟ್ಟಿದ್ದರಿಂದ ನಾನು ಕೊಂಚ ಗಲಿಬಿಲಿ ಗೊಂಡೆ.ನನಗೆ ಏನು ಹೇಳಬೇಕೋ ತೋಚದೆ ಮಾತು ಹೊರಡಲಿಲ್ಲ.ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವವಿತ್ತು.ಅವ್ಯಕ್ತ ಆನಂದದ ಒಂದು ವಿಶಿಷ್ಟ ಅವಿಸ್ಮರಣೀಯ ಅನುಭೂತಿ ಉಂಟಾಗಿತ್ತು!!
Wednesday, September 21, 2011
"ಜೀ ಹುಜೂರ್.....ಮೈ ಹಾಜಿರ್ ಹ್ಞೂ !!! "
ಬಡ ರೈತನೊಬ್ಬ ತನ್ನ ಹೊಲವನ್ನು ಉಳುತ್ತಿರುವಾಗ ಒಂದು ಮಾಯಾ ದೀಪ ಸಿಕ್ಕಿತು.ಅದನ್ನು ಮುಟ್ಟಿದ ತಕ್ಷಣವೇ ದೈತ್ಯಾಕಾರದ ಭೂತವೊಂದು ಎದುರಿಗೆ ಕೈ ಕಟ್ಟಿ ನಿಂತಿತು.ರೈತ ಹೆದರಿ ಕಂಗಾಲಾದ.ಭೂತ ಮಾತನಾಡ ತೊಡಗಿತು "ಹೆದರ ಬೇಡ,ಇನ್ನು ಮೇಲೆ ನೀನೇ ನನಗೆ ಯಜಮಾನ.ನೀನು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ.ಆದರೆ ನೀನು ನನಗೆ ಸದಾ ಕೆಲಸ ಕೊಡುತ್ತಿರಬೇಕು.ನನಗೆ ಕೆಲಸ ಇಲ್ಲದಿದ್ದರೆ ನಿನ್ನನ್ನು ತಿಂದು ಮುಗಿಸುತ್ತೇನೆ.ಹೇಳು ಏನು ಮಾಡಲಿ?"ಎಂದಿತು.ರೈತ ಬೇಡಿದ್ದನ್ನೆಲ್ಲ ಭೂತ ಕ್ಷಣಾರ್ಧದಲ್ಲಿ ನೆರವೆರಿಸುತ್ತಿತ್ತು.ಆಹಾರ ,ಅರಮನೆಯಂತಹ ಮನೆ,ಐಶ್ವರ್ಯ,ಆಳು ಕಾಳು ಎಲ್ಲವೂ ಸಿಕ್ಕಿದ ಮೇಲೆ ರೈತನಿಗೆ ಭೂತಕ್ಕೆ ಕೆಲಸ ಒದಗಿಸುವುದೇ ದೊಡ್ಡ ಕೆಲಸವಾಯಿತು!ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ "ಕೆಲಸ ಕೊಡು ,ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ"ಎಂದು ದುಂಬಾಲು ಬೀಳುತ್ತಿತ್ತು.ರೈತನಿಗೆ ಜೀವ ಭಯ ಕಾಡತೊಡಗಿತು.The servant had become a master!ಈ ಭೂತದ ಕಾಟದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಊರಿನ ಬುದ್ಧಿವಂತನೊಬ್ಬನ ಸಲಹೆ ಕೇಳಿದ.ಸೂಕ್ತ ಸಲಹೆ ಸಿಕ್ಕಿತು.ಭೂತ ಅವನನ್ನು ಅಟ್ಟಿಸಿಕೊಂಡು ಬಂದು"ಕೆಲಸ ಕೊಡು"ಎಂದಿತು.ಅದಕ್ಕೆ ತನ್ನ ಮನೆಯ ಮುಂದೆ ಉದ್ದನೆಯ ಕೋಲೊಂದನ್ನು ನೆಡುವಂತೆ ಹೇಳಿದ.ಭೂತ ಕ್ಷಣಾರ್ಧದಲ್ಲಿ ಕೋಲು ನೆಟ್ಟಿತು."ಕೋಲು ನೆಟ್ಟು ಆಯಿತು.ಮುಂದೆ?"ಎಂದಿತು ಭೂತ."ನಾನು ಮುಂದಿನ ಕೆಲಸ ಹೇಳುವ ತನಕ ಈ ಕೋಲನ್ನು ಹತ್ತಿ ಇಳಿಯುತ್ತಿರು"ಎಂದ ರೈತ.ಭೂತ ತನ್ನ ಕೆಲಸ ಶುರುವಿಟ್ಟು ಕೊಂಡಿತು.ರೈತ ಭೂತದ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ಉಸಿರು ಬಿಟ್ಟ.
