Saturday, March 26, 2011

"ದೇಹದ ಕರ್ಮ ಯೋಗಿಗಳು!"

ನಮ್ಮ ದೇಹದ ಹಲವಾರು ಅಂಗಗಳು ಯಾವುದೇ ಸದ್ದು ಗದ್ದಲವಿಲ್ಲದೇ,ನಮ್ಮ ಅರಿವಿಗೂ ಬರದಂತೆ ,ನಮಗೆ ಜೀವಮಾನವಿಡೀ ಸಹಾಯ ಮಾಡುತ್ತಾ ,ತಮ್ಮ ಪಾಡಿಗೆ ತಾವು ಕರ್ಮಯೋಗಿಗಳಂತೆ ಕೆಲಸ ಮಾಡುವುದನ್ನು ಕಂಡರೆ ಈ ಸೃಷ್ಟಿಯ ಅದ್ಭುತದ ಬಗ್ಗೆ ಅಚ್ಚರಿಯಾಗುತ್ತದೆ !ಇಂದಿನ ಪ್ರಜಾವಾಣಿಯಲ್ಲಿ ಬಂದ 'ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ'ಎನ್ನುವ ಲೇಖನದಲ್ಲಿ ಬಂದ ಅಂಕಿ ಅಂಶಗಳು ಸ್ವಲ್ಪ ಆತಂಕ ಮೂಡಿಸಿತು.ಡಯಾಬಿಟಿಸ್ ಮತ್ತು ಅಧಿಕ ರಕ್ತದ ಒತ್ತಡವಿರುವ ರೋಗಿಗಳಲ್ಲಿ ಶೇ.25-40 ರಷ್ಟು ರೋಗಿಗಳು ತೀವ್ರ ಮೂತ್ರ ಪಿಂಡದ ಖಾಯಿಲೆಯಿಂದ(critical kidney disease) ನರಳುತ್ತಾರೆ ಎನ್ನಲಾಗಿದೆ.ಇವರಲ್ಲಿ ಹೆಚ್ಚಿನವರಿಗೆ ಡಯಾಲಿಸಿಸ್ ಅಥವಾ ಕಿಡ್ನಿ transplant ಬೇಕಾಗುತ್ತದೆ ಎನ್ನಲಾಗಿದೆ. ಈಗೀಗ ಬಿ.ಪಿ. ಮತ್ತು ಶುಗರ್ ಗಳು ಖಾಯಿಲೆಗಳೇ ಅಲ್ಲ ಎನ್ನುವಷ್ಟು ಸಾಮಾನ್ಯವಾಗಿದೆ.ಹೆಚ್ಚಿನ ಜನ ಹಿಂದೆ ವೈದ್ಯರು ಬರೆದು ಕೊಟ್ಟ ಮಾತ್ರೆಗಳನ್ನೇ ,ಮತ್ತೆ ಚೆಕ್ ಮಾಡಿಸಿಕೊಳ್ಳದೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುತ್ತಾರೆ. ಹೆಚ್ಚಿನ ಶುಗರ್ ರೋಗಿಗಳಿಗೆ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ಹಿಂಜರಿತ.ಮಾತ್ರೆಗಳು ಕೆಲಸ ಮಾಡದಿದ್ದರೂ (primary and secondary failure),insulin dependent ಆಗಿದ್ದರೂ,ಅದೇ   ಮಾತ್ರೆಗಳನ್ನು  ಹೆಚ್ಚಿನ ಪ್ರಮಾಣ ದಲ್ಲೋ ಅಥವಾ ಬೇರೆಯವರಿಗೆ ಬರೆದು ಕೊಟ್ಟ ಮಾತ್ರೆಗಳನ್ನೋ ತೆಗೆದುಕೊಳ್ಳುತ್ತಾರೆ.ವರ್ಷಾನುಗಟ್ಟಲೆ  ಮಾತ್ರೆಗಳನ್ನು ತೆಗೆದುಕೊಂಡರೂ ರಕ್ತದ ಶುಗರ್(P.P.B.S.) ಕಡಿಮೆ ಆಗದ ಪಕ್ಷದಲ್ಲಿ  ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಇಂಜೆಕ್ಷನ್ ತೆಗೆದು ಕೊಂಡರೆ ಕಿಡ್ನಿ ಗೆ ಆಗುವ ಹಾನಿಯನ್ನು ತಡೆಯಬಹುದು. ಪ್ರತಿ ಸಲ ಮೂತ್ರದಲ್ಲಿ ಸಕ್ಕರೆಯನ್ನು ಪರೀಕ್ಷೆ ಮಾಡಿಸುವಾಗ ,ಮೂತ್ರದಲ್ಲಿ ಆಲ್ಬುಮಿನ್ (ಪ್ರೋಟೀನ್ )ಇದೆಯೇ ಎಂದು ಪರೀಕ್ಷೆ ಮಾಡಿಸಬೇಕು.ಮೂತ್ರದಲ್ಲಿ ಆಲ್ಬುಮಿನ್ ಕಂಡು ಬಂದರೆ ರಕ್ತದಲ್ಲಿ creatinin ಮತ್ತು urea ಹೆಚ್ಚಾಗಿದೆಯೇ ಎಂದು ನೋಡಬೇಕು.ಹೆಚ್ಚಿದ್ದ ಪಕ್ಷದಲ್ಲಿ ತಕ್ಷಣವೇ ಮೂತ್ರ ಪಿಂಡದ ತಜ್ಞರನ್ನು(NEPHROLOGIST) ಕಾಣ ಬೇಕು. ಅಧಿಕ ರಕ್ತದ ಒತ್ತಡವಿರುವವರು ರಕ್ತದ ಒತ್ತಡ ಕಡಿಮೆ ಆಗದಿದ್ದರೆ ತಾವು ತೆಗೆದುಕೊಳ್ಳುತ್ತಿರುವ ಮಾತ್ರೆಯ ಜೊತೆಗೆ ಬೇರೆ ಮಾತ್ರೆಗಳನ್ನೂ ತೆಗೆದು ಕೊಳ್ಳ ಬೇಕಾಗ ಬಹುದು. ಹೆಚ್ಚು ರಕ್ದ ಒತ್ತಡವಿದ್ದರೂ(ಉದಾ ;180\ 100 mm.hg) ತಮಗೇನೂ ತೊಂದರೆ ಇಲ್ಲವೆಂದು ಸುಮ್ಮನಿದ್ದರೆ ಮೂತ್ರ ಪಿಂಡದ ರಕ್ತ ನಾಳಗಳ ಒಳ ಪದರ( intimal layer) ಹಾಳಾಗುತ್ತದೆ. ತಕ್ಷಣವೇ ತಜ್ಞರನ್ನು ಕಾಣುವುದು ಒಳ್ಳೆಯದು.ಉಪ್ಪು ,ಉಪ್ಪಿನ ಕಾಯಿ ಮತ್ತು sodium ಅಂಶವಿರುವ ಆಹಾರಗಳನ್ನು ಕಡಿಮೆ ಮಾಡುವುದು ಒಳಿತು.ನೀರೇ ಕುಡಿಯದ ಕೆಲವರನ್ನು ನೋಡಿದ್ದೇನೆ.ಕಿಡ್ನಿ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು.ಆದ್ದರಿಂದ ಕಿಡ್ನಿಯ ಆರೋಗ್ಯದ ದೃಷ್ಟಿ ಯಿಂದ  ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಒಳಿತು.
 ಶುಗರ್ ಮತ್ತು ಬಿ.ಪಿ.ಇರುವವರು  ನೋವಿನ ಮಾತ್ರೆಗಳನ್ನು( analgesics) ಆದಷ್ಟು  ತೆಗೆದು ಕೊಳ್ಳದಿರುವುದು ಒಳ್ಳೆಯದು. ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ದಿಂದ ಔಷಧಿ ಅಂಗಡಿಯಿಂದ ನೋವಿನ ಮಾತ್ರೆಗಳನ್ನು ತಂದು ನುಂಗುವುದು ಕಿಡ್ನಿಗೆ ತೊಂದರೆ ಉಂಟು ಮಾಡಬಹುದು(nimusulide ಮತ್ತು diclofenac sodiam ನಂತಹ ಮಾತ್ರೆಗಳು)ಒಟ್ಟಿನಲ್ಲಿ ಶುಗರ್ ಮತ್ತು ಬಿ.ಪಿ.ಇರುವವರು ಕಿಡ್ನಿ ತೊಂದರೆ ಬರದಂತೆ ಎಚ್ಚರ ವಹಿಸುವುದು ಒಳ್ಳೆಯದು.ತೊಂದರೆ ಬಂದ ನಂತರ ಬರುವ ಕಷ್ಟ ನಷ್ಟಗಳನ್ನು ಮೊದಲೇ ತೆಗೆದುಕೊಳ್ಳುವ ಎಚ್ಚರಿಕೆ ಯಿಂದ ತಡೆಯ ಬಹುದಲ್ಲವೇ?

