Saturday, July 24, 2010

'ಜೋಕಾಲೇಲಿ ಜೀಕು ! '

ನಾನು ಆಸ್ಪತ್ರೆಗೆ ಹೊರಡಲು ತಯಾರಾಗುತ್ತಿದ್ದೆ. ಆರನೇ ತರಗತಿ ಓದುತ್ತಿದ್ದ  ಪಕ್ಕದ ಮನೆಯ ಹುಡುಗಿ ಸ್ಮಿತಾ  ಬಂದು'ಅಂಕಲ್ ಶಾಲೆಯಲ್ಲಿ ಕಾಂಪಿಟೇಶನ್ ಇದೆ ,ನಮಗೆ ಒಂದು ಹಾಡು ಬರೆದುಕೊಂಡು ಬರಬೇಕು ಅಂತ ಹೇಳಿದ್ದಾರೆ ,ಪ್ಲೀಸ್ ಬರೆದುಕೊಡಿ ಅಂಕಲ್ 'ಎಂದು ಪೀಡಿಸತೊಡಗಿದಳು.'ಇವತ್ತು  ಲೇಟಾಯಿತಮ್ಮ ನಾಳೆ ಬರೆದುಕೊಡುತ್ತೀನಿ 'ಎಂದರೆ ಕೇಳಲಿಲ್ಲ.'ಟೀಚರ್ ಹೊಡೆಯುತ್ತಾರೆ ಅಂಕಲ್ 'ಎಂದು ಬಾಣ ಬಿಟ್ಟು, ಅಳತೊಡಗಿದಳು.ಈ ಟೀಚರ್ ಗಳು ಮಕ್ಕಳನ್ನು ಹೊಡೆದು ನಮ್ಮನ್ನೇಕೆ ಹೀಗೆ ಪೀಡಿಸುತ್ತಾರೆಂದು ನನಗೆ ಈಗಲೂ ಅರ್ಥವಾಗಿಲ್ಲ.'ಏನೋ ಒಂದು ಬರೆದುಕೊಡಿ,ಪಾಪ ಮಗು ಕೇಳುತ್ತೆ' ಎಂದು ನನ್ನವಳ ತಾಕೀತು ಬೇರೆ.ಆಗ ತಾನೇ ಕವಿತೆಗಳನ್ನು ಬರೆಯಲು ಶುರು ಮಾಡಿದ್ದೆ .ಸರಿ ,ಅವಸರದಲ್ಲೇ ಒಂದು ಹಾಡು ಬರೆದುಕೊಟ್ಟೆ.ಅದಕ್ಕೆ ಒಂದು ರಾಗವನ್ನೂ ಹಾಕಿ ಕೊಟ್ಟೆ.ಸ್ಮಿತಾ ಹಾಡು ಸಿಕ್ಕ ಸಂತೋಷದಲ್ಲಿ ಮನೆಗೆ  ಓಡಿದಳು.ಶಾಲೆಯಲ್ಲಿ ಆ ಹಾಡನ್ನು ಹಾಡಿ ಬಹುಮಾನವನ್ನೂ ಗಿಟ್ಟಿಸಿದಳು.ನಾನು ಮೊದಮೊದಲು ಬರೆದ ಗೀತೆಗಳಲ್ಲಿ ಇದೂ ಒಂದು.ನೀವೂ ನಿಮ್ಮ ಮಕ್ಕಳಿಗೆ ಈ ಹಾಡನ್ನು ಹೇಳಿಕೊಡಿ.ಹಾಡು ಇಷ್ಟವಾಯಿತೇ ತಿಳಿಸಿ.ನಮಸ್ಕಾರ.

ಜೀವನವೆಂಬ ಜೋಕಾಲೇಲಿ
ಮೇಲೇ ಕೆಳಗೆ ಜೀಕು !
ಕಷ್ಟ ಸುಖ ಎಲ್ಲಾ ಒಂದೇ 
ಅನ್ನೋ ಸಮತೆ ಬೇಕು !


ಹೂವಿನ ಜೊತೆಗೇ ಮುಳ್ಳೂಇರಲಿ 
ಗುಲಾಬಿ ಗಿಡದಲ್ಲಿ !
ಹಾಳೂ ಮೂಳೂ ಎಲ್ಲಾ ಇರಲಿ 
ಬಾಳಿನ ತೋಟದಲಿ !


