Sunday, May 27, 2012

"ಯಾರೋ ಹೇಳಿದರು ಅಂತ ಎಡವಟ್ಟು ಮಾಡಿಕೊಂಡರು !!!"

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

12 comments:

  1. PUKKATE SALAHEGE UCHITA MADDU-CHENNAGI BUDHI HELIDDERI
    DHANYAVADAGALU

    ReplyDelete
    Replies
    1. ಯಾರದೋ ಪುಕ್ಕಟ್ಟೆ ಸಲಹೆಗಳನ್ನೂ ಕೇಳಿದರೆ ಎಂತೆಂತಹ ಅನಾಹು ತಗಳಾಗುತ್ತದೆ ಎನ್ನುವುದಕ್ಕೆ ಇವು ಕೆಲವು ಉದಾಹರಣೆಗಳಷ್ಟೇ.ಪ್ರತಿಕ್ರಿಯೆಗೆ ಧನ್ಯವಾದಗಳು ಹೇಮು.ನಮಸ್ಕಾರ.

      Delete
  2. ತಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು ವಸಂತ್.ಇವು ನೆನಪಿನಲ್ಲಿರುವ ಕೆಲವು ಉದಾಹರಣೆಗಳಷ್ಟೇ.ಮೂವತ್ತೈದು ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಮರೆತು ಹೋಗಿರುವ ಅನುಭವಗಳೆಷ್ಟೋ!ಉದಾಸೀನ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವ ಹಲವಾರು ಮಂದಿಯನ್ನು ನೋಡುತ್ತಲೇ ಇರುತ್ತೇವೆ.

    ReplyDelete
  3. ಬೆರಳು ಸಂದಿ ಆದ ಫಂಗಸ್ ಸಮಸ್ಯೆಗೆ ಗೇರೆಣ್ಣೆ ಹಚ್ಚಿಕೊಂಡು ಬೊಂಬಡಿ ಪಟ್ಟಕಂಡವರನ್ನ ನೋಡಿದ್ದೀನಿ.

    ReplyDelete
  4. ಕಾಲಿನ ಮಧ್ಯಭಾಗದಲ್ಲಿ ಮೂಳೆಯ ಮೇಲೆ ಆದ ಬಹಳ ಆಳವಾದ ಗಾಯಕ್ಕೆ ರಕ್ತಸ್ರಾವ ನಿಲ್ಲಲು ಟಾಲ್ಕಂ ಪೌಡರ್ ಹಾಕಿ ,ಎಷ್ಟು ದಿನಗಳಾದರೂ ಗಾಯ ವಾಸಿಯಾಗದ ಒಬ್ಬರನ್ನು ನೋಡಿದ್ದೇನೆ.ಬೇರೆ ಪ್ರಾಜೆಕ್ಟ್ ನಲ್ಲಿ ಗಾಯವಾಗಿ ಅಲ್ಲಿ ಹೊಲಿಗೆ ಹಾಕಿಸಿಕೊಂಡು ಬಂದಿದ್ದರು .wound infection ಆಗಿ gaping ಆಯಿತು.ಯಾವುದೇantibiotic ಗೂ ಜಪ್ಪಯ್ಯ ಅನ್ನುತ್ತಿರಲಿಲ್ಲ.ಅವರಿಗೆ ಶುಗರ್ ಆಗಲಿ ಮತ್ಯಾವುದೇ ತೊಂದರೆಯಾಗಲಿ ಇರಲಿಲ್ಲ.ಯಾಕೆ ಹೀಗೇ ಎಂದು ತಲೆ ಕೆಡಿಸಿಕೊಳ್ಳುತ್ತಿರುವಾಗ ಮೊತ್ತ ಮೊದಲು ರಕ್ತಸ್ರಾವ ನಿಲ್ಲಲು ಅವರ ಸ್ನೇಹಿತರೊಬ್ಬರು ಗಾಯಕ್ಕೆ ಪೌಡರ್ ತುಂಬಿದ್ದರು ಎನ್ನುವ ವಿಷಯ ತಿಳಿಯಿತು.ಇದೇರೀತಿ ಗಾಯಕ್ಕೆ ಕಾಫಿ ಪುಡಿ ತುಂಬಿದ್ದ ಕೇಸೊಂದರಲ್ಲಿ ಗಾಯ ವಾಸಿಯಾಗಲು ಎರಡುತಿಂಗಳುಬೇಕಾಯಿತು.
    ಗಾಯದಲ್ಲಿ these insoluable elements act as foreign bodies and prevent healing. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಧನ್ಯವಾದಗಳು ವಸಂತ್.

    ReplyDelete
  6. ಡಾಕ್ಟ್ರೆ...