ಸ್ನೇಹಿತರೇ,ಈ ಕಥೆಯಲ್ಲಿ ನಮಗೊಂದು ಅದ್ಭುತ ಪಾಠವಿದೆ.ನಮ್ಮೆಲ್ಲರ ಮನಸ್ಸೂ ಈ ಭೂತದಂತೆ.ಸದಾ ಕಾಲ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ.ಕೆಲವೊಮ್ಮೆ ಆಲೋಚನೆಗಳಿಂದ ತಲೆ ಚಿಟ್ಟು ಹಿಡಿದರೂ,ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತೇವೆ!Again here the servant becomes a master! a bad master!! ಈ ಮನಸ್ಸೆಂಬ ಭೂತಕ್ಕೆ ಭಗವನ್ನಾಮ ಸ್ಮರಣೆ ಎನ್ನುವ 'ಕೋಲನ್ನು ಹತ್ತುವ' ಕೆಲಸ ಕೊಟ್ಟರೇ ನಮಗೆ ಅದರಿಂದ ಮುಕ್ತಿ!! ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
Saturday, September 17, 2011
"ಆತ್ಮನಿಗೆಆತ್ಮನೇಮಿತ್ರ ಆತ್ಮನೇ ಶತ್ರು"
"ಆತ್ಮನಿಗೆ ಆತ್ಮನೇ ಮಿತ್ರ,ಆತ್ಮನಿಗೆ ಆತ್ಮನೇಶತ್ರು!ಆತ್ಮನಿಂದಲೇ ಆತ್ಮನ ಉದ್ಧಾರ!ಆತ್ಮನಿಂದಲೇ ಆತ್ಮನ ಅವಸಾನ!"ಹೀಗೆನ್ನುತ್ತದೆ ಭಗವದ್ಗೀತೆ(೬ ನೇ ಅಧ್ಯಾಯ ೫ ನೇ ಶ್ಲೋಕ).
ಇದೇ ಭಾವ ಕೆ.ಸಿ.ಶಿವಪ್ಪ ನವರ 'ಮುದ್ದುರಾಮನ ಮನಸು'ಪುಸ್ತಕದ ಈ ಕೆಳಗಿನ ಚೌಪದಿಯಲ್ಲಿದೆ:
ಯಾರು ಮುನಿದರೆ ಏನು?ಯಾರು ಒಲಿದರೆ ಏನು?
ನಿನ್ನರಿವು ನಿನಗೆ ಮುದ ತರದಿರುವ ತನಕ ?
ಸಂಗ ಸುಖ ಶಾಶ್ವತವೆ?ಕಡಲ ಸೇರದೆ ಹೊನಲು?