ಹಸಿರಿನ ಜೊತೆಗೇ ಕೆಸರೂ ಇರಲಿ 
ತೋಟದ ಹಾದಿಯಲಿ !
ನೋವೂ ,ನಲಿವೂ ಎಲ್ಲಾ ಇರಲಿ 
ಬಾಳಿನ ರಾಗದಲಿ!

ಬೇವು ಬೆಲ್ಲ ಎಲ್ಲಾ ಇರಲು 
ಬಾಳು ಸೊಗಸಣ್ಣಾ !
ಸುಖವೊಂದನ್ನೇ ಬೇಡಲು ಬೇಡ 
ಅಯ್ಯೋ ಮಂಕಣ್ಣಾ !

 (ಚಿತ್ರ ಕೃಪೆ;ಅಂತರ್ಜಾಲ )

29 comments:

  1. badukina saaravella koneya nudiyallide.
    kavana enjoy madide.

    ReplyDelete
  2. ಹೇಮಚಂದ್ರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗಿನ ಭೇಟಿ ಹೀಗೆಯೇ ಮುಂದುವರೆಯಲಿ.ನಮಸ್ಕಾರ.

    ReplyDelete
  3. ಡಾಕ್ಟ್ರೆ,
    ಕವನ ಚನ್ನಾಗಿದೆ,
    ಕಷ್ಟ ಸುಖಗಳು ಒಟ್ಟಿಗೆ ಅನುಭವಿಸಿದಾಗಲೇ ಬಾಳಿಗೊಂದು ಅರ್ಥ, ಪರಿಪೂರ್ಣತೆ.

    ReplyDelete
  4. ಚಿಣ್ಣರಿಗೆ ಅರ್ಥವಾಗುವ೦ತಹ ಸು೦ದರ ಪದ್ಯ. ಡಾ. ಅವರಿಗೆ ಅಭಿನ೦ದನೆಗಳು.

    ಅನ೦ತ್

    ReplyDelete
  5. ಮಕ್ಕಳಾಟವು ಚಂದ ಮತ್ತೆ ಮಾಮರ ಚಂದ.... ಅಂತೇನೋ ಹಾಡು ಇದೆಯಲ್ಲ ಹಾಗೇ ಮಕ್ಕಳು ಹಾಡುಹಾಡಿಕೊಂಡು ಕುಣಿವಾಗ ಸಿಗುವ ಸಂತೋಷವೇ ವಿಶಿಷ್ಟ! ಮಕ್ಕಳಿಗಾಗಿ ನಿಮ್ಮ ಮನ ಮಿಡಿದು ಬರೆದ ಕವನ ಚೆನ್ನಾಗಿದೆ, ಅದರಲ್ಲೂ ಬಹುಮಾನ ಬಂದಿದೆ ಎಂದರೆ ಆ ಪುಟ್ಟಿ ಸ್ಮಿತಾಗೂ ಅವರ ಮನೆಯವರಿಗೂ ಬಹಳ ಖುಷಿಯಾಗಿರಬೇಕು, ವೈದ್ಯರು ಎಲ್ಲೇ ಇದ್ದರೂ ಅವರು ಮರೆತಾರೇ ?ನಾಳೆ ಗುರುಪೂರ್ಣಿಮೆ, ತ್ರಿಕರಣ ಪೂರ್ವಕ ಗುರುವಿಗೊಂದು ಸಲಾಮು ಹೊಡೆಯಲು ಮರೆಯಬೇಡಿ, ಧನ್ಯವಾದಗಳು

    ReplyDelete
  6. ಪ್ರವೀಣ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಮಕ್ಕಳಿಗೆ ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸುವುದನ್ನು ಹೇಳಿಕೊಡಬೇಕೆಂಬುದು ನನ್ನ ಅಭಿಮತ.ನಮಸ್ಕಾರ.

    ReplyDelete
  7. ಅನಂತರಾಜ್ಅವರಿಗೆ ನಮಸ್ಕಾರ.ಬಾಳನ್ನು ಅದು ಇದ್ದಂತೆ ಸ್ವೀಕರಿಸುವುದನ್ನು ಮಕ್ಕಳಿಗೆ ಹೇಳಿಕೊಡುವುದು ಒಳ್ಳೆಯದೇನೋ ಎನಿಸುತ್ತದೆ.ಸ್ವಲ್ಪ ಕಮ್ಮಿ ಅಂಕ ಬಂದಿದ್ದಕ್ಕೋ ಅಥವಾ ಫೇಲ್ ಆಗಿದ್ದಕ್ಕೋ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದರೆ ಆಘಾತವಾಗುತ್ತದೆ.

