Friday, July 20, 2012

"ಅಬ್ಬಾ.......!!! ಆ ಕ್ಷಣಗಳು.......!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

26 comments:

  1. ಭಗವಂತಾ ಈ ತರಹದ ನರಕ ದರ್ಶನ ಯಾರಿಗೂ ಆಗ ಬಾರದು.

    ಪುಟ್ಟ ಕಂದನನ್ನು ಬಯ್ಯುವಂತೆಯೂ ಇಲ್ಲ.

    ಆ ಕೂಲಿಯವನ ಉಪಕಾರಕ್ಕೆ ಚಿರ ಋಣಿಯಾಗಿರ ಬೇಕು.

    ಹೃದಯವೇ ಬಾಯಿಗೆ ಬಂದಂತ ಅನುಭವವಾಯ್ತು!

    ReplyDelete
  2. ಡಾಕ್ಟ್ರೇ...ನಿಮ್ಮ ಮಗನನ್ನು ಕಳೆದುಕೊಂಡ ಅನುಭವವನ್ನು ಓದಿ ಒಂದು ಕ್ಷಣ ತಲ್ಲಣಗೊಂಡೆ...ಆಗಿನ ನಿಮ್ಮ ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೆ ದಿಗಿಲಾಗುತ್ತದೆ..ಆ ಕೂಲಿಯವನು ನಿಜಕ್ಕೂ ದೇವರ ರೂಪವೇ ಅನ್ನಿಸುತ್ತದೆ...

    ReplyDelete
  3. ಅಂತಹ ಒಂದು ಪರಿಸ್ಥಿತಿ ಯಾರಿಗೂ ಬೇಡಪ್ಪ...ನಿಜಕ್ಕೂ ಅಧೀರರನ್ನಾಗಿ ಮಾಡಿ, ಹುಚ್ಚರನ್ನಾಗಿ ಮಾಡಿಸುವ ಎಲ್ಲ ಕ್ಲಿಷ್ಟಗಳು ಆ ಸಂಧರ್ಭದಲ್ಲಿ ಇತ್ತು..ಧ್ರುತಿಗೆಟ್ಟರು ಗಟ್ಟಿ ಮನಸನ್ನು ಒಂದು ಮಾಡಿಕೊಂಡು ಪಟ್ಟ ನಿಮ್ಮ ಬವಣೆ ಪದಗಳಲ್ಲಿ ನಿಲುಕುವುದಿಲ್ಲ..
    ಆ ಕ್ಷಣಗಳೇ ಹಾಗೆ...ದೇವರಿದ್ದಾನೆ ಅಂತ ತೋರಿಸುವ ಒಂದು ಪ್ರಸಂಗ...ಇದು...

    ReplyDelete
  4. ಹೌದು ಈ ರೀತಿಯ ಸಂದರ್ಭ ಯಾವ ಶತ್ರುವಿಗೂ ಬರಬಾರದು.
    ಸದ್ಯ, ದೇವರು ನಿಮ್ಮ ಪ್ರಾರ್ಥನೆಗೆ ತಕ್ಷಣ ಸ್ಪಂದಿಸಿದ.
    ಅವನಿಗೆ ನಿಮ್ಮ ಕೃತಜ್ಞತೆಇರಲಿ.

    ReplyDelete
  5. ಡಾಕ್ಟ್ರೆ...
    ನಿಜಕ್ಕೂ ಎದೆ ಒಡೆದು ಹೋಗುವಂಥಹ ಸಂದರ್ಭ.....

    ಇಂಥಹ ಸಮಯದಲ್ಲಿ ಕೈಕಾಲೇ ಅಲ್ಲಾಡುವದಿಲ್ಲ...

    ತುಂಬಾ ಆತಂಕವಾಯ್ತು....

    ಚಂದದ ಬರವಣಿಗೆ...

    ReplyDelete
  6. abbaa......
    nijakku hedarike taruva sannivesha..... bareda riti super....

    nimma stiti yaarigu beDa.....

    ReplyDelete
  7. ಇದು ನಿಜವಾಗಿಯೂ ಒಂದು nightmare. ಇಂತಹ ಒಂದು ಸಂದರ್ಭವನ್ನು ನಾನೂ ಅನುಭವಿಸಿದ್ದೇನೆ.