ನೀ ಅತ್ಮಸಖನಾಗು-ಮುದ್ದು ರಾಮ. (333)
ನಾವು ಎಲ್ಲಿಯವರೆಗೆ ನಮ್ಮ ಸಂತೋಷಕ್ಕಾಗಿ ಹೊರಗಿನ ಪ್ರಪಂಚದ ಆಗು ಹೋಗು ಗಳ ಮೇಲೆ,ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿರುತ್ತೆವೋ ಅಲ್ಲಿಯವರೆಗೆ ನಮಗೆ ದುಃಖ ತಪ್ಪಿದ್ದಲ್ಲ ಎನ್ನುತ್ತದೆ ಗೀತೆ.ಆತ್ಮದ ಅರಿವನ್ನು ಧ್ಯಾನದಿಂದ ಪಡೆದು 'ಆತ್ಮ ಸಖ'ನಾದರೆ ನಮಗೂ ಆನಂದ ,ನಮ್ಮ ಸುತ್ತಲಿನವರಿಗೂ ಆನಂದ!ಏನಂತೀರಿ?ನಿಮ್ಮ ಅನಿಸಿಕೆ ತಿಳಿಸಿ.
Thursday, September 15, 2011
"ಟ್ರೀಟ್ ಮೆಂಟ್ ಚೆನ್ನಾಗಿದೆ "
೧)ಮುಲ್ಲಾ ನಸೀರುದ್ದೀನನಿಗೆ ಎಲ್ಲಾ ವಿಷಯಕ್ಕೂ ವಿಪರೀತ ಭಯವಾಗುತ್ತಿತ್ತು .ಅವನ ಸ್ನೇಹಿತ ಅವನನ್ನು ಮನೋವೈದ್ಯರೊಬ್ಬರ ಬಳಿಗೆ ಕಳಿಸಿದ.ಕೆಲ ತಿಂಗಳುಗಳ ಬಳಿಕ ಸ್ನೇಹಿತ ಮುಲ್ಲಾನನ್ನು ಭೇಟಿಯಾದಾಗ ಕೇಳಿದ "ಈಗ ಹೇಗಿದ್ದೀಯ ಮುಲ್ಲಾ?".ಅದಕ್ಕೆ ಮುಲ್ಲಾ ಹೇಳಿದ "ಮೊದಲೆಲ್ಲಾ ಟೆಲಿಫೋನ್ ರಿಂಗ್ ಆದರೆ ಟೆಲಿಫೋನ್ ಎತ್ತಲು ಹೆದರುತ್ತಿದ್ದೆ "ಎಂದ.ಸ್ನೇಹಿತ ಕೇಳಿದ"ಈಗ?".ಅದಕ್ಕೆಮುಲ್ಲಾ ಉತ್ತರಿಸಿದ "ಈಗ ತುಂಬಾ improve ಆಗಿದ್ದೀನಿ.ಟೆಲಿ ಫೋನ್ ರಿಂಗ್ ಆಗದಿದ್ದರೂ ಅದರಲ್ಲಿ ಮಾತನಾಡುತ್ತೇನೆ ! ". .........ಚಿಕಿತ್ಸೆಯ ಫಲ !
೨)ನಮ್ಮ ದಿನ ನಿತ್ಯದ ವ್ಯವಹಾರಗಳು ಹೇಗಿರುತ್ತವೆ ನೋಡಿ;
ಕಮಲಮ್ಮ(ಸಿಟ್ಟಿನಿಂದ );"ಏನ್ರೀ ರಾಧಮ್ಮ .......!ನನಗೆ ಶಾಂತಮ್ಮ ಹೇಳಿದರು.....,ನಾನು ಅವರಿಗೆ ಹೇಳಬೇಡಿ ಎಂದು ನಿಮಗೆ ಹೇಳಿದ ವಿಷಯವನ್ನು ನೀವು ಅವರಿಗೆ ಹೇಳಿ ಬಿಟ್ಟಿರಂತೆ!ಹೌದೇ!!"
