Friday, March 20, 2015

"ಯಾರೋ ಹೇಳಿದ್ರು ಅಂತ...."

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

5 comments:

  1. ಗದುಗಿನ ಪಂಚಾಕ್ಷರಿ ಗವಯಿಗಳು ಇನ್ನೂ ಚಿಕ್ಕ ಹುಡುಗರಾಗಿದ್ದಾಗ, ಅವರಿಗೆ ಕಣ್ಣುಬೇನೆ ಬಂದಿತ್ತು. ಅವರ ತಾಯಿ ಯಾರದೋ ಮಾತು ಕೇಳಿ, ಹುಡುಗನ ಕಣ್ಣುಗಳಲ್ಲಿ ಎಂತಹದೋ ಒಂದು ಸೊಪ್ಪಿನ ರಸವನ್ನು ಹಿಂಡಿದರು. ಪರಿಣಾಮದಲ್ಲಿ, ಹುಡುಗ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ. ಆದರೇನು, ಅವನ ಭಾಗ್ಯದಲ್ಲಿ ದೊಡ್ಡ ಗವಯಿಯಾಗುವ ಹಾಗು ಅನೇಕ ಕುರುಡು ಬಾಲಕರಿಗೆ ಆಶ್ರಯ ಹಾಗು ವಿದ್ಯೆ ಕೊಡುವುದು ಬರೆದಿತ್ತು. ಅವರ ಶಿಷ್ಯರು ಪುಟ್ಟರಾಜ ಗವಯಿಗಳೂ ಸಹ ದೊಡ್ಡ ಹೆಸರು ಗಳಿಸಿದರು.

    ReplyDelete
  2. ತುಂಬಾ ಸಲಿ ನಾನೂ ಗಮನಿಸಿದ್ದೇನೆ. ನನ್ನ ಮಾವನ ಮಗನೆ, ಕುಂಡೆಯಿಂದ ಹೊರಬಂದು ತುರಿಕೆ ಕೊಡುವ ಹೊಟ್ಟೆ ಹುಳುಗಳ ಕಾಟ ತಪ್ಪಿಸಿಕೊಳ್ಳಲು ಸೀಮೆ ಎಣ್ಣೆ ಸುರಿದುಕೊಂಡು ಒಂದು ವಾರ ವಾರ್ವಾರೆ ನಡೆಯುತ್ತಿದ್ದ!!!
    ಅಂದಹಾಗೆ ನನ್ನ ಇತ್ತೀಚಿನ ಬ್ಲಾಗ್ ಬರಹ-http://machikoppa.blogspot.in/2015/03/blog-post.html

    ReplyDelete
  3. ನಿಜವಾಗಲೂ ಕಣ್ಣು ತೆರೆಸುವ ಪುಟ್ಟ ಬರಹ.

    ೧. ಯಾರದೋ ಮಾತು ಕೇಳಿಕೊಂಡು ತಪ್ಪು ನಿರ್ಧಾರಕ್ಕೆ ಬರುವುದು.
    ೨. ಮೆಡಿಕಲ್ ಶಾಪ್ ಅವರಿಗೇ ರೋಗ ಲಕ್ಷಣ ಹೇಳಿ ಮಾತ್ರೆ ತೆಗೆದುಕೊಳ್ಳುವುದು.
    ೩. ಹಿಂದೊಮ್ಮೆ ನಮಗೆ ಯಾರೋ ವೈದ್ಯರು ಬರೆದುಕೊಟ್ಟ ಮಾತ್ರೆಗಳನ್ನೇ ನಾವು ಪರಿಚಯದವರಿಗೂ ತೆಗೆದುಕೊಳ್ಳಲು ಹೇಳುವುದು.
    ಮೊದಲು ಅತೀ ಬುದ್ದಿವಂತಿಕೆಯ ತೀರ್ಮಾನಗಳಿಗೆ ನಾವು ಇಂತಹ ಬಂದು ಬಿಡುತ್ತೇವೆ. ಇವೇ ಅಸಲೀ ಎಡವಟ್ಟಿಗೆ ಕಾರಣ!

    ಎಲ್ಡೋಪರ್ ತೆಗೆದುಕೊಳ್ಳುವ ಜಾಗದಲ್ಲಿ ಲ್ಯಾಕ್ಸಟೀವ್ ಕೊಟ್ಟರೆ ಏನ್ ಸ್ವಾಮೀ ಗತಿ? ಹರೋ ಹರಃ!

    ReplyDelete
  4. ಫೆಸ್ ಬುಕ್ಕಿನ 3K - ಕನ್ನಡ ಕವಿತೆ ಕಥನ ಗುಂಪಿನ ಪರವಾಗಿ ತಮಗೆಲ್ಲ ಅಭಿನಂದನೆಗಳು:

    ವಾರ: 49, 30/03/2015

    ಈ ವಾರ ನಾನು ಓದಿದ "ವಾರದ ಅತ್ಯುತ್ತಮ ಬ್ಲಾಗ್ ಪೋಸ್ಟ್",
    ಶ್ರೀಯುತ. Gangadhar Divatar ಅವರ
    ' ನಿಶ್ಚಲವಾಗಿ ನಿಂತಿದ್ದೇನೆ
    ಜೀವ-ಜೀವಿಗಳಿಗೆ ಸೇತುವೆಯಾಗಿ' ಎನ್ನುತ್ತಿರುವ,
    ’ಯಾರೋ ಬಂದರು’ ಎನ್ನುವ ಈ ಅಪರೂಪದ ಕವನ:
    http://kannadadhaare.blogspot.in/2015/03/blog-post_28.html

    ಈ ವಾರ ನನ್ನ ಗಮನಕ್ಕೆ ಬಂದ "ವಾರದ ಅತ್ಯುತ್ತಮ ಕಮೆಂಟು",
    ಶ್ರೀಯುತ. DrKrishnamurthy DT ಅವರ
    "ಯಾರೋ ಹೇಳಿದ್ರು ಅಂತ...." ಲೇಖನವನ್ನು ಓದಿ,
    ಶ್ರೀಯುತ. Subramanya Machikoppa ಅವರು ಬರೆದ ಕಮೆಂಟು,
    ಮೂಲ ಪೋಸ್ಟ್:
    http://dtkmurthy.blogspot.in/2015/03/blog-post.html

    Fanofyou

    ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿರಿ:
    https://www.facebook.com/photo.php?fbid=951204354924014&set=gm.1566634193596063&type=1&theater
    Chat Conversation End

    ReplyDelete
  5. ಕೊಟ್ಟ ಬುತ್ತಿ ಹೇಳಿಕೊಟ್ಟ ಮಾತು . ಹಹಹಹ
    ನಗು ಬಂದರೂ ಕಣ್ಣು ತೆರೆಸುವ ಲೇಖನ.. ಉತ್ತಮ ಮತ್ತು ಖಚಿತ ಸಲಹೆ, ಮಾಹಿತಿ ಇಲ್ಲದೆ ಹೋದರೆ ಎಂಥಹ ಅವಘಡಗಳು ಕಾಲಿಡುತ್ತವೆ
    ಉತ್ತಮ ಉಪಯುಕ್ತ ಲೇಖನ

    ReplyDelete

Note: Only a member of this blog may post a comment.