    ReplyDelete
  8. ಅಬ್ಬಬ್ಬಾ ಓದುತ್ತಿದ್ದರೆ ಸಂಕಟವಾಗುತ್ತದೆ.ಆ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ , ಮನಮುಟ್ಟುವ ಸನ್ನಿವೇಶ .....ಹೃದಯ ಕಿವುಚಿದಂತೆ ಆಯ್ತು. ಆದರು ಆ ಸನ್ನಿವೇಶವನ್ನು ಎದುರಿದ ನಿಮಗೆ ಹಾಗು ಮಗುವನ್ನು ತಲುಪಿಸಿದ ಆ ಕೂಲಿಯವರಿಗೆ ಜೈ ಹೋ ಜೈ ಹೋ ಜೈ ಹೋ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  9. Thought of losing something valuable itself will bring us onto our knees . . when it happens in reality oh!! traumatic . . Life plays a different ball game for every individual . .like our finger prints!! When suffering from helplessness, There is hope - there he comes 'Khooli' with no expectations!! I think, Life Like This.

    Its really motivates to call to home!! . .Sir, you are a experience . . .Its short, precise . . and I am very glad to read your last statement "ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!" may the light of happiness live forever . . Thank you.

    ReplyDelete
  10. ವೈದ್ಯಮಿತ್ರರೇ,

    ತಮ್ಮ ಮಾತುಗಳನ್ನು ಕೇಳುತ್ತಾ/ಓದುತ್ತಾ ಕಣ್ಣಾಲಿಗಳು ತುಂಬಿಬಂದವು. ಜೀವನದ ಹಲವು ಮಜಲುಗಳಲ್ಲಿ ನಮ್ಮ ನಿಮ್ಮಂತಹ ಅನೇಕರಿಗೆ ಇಂತಹ ಪರಿಸ್ಥಿತಿಗಳು ಯಾವ್ಯಾವುದೋ ರೂಪದಲ್ಲಿ ಎದುರಾಗುತ್ತವೆ. ಯಾವುದನ್ನು ನೆನೆಸಿಕೊಳ್ಳಲೂ ಹೆದರುತ್ತೇವೋ ಅದೇ ಎದುರಿಗೆ ಬಂದು ನಿಲ್ಲುವುದು ಈ ಜೀವನದ ಅಚ್ಚರಿ. ಒಂದು ಮಾತ್ರ ಸತ್ಯ ಜಗನ್ನಿಯಾಮಕ ಶಕ್ತಿಯನ್ನು ನಂಬಿ ಅದನ್ನು ಆವುದೇ ರೂಪದಲ್ಲೋ ರೂಪವಿಲ್ಲದ ನಿರಾಕಾರದ ರೀತಿಯಲ್ಲೋ ಅದಕ್ಕೊಂದು ಗೌರವ ಕೊಟ್ಟರೆ; ಅಥವಾ ನಮಗಿಂತಲೂ ಹಿರಿದಾದ ಆ ಶಕ್ತಿಯನ್ನು ಒಪ್ಪಿದರೆ ಎದುರಾಗುವ ಸಮಸ್ಯೆಗಳು ಕ್ಷಣಿಕವಾಗಿರುತ್ತವೆ ಅಷ್ಟೇ ಬೇಗ ಪರಿಹಾರಗಳು ಲಭಿಸುತ್ತವೆ.

