Tuesday, June 19, 2012

"ಜಿಂದಗೀ,ಕೈಸಿ ಹೈ ಪಹೇಲಿ !! ಹಾಯೆ !!"-ಹೀಗೊಂದು ಅನುಭವ!!!!

ಕೆಲವು ದಿನಗಳಿಂದ ಯಾವುದೇ ಏರುಪೇರಿಲ್ಲದೇ ಜೀವ ನದಿ ಶಾಂತವಾಗಿ ಹರಿಯುತ್ತಿತ್ತು. ಶಾಂತವಾದ ಕೊಳವೊಂದರಲ್ಲಿ ಕಲ್ಲು ಹಾಕಿದಂತೆ ಮೊನ್ನೆ ತಲೆಯೊಳಗೆ ಹುಳವೊಂದನ್ನು ಬಿಟ್ಟುಕೊಂಡು,ಯಾವುದೋ ವಿಷಯವೊಂದರ ಬಗ್ಗೆ ಚಿಂತಿಸಿ,ಸಂಜೆಯ ವೇಳೆಗೆ ನನ್ನ ತಲೆ 'ಚಿಂದಿ,ಚಿತ್ರಾನ್ನ'ವಾಗಿತ್ತು.ಆಗ ಹತ್ತಿರದ ಸಂಬಂಧಿಯೊಬ್ಬರ ಫೋನು ಬಂತು.ಗೃಹ ಪ್ರವೇಶಕ್ಕೆ ಬರಲೇ ಬೇಕು ಎಂದು ಒತ್ತಾಯಪೂರ್ವಕ ಆಮಂತ್ರಣ.ಹೋಗಲಾರದಂತಹ ಪರಿಸ್ಥಿತಿ.ಅನಾನುಕೂಲ.ಅರ್ಥಮಾಡಿಸಲು ಹೆಣಗುತ್ತಿದ್ದೆ.ಅಷ್ಟರಲ್ಲಿ ಮೊಬೈಲ್ ನಲ್ಲಿ 'ಬೀಪ್....ಬೀಪ್ 'ಎನ್ನುವ ಶಬ್ದ ಬಂದು ಇನ್ನೊಂದು ಕರೆ ಬರುತ್ತಿರುವ ಸೂಚನೆ ಕೊಟ್ಟಿತು. ಗೃಹ ಪ್ರವೇಶದ ಆಮಂತ್ರಣದ ಕರೆ ಮುಗಿಯುತ್ತಿದ್ದಂತೆ ಇನ್ನೊದು ಕರೆ ಬಂತು.ಅವರೂ ಬಹಳ ಪರಿಚಯದವರು,ಆತ್ಮೀಯರು.ಮೇಲಾಗಿ ಸಹೃದಯಿ.ಅತ್ತ ಕಡೆಯಿಂದ ಅವರ ಮಾತು"ಸಾರಿ ಡಾಕ್ಟರ್ ,ದೇರ್ ಈಸ್ ಎ ಬ್ಯಾಡ್ ನ್ಯೂಸ್. ಇವತ್ತು ಬೆಳಿಗ್ಗೆ ನನ್ನ ಹೆಂಡತಿ ತೀರಿಕೊಂಡರು"ಎಂದರು.ಈ ಅನಿರೀಕ್ಷಿತ ಆಘಾತಕರ ಸುದ್ದಿಯಿಂದ ಏನು ಹೇಳಬೇಕೋ ತೋಚದೆ ತಲೆ ತಿರುಗಿದಂತಾಗಿ ,ಪದಗಳಿಗಾಗಿ ತಡವರಿಸುತ್ತಿದ್ದೆ. ಅಷ್ಟರಲ್ಲೇ ಮೊಬೈಲ್ ನಲ್ಲಿ 'ಬೀಪ್ .....