ರಾಧಮ್ಮ ;"ಛೆ !ಛೆ!ಎಂತಹ ಕೆಟ್ಟ ಹೆಂಗಸೂ ರೀ ಆ ಶಾಂತಮ್ಮ!ನಾನು ನೀವು ಹೇಳಿದಿರಿ ಅಂತ ಅವಳಿಗೆ ಹೇಳಿದ ವಿಷಯವನ್ನುನಿಮಗೆ ಹೇಳಬೇಡಿ ಎಂದು ಹೇಳಿದ್ದೆ!"
ಕಮಲಮ್ಮ;"ಆಯಿತು ಬಿಡಿ....,ಅವಳು ಈ ವಿಷಯ ನನಗೆ ಹೇಳಿದಳು ಅಂತನಾನು ನಿಮಗೆ ಹೇಳಿದೆ ಅಂತ ಅವಳಿಗೆ ಹೇಳಬೇಡಿ....ಆಯ್ತಾ!!"............(.ದೇವರೇ ಗತಿ!!!)
(ಇದು ಓಶೋ ರವರ yoga-the science of living ಪುಸ್ತಕದಿಂದ ಆಯ್ದುಕೊಂಡಿದ್ದು .ಅಭಿಪ್ರಾಯ ತಿಳಿಸಿ.)
Wednesday, September 14, 2011
"ನಿಜವಾದ ಪ್ರೀತಿ ಬಂಧಿಸುವುದಿಲ್ಲ !!"
ನೆನ್ನೆಯ ಪ್ರಜಾವಾಣಿಯಲ್ಲಿ ಗುರುರಾಜ್ ಕರ್ಜಗಿಯವರ 'ಕರುಣಾಳು ಬಾ ಬೆಳಕೆ'ಓದಿದೆ .ಅದರಲ್ಲಿದ್ದ ವಿಚಾರಗಳು ನಮ್ಮೆಲ್ಲರ ಕಣ್ಣು ತೆರೆಸುವಂತಹದ್ದು.ನಮ್ಮ ಅತಿಯಾದ ಪ್ರೀತಿ ನಮ್ಮ ಪ್ರೀತಿ ಪಾತ್ರರನ್ನು ಕಟ್ಟಿ ಹಾಕುತ್ತಿದೆಯೇ?ನಾವೆಲ್ಲಾ ಯೋಚಿಸ ಬೇಕಾದಂತಹ ವಿಷಯ.ಲೇಖಕರು ಸಣ್ಣವರಿದ್ದಾಗ ಅವರ ಮನೆಯಲ್ಲಿ ಸಾಕಿದ ನಾಯಿ, ಬೆಳ್ಳಗಿರುವ ಬೆಣ್ಣೆಯ ಮುದ್ದೆಯಂತಿದ್ದ ಮರಿಯೊಂದನ್ನು ಹಾಕಿತ್ತು.ಇವರಿಗೆ ಅದನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಸದಾಕಾಲ ಅದನ್ನು ಎದೆಗೆ ಅವುಚಿಕೊಂಡೇ ಓಡಾಡುತ್ತಿದ್ದರು .ಆ ನಾಯಿಮರಿಗೋ ಹಿಂಸೆಯಾಗಿ ಕುಂಯ್ ಗುಡುತ್ತಿತ್ತಂತೆ.ಅವರಜ್ಜ ಅವರಿಗೆ'ನೀನು ನಿಜವಾಗಿ ನಾಯಿ ಮರಿಯನ್ನು ಪ್ರೀತಿಸುತ್ತಿದ್ದರೆ,ಅದನ್ನು ಕೆಳಗೆ ಬಿಡು.ಅದು ಸುಖವಾಗಿ ಆಟವಾಡಿಕೊಂಡು ಇರುವುದನ್ನು ನೋಡಿ ಸಂತಸಪಡು' ಎಂದರು.ಅಜ್ಜನ ಮಾತು ಕೇಳಿ,ಅದನ್ನು ಕೆಳಗೆ ಬಿಟ್ಟು ಅದು ಅಲ್ಲಿ ಇಲ್ಲಿ ಬಾಲ ಅಲ್ಲಾಡಿಸಿಕೊಂಡು ಓಡಾಡುವುದನ್ನು ನೋಡಿ ಖುಷಿ ಪಟ್ಟರಂತೆ.ಈ ಘಟನೆ ಯಿಂದ ನಾನು ದೊಡ್ಡದೊಂದು ಪಾಠ ಕಲಿತೆ ಎನ್ನುತ್ತಾರೆ ಲೇಖಕರು.ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಾ? ಹಾಗಾದರೆ ಆಕೆ ನಿಮ್ಮ ಆಜ್ಞೆಯಂತೆಯೇ ನಡೆಯ ಬೇಕೆಂಬ ಹಠ ಬಿಡಿ.ಆಕೆಯ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ.ನಿಮ್ಮ ಗಂಡನ ಬಗ್ಗೆ ನಿಮಗೆ ಪ್ರೀತಿಯೇ?ಹಾಗಾದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆಯಿರಲಿ.ಅವರ ಎಲ್ಲಾ ಸಮಯವನ್ನೂ ನನಗೆ ಮೀಸಲಿಡಬೇಕೆಂಬ ಹಠ ಬೇಡ.