    ನಮ್ಮ ಮಗ ೩ ವರ್ಷದವನಿರುವಾಗ ಅವನಿಗೊಮ್ಮೆ ವಿಪರೀತ ಜ್ವರ. ಜ್ವರ ಕಮ್ಮಿಯಾಗಲು ಸ್ನೇಹಿತರೇ ಆದ ಮಕ್ಕಳ ವೈದ್ಯರೊಬ್ಬರನ್ನು ಕಂಡು ಔಷಧ ಕೊಡಿಸಿದ್ದರೂ ಜ್ವರ ಬಂದು-ಬಿಟ್ಟು ಬಂದು-ಬಿಟ್ಟು ಆಗುತಿತ್ತು. ಮೂರನೇದಿನ ಭಾನುವಾರ ಸಾಯಂಕಾಲ ೫ ಗಂಟೆಗೆ ಜ್ವರ ವಿಪರೀತವಾಯ್ತು. ತೀರಾ ಕೃಶಕಾಯನಾಗಿದ್ದ ಮಗ ಮೂರುದಿನಗಳಿಂದ ಆಹಾರವನ್ನೂ ಸರಿಯಾಗಿ ತೆಗೆದುಕೊಳ್ಳದೇ ತುಂಬಾ ನಿತ್ರಾಣನಾಗಿದ್ದ. ಸಂಜೆ ನಾನು ಚಿಂತೆಯಲ್ಲಿರುವಾಗ ಹೆಂಡತಿ ಜ್ವರ ಅಳೆಯಲು ಥರ್ಮಾಮೀಟರನ್ನು ಕಂಕುಳಲ್ಲಿ ಹಾಕಿದ್ದಳು. ಒಂದು ಕ್ಷಣ ಈ ಕಡೆ ತಿರುಗಿ ಮಗನಕಡೆ ತಿರುಗುವಷ್ಟರಲ್ಲಿ ಮಗ ಥರ್ಮಾಮೀಟರನ್ನು ಬಾಯಲ್ಲಿ ಹಾಕಿಕೊಂಡು ಕಚ್ಚಿ ಪಾದರಸ ಬಾಯಲ್ಲಿ ಬಿದ್ದಿತ್ತು. ತಕ್ಷಣಕ್ಕೆ ಜಿಗಿದುಬಂದ ನಾನು ಗಂಟಲಿಗೆ ಕೈಹಾಕಿ ವಾಂತಿ ಮಾಡಿಸಿದರೂ ನಮಗೆ ಅನುಮಾನ ಮಾತ್ರ ತಪ್ಪಲೇ ಇಲ್ಲ. ಭಾನುವಾರ ಎಲ್ಲೆಲ್ಲೂ ಯಾವ ಆಸ್ಪತ್ರೆಗಳೂ ತೆರೆದಿರುವುದಿಲ್ಲ. ಯಾವ ವೈದ್ಯರೂ ಹೆಸರಿಗೂ ಕಾಣಿಸದಂತೇ ಇರುತ್ತಾರೆ. [ಇರಲಿ ಅವರಿಗೂ ರಜಾ ಬೇಕಲ್ಲವೇ] ದೇವರಮೇಲೆ ಭಾರ ಹಾಕಿ ಸುತ್ತದ ಆಸ್ಪತ್ರೆಗಳಿಲ್ಲ. ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರನಗರ ಗಳ ಸುಮಾರು ೧೦-೧೨ ಆಸ್ಪತ್ರೆಗಳಿಗೆ ಹೋದರೂ ಡ್ಯೂಟಿ ಡಾಕ್ಟರ್ ಇದ್ದರು, ಹೊಸದಾಗಿ ಎಂ.ಬಿ.ಬಿಎಸ್. ಮುಗಿಸಿ ಬಂದಿದ್ದ ಅವರಿಗೆ ಪರಿಣತಿ ಇರಲಿಲ್ಲ; ಅನುಭವವೂ ಇರಲಿಲ್ಲ. ಕೊನೆಗೊಮ್ಮೆ ಯಾರನ್ನೋ ಹಿಡಿದು ದೂರವಾಣಿಯಲ್ಲಿ ಹಿರಿಯ ವೈದ್ಯರೊಬ್ಬರ ಸಲಹೆ ಪಡೆಯಲಾಗಿ "೨ ಗಂಟೆ ನೋಡಲಿ, ಮೈಕೈ ನೀಲೀ ಬಣ್ಣಕ್ಕೆ ತಿರುಗುತ್ತಿದ್ದರೆ ತಕ್ಷಣ ಅದನ್ನು ಹೊಟ್ಟೆಯಿಂದ ಸಕ್ ಮಾಡಿ ತೆಗೆಯಿಸಿ ಕ್ಲೀನಿಂಗ್ ಪ್ರಾಸಿಜರ್ ಮಾಡಬೇಕಾಗುತ್ತದೆ" ಎಂದರು.