Wednesday, March 23, 2011

"ತಿರುಪತಿಯ .....ತಂದೆಯೇ!!"

ನನ್ನ ಸ್ನೇಹಿತರೊಬ್ಬರ ಮಗ ಮತ್ತು ನನ್ನ ಮಗ ಇಬ್ಬರೂ ಇಂಗ್ಲೀಶ್ ಮಾಧ್ಯಮದಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು.ಒಂದನೇ ತರಗತಿಯವರಗೆ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದ ಅವರಿಗೆ, ಎರಡನೇ ತರಗತಿಯಿಂದ ಕನ್ನಡ ಕಲಿಸುವುದನ್ನು ನಿಲ್ಲಿಸಲಾಯಿತು.ಐದನೇ ತರಗತಿಗೆ ಬಂದಾಗ ಕನ್ನಡದ ಒಂದನೇ ತರಗತಿಯ ಪುಸ್ತಕವನ್ನೇ ಮತ್ತೆ ಶುರು ಮಾಡುವುದಾಗಿ ಹೇಳಲಾಗಿತ್ತು.ಆದರೆ ಆ ವರ್ಷ ಬಂದ ಹೊಸ ಶಿಕ್ಷಣಾಧಿಕಾರಿಯ ಆದೇಶದ ಪ್ರಕಾರ  ಕನ್ನಡ ಮಾಧ್ಯಮದ ಐದನೇ ತರಗತಿಯ ಪುಸ್ತಕವನ್ನೇ ಇಂಗ್ಲೀಶ್ ಮಾಧ್ಯಮದವರಿಗೂ ಇಡಲಾಯಿತು.ಎರಡನೇ ತರಗತಿಯಿಂದ ಕನ್ನಡ ಕಲಿಯುವುದನ್ನೇ ಬಿಟ್ಟಿದ್ದ ಹುಡುಗರಿಗೆ ಐದನೇ ತರಗತಿಯ ಕನ್ನಡ ಕಬ್ಬಿಣದ ಕಡಲೆಯಾಯಿತು.ಸರಿ ಮನೆಯಲ್ಲಿ ಕನ್ನಡ ಕಲಿಸುವ ಹೊಸ ಜವಾಬ್ದಾರಿಯನ್ನು ನಾವು ಹೊರಬೇಕಾಯಿತು.
ನನ್ನ ಸ್ನೇಹಿತರ ಮಗನಿಗೆ ತಂದೆಗೆ ಪತ್ರ ಒಂದನ್ನು ಬರೆದುಕೊಂಡು ಬರಲು ಹೇಳಲಾಗಿತ್ತು.ಪತ್ರವನ್ನು "ತೀರ್ಥ ರೂಪು ತಂದೆಯವರಿಗೆ" ಎಂದು ಶುರು ಮಾಡುವ ಬದಲು, "ತಿರುಪತಿ ತಂದೆಯವರಿಗೆ "ಎಂದು ಶುರು ಮಾಡಿದ್ದ!ನನ್ನ ಸ್ನೇಹಿತರು ನಕ್ಕು ನಕ್ಕು ಸುಸ್ತಾಗಿ,ತಮಗೆ ಅರಿವಿಲ್ಲದೆ ತಮ್ಮ ತಲೆಯನ್ನೊಮ್ಮೆ ಸವರಿಕೊಂಡರು!ಅವನ ಕನ್ನಡವನ್ನು ನೋಡಿ ಮನಸ್ಸಿನಲ್ಲೇ 'ಗೋವಿಂದಾ ....ಗೋವಿಂದ !'ಎಂದು ಕೊಂಡರು.
ನನ್ನ ಮಗನಿಗೊಮ್ಮೆ ಕನ್ನಡ ಪದಗಳನ್ನು ಕೊಟ್ಟು ,ಸ್ವಂತ ವಾಕ್ಯಗಳನ್ನು ರಚಿಸುವುದನ್ನು ಹೇಳಿ ಕೊಡುತ್ತಿದ್ದೆ..ಅವನಿಗೆ ಒತ್ತಕ್ಷರಗಳನ್ನು ಬರೆಯುವುದು ಸ್ವಲ್ಪ ಕಷ್ಟವಾಗುತ್ತಿತ್ತು.'ಗಾಭರಿ'ಎನ್ನುವ ಪದವನ್ನು ಎರಡೆರಡು ಸಲ ಹೇಳಿದೆ.
'ಗಾಭರಿ'ಎನ್ನುವ ಪದವನ್ನು 'ಗಾ','ಬರೀ'ಎಂದು ಪದ ವಿಭಾಗ ಮಾಡಿಕೊಂಡು, "ಗಂಗಾಗೆ....ಗಾ.... ಬರೀಬೇಕು" ಎಂದು ವಾಕ್ಯ ರಚನೆ ಮಾಡಿಕೊಂಡು ಬಂದ!'ಏನೋ ಇದು ?' ಎಂದರೆ, 'ನೀನೆ ಗಾ ..ಬರೀ ,ಗಾ ....ಬರೀ ..ಅಂತ ಎರಡು ಸಲ ಹೇಳಿದೆಯಲ್ಲಪ್ಪಾ', ಎಂದು ರಾಗ ತೆಗೆದು ನನ್ನ ಮುಖವನ್ನೇ ನೋಡತೊಡಗಿದ!ನಾನು ಈ ಹೊಸ ರೀತಿಯ ವಾಕ್ಯ ರಚನೆ ನೋಡಿ ಅವಾಕ್ಕಾದೆ.

