Sunday, February 5, 2012

"ಕೊಳಲಿನ ....ಅಳಲು!"

ಕೊಳಲಿನಲಿ ಉಸಿರಿಲ್ಲ!
ಉಸಿರಿಲ್ಲದೆ ಬೇಸರದಿಂದ 
ನಿಡುಸುಯ್ಯಲೂ.....ಉಸಿರಿಲ್ಲ!
ಉಸಿರಿಲ್ಲದ ಬದುಕಿದು
ಎಂಥಾ ......ಬದುಕು?
ಖಾಲಿ ಬಿದಿರಿನ ಬದುಕು!
ಸಾಕಾಗಿದೆ 'ಶ-ಬರಿ'ತನ!
ರಾಗ ಹಾಕಿದೆ ಗಸ್ತು!
ಕೆಲಸವಿಲ್ಲದೇ ......ಸುಸ್ತು!
'ಗೋವುಗಳ'ಕಿವಿಗಳು
ಇಂಪಿಗಾಗಿ ಕಾದು ಸೋತಿವೆ!
ಎಲ್ಲಿ ಹೋದ ಕೃಷ್ಣ?
'ಗೋಪಿಯರ' ಚಿಂತೆಯಲಿ
ಮರೆತನೇ.....ಕೊಳಲ?
ಕೇಳುವನೆ ತನ್ನ ಅಳಲ...?
ಎಲ್ಲಿ ಹೋದ...... ಕೃಷ್ಣ?
ಎಲ್ಲಿ ಹೋದ..... ಕೃಷ್ಣ ?
ಬರೀ ಮೂರ್ತಿಯನೆ ಬಿಟ್ಟು!!
(ಕವಿತೆಯನ್ನು ಬರೆಯಲು ಪ್ರೇರಣೆ ನೀಡಿದ ಮಿತ್ರ ,ಕವಿ ,ಬದರಿನಾಥ್ ಪಲವಳ್ಳಿ ಯವರಿಗೆ ನಮನಗಳು.'ಶಬರಿ'ತನ ಅವರು ಬಳಸುವ ಪದ.ಅವರ ಅನುಮತಿ ಪಡೆಯದೇ ನಾನೂ ಬಳಸಿಕೊಂಡಿದ್ದೇನೆ.ಬದರಿ ಸರ್ ಕ್ಷಮೆ ಇರಲಿ .)

17 comments:

  1. 1.
    'ಶಬರಿ' ಮತ್ತು 'ಅಹಲ್ಯೆ' - ಕಾಯುವಿಕೆಯ ಸರಳ ಸಂಕೇತಗಳು. ಬದುಕಿನಲ್ಲಿ ನಾನು ಕಾದು ಕಾದೇ ಕಾವೆದ್ದು ಹೋದವನು.

    ನನ್ನ 'ಶಬರಿತನ' ಪದದ ಪದೇ ಪದೇ ಬಳಕೆಯನ್ನು ಗುರಿತಿಸಿದ ನೀವೇ ನನ್ನ ಪಾಲಿನ ವಿಮೋಚನೇಶ ಶ್ರೀರಾಮಚಂದ್ರ.

    ನನ್ನಿಂದ 'ಕೊಳಲು' ಮತ್ತೆ ಮೊರೆವಂತಾಯಿತಲ್ಲ, ಕುಚೇಲನ ಪಾಲಿಗೆ ಇದೇ ಕೃಷ್ಣ ಧರ್ಶನದ ಸಾರ್ಥಕ್ಯ ಕ್ಷಣ!

    ನೀವು ಬರೆದ ಕವನದ ಅಡಿ ಬರಹದಲ್ಲಿ ನನ್ನಂಥ ಅಙ್ಞಾತ ಕವಿಯ ಹೆಸರೂ ಉಲ್ಲೇಖಿಸಿ ನನ್ನ ಕವಿತ್ವವನ್ನೂ ಅಮರತ್ವ ಮಾಡಿಬಿಟ್ರಿ ಸಾರ್.

    ಧನ್ಯೋಸ್ಮಿ...

    ReplyDelete
  2. 2.
    "ರಾಗ ಹಾಕಿದೆ ಗಸ್ತು!
    ಕೆಲಸವಿಲ್ಲದೇ ......ಸುಸ್ತು!"

    ವಾರೆವ್ಹಾ ಪ್ರಾಸಬದ್ಧ ಕವನ.

    ಕೊಳಲಿಗೂ ಖಾಲಿತನವೇ? ಅದು ಬಿದಿರೇ ಇರಬಹುದು, ಅದರ ಆತ್ಮದಂತಹ ಬರಹಗಾರ ಎಂದೂ ಖಾಲೀತನ ಅನುಭವಿಸಬಾರದು.

    ಗೋಪಿ ಜನ ಕಿವಿ ನಿಮಿರಿಸಿ ಕಾದು ಕುಳಿತಿದ್ದಾರೆ ಬ್ಲಾಗು ಓದಲು. ಕೃಷ್ಣ ಮೂರ್ತಿಗಳು ಹೀಗೆ ಬರೆಯದೇ ಕುಳಿತಿರಬಾರದು!