    ಇನ್ನೊಮ್ಮೆ ಇದೇ ರೀತಿ ಯಾರೋ ಉಡುಗೊರೆಯಾಗಿ ಕೊಟ್ಟ ಚೈನಾ ಆಟಿಕೆಮೊಬೈಲ್ ನಲ್ಲಿರುವ ನಿಕ್ಕೆಲ್ ಕ್ಯಾಡ್ಮಿಯಮ್ ಬಟನ್ ಸೆಲ್ ನುಂಗಿಬಿಟ್ಟಿದ್ದ. ಆ ಇಡೀ ರಾತ್ರಿಕೂಡ ನಮಗೆ ’ಒಟ್ಟಾರೆ ನಾವು ಇದ್ದೇವೆ’ ಎನ್ನುವಂತಹ ಯಾತನೆ. ಬಹುತೇಕ ವೈದ್ಯರಿಗೆ ಅದರ ಪರಿಣಾಮದ ಬಗ್ಗೆ ಖಚಿತತೆ ಇರಲಿಲ್ಲ. ನಿಕ್ಕೆಲ್ ಕ್ಯಾಡ್ಮಿಯಮ್ ಘೋರ ವಿಷ. ಅಕಸ್ಮಾತ್ ಸೆಲ್ಲು ಲೀಕ್ ಆದರೆ ಮಗುವಿನ ಉಳಿವು ಸಾಧ್ಯವಾಗುತ್ತಿರಲಿಲ್ಲ. ಒಂದಷ್ಟು ಕಿತ್ತಳೆ ತೊಳೆ ತಿನ್ನಿಸಿ ಜಾಸ್ತಿ ನೀರು ಕುಡಿಸಿ-ದೇವರಮೇಲೆ ಭಾರಹಾಕಿ ಎಂದು ಸ್ನೇಹಿತರಾದ ಮಕ್ಕಳ ವೈದ್ಯರು ಹೇಳಿದ್ದರು. ಹಾಗೇ ಮಾಡಿ ಕೈಕಟ್ಟಿ ಕೂತಿದ್ದೆವು. ದೇವರು ದಯಾಮಯ-ಮಾರನೇ ಬೆಳಿಗ್ಗೆ ಅರ್ಧಹಿಡಿಯಷ್ಟು ಬಂದ ಕಪ್ಪು ಮಲದಲ್ಲಿ ಸೆಲ್ಲು ಹೊಳೆಯುತ್ತಿತ್ತು[ಆಗ ಮಗುವಿಗಿನ್ನೂ ೨ನೇ ವಯಸ್ಸು]

    ಇದನ್ನೆಲ್ಲಾ ಇಲ್ಲಿ ಯಾಕೆ ಹೇಳಿದೆ ಎಂದರೆ ಮಕ್ಕಳಪಾಲಕರು ಎಲ್ಲಿ ಜಾಗರೂಕರಾಗಿರಬೇಕು ಎಂಬುದರ ಸಲುವಾಗಿ. ಬಹಳ ಮಂದಿ ಓದುವಾಗ ಅವರ ತಿಳುವಳಿಕೆಗೂ ಇವು ಇರಲಿ ಎಂಬುದಕ್ಕಾಗಿ. ಕಳೆದುಕೊಂಡ ಮಗನನ್ನು ಮರಳಿ ಪಡೆದ ಭಾಗ್ಯ ನಿಮ್ಮದು. ಒಳ್ಳೆಯ ಹೃದಯದವರಿಗೆ ದೇವರೆಂಬ ಶಕ್ತಿ ಯಾವತ್ತೂ ಕೇಡನ್ನು ಮಾಡುವುದಿಲ್ಲ, ಜಾಸ್ತಿ ಪೀಡೆಗಳು ಇರುವುದಿಲ್ಲ ಎಂಬುದು ನನ್ನ ಭಾವನೆ. ಆದರೂ ಜನ್ಮಾಂತರಗಳಲ್ಲಿ ನಂಬಿಕೆ ಇಟ್ಟ ನನಗೆ ಹಿಂದಿನ ಜನ್ಮದಿಂದ ಜಮಾವಣೆಯಾಗಿ ಬಂದ ಸಂಚಿತ ಕರ್ಮಫಲಗಳನ್ನು ಒಳ್ಳೆಯವರೂ ಅನುಭವಿಸಲೇಬೇಕಾಗುತ್ತದೆ ಎಂಬುದು ಅನಿಸಿಕೆ. ಲೇಖನ ಮನನೀಯ, ಅನುಭವ ಮಿಕ್ಕವರಿಗೆ ಪಾಠ, ನಮಸ್ಕಾರ

    ReplyDelete
  11. scary alwaa? ನಾನು ಅನುಭವಿಸಿದ್ದೇನೆ. ಅದಕ್ಕೆ ಗೊತ್ತು.ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಿ ಕೃಷ್ಣ ಮೂರ್ತಿಯವರೆ!!
    Alls well that ends well...
    malathi S

    ReplyDelete
  12. abbabbaa............odi mugiso ashtaralli nanna kannaaligaloo thumbidayu sir.yaarigoo ee tharahada anubhava beda sir.anthoo nimma maga kshemavaagi matte nimma madilannu seridanallaaa.....thank god.