Sunday, March 20, 2011

"ಅಪ್ಪಾ ......ನಾನೇ .....ದೀಪು !"

ಹೋಳಿ ಹಬ್ಬ ಬಂತೆಂದರೆ ಅಮೆರಿಕಾದಲ್ಲಿ ಎಂ.ಎಸ್.ಮಾಡುತ್ತಿರುವ ಮಗ ನೆನಪಾಗುತ್ತಾನೆ.
ಸುಮಾರು ಇಪ್ಪತ್ತೆರಡು ವರ್ಷಗಳ  ಹಿಂದಿನ ಮಾತು.ಆಗಿನ್ನೂ ಮಗ ಒಂದನೇ ತರಗತಿಯಲ್ಲಿದ್ದ.ಹೋಳಿ ಹಬ್ಬಕ್ಕೆಂದು ಬಣ್ಣಗಳನ್ನು ಅಂಗಡಿಯಿಂದ ತಂದು ಅವುಗಳನ್ನು ಬಕೆಟ್ಟಿನಲ್ಲಿ ನೀರುಹಾಕಿ  ಕರಗಿಸಿ,ಬೇರೆ ಬೇರೆ ಬಣ್ಣಗಳನ್ನು ಬಾಟಲಿಗಳಲ್ಲಿ ತುಂಬಿಸಿಕೊಂಡು ಹುಡುಗರ ಜೊತೆ ಬೆಳಿಗ್ಗೆ ಒಂಬತ್ತು ಗಂಟೆಗೆ ಹೋದವನು ಮಧ್ಯಾಹ್ನ  ಒಂದು ಗಂಟೆಯಾದರೂ ಮನೆಗೆ ಬರದಿದ್ದಾಗ ಅವನಮ್ಮ  ಸಹಜವಾಗಿ ಆತಂಕ ಗೊಂಡಿದ್ದಳು. ಆಸ್ಪತ್ರೆಯಿಂದ ಡ್ಯೂಟಿ ಮುಗಿಸಿ ಮನೆಗೆ ಬಂದ ನನ್ನನ್ನು 'ಬೆಳಿಗ್ಗೆ ಹೋದ ದೀಪು ಇನ್ನೂ ಬಂದಿಲ್ಲ.ಎಲ್ಲಿದ್ದಾನೋ ನೋಡಿ ಕರೆದುಕೊಂಡು ಬನ್ನಿ 'ಎಂದು ಕಳಿಸಿದಳು.ನಮ್ಮ ಶಕ್ತಿನಗರದ ಕಾಲೋನಿ ತುಂಬಾ ದೊಡ್ಡದು.ಸ್ಕೂಟರಿನಲ್ಲಿ ಮಗನನ್ನು ಹುಡುಕಿಕೊಂಡು ಹೊರಟೆ.ಒಂದು ಕಡೆ ಹುಡುಗರ ಗುಂಪೊಂದು
ಬಣ್ಣ ವಾಡುತ್ತಿತ್ತು.ಅವರ ಬಳಿ ಹೋಗಿ ಮುಖಕ್ಕೆಲ್ಲಾ ಕಪ್ಪು ಬಣ್ಣ ಬಳಿದುಕೊಂಡಿದ್ದ ಹುಡುಗನೊಬ್ಬನನ್ನು  ಉದ್ದೇಶಿಸಿ 'ನನ್ನ ಮಗ ದೀಪಕ್ ನನ್ನು ಎಲ್ಲಾದರೂ ನೋಡಿದೆಯೇನಪ್ಪಾ'ಎಂದೆ.ಆ ಹುಡುಗ ಕಪ್ಪು ಮುಖದಲ್ಲಿ ಬಿಳಿ ಹಲ್ಲುಗಳನ್ನು ತೋರಿಸಿ'ಅಪ್ಪಾ ನಾನೇ ದೀಪು'ಎಂದು ಮನೆಯ ಕಡೆ ಓಡಿದ.ಹಸಿರು,ಕೆಂಪು,ನೀಲಿ ಎಲ್ಲಾ ಬಣ್ಣಗಳೂ ಸೇರಿ ಮುಖ ಕಪ್ಪು ಬಣ್ಣಕ್ಕೆ ತಿರುಗಿತ್ತು .ಆ ವಿಚಿತ್ರ ವೇಷದಲ್ಲಿ ನನ್ನ ಮಗನೇ ನನಗೆ ಗುರುತು ಸಿಕ್ಕಿರಲಿಲ್ಲ!ಅವನ ಆಗಿನ ಮುಖ ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ.