    ಸರಳ ಶೈಲಿಯ ಉತ್ಕೃಷ್ಟ ಕಾವ್ಯ ಪ್ರಯೋತ್ನ, ಪದ ಲಾಲಿತ್ಯ ಮತ್ತು ಭಾವ ಪೂರ್ಣ ಕವನ.

    ReplyDelete
  3. This comment has been removed by the author.

    ReplyDelete
  4. This comment has been removed by the author.

    ReplyDelete
  5. ಅಂದು ಶ್ರೀ ಕೃಷ್ಣ ಯಮುನಾ ತೀರದಿ ಕೋಲು ನುಡಿಸಿ ವಿಶ್ವಗೆದ್ದರೆ , ಇಂದು ಈ ಕೃಷ್ಣ ಶರಾವತಿ ತೀರದಿಂದ ಕೋಲು ನುಡಿಸುತ್ತಾ ನಮ್ಮ ಹೃದಯ ಗೆದ್ದಿದ್ದಾರೆ.ಕೊಳಲಿನ ಬಗ್ಗೆ ಅದ್ಭತ ಕವಿತೆ.
    'ಗೋವುಗಳ'ಕಿವಿಗಳು
    ಇಂಪಿಗಾಗಿ ಕಾದು ಸೋತಿವೆ!
    ಎಲ್ಲಿ ಹೋದ ಕೃಷ್ಣ?
    'ಗೋಪಿಯರ' ಚಿಂತೆಯಲಿ
    ಮರೆತನೇ.....ಕೊಳಲ?
    ಕೇಳುವನೆ ತನ್ನ ಅಳಲ...?
    ನೆನಪಿನಲ್ಲಿ ಉಳಿಯುವ ಸಾಲುಗಳು , ಜೈ ಹೋ ಸರ್
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ಒಳ್ಳೆ ಕವನ ಸರ್ :))) ಖುಷಿಯಾಯ್ತು :)

    ReplyDelete
  7. ಡಾಕ್ಟರ್ ಸರ್,

    [ಪ್ರತಿಕ್ರಿಯೆಯಲ್ಲಿ ಎರಡು ಭಾಗಗಳಿವೆ, ಮೊದಲಿನದು ನನ್ನ ಲೇಖನದ ಕುರಿತು.]
    ಅಪ್ರಸ್ತುತ :
    ------

    ಬೆಳಿಗ್ಗೆ ತಮ್ಮಲ್ಲಿ ಮಾತಾಡಿದಾಗಿನಿಂದ ಅರೆನಿಮಿಷ ಬಿಡುವಿರಲಿಲ್ಲ. ಈಗಲೂ ಯಾವುದೋ ಕರೆಮುಗಿಸಿ ಇಲ್ಲಿ ಹೀಗೆ ಬರೆಯುತ್ತಿದ್ದೇನೆ. ಸುಮಾರು ೩೦೦ ಕ್ಕೂ ಅಧಿಕ ಕರೆಗಳು ಅಂದರೆ ತಪ್ಪಲ್ಲ, ಗಂಟಲು ಒಡೆದು ಹೋಗುವ ನೋವು! ಮಾತಾಡೀ ಮಾತಾಡೀ ಸುಸ್ತು, ಎಲ್ಲಾ ಅಡಗಿ ಮಾತಾಡುವ ಶ್ರೀಧರಸ್ವಾಮಿಗಳ ಭಕ್ತರೇ, ಯಾರಿಗೂ ಮುಂದೆ ಬಂದು ಪ್ರತಿಕ್ರಿಯಿಸಲು ಧೈರ್ಯವಿಲ್ಲ. ನೋಡಿ ಸ್ವಾಮೀ ಶ್ರೀಧರರ ಬಗ್ಗೆ ನಾನು ಹ್ಲವಾರು ಲೇಖನಗಳನ್ನು ಬರೆದಿದ್ದೇನೆ. ಆದರೆ ಅವರನ್ನು ಉಡಾಫೆಮಾಡಿದ ಲೇಖನ ನನ್ನ ಮನದಾಳಕ್ಕೆ ನಾಟಿದ ಬಾಣ! ಅದಕ್ಕಾಗಿ ಆ ಬರಹ, ಯಾವುದೇ ವೈಯ್ಯಕ್ತಿಕ ರಾಗದ್ವೇಷದಿಂದಲ್ಲ.