ಬೀಪ್'ಎನ್ನುವ ಶಬ್ದ ಇನ್ನೊಂದು ಕರೆಯ ಬರವನ್ನು ಸೂಚಿಸುತ್ತಿತ್ತು.ಈ ಕರೆ ಮುಗಿಯುತ್ತಿದ್ದಂತೆ ಅತ್ತ ಕಡೆಯಿಂದ ಫೋನು.ಕರೆ ಮಾಡಿದ ವ್ಯಕ್ತಿ ಸಂತೋಷದಿಂದ ಆಕಾಶದಲ್ಲಿ ತೆಲಾಡುತ್ತಿದ್ದರು.'ಹಲ್ಲೋ ಡಾಕ್ಟರ್.ಐ ಯಾಮ್ ಸೋ ಹ್ಯಾಪಿ ಟು ಟೆಲ್ ಯು!! ನಾನು ತಾತ ಆದೆ!!!ನನ್ನ ಮಗನಿಗೆ ಮಗ ಹುಟ್ಟಿದ!!! ಈ ಸಂತೋಷದ ಸುದ್ದಿಯನ್ನು ನಮ್ಮ ಸ್ನೇಹಿತರಿಗೆಲ್ಲಾ ಹೇಳಿಬಿಡಿ'ಎಂದು ಫೋನ್ ಇಟ್ಟರು.ಪ್ರಪಂಚವೆಂದರೆ ಹೀಗೇ ಅಲ್ಲವೇ?ಅವರವರು ,ಅವರವರ ಲೋಕದಲ್ಲಿ, ಕಷ್ಟವನ್ನೋ,ಸುಖವನ್ನೋ,ನೋವನ್ನೋ,ನಲಿವನ್ನೋ ಅನುಭವಿಸುತ್ತಿರುತ್ತಾರೆ.ಅವರ ಜೀವನದಲ್ಲಾಗುತ್ತಿರುವ ಘಟನೆಯ ಬಗ್ಗೆ ಇವರಿಗೆ ಅರಿವಿಲ್ಲ......!ಇವರ ಬಗ್ಗೆ ......,ಅವರಿಗೆ ತಿಳಿಯದು!! ಅವರವರ ಪ್ರಪಂಚ ಅವರಿಗೆ!! ನನ್ನ ಆಧ್ಯಾತ್ಮದ ಗುರುವೊಬ್ಬರಿಗೆ ಈ ವಿಷಯ ತಿಳಿಸಿದೆ. 'ಈ ಘಟನೆಯಲ್ಲಿ ನಿಮಗೆ ತ್ರಿಮೂರ್ತಿಗಳ ದರ್ಶನ ವಾಗಿದೆಯಲ್ಲಾ ಡಾಕ್ಟರ್' ಎಂದರು!'ಹೇಗೆ ಸರ್?' ಎಂದೆ.'ನೋಡಿ ,ಹುಟ್ಟಿನ ಸುದ್ಧಿ ಬಂದಾಗ ಬ್ರಹ್ಮನ ದರ್ಶನವಾಯಿತು ,ಗೃಹ ಪ್ರವೇಶದ ಸುದ್ಧಿ ವಿಷ್ಣು ವಿನ ದರ್ಶನ.ಸಾವಿನ ಸುದ್ಧಿ ಮಹೇಶ್ವರನ ಪ್ರತೀಕವಲ್ಲವೇ?'ಎಂದರು!ನನಗೂ ಹೌದಲ್ಲವೇ ಅನ್ನಿಸಿತು!!! ನೀವೇನೆನ್ನುತ್ತೀರಿ ಎಂದು ಕಾಮೆಂಟಿನಲ್ಲಿ ತಿಳಿಸಿ.ನಮಸ್ಕಾರ.