Friday, March 18, 2011

ಶೀಟಿ ಹಾಕುವ 'ಪೋಲಿ ಹಕ್ಕಿ'

ಬಾಲ್ಕನಿಯಲ್ಲಿ ಕುಳಿತು ಏನೋ ಓದುತ್ತಿದ್ದೆ.ಯಾರೋ ಪೋಲಿ ಹುಡುಗರು ಶೀಟಿ ಹೊಡೆದಂತೆ ಶೀಟಿಯ ಶಬ್ದ ಬಂತು.ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಹೆಂಡತಿ "ಛೀ ......ಏನ್ರೀ  ಇದು.ಈ ವಯಸ್ಸಿನಲ್ಲಿ ಈ ರೀತಿ ಶೀಟಿ ಹಾಕ್ತೀರಾ"ಎಂದಳು."ಬಾ ಇಲ್ಲಿ "ಎಂದು ಮರದ ಮೇಲೆ ಕುಳಿತು ಶೀಟಿ ಹೊಡೆಯುತ್ತಿದ್ದ ಕಪ್ಪು ಬಣ್ಣದ,ನೀಲಿ ಕಣ್ಣಿನ  'ಪೋಲಿ' ಹಕ್ಕಿಯನ್ನು ತೋರಿಸಿದೆ.ಮತ್ತೊಮ್ಮೆ ಅದೇ ರಾಗದಲ್ಲಿ ಶೀಟಿ ಹೊಡೆದು ಬಾಲ ಅಲ್ಲಾಡಿಸಿ 'ಪುರ್ರ್'ಎಂದು ಹಾರಿ ಹೋಯಿತು.
ನಮ್ಮ ಸ್ನೇಹಿತರೊಬ್ಬರ ಮನೆಯ ಮಹಡಿಯ ಮೇಲಿನ ಮನೆಯಲ್ಲಿ ಕಾಲೇಜು ಕನ್ಯೆ ಯೊಬ್ಬಳಿದ್ದಳು.ಆ ಹುಡುಗಿ ದಿನಾ ಸಂಜೆ ಕಾಲೇಜಿನಿಂದ ಮನೆಗೆ ಬಂದ ನಂತರ, ಮೇಲಿನಿಂದ ಸೀಟಿಯ ಶಬ್ದ ಕೇಳುತ್ತಿತ್ತು.ನಮ್ಮ ಸ್ನೇಹಿತರ ಹೆಂಡತಿ 'ಛೆ .....ಇದೇನು ಮರ್ಯಾದಸ್ಥರ ಮನೆಯ ಈ  ಹುಡುಗಿ ಹೀಗೇಕೆ  ಶೀಟಿ ಹೊಡೆಯುತ್ತಾಳೆ !'ಎಂದುಕೊಂಡರು.ತಡೆಯಲಾರದೆ ಒಂದು ಸಲ'ದಿನಾ ಸಂಜೆ ಮೇಲಿನಿಂದ ಶೀಟಿಯಶಬ್ದ ಬರುತ್ತದಲ್ಲ!'ಎಂದು  ಅವರಮ್ಮನನ್ನೇ ಕೇಳಿದರು.ಅವರಮ್ಮ ನಕ್ಕು ಅವರ ಮನೆಯ ಬಾಲ್ಕನಿಗೆ ಅಂಟಿಕೊಂಡಿದ್ದ ಮರದ ರೆಂಬೆಯತ್ತ ತೋರಿಸಿದರು.ಅದೇ ಜಾತಿಯ ನೀಲಿ ಕಣ್ಣಿನ ಕಪ್ಪು ಹಕ್ಕಿ ತನ್ನ ಪಾಡಿಗೆ  ತಾನು  ಶೀಟಿಹೊಡೆಯುವುದನ್ನುಮುಂದುವರಿಸಿತು. 
ನನ್ನ ಸಹೋದ್ಯೋಗಿಯೊಬ್ಬರ  ಮನೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗಿ ಇದ್ದಳು.ದಿನಾ ಮುಂಜಾನೆ 'ಪೋಲಿ ಹುಡುಗನೊಬ್ಬನ'ಶೀಟಿ ಕೇಳಿಸುತ್ತಿತ್ತು.ಒಂದು ದಿನ ಸಿಟ್ಟು ಬಂದು 'ಯಾವೋನೋ ಅವನು' ಎಂದು ಸಿಟ್ಟಿನಿಂದ ಬೈಯುತ್ತಾ ಹೊರ ಬಂದು ನೋಡಿದರೆ ಅದೇ 'ಪೋಲಿ'ಹಕ್ಕಿ ಮರದ ಮೇಲೆ ಕುಳಿತು ನಿರಾತಂಕವಾಗಿ ಸೀಟಿ ಹೊಡೆಯುತ್ತಿತ್ತು. ಓದುಗರಲ್ಲಿ ಯಾರಾದರೂ ಇದು ಯಾವ ಜಾತಿಯ ಹಕ್ಕಿ ಎಂದು ಹೇಳುತ್ತೀರಾ? ಸಧ್ಯಕ್ಕಂತೂ ನಾವಿದನ್ನು ಪೋಲಿ ಹಕ್ಕಿ ಎಂದೇ ಕರೆಯುತ್ತಿದ್ದೇವೆ.