    ಯಾರೋ ಏನೋ ಹೇಳ್ತಾರೆಂದು ಎಡವಟ್ಟು ಔಷಧಗಳನ್ನು ತೆಗೆದುಕೊಳ್ಳುವದು ಹಳ್ಲಿಗಳಲ್ಲಿ ಮಾಮೂಲಿ....
    ನಮ್ಮ ಕುಷ್ಟ ಇನ್ನೊಬ್ಬ ಸ್ನೇಹಿತನಿಗೆ ಮನೆಯಲ್ಲಿದ್ದ ಮಾತ್ರೆಕೊಟ್ಟಿದ್ದು ನೆನಪಾಯ್ತು...

    ನಮ್ಮೂರಲ್ಲಿ ಡಾಕ್ಟರ್ ಇಲ್ಲ..
    ಡಾಕ್ಟರ್ ಇರುವದು ನಾಲ್ಕು ಕಿಲೊಮೀಟರ್ ದೂರದಲ್ಲಿ...

    "ಏನ್ರೀ..
    ಹೊಟ್ಟೆ ನೋವಾ?
    ಎರಡು ತಿಂಗಳ ಹಿಂದೆ ನನಗೂ ಆಗಿತ್ತು...
    ಡಾಕ್ಟರ್ ಕೊಟ್ಟ ಮಾತ್ರೆ ಮನೆಯಲ್ಲಿ ಇದೆ..
    ಸುಮ್ನೆ ಯಾಕೆ ಅಷ್ಟು ದೂರ ಹೋಗ್ತೀರಿ..?"
    ಅಂತ ಮನೆಯಲ್ಲಿದ್ದ ಮಾತ್ರೆ ಕೊಡುವವರು ನಮ್ಮೂರಲ್ಲಿ ಜಾಸ್ತಿ..

    ತೀಳುವಳಿಕೆಯುಕ್ತ ಲೇಖನ... ಧನ್ಯವಾದಗಳು..

    ReplyDelete
  7. ಪ್ರಕಾಶಣ್ಣ;ನಿಮ್ಮ ಕುಷ್ಟ ಹೊಟ್ಟೆ ನೋವಿಗೆ ಮಾತ್ರೆ ಕೊಟ್ಟು ಎಡವಟ್ಟು ಮಾಡಿದ ಪ್ರಸಂಗದ ಬಗ್ಗೆ ನೀವು ಬರೆದ ಲೇಖನ ತುಂಬಾ ಚೆನ್ನಾಗಿತ್ತು.ನಿಮ್ಮ ನೆನಪಿನ ಸಂಚಿಯಲ್ಲಿ ಇಂತಹ ಘಟನೆಗಳು ಸಾಕಷ್ಟು ಇರಬಹುದು.ನಮ್ಮೊಂದಿಗೆ ಹಂಚಿಕೊಳ್ಳಿ.ಮತ್ತಷ್ಟು ನಗಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ವೈದ್ಯೋ ನಾರಾಯಣೋ ಹರಿಹಿ ಎಂದೂ ಸಂಸ್ಕೃತದಲ್ಲಿ ಉಕ್ತಿಯಿದೆ ಸರ್. ನಾರಾಯಣ ಸ್ವರೂಪರಾದ ಡಾಕ್ಟರ ಗಳನ್ನೂ ಬಿಟ್ಟು ತಾವೇ ಡಾಕ್ಟರ ಆಗಲು ಹೋಗಿ ಏನೇನು ಫಜೀತಿ ಪಡುತ್ತಾರೋ.. ಉದಾಹರಣೆಗಳೊಂದಿಗೆ ತಿಳುವಳಿಕೆಯ ಲೇಖನ ನೀಡಿದ್ದಿರಿ. ಚೆನ್ನಾಗಿದೆ

    ReplyDelete
  9. ಸಂಧ್ಯಾಶ್ರೀಧರ್ ಭಟ್;ಅವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.'ವೈದ್ಯೋ ನಾರಾಯಣೋ ಹರಿಃ'ಎಂಬ ಉಕ್ತಿ ಈಗಲೂ ಎಲ್ಲಾ ವೈದ್ಯರಿಗೂ ಅನ್ವಯಿಸುತ್ತದೆಯೋ ಎನ್ನುವ ವಿಷಯದ ಬಗ್ಗೆ ನನಗೇ ಅನುಮಾನವಿದೆ.ಎಲ್ಲಾ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರದಲ್ಲೂ ವ್ಯಾಪಾರೀಕರಣ ತಲೆ ಹಾಕಿದೆ.ಆದರೆ ನಾನು ಹೇಳುವುದು ಇಷ್ಟೇ.ಯಾವುದೇ ವಿಷಯದಲ್ಲಾಗಲೀ ಯಾರೋ ಹೇಳಿದ ಮಾತು ಕೇಳುವುದಕ್ಕಿಂತ ಸಂಬಂಧ ಪಟ್ಟವರಿಂದ ಸೂಕ್ತ ಮಾಹಿತಿ ಪಡೆದು ಅದರಂತೆ ನಡೆದು ಕೊಳ್ಳುವುದು ಒಳಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.