    ReplyDelete
  13. ಮಗು ಇಲ್ಲಾ ಎಂದು ಓದುತ್ತಿದ್ದಂತೆಯೇ ಮೈ ಜುಂ ಅಂತು...ಆ ಕ್ಷಣವನ್ನು ಒಮ್ಮೆ ನೆನೆಸಿಕೊಂಡು..
    ತುಂಬಾ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಿ ಸರ್. ದೇವರ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ.

    ReplyDelete
  14. ನಾವು ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿಗಳನು ಕಳೆದುಕೊಳ್ಳುವ ಸಮಯ ಬಂದಾಗ ಎಷ್ಟು ನೋವಾಗುತ್ತದೆ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು..

    ReplyDelete
  15. ಪ್ರತಿಕ್ರಿಯೆ ನೀಡಿ ಸ್ಪಂದಿಸಿದ ಎಲ್ಲಾ ಸಹಬ್ಲಾಗಿಗರಿಗೂ,ಓದುಗರಿಗೂ ವಂದನೆಗಳು ಹಾಗೂ ಧನ್ಯವಾದಗಳು.ಆ ಘಟನೆ ನಡೆದದ್ದು ಹಾಗೆ.ಅದನ್ನು ಯಥಾವತ್ತಾಗಿ ಚಿತ್ರಿಸಿದ್ದೇನೆ.ಆದರೆ ಈಗ ಇಪ್ಪತ್ತೈದು ವರ್ಷಗಳ ನಂತರ,'ಹೀಗೇಕೆ ಮಾಡಿದೆ?ಹಾಗೆ ಮಾಡಬಹುದಾಗಿತ್ತು'ಎಂದರೆ ಅದಕ್ಕೆ ನನ್ನಲ್ಲಿ ಉತ್ತರವಿಲ್ಲ.ಆ ಘಟನೆ ಹಾಗೆ ನಡೆಯಬೇಕಿತ್ತು.ಹಾಗೆ ನಡೆದಿದೆ.ಅಷ್ಟೇ.
    ಕೆಲವೊಮ್ಮೆ ನಮ್ಮ ಬುದ್ಧಿಗೆ ಮಂಕು ಕವಿದಿರುತ್ತದೆ.ಏನೋ ಮಾಡಿಬಿಡುತ್ತೇವೆ!ಆದರೆ ದೈವ ಕೃಪೆ ಒಂದಿದ್ದರೆ ಬಂದ ಕಷ್ಟವೆಲ್ಲಾ ಮಂಜಿನಂತೆ ಕರಗಿ ಹೋಗುತ್ತದೆ!ಜೀವನದಲ್ಲಿ ಇಂತಹ ಘಟನೆಗಳಿಂದ ನಮ್ಮ ಆತ್ಮ ಸಂಸ್ಕರಣೆ ನಡೆಯುತ್ತದೆ.ನಮಗೇ ಅರಿಯದಂತೆ ನಮ್ಮ ಜೀವನ ನಮಗೊಂದು ಪಾಠ ಕಲಿಸಿರುತ್ತದೆ.ಮತ್ತೊಮ್ಮೆ ಎಲ್ಲಾ ಆತ್ಮೀಯ ಬಂಧುಗಳಿಗೂ ನನ್ನ ನಮಸ್ಕಾರಗಳು.

    ReplyDelete
  16. ನಮ್ಮನ್ನೂ ಕೆಲ ಸಮಯ ನೀವು ಅ೦ದು ಅನುಭವಿಸಿದ ಆತ೦ಕದ ಕ್ಷಣಗಳಿಗೆ ಕೊ೦ಡೊಯ್ದಿದ್ದಿರಿ ಸರ್, ಸುಖಾ೦ತ್ಯವಾದದ್ದು ಸ೦ತಸದ ವಿಷಯ.