Wednesday, March 16, 2011

ಬಿ.ಆರ್.ಲಕ್ಷ್ಮಣ ರಾವ್ ಅವರ "ಹನಿಗವಿತೆಗಳು"

ಇನ್ನೂ ಇದೀಗ ಮಾರ್ಚ್ ತಿಂಗಳು.ಬೇಸಿಗೆಯ ಬಿಸಿಗೆ ಬೇಸರ ಬಂದು ಪುಸ್ತಕದ ಗೂಡಿನಲ್ಲಿ ತಡಕಾಡಿದಾಗ ಸಿಕ್ಕಿದ್ದು ,ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ 'ಹನಿಗವಿತೆಗಳು'ಪುಸ್ತಕ.ಇಲ್ಲಿದೆ ನೋಡಿ ತಂಪನೀಯುವ ಅವರ ಕೆಲ 'ಹನಿಗವಿತೆಗಳು';
೧) ಕಂಪನಿ

ಕೈಮರಕ್ಕೆ ಬೇಸರ 
ನೀಗಲೆಂದು 
ಹೆಗಲ ಮೇಲೆ 
ಕೂತು 
ಒಂದು ಗಿಣಿ 
ನೀಡಿದೆ ಕಂಪನಿ

೨) ಮಾಮೂಲು

ಚಂದ್ರ ಕಲಾ ಮತ್ತು ಸೂರ್ಯ ಪ್ರಕಾಶ 
ಅಮರ ಪ್ರೇಮಿಗಳು ,
ಇವರಿಬ್ಬರ ನಡುವೆ ಯಥಾ ಪ್ರಕಾರ 
ಭೂಮಿ ಅಡ್ಡ ಬಂತು ,
ಜಾಣ ಸೂರ್ಯ ತಲೆ ಮರೆಸಿಕೊಂಡ .
ಚಂದ್ರ ಗ್ರಹಣವಾಯ್ತು.

೩) ದುರಂತ 

ಹೆಣ್ಣು ತೊಟ್ಟು ಮೆರೆಯುವಳೇ
ಸಲ್ವಾರ್ ಕಮೀಜು ?
ಕನ್ನಡಿ ನೋಡಿ ಹಿಗ್ಗುವಳೇ 
ತನ್ನದೇ ಇಮೇಜು?
ಕನ್ಯತ್ವದ ಹಂತ.
ಸದಾ ಸೀರೆಯೇ? ಹ್ಯಾಪು ಮೋರೆಯೇ?
ದಾಂಪತ್ಯ ದುರಂತ.

೪)ಪಾಠ

ಹುಡುಗಿ ,ಯಾಕಮ್ಮಾ ಈ ಮೊಸಳೆ ಕಣ್ಣೀರು ?
ಕೈ ಕೊಟ್ಟ ನಿನ್ನ ರೋಮಿಯೋ ಬಗ್ಗೆ 
ವೃಥಾ ಕ್ರೋಧದ ಜ್ವಾಲೆ?
ನಿನಗೆ ಮೊದಲೇ ಗೊತ್ತಿರಬೇಕಿತ್ತು 
ಕೋತಿಯ ಹೃದಯ 
ಕೊಂಬೆಯ ಮೇಲೆ.
೫)ಸಮಾನತೆ 

ಬಡವರ ಮಕ್ಕಳು
ಮೂಟೆ ಹೊರುತ್ತಾರೆ
ಕೂಲಿಗೆ.
ಶ್ರೀಮಂತರ ಮಕ್ಕಳೂ 
ಮೂಟೆ ಹೊರುತ್ತಾರೆ 
ಸ್ಕೂಲಿಗೆ.
೬)ವಸ್ತು 

ಹಾಡೇ ಹಾಡೇ ,ಇಂದಿನ ಪಾಡೇ 
ಏನು ನಿನ್ನ ವಸ್ತು?
ಓಲೆ,ಓಲೆ ,ಸೆಕ್ಸಿ,ಸೆಕ್ಸಿ,
ಹಮ್ಮ,ಮಸ್ತು ,ಮಸ್ತು.

೭)ಪಾಕಂಪೊಪ್ಪು

ತುಳುಕುವ ಬಳುಕುವ ತಾರಾ 
ಹುಡುಗರು ರೆಗಿಸ್ತಾರಾ ?
ಅದರಲ್ಲೇನಿದೆ ತಪ್ಪು ?
ನೀನೋ  ಪಾಕೊಂಪೊಪ್ಪು.
ಪಾಕೊಂಪೊಪ್ಪಿಗೆ ಇರುವೆ 
ಮುತ್ತಿಗೆ ಹಾಕೋ ಥರವೇ 
ನಿನ್ನ ಸುತ್ತಾ ಬಾಯ್ಸು.
ದಂ ಇದ್ರೆ ದಬಾಯ್ಸು.

೮)ಕೊಡಲಿ 

ಸ್ವಾರ್ಥಿ ,ಕಟುಕ 
ಈ ಮನುಜನಿಗೆ 
ದೇವರು ಬುದ್ಧಿಯ ಕೊಡಲಿ 
ಎಂದು 
ಹಸಿರು ಕೈಗಳೆತ್ತಿ
ಪ್ರಾರ್ಥಿಸುತ್ತಿರುವ 
ಮರದ 
ಬುಡಕ್ಕೆ 
ಕೊಡಲಿ.
 

Thursday, March 10, 2011

"ಭಾಷಾ ಗೊಂದಲ".....ಒಂದು ಮೋಜಿನ ಪ್ರಸಂಗ.

