Saturday, November 19, 2011

"ಅಂತಃ -ಕುರುಕ್ಷೇತ್ರ"

ನಾನೂ ನೀಲಕಂಠನಾಗಬೇಕಿದೆ!
ನನ್ನ  ಸುತ್ತ ಮುತ್ತಲಿರುವ 
ನೋವಿನ  ಗರಳ ಕುಡಿದೂ 
ನಗು ನಗುತ್ತಾ ಬದುಕುತ್ತಿರುವ 
ಹಲ  ಕೆಲವು  
ನಂಜುಂಡ  ನಂಜುಂಡಿಯರಂತೆ!
ಅವರವರಿಗಿದೆ  ಅವರವರದೇ 
ಒಡಲಾಳದ  ಜ್ವಾಲೆ!
ಸಹನೆ ಗುಪ್ತ ಗಾಮಿನಿ ! 
ಖಿನ್ನತೆಯ  ಕಾಳಿಂಗನ ಮೆಟ್ಟಿ 
ಎದೆಯಾಳದಿ  ಹೆಪ್ಪುಗಟ್ಟಿದ 
ಹಿಮದ  ಹೆಬ್ಬಂಡೆಗಳು ಕರಗಿ 
ಮನದೊಳಗೇ ಕೊರೆಯುವ 
ಚಿಂತೆಯ  ಕಂಬಳೀ  ಹುಳ 
ಪತಂಗವಾಗಿ  ಮಾರ್ಪಟ್ಟು 
ಬಣ್ಣದ  ಪಕ್ಕಗಳ ತೊಟ್ಟು 
ಆನಂದದ  ಲೋಕದಲ್ಲಿ 
ಹಾರಾಡಬೇಕಿದೆ. 
ನಾವೇ ಸೃಷ್ಟಿಸಿಕೊಂಡ
ಮನದ ಕೊಳಗೇರಿಯಲ್ಲೊಂದು 
ನಂದನವನ  
ತಲೆ ಎತ್ತಬೇಕಿದೆ!
 

20 comments:

  1. ಇದು ನನ್ನ ಮನಮೆಚ್ಚಿದ ಕವನ. ಮನೋಚಿಕಿತ್ಸಕ ಕಾವ್ಯ. ಬಳಸಿರುವ ಪ್ರತಿಮೆಗಳ ಹೊಂದಾಣಿಕೆ ಮತ್ತು ಅರ್ಥ ಗಾಂಭೀರ್ಯದಿಂದ ಅನೂಹ್ಯವಾಗಿ ನಿಲ್ಲುತ್ತದೆ.

    ಸಮಸ್ಯೆಯಿಂದ ಆರಂಭವಾಗಿ ಉತ್ತರವನ್ನೂ ಕಂಡುಕೊಳ್ಳುವ ಸಂಪೂರ್ಣ ವೃತ್ತಾಂತ!

    ಪ್ರತಿಯೊಬ್ಬರೂ ಅವರವರ ಮಟ್ಟಿಗೆ ಅನುಭವಿಸುವ ನೋವು ದೊಡ್ಡದೆನಿಸುತ್ತದೆ. ಆ ನೋವಿನ ಮೂಲ ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವಂತಾಗ ಬೇಕು.

    ಕವನದ ಅಂತ್ಯದಲ್ಲಿ ಕೊಳಗೇರಿಯನ್ನು ನಂದನವಾಗಿಸುವ ನಿಮ್ಮ ಆಶಯ ನಮಗೂ ಸಿದ್ಧಿಸಲಿ.

    ReplyDelete
  2. ನರ ನಾರಾಯಣ ಎನ್ನುವ ಮಾತಿಗೆ ನರ "ಹರ" ಎಂಬುದನ್ನೂ ಸಹ ನಿಮ್ಮ ಕವಿತೆಯಲ್ಲಿ ಬಿಂಬಿಸಿದ್ದೀರಿ. ಹೌದು ಸಮಾಜದಲ್ಲಿ ನಾವು ಕಾಣುವ ಹಲವರ ನೋವನ್ನು ನಾವೂ ನುಂಗಿಕೊಂಡು ವಿಷ ಕಂಠ ರಾಗಬೇಕಾಗಿದೆ.ಮನದ ಕೊಳೆಗೇರಿಯಲ್ಲಿ ನಂದನ ವನ ಚಿಗುರಿಸಲು ಸಂತಸದ ಚಿಲುಮೆ ಯಲ್ಲಿ ಸಮಾಧಾನದ ನೀರನ್ನು ಹಾಕಬೇಕಾಗಿದೆ . ಕವಿತೆ ಚೆನ್ನಾಗಿದೆ ಸರ್ ಇಷ್ಟ ಆಯ್ತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  3. ಸು೦ದರ ಕವನ ಸರ್ , ಅಭಿನ೦ದನೆಗಳು . ನಿಜ, ಮನವೇ ನಂದನವನವಾಗಬೇಕಿದೆ.

    ReplyDelete
  4. ಡಾಕ್ಟ್ರೇ..

    ನನಗೆ ಅತ್ಯಂತ ಇಷ್ಟವಾದ ಸಾಲುಗಳ ಕವನ ಇದು...