13 comments:

  1. ಮೊದಲಿಗೆ ಇದು ನನ್ನ ಪಂಚಪ್ರಾಣವಾದ ಮನ್ನಾಡೆ ಗೀತೆ. ಇದನ್ನು ನೆನಪಿಸಿ ಇಂದು ದಿನವೆಲ್ಲ ಇದೇ ಹಾಡನ್ನು ಗುನುಗುನಿಸೋ ಹಾಗೆ ಮಾಡಿಬಿಟ್ರಲ್ಲಾ ಡಾಕ್ಟ್ರೇ!!!


    ಒಮ್ಮೆಗೆ ತ್ರಿಮೂರ್ತಿಗಳ ದರ್ಶನ ಭಾಗ್ಯ ನಿಮ್ಮದು. ಸೃಷ್ಟಿ-ಸ್ಥಿತಿ-ಲಯಗಳ ಏಕ ಕಾಲೀನ ಅನಾವರಣ.

    ನಿಮ್ಮನ್ನು ಕಾಡಿದ ಆ ಮನೋ ಹುಳ ಎಂಥದೋ, ಪಾಪ ನಿಮ್ಮನ್ನು ಎಷ್ಟು ಕಾಡಿಸಿತೋ?

    ದಾರಿ ದೀಪವಾಗಬೇಕಾದ ನೀವೆ ಹೀಗೆ ನೊಂದು ಕುಳಿತರೆ ನಿಮ್ಮ ದಾರಿಯ ಧೂಳುಗಳು ನಮ್ಮಗತಿ ಏನು?

    ReplyDelete
    Replies
    1. ಬದರಿ;ಈ ಜಗತ್ತೇ ವಿಚಿತ್ರ ಅನಿಸುವುದಿಲ್ಲವೇ?ಅವರವರ ಲೋಕದಲ್ಲಿ ಅವರವರು ಮಗ್ನ!!!ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಸುಂದರ ಕಥಾನಕ...ಸುಂದರ ಬರಹ...
    ಜೀವನವೇ ಹಾಗೆ...ಕೆಲವು ಸಾರಿ ಸ್ಮಶಾನ ವೈರಾಗ್ಯ ತರಿಸುತ್ತದೆ..ನಾಗರ ಹೊಳೆ ಸಿನಿಮಾದ ಹಾಡಿನಲ್ಲಿ ಬರುವಂತೆ "ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು" ಹೀಗೆ ಸಾಗುತ್ತದೆ..ಜೀವನ ಪಥ..ಸುಖ, ದುಖ ಸಮಾನ ರೂಪೇನ ಅಂತ..ಜೀವನ ನಡೆಯುತ್ತಿರುತ್ತದೆ..ಆದ್ರೆ ಆ ಸಮಯದಲ್ಲಿ ಮನಸಿನ ಅಂತರಂಗದಲ್ಲಿ ಏಳುವ ಅಲೆಗಳು ಸುನಾಮಿಯನ್ನು ಮೀರಿಸುತ್ತದೆ...

    ReplyDelete
    Replies
    1. ಕೆಲವೇ ನಿಮಿಷಗಳ ಅವಧಿಯಲ್ಲಿ ಬೇರೆ ಬೇರೆ ಭಾವಗಳನ್ನು ಹೊತ್ತ ಸುದ್ಧಿಗಳು ಬಂದ ರೀತಿ ಕಂಡು ಅವಾಕ್ಕಾದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  3. ಒಂದೇ ದಿನದಲ್ಲಿ ಅದು ಕೆಲವೇ ಗಂಟೆಗಳಲ್ಲಿ ನೋವು,ನಲಿವು, ಸಂತೋಷ ಎಲ್ಲವನ್ನೂ ಕೇಳಿದಿರಿ. ಎಲ್ಲರಿಗೂ ಅವರದೇ ಪ್ರಪಂಚ ಕೆಲವೊಮ್ಮೆ ನಮ್ಮ ಪಕ್ಕದ ಮನೆಗಳಲ್ಲಿ ನೆಡೆಯೋ ವಿಷಯಗಳೇ ಗೊತ್ತಿರುವುದಿಲ್ಲ... ನಿಮಗೆ ತ್ರಿಮೂರ್ತಿಗಳೊಡನಾಟದ ಭಾಗ್ಯ ನಿಮ್ಮದು... ಎಷ್ಟು ಚೆನ್ನಾಗಿ ವಿವರಿಸುತ್ತೀರಿ ಸರ್. ಧನ್ಯವಾದಗಳು