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
(ಇದು ಲೇಖಕರ ಅಭಿಪ್ರಾಯ.ನಿಮ್ಮ ಅಭಿಮತ ತಿಳಿದುಕೊಳ್ಳುವ ಕುತೂಹಲ ನನಗೆ.ನಿಮ್ಮ ಪ್ರತಿಕ್ರಿಯೆ ತಿಳಿಸಿ.)
Sunday, September 11, 2011
"ಮನುಷ್ಯರ .......ಮಾತು"
ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು. ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಕವನ ಓದಿ ನಿಮ್ಮ ಅಭಿಪ್ರಾಯ ತಿಳಿಸಿ;
'ಮನ್ಸರ್ ಮಾತು '
ಹೇಳಾದ್ ಏನ್ರ,ಹೇಳಾದ್ ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.
ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್ ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?
ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ ನಿನಗೂ ?
ಕೇಳೋರ್ ಇನ್ನಾ ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!
ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!
ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !
Saturday, September 10, 2011
"ಕವಿತೆಯ ಕಷ್ಟ"
ಕವಿ ಜಿ.ಎಸ್.ಶಿವರುದ್ರಪ್ಪನವರ 'ಅಗ್ನಿ ಪರ್ವ'ಕವನ ಸಂಕಲನದಲ್ಲಿ 'ಕವಿತೆಯ ಕಷ್ಟ' ಎನ್ನುವ ಕವಿತೆ ಇಷ್ಟವಾಯಿತು.ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.ಓದಿ ನಿಮ್ಮ ಅನಿಸಿಕೆ ತಿಳಿಸಿ;
ಕೆಲವು ಕವಿತೆಗಳು
ಕರೆದ ಕೂಡಲೇ ಬಂದು ಬಿಡುತ್ತವೆ
ಚಿಕ್ಕ ಮಕ್ಕಳ ಹಾಗೆ !
ಇನ್ನು ಕೆಲವಂತೂ ಹೊಸಿಲು ದಾಟಿ ಹೊರಕ್ಕೆ
ಬರುವುದೇ ಇಲ್ಲ -ಹೊಸ ಮದುವೆ ಹೆಣ್ಣಿನ ಹಾಗೆ,
ಅವಕ್ಕೆ ಮೈ ತುಂಬ ನಾಚಿಕೆ.
ಕೆಲವು ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು.
ಇನ್ನು ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹಾವು.
ಮತ್ತೆ ಕೆಲವು ಮಬ್ಬು ಕತ್ತಲಲ್ಲಿ ಮಲಗಿರುವ
ಆಕಾರವಿರದ ನೋವು.
ಕೆಲವು ಕವಿತೆಗಳು ಕಾರ್ತೀಕದಲ್ಲಿ ಮನೆ ತುಂಬ
ಕಿಲ ಕಿಲ ನಗುವ ಹಣತೆಗಳು.