    ReplyDelete
  17. ನಿಜಕ್ಕೂ ಮೈ ನಡುಗುವ ಸ೦ದರ್ಭ... ಆ ಕೂಲಿಯವನಿಗೆ ಧನ್ಯವಾದಗಳನ್ನು ಅರ್ಪಿಸಬೇಕಾದದ್ದೆ.. ಈಗಿನ ಕಾಲದಲ್ಲಿ ಅ೦ತಹ ಜನ ಬಹಳ ಅಪರೂಪ. ದೇವರು ದೊಡ್ಡವನು....:)

    ReplyDelete
  18. ಮೂರ್ತಿ ಸರ್....

    ಇಂತಹುದೇ ಒಂದು ಘಟನೆ ನನ್ನ ಜೊತೆನೂ ನಡೆದಿತ್ತು.....ಆ ಸಂಧರ್ಭ ನಿಮ್ಮ ಮನಸ್ಥಿತಿ ಹೇಗಿದ್ದಿತ್ತು ಎಂಬುವುದನ್ನು ನಾನು ಕಲ್ಪಿಸಿಕೊಳ್ಳ ಬಲ್ಲೆ....ಸುಖಾಂತ್ಯ ಆಯಿತಲ್ಲಾ ಎನ್ನುವುದೇ ಸಂತೋಷ...

    ReplyDelete
  19. ಓದಿ ಎದೆ ಧಸ್ ಎಂದಿದ್ದು ಸುಳ್ಳಲ್ಲ. ಘಟನೆಯ ಅನಾವರಣ ತುಂಬಾ ಚೆನ್ನಾಗಿದೆ.

    ReplyDelete
  20. ಉತ್ತಮವಾದ ಬರಹ ಸರ್ ದೇವರು ದೊಡ್ಡವನು ಧನ್ಯವಾದಗಳು..

    ReplyDelete
  21. nijakku aatankakaariyaada anubhava sir.kuulikaararalle indu heccaagi
    daivatvavannu kaanuttiddeve.dhanyavaadagalu.

    ReplyDelete
  22. ಅಬ್ಬಾ...!!! ನನಗೆ ಎರಡು ವರ್ಷದ ಸುರುನ ಆಗತಾನೇ ಚಲಿಸಲು ಸಜ್ಜಾದ ಚೆನ್ನೈ -ಬೆಂಗಳೂರು ಮೈಲ್ ಗೆ ಹತ್ತಿಸಿ, ನನ್ನವಳನ್ನು ಹತ್ತಿಸಲು ಪ್ರಯತ್ನಿಸಿ ಸೋತಾಗ ನನ್ನವಳು..ಆಯ್ಯೋ ನನ್ನ ಮಗಳು..ಎನ್ನುತ್ತಾ ಕಿರುಚುವುದನ್ನು ನೋಡಿ...ಗಬಕ್ಕನೆ ಮತ್ತೆ ಬೋಗಿಯಿಂದ ಸುರುನ ಇಳಿಸಿಕೊಂಡ .... ಹೃದಯ ಬಾಯಿಗೆ ಬಂದ ಸನ್ನಿವೇಶ ನೆನಪಾಯ್ತು....ಅಬ್ಬಬ್ಬಾ... ನಿಜಕ್ಕೂ ನಿಮ್ಮ ಆತಂಕ, ಭಯ,ಸಿಕ್ಕಾಗ ಅಳುಮಿಶ್ರಿತ ಸಂತೋಷ ....!!!!! ಬಹಳ ಚನ್ನಾಗಿದೆ ನಿರೂಪಣೆ

    ReplyDelete
  23. neevu lucky. naija anubhava manakke muttuttde. olleya niroopane.

    ReplyDelete
  24. ತಮ್ಮ ಬ್ಲಾಗ್ ಓದಿ ಖುಷಿಯಾಯಿತು.ಮನ ಮುಟ್ಟುವಂತೆ ಬರೆದಿದ್ದೀರಿ,ಡಾಕ್ಟರೆ. ನಾನಿನ್ನು ನಿಮ್ಮ ಬ್ಲಾಗ್ ನ ನಿರಂತರ ಓದುಗ.

    ReplyDelete

Note: Only a member of this blog may post a comment.