    ReplyDelete
  8. ನಮಸ್ಕಾರ ವಸಂತ್;ಕವಿತೆಸರಳವಾಗಿದೆ.ಮಕ್ಕಳಿಗೆ ತಿಳಿವು ನೀಡುವ ಉದ್ದೇಶದಿಂದ ಬರೆದದ್ದು.ನಿಮಗಿಷ್ಟವಾಗಿದ್ದು ಸಂತೋಷ.ಧನ್ಯವಾದಗಳು.

    ReplyDelete
  9. ಭಟ್ ಸರ್;ನಮಸ್ಕಾರ.ಈಗಾಗಲೇ ಆ ಸ್ಮಿತಾ ಪುಟ್ಟಿಗೆ ಮದುವೆಯಾಗಿ ಅವಳಿಗೊಂದು ಪುಟ್ಟಿ ಹುಟ್ಟಿದ್ದಾಳೆ. ಮಕ್ಕಳಿಗೆ ಕಷ್ಟ ಸುಖ ,ಸೋಲು ಗೆಲುವು ಇವುಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡುವುದಕ್ಕೆ ಆದ್ಯತೆ ನೀಡಿದರೆ ಮಕ್ಕಳು ಮನೆ ಬಿಟ್ಟು ಹೋಗುವುದು,ಆತ್ಮಹತ್ಯೆ ಮಾಡಿಕೊಳ್ಳುವಂತಹ ಆಘಾತಗಳನ್ನು ತಡೆಯಬಹುದು ಎನ್ನುವುದು ನನ್ನ ಅಭಿಮತ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಮೂರ್ತಿ ಸರ್,

    ಮಕ್ಕಳಿಗೆ ಅನ್ವಯಿಸುವ ಕವನವಾದರೂ ಅದರಲ್ಲಿರುವ ಸಂದೇಶ ಎಲ್ಲರಿಗೂ ಅನ್ವಯಿಸುವಂತದ್ದು. ಸುಂದರ ಕವನ ಸರ್. ಧನ್ಯವಾದಗಳು..

    ReplyDelete
  11. SuMdara Kavana sir .. artha bharitavaagide .

    ReplyDelete
  12. ಅಶೋಕ್;ನಮಸ್ಕಾರ.ಮಕ್ಕಳು ಖುಷಿಯಿಂದ ಜೋಕಾಲೆಯಲ್ಲಿ ಜೀಕುವುದನ್ನು ನೋಡಿದಾಗ ಹೊಳೆದ ಕವನ ಇದು.ಜೋಕಾಲಿ ಮೇಲಿದ್ದಾಗ ಎಷ್ಟು ಖುಶಿಪಡುತ್ತಾರೋ ಕೆಳಗೆ ಬರುವಾಗಲೂ ಖುಷಿಯಿಂದ ಕೇಕೆ ಹಾಕುತ್ತಿರುತ್ತಾರೆ.ಜೀವನದಲ್ಲಿ ಹಾಗಿರುವುದು ಎಷ್ಟು ಚೆಂದ ಅಲ್ಲವೇ ಅನ್ನಿಸಿತ್ತು.ನಿಮ್ಮ ಕಾವ್ಯ ಪ್ರೀತಿಗೆ ಧನ್ಯವಾದಗಳು.

    ReplyDelete
  13. ಶ್ರೀಧರ್ ರವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮಗೆ ಕವನ ಇಷ್ಟವಾಗಿದ್ದು ಸಂತೋಷ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  14. ಶ್ರೀಕಾಂತ್ ರವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಈ ಹಾಡಿಗೆ ಸ್ವಲ್ಪ ಫಾಸ್ಟ್ ಆದ ರಾಗವನ್ನು('ಮಾನವನಾಗಿ ಹುಟ್ಟಿದಮೇಲೆ'ರಾಗ)ಹಾಕಿ ಹಾಡಬಹುದು.ನಮಸ್ಕಾರ.