ಕೆಲವಂತೂ ಯಾವ ದುರ್ಬೀನಿಗೂ
ಕಾಣದಂತೆ ಅಡಗಿರುವ ಅಪರೂಪದ ನಕ್ಷತ್ರಗಳು.
ಕವಿತೆಯ ಕಷ್ಟ -ಸುಲಭದ ಮಾತಲ್ಲ
ಹೀಗೇ ಎಂದು ಹೇಳಲಾಗುವುದಿಲ್ಲ
ಒಂದೊಂದು ಸಲ ಸಲೀಸಾಗಿ ನೆಲ ಬಿಟ್ಟು
ಏರಿದ ವಿಮಾನ
ಅಷ್ಟೇ ಸುಗಮವಾಗಿ ನಿಲ್ದಾಣಕ್ಕೆ ಇಳಿಯುವುದು
ತೀರಾ ಅನುಮಾನ!
Friday, September 9, 2011
"ಜಗದ ಜಂಗೀ ಕುಸ್ತಿ..........!! "
ಯಾವ ಕರ್ಮದ ಫಲ
ನೂಕಿದ್ದಕ್ಕೋ !
ಯಾವ ಅನುಬಂಧದ ಬಲ
ಸೆಳೆದದ್ದಕ್ಕೋ!
ಜಗವೆಂಬ ಅಖಾಡಕ್ಕೆ
ಬಂದು ಬಿದ್ದ
ಜಟ್ಟಿ ನಾನು !
ನನ್ನಾಣೆ ನಾನೇ
ಬಯಸಿ ಬರಲಿಲ್ಲ!
ಕಣ್ಣು ತೆರೆಯುವ ಮೊದಲೇ
ಕಣದಲಿದ್ದೆ !
ಉಸಿರು ಬಿಡುವ ಮೊದಲೇ
ಸೆಣಸುತಲಿದ್ದೆ!
ಯಾರು ಯಾರೋ ಹಾಕಿದ
ಪಟ್ಟು ಗಳನ್ನೂ ....,
ವಿಧಿ ಹಾಕಿದ
'ಪಾತಾಳ ಗರಡಿಯನ್ನೂ'
ಬಿಡಿಸಿಕೊಳ್ಳಲು ಹೆಣಗಿ
ಅಖಾಡದ ಮಣ್ಣು ಮುಕ್ಕಿದ್ದೇನೆ!
ಸೋಲೋ.....ಗೆಲುವೋ......,
ಜಗದ ಈ ಜಂಗೀ ಕುಸ್ತಿ
ಮುಗಿಯುವುದನ್ನೇ ಕಾಯುತ್ತಾ
ಸೆಣಸುವುದೊಂದೇ ಮಂತ್ರವಾಗಿ !
ಸೆಣಸುತ್ತಲೇ .......ಇದ್ದೇನೆ !
ಇನ್ನೂ............!!
Tuesday, September 6, 2011
"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ "
ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ
ಬೀಜವಾಗಿ ತೂರಿಬಂದು
ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ
ಜೀವನೋತ್ಸಾಹಕ್ಕೆ
ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!
Sunday, September 4, 2011
"ಇಲ್ಲೊಂದು ಅದ್ಭುತ ಪದ್ಯ!!......ಮಿಸ್ಸಾಗ್ಲಿಲ್ಲ ಸಧ್ಯ!!"