    ಪ್ರಸ್ತುತ:
    ------

    ಹೌದು, ಕೃಷ್ಣ ಕೊಳಲು ಬಿಸುಟು ಜಾಗ ಖಾಲಿ ಮಾಡಿದ್ದಾನೆ. ಅವನಿಗೆ ಈ ಜನಾಂಗದ ಹೊಸ ನಮೂನೆಯ ನಡವಳಿಕೆ ಹಿಡಿಸುತ್ತಿಲ್ಲ. ಆತ ಮರೆಯಲ್ಲಿ ನಿಂತು ನೋಡುವನೇ ಹೊರತು ಇದಿರು ಬಂದು ನಮ್ಮನ್ನು ಸಂತೈಸಲಾರ. ಅವನ ಇರುವಿಕೆ ಇತ್ತು ಎಂಬುದೇ ಕೇವಲ ಕಟ್ಟುಕಥೆ ಎನ್ನುವ ಜನರ ನಡುವೆ ತನಗಾಗಿ ಕಾತರಿಸುವ ಭಕ್ತಭಾವುಕರಿಗೆ ಇನ್ನಾವುದೋ ರೂಪದಲ್ಲಿ ಕಾಣುತ್ತಾನೆ. || ಸಂಭವಾಮಿ ಯುಗೇ ಯುಗೇ || ಸದ್ಯಕ್ಕೆ ನಮ್ಮ ಕೊಳಲು ಬಿದಿರ ಕೊಳವೆಯಷ್ಟೇ. ಆತನ ಕೈಲಿ ಅದು ಸಿಕ್ಕಾಗಲೇ ಕೊಳಲು ಎನಿಸಿಕೊಳ್ಳುತ್ತದೆ. ಕವನ ಸುಂದರವಾಗಿದೆ, ಧನ್ಯವಾದಗಳು,

    || ಸರ್ವೇ ಜನಾಃ ಸುಖಿನೋ ಭವಂತು ||

    ReplyDelete
  8. ಕೊಳಲಿನ ಇಂಪು ದನಿಯನ್ನು ಮತ್ತಿದೀಗ ಕೇಳಿದಂತಾಯ್ತು!

    ReplyDelete
  9. wow.... sundaravaagide kavana....

    Badri sir nenapu maaDtaa avarade JALAK bandide kavanakke sir..

    super kavana....

    ellaa saalugaLu arthapurna...

    ReplyDelete
  10. ಎಲ್ಲಿ ಹೋದ..... ಕೃಷ್ಣ ?
    ಬರೀ ಮೂರ್ತಿಯನೆ ಬಿಟ್ಟು!
    ಸಾಲು ತುಂಬಾ ಇಷ್ಟವಾಯಿತು.
    ಚೆನ್ನಾಗಿದೆ
    ಸ್ವರ್ಣ

    ReplyDelete
  11. ಉಸಿರಿಲ್ಲದ ಬದುಕಿದು
    ಎಂಥಾ ......ಬದುಕು?
    ಖಾಲಿ ಬಿದಿರಿನ ಬದುಕು!
    ಸಾಕಾಗಿದೆ 'ಶ-ಬರಿ'ತನ!

    ಈ ಸಾಲುಗಂತೂ ತುಂಬಾ ಇಷ್ಟವಾದವು ಕವನ ಉತ್ತಮ ಉದ್ದೇಶವನ್ನೊಳಗೊಂಡಿದೆ ಧನ್ಯವಾದಗಳು ಮೂರ್ತಿ ಸರ್.....

    ReplyDelete
  12. ಡಾಕ್ಟ್ರೇ,
    ಕೊಳಲಿನ ಸ್ಥಿತಿಯ ಬಗ್ಗೆ ಒಂದು ಚೆಂದದ ಕವಿತೆಯನ್ನು ಬರೆದಿದ್ದೀರಿ. ಅದರ ದನಿ ಎಷ್ಟು ಮುಖ್ಯ ಗೋವುಗಳಿಗೆ ಎನ್ನುವುದು ನಿಮ್ಮ ಕವಿತೆಯಲ್ಲಿ ವ್ಯಕ್ತವಾಗುತ್ತದೆ.

    ReplyDelete
  13. ಇದು ನಮ್ಮೆಲ್ಲರ ಆಧ್ಯಾತ್ಮದ ತುಡಿತದ ಚಿತ್ರಣ.ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. ವಾಹ್! ಸಾರ್... ಎಂಥ ಕವನ! ನಿಮ್ಮ ಹೆಸರೂ ನಿಮ್ಮ ಬ್ಲಾಗಿನ ಹೆಸರೂ ಸೇರಿಸಿ ತುಂಬಾ ಚೆನ್ನಗಿ ರೂಪಕಗಳನ್ನು ಹೊಂದಿಸಿದ್ದೀರಿ!

    ReplyDelete
  15. ಕೊಳಲಿನ ಅಳಲು ಸಮರ್ಥವಾಗಿ ಮೂಡಿ ಬಂದಿದೆ ಸರ್..... ಸಣ್ಣ ಸಣ್ಣ ಸಾಲುಗಳಲ್ಲಿ ಚಂದದ ಕವನ....

    ReplyDelete
  16. adbhuta kavana -kolalu-krishna-shabari-gopike enthaa sanketagalu waahh...

    ReplyDelete
  17. ಮೂರ್ತಿ ಸರ್,

    ಮತ್ತೆ 'ಕೊಳಲಿನ' ಧ್ವನಿ ಕೇಳ ಸಿಕ್ಕಿತಲ್ಲಾ ಎಂಬ ಸಂತಸ.....
    ಸುಂದರ ಕವನ ಸರ್..ಇಷ್ಟ ಆಯಿತು......

    ReplyDelete

Note: Only a member of this blog may post a comment.