    ReplyDelete
  15. ತೇಜಸ್ವಿನಿಯವರಿಗೆ;ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ಮೂರ್ತಿಯವರೆ,
    ಮಕ್ಕಳಿಗಷ್ಟೇ ಏಕೆ, ದೊಡ್ಡವರಿಗೂ ಸಹ ಅನ್ವಯಿಸುವ ಕವನವಿದು.
    ಅಭಿನಂದನೆಗಳು.

    ReplyDelete
  17. ಸರ್

    ತುಂಬಾ ಚೆಂದದ ಕವನ
    ಹಾಡೋಕೆ ಖುಷಿ ಆಗುತ್ತೆ

    ReplyDelete
  18. ಸುನಾತ್ ಸರ್;ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮಂತಹ ಅನುಭವಿ ಲೇಖಕರ ಪ್ರತಿಕ್ರಿಯೆ ನಮಗೆ ಅವಶ್ಯಕ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  19. ಗುರೂ ಸರ್;ಹಾಡು ನಿಮಗೆ ಹಿಡಿಸಿದ್ದು ಸಂತೋಷವಾಯಿತು.ಬ್ಲಾಗಿಗೆ ಬಂದು ನೀವು ನೀಡುತ್ತಿರುವ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  20. ಶಿಶುಗೀತೆ ಹಿರಿಯರದೂ ಸಹ! ಅರ್ಥಪೂರ್ಣವಾದ ಸರಳ ಗೀತೆ! ಧನ್ಯವಾದಗಳು.

    ReplyDelete
  21. ಸೀತಾಮ್ ಸರ್ ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .ನಿಮ್ಮಪ್ರೋತ್ಸಾಹ ಹೀಗೇ ಮುಂದುವರೆಯಲಿ,ನಮಸ್ಕಾರ.

    ReplyDelete
  22. UdayHegde;Thank you very much for your kind comments.warm regards.

    ReplyDelete
  23. ಡಾ. ಸರ್,
    ಜೀವನ ಸಾರ ತಿಳಿಸುವ ಕವನ ಚೆನ್ನಾಗಿದೆ ಸರ್.... ಮಕ್ಕಳ ಹಾಡು ಬರೆಯೋದು ಕಷ್ಟ ...... ಅದರಲ್ಲಿ ನೀವು ಯಶಸ್ವಿ ಆಗಿದ್ದೀರಾ...... ಧನ್ಯವಾದ....

    ReplyDelete
  24. ದಿನಕರ್ ಮೊಗೇರ ಅವರಿಗೆ;ನೀವು ಹೇಳುವುದು ಸತ್ಯ.ಮಕ್ಕಳಿಗೆ ಜೀವನದ ಪಾಠ ಗಳನ್ನು ಸುಲವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುವುದು ಕಷ್ಟಕರ.ಅವರಿಗೆ ಜೀವನದಲ್ಲಿ ಕಷ್ಟ ಸುಖ ,ಸೋಲು ಗೆಲುವು ಎಲ್ಲವೂ ಇದ್ದದ್ದೇ ಎಂದು ಸರಿಯಾದ ರೀತಿಯಲ್ಲಿ ಹೇಳಿಕೊಡಬೇಕಾಗುತ್ತದೆ.ಬರೀ ಸುಖದಲ್ಲೇ ಬೆಳೆದ ಅಥವಾ ಸೋಲನ್ನೇ ಅರಿಯದ ಮಕ್ಕಳು ಕಷ್ಟ ಅಥವಾ ಸೋಲು ಎದುರಾದಾಗ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಯನ್ನುತಳ್ಳಿ ಹಾಕುವಂತಿಲ್ಲ.ಧನ್ಯವಾದಗಳು.ನಮಸ್ಕಾರ.

    ReplyDelete
  25. sukhe dukhe sameekruthva
    laabhaalaakhau jayaajaya

    sundaravaagide kavana

    ReplyDelete
  26. ನಮಸ್ಕಾರ ಅಶೋಕ್ ;ಭಗವತ್ ಗೀತೆಯ ಶ್ಲೋಕವನ್ನು ನೆನಪಿಸದ್ದಕ್ಕಾಗಿ ಧನ್ಯವಾದಗಳು.

    ReplyDelete

Note: Only a member of this blog may post a comment.