    ನಿಜ..
    ಮನದ ಕೊಳಗೇರಿಯಲ್ಲೊಂದು ನಂದನವನ ನಾವೇ ನಿರ್ಮಿಸಬೇಕಾಗಿದೆ"

    ಸುಂದರ.... ವಾಸ್ತವದ ಸಾಲುಗಳಿಗೆ ಜೈ ಜೈ ಜೈ ಹೋ !!

    ReplyDelete
  5. ಸುತ್ತಲಿನ ಬದುಕನ್ನು ಅನುಕಂಪದಿಂದ ನೋಡುವ ಕವನವಿದು. ‘ಸಕಲ ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲಸಂಗಮದೇವ’ ಎನ್ನುವ ಬಸವಣ್ಣನವರ ವಚನ ನೆನಪಾಯಿತು!

    ReplyDelete
  6. waav...
    enthaha kalpane sir.....

    mana midiyitu.........

    ReplyDelete
  7. edeyaladi heppugattida saalu haagu kolegeriya nandanavagisuva aashaya tumba super

    ReplyDelete
  8. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  9. ಅಂತ: ಕುರುಕ್ಷೇತ್ರ ದ ಕಾಳಗ ನಿರಂತರ ....ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಬೇಕು ಬೇಡಗಳ ನಡುವೆ, ಸರಿ ತಪ್ಪುಗಳ ನಡುವೆ, ಪ್ರೀತಿ ದ್ವೇಷ ಗಳ ನಡುವೆ ಅಂತ: ಕಾಳಗ ನಡೆಯುತ್ತಲೇ ಇರುತ್ತವೆ...ನಿಜ.. ಇವೆಲ್ಲವುಗಳ ನಡುವೆ ನಂದನವನ ತಲೆ ಎತ್ತಬೇಕಿದೆ. ಕವನ ತುಂಬಾ ತುಂಬಾ ಇಷ್ಟವಾಯ್ತು ಸರ್. ಧನ್ಯವಾದಗಳು.

    ReplyDelete
  10. ಚೇತನಾ ಭಟ್ ಅವರೆ;ಚಿಂತೆ,ಕೋಪ ,ಈರ್ಷೆ ಇವೇ ಮುಂತಾದ ಅಂತಃ ಶತೃಗಳೊಂದಿಗೆ ನಮ್ಮೊಳಗೆ ದಿನನಿತ್ಯದ ಕುರುಕ್ಷೇತ ನಡೆಯುತ್ತಲೇ ಇದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  11. ತುಂಬಾ ಚೆನ್ನಾಗಿದೆ ಸರ್ ಕವನ ತುಂಬಾನೇ ಇಷ್ಟವಾಯ್ತು... ಮನಸ್ಸು ನಂದನವಾದರೆ ಮನೆಯೂ ನಂದನವನ

    ReplyDelete
  12. ಮನಸು ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  13. ಕುರುಕ್ಷೇತ್ರವನ್ನು ವೀಕ್ಷಿಸಲು ತಡವಾಗಿ ಬ೦ದಿದ್ದೇನೆ...! ಅ೦ತರ೦ಗದ ಕುರುಕ್ಷೇತ್ರವನ್ನು ಪರಿಚಯಿಸುತ್ತಾ, ಧನಾತ್ಮಕ ಮುಕ್ತಾಯವನ್ನು ಕೊಟ್ಟ ಡಾ. ಗೆ ವ೦ದನೆಗಳು. ಸಮಸ್ಯೆಗಳನ್ನು ಋಣಾತ್ಮಕವಾಗಿ ವೈಭವೀಕರಿಸುವ ಕವನಗಳಿಗಿ೦ತ, ನವಿರು ಭಾವಗಳಿ೦ದ ನ೦ದನವನವನ್ನು ಸೃಷ್ಟಿಸುವ ನಿಮ್ಮ ಕವನವು ಹೆಚ್ಚು ಪ್ರಿಯವಾಗುತ್ತದೆ. ಅಭಿನ೦ದನೆಗಳು.

    ಅನ೦ತ್

    ReplyDelete
  14. ಅನಂತ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  15. @ಸುರಗಂಗೆ;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ವಸಂತ್;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ನಿಮ್ಮ ಎಲ್ಲಾ ಬರಹಗಳೂ ಸ್ಪೂರ್ತಿದಾಯಕವಾಗಿವೆ. ಅಭಿನಂದನೆಗಳು ಸರ್.

    ReplyDelete
  18. ಮೇಡಂ;ನಮಸ್ಕಾರ.ತಾವು ಬ್ಲಾಗಿಗೆ ಬಂದು ಬಹಳ ದಿನಗಳಾದವು.ಎಲ್ಲರೂ ಕ್ಷೇಮವೇ?ಭಟ್ಟರಿಗೆ ನಮಸ್ಕಾರ,ಮಗಳಿಗೆ ಶುಭ ಹಾರೈಕೆಗಳು.ಮತ್ತೆ ದೇಶಕ್ಕೆ ವಾಪಸ್ಸಾಗುವುದು ಯಾವಾಗ?ಬಂದ ಮೇಲೇ ಫೋನಾಯಿಸಿ.ನಿಮ್ಮ ಬ್ಲಾಗಿನಲ್ಲೂ ,ಭಟ್ಟರ ಬ್ಲಾಗಿನಲ್ಲೂ ಹೊಸ ಬರಹಗಳು ಬರಲಿ.ಧನ್ಯವಾದಗಳು.

    ReplyDelete

Note: Only a member of this blog may post a comment.