ನಾವು ಸಣ್ಣವರಿದ್ದಾಗ ಸಿಂಧನೂರಿನ ಹತ್ತಿರವಿರುವ ಧಡೇಸುಗೂರ್ ಎಂಬಲ್ಲಿರುವ ಅಗ್ರಿಕಲ್ಚರ್ ಫಾರಮ್ಮಿನಲ್ಲಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು.ಅಕ್ಕ ಪಕ್ಕದ ಮನೆಗಳಲ್ಲಿ ಹೈದರಾಬಾದಿನಿಂದ ಬಂದಿದ್ದ ರೆಡ್ಡಿಯವರೂ,ಧಾರವಾಡದಿಂದ ಬಂದಿದ್ದ  ದೆಸಾಯಿಯವರೂ ಇದ್ದರು.ದೇಸಾಯಿಯವರ ಹೆಂಡತಿ ಅಪ್ಪಟ ಕನ್ನಡತಿ.ಅವರಿಗೆ ತೆಲುಗು ಭಾಷೆ ಬರುತ್ತಿರಲಿಲ್ಲ.ರೆಡ್ಡಿಯವರ ಹೆಂಡತಿಗೆ ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ.
ಒಮ್ಮೆ ದೇಸಾಯಿ ಯವರ ಹೆಂಡತಿ ರೆಡ್ಡಿಯವರ ಮನೆಗೆ ಹೋದರು.ರೆಡ್ಡಿಯವರ ಹೆಂಡತಿ ತೆಲುಗಿನಲ್ಲಿ 'ರಂಡಿ,ರಂಡಿ'ಎಂದರು.
ತೆಲುಗಿನಲ್ಲಿ 'ರಂಡಿ'ಎಂದರೆ ಬನ್ನಿ ಎಂದರ್ಥ.ಅದನ್ನು ದೇಸಾಯಿಯವರ ಹೆಂಡತಿ 'ಬೈಗಳು' ಎಂದು  ಅಪಾರ್ಥ ಮಾಡಿಕೊಂಡು ಅಲ್ಲಿಂದ ಧಡಕ್ಕನೆ ಎದ್ದು, ದುರ್ದಾನ ತೆಗೆದುಕೊಂಡವರಂತೆ ಹೊರಟು ಹೋದರು.ರೆಡ್ಡಿಯವರ ಹೆಂಡತಿಗೆ ಅವರು ಹಾಗೇಕೆ ಹೊರಟು ಹೋದರು ಎಂದು ಅರ್ಥವಾಗಲಿಲ್ಲ.ಮತ್ತೊಮ್ಮೆ ರೆಡ್ಡಿಯವರ ಹೆಂಡತಿ ದೇಸಾಯಿಯವರಮನೆಗೆ ಹೋದರು.
ದೇಸಾಯಿಯವರ ಹೆಂಡತಿ ತಮ್ಮ ಸಂಪ್ರದಾಯದಂತೆ 'ಬರ್ರಿ,ಬರ್ರಿ' ಎಂದರು.ತೆಲುಗಿನಲ್ಲಿ 'ಬರ್ರ 'ಎಂದರೆ ಎಮ್ಮೆ ಎಂದರ್ಥ.
ತಮ್ಮ ಭಾರಿ ಗಾತ್ರದ ದೇಹವನ್ನು ಕಂಡು ಎಮ್ಮೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ ಎಂದುಕೊಂಡು ರೆಡ್ಡಿಯವರ ಹೆಂಡತಿ  ಅಲ್ಲಿಂದ ಭರ,ಭರನೇ ಹೊರಟು ಹೋದರು. ದೇಸಾಯಿಯವರ ಹೆಂಡತಿಗೆ ಏನೊಂದೂ ತಿಳಿಯಲಿಲ್ಲ .ನಮ್ಮ ತಾಯಿಗೆ ತೆಲುಗು ಮತ್ತು ಧಾರವಾಡದ ಕನ್ನಡ ಎರಡೂ ಭಾಷೆ ಬರುತ್ತಿತ್ತು.ಇಬ್ಬರ ಅಹವಾಲುಗಳನ್ನೂ ಆಲಿಸಿ,ಇಬ್ಬರ ಅನುಮಾನಗಳನ್ನೂ   ಪರಿಹರಿಸಿ ವಾತಾವರಣ ತಿಳಿಗೊಳಿಸಿದರು .ಭಾಷೆಯ ಗೊಂದಲದಿಂದ ಉಂಟಾದ ಆಭಾಸದ ಬಗ್ಗೆ ಎಲ್ಲರೂ ಮತ್ತೆ ಮತ್ತೆ ನೆನಪಿಸಿಕೊಂಡು ಮನಸಾರೆ ನಕ್ಕರು.ನೆರೆ ಹೊರೆಯಲ್ಲಿ ಸ್ನೇಹ ಭಾವ ಮೂಡಿತು.
ತಿಳಿಯದ ಭಾಷೆ ಎಷ್ಟೊಂದು ಗೊಂದಲವನ್ನು ಉಂಟು ಮಾಡ ಬಹುದಲ್ಲವೇ!!!!

Tuesday, March 8, 2011

"ಮಹಿಳೆಯೇ ನಿನಗೆ...ಕೋಟಿ ನಮನ!"

(ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ದಿನದಂದು ಜಗತ್ತಿನ ಎಲ್ಲಾ ಮಹಿಳೆಯರಿಗೆ ಶುಭ ಕೋರುತ್ತ )
'ಹೆಣ್ಣು ಸಂಸಾರದ ಕಣ್ಣು '!
ಮಾತೆಯಾಗಿ,ಮಡದಿಯಾಗಿ ,ಮಗಳಾಗಿ ,
ಅಕ್ಕ ತಂಗಿಯರಾಗಿ ,
ಮಮತೆಯ ಸಾಕಾರ ರೂಪವಾಗಿ ,
ಅಕ್ಕರೆ ಆಸ್ಥೆಗಳ ಊಡಿಸಿ,
ಸದಾ ಪೊರೆಯುವ ,ಜೀವದಾಯಿ ಗಂಗೆ !
ಇರಬಹುದು ಅಲ್ಲೊಂದು ಇಲ್ಲೊಂದು ,
ಸದಾ ಕಿರಿಕಿರಿ ಕೊಡುವ,
ಕಿಸಿರು ಕಣ್ಣು,--------ಅಪರೂಪಕ್ಕೆ!
ಹಾಗೆಂದು --------------,
ಬೆಳಕು ತೋರುವ ಕಣ್ಣನ್ನೇ ಹಳಿಯಬಹುದೇ?
ಕಣ್ಣು ಇಲ್ಲದಿದ್ದರೆ ನೋಟವೆಲ್ಲಿ ?
ಹೆಣ್ಣು ಇಲ್ಲದಿದ್ದರೆ ಪ್ರೀತಿಯೆಲ್ಲಿ?
ಪ್ರೀತಿ ಇಲ್ಲದಿದ್ದರೆ ಈ ಜಗವೆಲ್ಲಿ?
ಜಗಕೆ ಕಾರಣಳಾದ ಹೆಣ್ಣಿಗೆ,
ಈ ಜಗದ ----------ಕಣ್ಣಿಗೆ, 
ಕೋಟಿ, ಕೋಟಿ --------------,
------------ನಮನಗಳು!