ನವೋದಯ ಕನ್ನಡ ಸಾಹಿತ್ಯದ ಸೊಬಗನ್ನು ಹೆಚ್ಚಿಸಿದ ಕನ್ನಡ ಲೇಖಕರಲ್ಲಿ ,ರಾಘವ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿದ್ದ ಪ್ರೊ.ಎಂ.ವಿ.ಸೀತಾ ರಾಮಯ್ಯ ನವರೂ ಒಬ್ಬರು.ಅವರ ನೂರ ಒಂದನೇ ಜನ್ಮದಿನದ ಅಂಗವಾಗಿ
ಇಂದಿನ 'ಕನ್ನಡ ಪ್ರಭ'ದ ಸಾಪ್ತಾಹಿಕ ಪುರವಣಿಯಲ್ಲಿ 'ನೀವು ಕಂಡರಿಯದ ಎಂ.ವಿ.ಸೀ.'ಎನ್ನುವ ಲೇಖನದಲ್ಲಿ ಕೊಟ್ಟಿರುವ ಅವರ ಕವನ ಒಂದನ್ನು ನೋಡಿ ದಂಗಾಗಿ ಹೋದೆ!ಅದರ ಸೊಗಡನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಕವನದ ಹೆಸರು 'ಕಲ್ಲಡಿಯ ಹುಲ್ಲು ಗರಿಕೆ'.ಓದಿ ತಿಳಿಸಿ ನಿಮ್ಮ ಅನಿಸಿಕೆ :
"ಕಲ್ಲಡಿಯ....ಹುಲ್ಲುಗರಿಕೆ"
ಕಲ್ಲಡಿಯ ಹುಲ್ಲು ಗರಿಕೆ
ಅದಕಿಲ್ಲ ಹೆದರಿಕೆ
ಮೇಲೆ ಕುಳಿತ ಚಪ್ಪಡಿಯ
ಭಾರವಪ್ಪಳಿಸುತಿದೆಯೆಂದು.
ಕತ್ತಲೆಯ ಗೋರಿ ಗವಿ ಸಂದುಬಾಯಿಂದ
ಹೊರ ಹಾಕಿಹುದು ತಲೆಯ -ತನ್ನ ಹೊಸಬೆಳೆಯ.
ಎಳೆಯ ಎಲೆಯ ತಲೆಯ.
ಏನದರ ಧೈರ್ಯ ಶೌರ್ಯ!
ಅದ ಮೆಚ್ಚಿ
ಬದುಕೆಂದು ಹರಸಿದನು ಸೂರ್ಯ.
ತುಂಬಿದನು ಆಯುಷ್ಯ ಅಪ್ಪುಗೆಯ ಬಿಸುಪಿತ್ತು.
ಗಾಳಿ,ಬಾಳಿನ ಗೆಳೆಯ
ಬಂದು ತಡವಿದನು ಮೈಯ
ಹೊಸ ಉಸಿರನಿತ್ತು.
ಮೈಯೊಲೆದು ತಲೆ ಕೊಡಹಿ
ನಿರ್ಭಯತೆಯಲಿ ನಲಿಯುತಿದೆ
ಹುಲ್ಲು ಗರಿಕೆ.
ಅದಕಿಲ್ಲ ಹೆದರಿಕೆ.
ಅಹುದು ,
ತೇನವಿನಾ ತೃಣಮಪಿ ನ ಚಲತಿ.
ಆದರೆ .............,
ಬಿದ್ದಾಗಲೆದ್ದು ನಿಲ್ಲುವ ಯತ್ನವಿಲ್ಲದಿರಲು
ಅವನೂ ಹಿಡಿಯ ಮೇಲೆತ್ತಿ.
(ಕವಿತೆಯ ಕೆಳಗೆ ಕವಿ ಪು.ತಿ.ನ. ಬರೆದ ಅಡಿ ಟಿಪ್ಪಣಿ ಹೀಗಿದೆ;'ಕಲ್ಲಡಿಯ ಗರಿಕೆ'ಯನ್ನು ಈಗತಾನೇ ಓದಿ ಸಂತಸಗೊಂಡೆ.ಒಳ್ಳೇ ಚೆಂದದ ಅನ್ಯೋಕ್ತಿ ಇದು.what a fine poem!congratulations! )
Subscribe to:
Posts (Atom)