    ReplyDelete
    Replies
    1. ಸುಗುಣ ಮೇಡಂ;ಜಗತ್ತಿನಲ್ಲಿ ಒಂದೇ ಕಾಲದಲ್ಲಿ ನಡೆಯುವ ವಿವಿಧ ವಿಚಿತ್ರ ವಿದ್ಯಮಾನಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.ಇಲ್ಲಿ ಯಾರೋ ಖುಷಿ ಪಡುತ್ತಿದ್ದರೆ ಅಲ್ಲಿ ಯಾರೋ ನೋವು ಅನುಭವಿಸುತ್ತಿರುತ್ತಾರೆ!ಕೆಲವೇ ನಿಮಿಷಗಳ ಅವಧಿಯಲ್ಲಿ ಬಂದ ಹುಟ್ಟು,ಸಾವಿನ ಸುದ್ಧಿಗಳು ಚಿಂತನೆಗೆ ತೊಡಗಿಸಿದವು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  4. ನಿಮ್ಮ ಅನುಭವವನ್ನ ಅರ್ಥೈಸಿದ ಬಗೆ ಚೆನ್ನಾಗಿದೆ
    ನಿಮಗೆ ಹೀಗೆ 'ದರ್ಶನ' ವಾಗುತ್ತಿರಲಿ, ಆಗ ನಮಗೂ ಆಗುತ್ತದೆ :)
    ಸ್ವರ್ಣಾ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  5. CHINDI CHITRANNA MADIDA SUDDIGALALLI TRIMURTHIGALANNU KANUVA BHAGYA NIMMADAYITHU-HEMCHANDRA

    ReplyDelete
    Replies
    1. ಹೇಮು;ಅವತ್ತು ಬೆಳಿಗ್ಗೆಯಿಂದ ಮನಸ್ಸಿನ ಸ್ಥಿತಿ ಸರಿಯಿರಲಿಲ್ಲ.ಸಂಜೆ ಇದ್ದಕ್ಕಿದ್ದಂತೆ ದೂರವಾಣಿ ಹೊತ್ತು ತಂದ ಮೂರು ಸುದ್ಧಿಗಳು ಜೀವನದ ವಿಚಿತ್ರತೆಯ ಬಗ್ಗೆ ಜಿಜ್ಞಾಸೆ ಮೂಡಿಸಿದ್ದಂತೂ ನಿಜ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  6. ಗುರುಗಳೇ, ಮಾನವಸಹಜವಾದ ಸಂತೋಷ ದುಃಖಗಳು ಕ್ಷಣಿಕವಾದ ಭಾವನೆಗಳು, ಆ ಕ್ಷಣಿಕ ವ್ಯವಹಾರದಲ್ಲೇ ಗುರುಗಳೇ ಹೇಳಿದಂತೆ ತ್ರೀಮೂರ್ತಿಗಳ ದರ್ಶನ ಆಗಿದ್ದು ಕಾಕತಾಳೀಯ! ಬಾಳುವ ಮೂರು ದಿನದ ಬದುಕಿನಲ್ಲಿ ಒಬ್ಬರಿಂದ ಸಂತೋಷ ಇನ್ನೊಬ್ಬರಿಂದ ನಮಗೆ ದುಃಖ ಲಭಿಸಿದರೂ ಅದು ಯಾವುದೋ ಒಂದು ಅವ್ಯಕ್ತ ಅಮೂರ್ತ ಕಲ್ಪನೆಯ ಸಾಕಾರವೇ ಆಗಿರುತ್ತದೆ ಅನ್ನುವುದು ನನ್ನ ಅನಿಸಿಕೆ.

    ಧನ್ಯವಾದಗಳು.

    ReplyDelete
    Replies
    1. ಪ್ರವೀಣ್;ಆ ಕೆಲವೇ ನಿಮಿಷಗಳಲ್ಲಿ ಬದುಕೆನ್ನುವುದು ಸುಖ ದುಃಖಗಳ ಸಮ್ಮಿಶ್ರಣ ಎನ್ನುವುದು ಅರಿವಾಯಿತು.ಲೈಫು ಇಷ್ಟೇನೇ!ಅಲ್ಲವೇ?

      Delete
  7. igashtte news channel nalli rajesh khanna na bagge eno heluttiddaru aaga backgroundnalli ee haadu baruttittu. illi nodidare jndagi-tumbaa uttama lekhana

    ReplyDelete

Note: Only a member of this blog may post a comment.