Monday, April 2, 2012

"ತಪ್ಪು ರೈಲಿನಲ್ಲಿ "

ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)

9 comments:

  1. ನೀವು ಬಡಿಸಿಕೊಟ್ಟ ಕಥೆಯನ್ನು ಮನಸಾರೆ ಊಟ ಮಾಡಿದ್ದೇನೆ ಸಾರ್. ಮತ್ತೊಂದು ಭೋಜನಕ್ಕೆ ನಾನು ಸಿದ್ಧನಾಗಿದ್ದೇನೆ. ವಂದನೆಗಳು.

    ReplyDelete
  2. ಕಥೆ ಓದಿ ಮನಸ್ಸಿಗೆ ತುಂಬಾ ಬೇಸರವಾಯಿತು ಸರ್ ಜೀವದಲ್ಲಿ ಎಲ್ಲವನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ ಇರುವ ಆಸೆಗಳನ್ನು ಕೈಗೆಟಕುವ ಅಂತರಕ್ಕೇ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು ಎನ್ನುವ ತಾತರ್ಯವನ್ನು ಸಾರಿಹೇಳಿದಂತಿದೆ. ನಿಮ್ಮ ಈ ಕಥೆ ನಿಜವಾಗಲೂ ನನ್ನ ಪರವಶನನ್ನಾಗಿಸಿತು ಇದು ಬಹು ದುಃಖದ ಕಥೆ ಧನ್ಯವಾದಗಳು...

    ReplyDelete
  3. ಅಯ್ಯಪ್ಪಾ...ಎಲ್ಲಿಂದ ಇಲ್ಲಿಗೆ ಬಂದುಮುಟ್ಟಿತು ಟ್ರೈನಿನಲ್ಲಾದ ಕಥೆ..ತುಂಬಾ ಚೆನ್ನಾಗಿದೆ..ಬಹುಷ ನಮ್ಮ ಬ್ಲಾಗ್ ಮಿತ್ರರ ಗಮನಕ್ಕೆ ಇದನ್ನು ತಂದರೆ,ಈ ಕಥೆಯನ್ನು ಇನ್ನೂ ಮುಂದುವರೆಸಬಹುದೆಂದು ಅಂದುಕೊಳ್ಳುತ್ತೇನೆ..ಎನಂತೀರಿ???


    ಬನ್ನಿ ನಮ್ಮನೆಗೂ,
    http://chinmaysbhat.blogspot.in
    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  4. ಗೊರೂರು ರಾಮಸ್ವಾಮಿ ಅಯ್ಯಂಗಾರರ ಈ ಕಥೆ ಮನ ಕಲುಕಿತು ಸಾರ್. ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು ಡಾಕ್ತ್ರೇ.

    ಪ್ರೇಯಸಿ ಕಳೆದುಕೊಂಡ ಹುಡುಗನ ನೋವಿಗೆ ಹಲುಬಬೇಕೋ?

    ಪ್ರೇಯಸಿಗೆ ಮದುವೆ ಉಡುಗೊರೆಯನ್ನು ಕೊಟ್ಟ ಹುಡುಗನ ಶ್ಯಾಣೆ ತನವನ್ನು ಹೊಗಳಬೇಕೋ?

    ನಡುವೆ ತಾನೇ ಅತಿ ಬುದ್ಧಿವಂತ ಅಂದುಕೊಂಡ ಹೊಸ ಮದುವೆ ಗಂಡನನ್ನು ಮೆಚ್ಚಬೇಕೋ?

    ಅಂತೂ ಗೊರೂರರ ಕಥೆಗಳ ತಾಕತ್ತಿನ ಪುನರ್ ದರ್ಶನವಾಯ್ತು.

    ReplyDelete
  5. Very nice story sir.
    Thanks for sharing.
    Swarna

    ReplyDelete
  6. ತುಂಬಾ ಚೆನ್ನಾಗಿದೆ ಕಥೆ
    ಹಂಚಿಕೊಂಡಿದ್ದಕ್ಕೆ ವಂದನೆಗಳು

    ReplyDelete
  7. sir,
    gururu tumba vishishta allave? entaha sundara ghatane
    allave? dhanyavadagalu.

    ReplyDelete
  8. sir,
    gururu tumba vishishta allave? entaha sundara ghatane
    allave? dhanyavadagalu.

    ReplyDelete

Note: Only a member of this blog may post a comment.