Friday, March 4, 2011

"ಟಿಕ್,ಟಿಕ್........! ಧ್ಯಾನದ ಟೆಕ್ನಿಕ್!"

'ಮನಸ್ಸುಮರ್ಕಟ'.ಒಂದು ಕಡೆ ನಿಲ್ಲದು.'ಮನಸ್ಸು ಗೀಜಗನ ಗೂಡು'.ಅಲ್ಲಿ ಸದಾ ಆಲೋಚನೆಗಳ,ಯೋಜನೆಗಳ,
ಚಿಂತೆಯ ಚಿಲಿಪಿಲಿ!ಡಿ.ವಿ.ಜಿ.ಯವರು ತಮ್ಮ ಮಂಕು ತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ;
'ತಲೆಯೊಳಗೆ ನೆರದಿಹವು ನೂರಾರು ಹಕ್ಕಿಗಳು ,
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು!
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹವು,
ನೆಲೆಯೆಲ್ಲಿ ನಿದ್ದೆಗೆಲೋ ?-ಮಂಕು ತಿಮ್ಮ!'
 ಮನಸ್ಸು ಗೊಂದಲದ ಗೂಡಾದರೆ ನೆಮ್ಮದಿ ಎಲ್ಲಿ ?ಮನಸ್ಸು ನೆಮ್ಮದಿಯಾಗಿ ,ಶಾಂತವಾಗಿ,ಸ್ವಸ್ಥವಾಗಿ ಇರದಿದ್ದರೆ ದೇಹವೂ ಹಲವಾರು ರೋಗಗಳಿಗೆ ಮನೆಯಾಗುತ್ತದೆ.ಇವತ್ತು ಎಲ್ಲೆಲ್ಲೂ ಕಾಣುವ ಬಿ.ಪಿ, ಶುಗರ್,ಆರ್ಥ್ರೈಟಿಸ್ ಗಳೆಲ್ಲ ಹಾಗೆ ಬಂದ ಬೇಡದ ಅತಿಥಿಗಳೇ!ಇದಕ್ಕೆ ಪರಿಹಾರವೇನು?
ಎಲ್ಲರೂ 'ಧ್ಯಾನ ಮಾಡಿ,ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ' ಎಂದು ಸಲಹೆ ನೀಡುವವರೆ!ಆದರೆ ಧ್ಯಾನ ಹೇಗೆ ಮಾಡುವುದು ಎನ್ನುವುದರ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ!ಕೆಲವರು 'ನೀವು ಸುಮ್ಮನೆ ಕುಳಿತು, ಆಲೋಚನೆಗಳನ್ನು ತಡೆಯದೆ, ಅವನ್ನು ಸಾಕ್ಷೀ ಭಾವದಿಂದ ನೋಡಿ' ಎಂದು ಸಲಹೆ ಕೊಡುತ್ತಾರೆ. ಆಲೋಚನೆಗಳನ್ನು 'ಸಾಕ್ಷೀ  ಭಾವದಿಂದ'ನೋಡುತ್ತಾ ,ನೋಡುತ್ತಾ ನಮಗೇ ಅರಿವಿಲ್ಲದಂತೆ ಅದರ ಸುಳಿಗೆ ಸಿಲುಕಿ
ಆಲೋಚನೆಗಳ ಮಹಾಪೂರದಲ್ಲಿ ಕೊಚ್ಚಿಹೊಗುವುದೇ ಹೆಚ್ಚು!
ನಿನ್ನೆ EckhadtTolle ಯವರ stillness speaks ಎನ್ನುವ ಪುಸ್ತಕದಲ್ಲಿ 'Listening totally can in itself be a complete meditation' ಎನ್ನುವ ವಾಕ್ಯವನೋದಿದ್ದೆ .
ಈ ದಿನ ಬೆಳಿಗ್ಗೆ ಏಳುವಾಗಲೇ ಏಕೋ ವಿಪರೀತ ಮೈಗ್ರೈನ್ ತಲೆನೋವಿತ್ತು.ಖಾಲಿ ಹೊಟ್ಟೆಗೆ ಮಾತ್ರೆ ತೆಗೆದುಕೊಳ್ಳುವುದು ಬೇಡವೆನಿಸಿ ,ಮಾತ್ರೆ ತೆಗೆದುಕೊಳ್ಳುವುದನ್ನು ಮುಂದೂಡಿ,ವ್ಯಾಯಾಮ,ಪ್ರಾಣಾಯಾಮ ಮಾಡಿ,'ಶವಾಸನದಲ್ಲಿ'ಮಲಗಿದ್ದೆ.ಗಡಿಯಾರದ ಟಿಕ್,ಟಿಕ್,ಶಬ್ದ ಕೇಳುತ್ತಿತ್ತು.EckhardtTolle ಯವರ ವಾಕ್ಯ
ನೆನಪಾಯಿತು.ಹಾಗೇ ಆ ಗಡಿಯಾರದ ಶಬ್ಧವನ್ನೇ ಸಂಪೂರ್ಣತೆಯಿಂದ ಆಲಿಸುತ್ತಾ ,ಎಣಿಸುತ್ತಾ ಹೋದೆ.ಸುಮಾರು ಹದಿನೈದು ನಿಮಿಷದ ವರೆಗೆ ಅಂದರೆ ಒಂಬೈನೂರರವರೆಗೆ ಎಣಿಸಿದೆ.ಮನಸ್ಸು ಆ ಹದಿನೈದು ನಿಮಿಷ ಗಡಿಯಾರದ ಶಬ್ಧದ ಧ್ಯಾನದಲ್ಲಿತ್ತು!  ಮನಸ್ಸು ಸಾಕಷ್ಟು ಹಗುರಾಗಿತ್ತು.ಮೈಗ್ರೈನ್ ತಲೆ ನೋವು ಆಶ್ಚೆರ್ಯಕರ ರೀತಿಯಲ್ಲಿ ಮಾಯವಾಗಿತ್ತು! ಯಾವುದೋ ಒಂದು ವಿಷಯದ ಕಡೆಗೋ,ಶಬ್ದದ ಕಡೆಗೋ ಗಮನ ಹರಿಸುವುದೇ ಧ್ಯಾನವಲ್ಲವೇ?
ಈಗ ನಿಮ್ಮದೇ ಧ್ಯಾನದ ಹೊಸ ವಿಧಾನಗಳನ್ನು ಕಂಡು ಕೊಳ್ಳ ಬಹುದು.ಹೌದಲ್ಲವೇ?ಬರೆದು ತಿಳಿಸಿ.ನಮಸ್ಕಾರ.

Wednesday, March 2, 2011

"ಸುರಕ್ಷತೆಯೇ ಬಾಳಿನ ಶ್ರೀರಕ್ಷೆ"

ಮಾರ್ಚ್ ಮೊದಲ ವಾರ ಸುರಕ್ಷತಾ ಸಪ್ತಾಹ.ಎಲ್ಲಾ ಕಡೆ ಸುರಕ್ಷತೆಯ ಬಗ್ಗೆ ಚರ್ಚೆಗಳು,ಸುರಕ್ಷತಾ ಸಲಕರಣೆಗಳ ಮಹತ್ವ ,ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳಾಗುತ್ತವೆ.ಮಾರ್ಚ್ ಮುಗಿಯುತ್ತಿದ್ದಂತೆ ಎಲ್ಲೆಡೆ ಹಾಳು ಮರೆವು ಆಕ್ರಮಿಸಿ,ಸುರಕ್ಷತೆಯ ವಿಷಯ ಮೂಲೆ ಗುಂಪಾಗುತ್ತದೆ.ಮತ್ತೆ ಅದೇ ಹಳೆ ಅಭ್ಯಾಸಗಳು ಮುಂದುವರಿಯುತ್ತವೆ.ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು,ಕುಡಿದು ಗಾಡಿ ಓಡಿಸುವುದು ,ಬಾಯಲ್ಲಿ ಗುಂಡು ಪಿನ್ ಕಚ್ಚಿಕೊಳ್ಳುವುದು ,ಕಿವಿಯಲ್ಲಿ ಹೇರ್ ಪಿನ್ ಹಾಕಿಕೊಳ್ಳುವುದು  ಇತ್ಯಾದಿ ,ಇತ್ಯಾದಿ ಎಡವಟ್ಟುಗಳನ್ನು  ಮಾಡುತ್ತಲೇ ಇರುತ್ತೇವೆ ! ಸುಮಾರು ಅಪಘಾತಗಳಲ್ಲಿ ಪ್ರತಿ ಶತ ಎಂಬತ್ತು ಅಪಘಾತಗಳು ಮನುಷ್ಯನ ತಪ್ಪಿನಿಂದ(Human Error) ಆದಂಥವು. ನಾವು ಮಾಡುವ ಕೆಲಸದಲ್ಲಿ ಎಚ್ಚರಿಕೆ ಇಲ್ಲದಿರುವುದೇ ಪ್ರಮುಖ ಕಾರಣ ಎಂದುಹೇಳಲಾಗುತ್ತದೆ. ಎಚ್ಚರಿಕೆ ಇಲ್ಲದಿರುವುದಕ್ಕೆ  ಈ ಕ್ಷಣದಲ್ಲಿ ನಾವು ಎಚ್ಚರದಿಂದ ಇಲ್ಲದಿರುವುದೇ ಕಾರಣ.WE  ARE NOT IN THE PRESENT.ನಿನ್ನೆ ನಡೆದ್ದನ್ನೋ,ಮೊನ್ನೆ ಯಾರೋ ಜಗಳವಾಡಿದ್ದೋ,ನಾಳೆ ಕಟ್ಟಬೇಕಾದ ಬ್ಯಾಂಕಿನ ಸಾಲವೋ ,ಮಗನ ಕಾಲೇಜಿನ ಫೀಸೋ ,ಒಟ್ಟಿನಲ್ಲಿ ಯಾವುದೋ ಒಂದು ವಿಷಯ ನಮ್ಮ ತಲೆ ತಿನ್ನುತ್ತಿರುತ್ತದೆ.ಮಾಡುತ್ತಿರುವ ಕೆಲಸವನ್ನು  ಯಾಂತ್ರಿಕವಾಗಿ ,ಅದರ ಕಡೆ ಲಕ್ಷ್ಯವಿಲ್ಲದೇ ಮಾಡುತ್ತಿರುತ್ತೇವೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ ಎನ್ನುವ ಮಾತನ್ನು ಎಲ್ಲೆಲ್ಲೂ  ಕೇಳುತ್ತೇವೆ.ಹಾಗಂದರೇನು?ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಗಮನವಿರಲಿ,ಅರಿವಿರಲಿ ಎಂದಲ್ಲವೇ?ಈ ಕ್ಷಣದಲ್ಲಿ ನಾವು ಯಾವುದೋ ಆಲೋಚನೆಯಲ್ಲಿ ಮುಳುಗದೆ,ಪೂರ್ಣ ಎಚ್ಚರದಲ್ಲಿದ್ದರೆ ಸಾಕಷ್ಟು ಅಪಘಾತಗಳನ್ನು ತಪ್ಪಿಸಬಹುದಲ್ಲವೇ? ತಪ್ಪದೆ ನಿಮ್ಮ ಅನಿಸಿಕೆ ತಿಳಿಸಿ.ನಮಸ್ಕಾರ.