Friday, August 13, 2010

'ನನಗಾಗಿಯಾದರೂ ------ನೀ ತಣ್ಣಗಿರು'

ಹಲವಾರು ಜನ ತಮ್ಮ ಜೀವನದಲ್ಲಿ ಕೆಲ ವ್ಯಕ್ತಿಗಳನ್ನು ಎಷ್ಟೊಂದು ದ್ವೇಷಿಸುತ್ತಾರೆಂದರೆ ಆ ವ್ಯಕ್ತಿಗಳನ್ನು ನೆನಸಿಕೊಂಡರೆ ಇವರ ರಕ್ತ ಕುದಿಯ ತೊಡಗುತ್ತದೆ.'Forget and forgive'ಎನ್ನುವುದು ಒಣ ವೇದಾಂತವಲ್ಲ.ಇವು ನಮ್ಮನ್ನು ನಾವು ದೈಹಿಕವಾಗಿ ,ಮಾನಸಿಕವಾಗಿ ಆರೋಗ್ಯವಾಗಿ ಇಟ್ಟುಕೊಳ್ಳುವ ಸೂತ್ರ! ದ್ವೇಷ ,ಅಸೂಯೆ ,ಇವೇ ಮುಂತಾದವು ನಮ್ಮನ್ನು ಒಳಗೊಳಗೇ ಸುಟ್ಟು ಹಾಳು ಮಾಡುತ್ತವೆ.ಇದಕ್ಕೆ ವ್ಯತಿರಿಕ್ತವಾಗಿ ಪ್ರೀತಿ,ಸ್ನೇಹ ,ವಿಶ್ವಾಸಗಳಂತಹ ಸದ್ಭಾವನೆಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.ಹಲವಾರು ಜನ ಈ ರೀತಿ ನರಳುತ್ತಿರುವುದನ್ನು ನೋಡಿ ,ಪ್ರೇರಿತವಾದ ಕವನ ಇದು ;
'ನನಗಾಗಿಯಾದರೂ --ನೀ --ತಣ್ಣಗಿರು !' 

ನಾನು ನಿನ್ನ ಮನಸಾ ದ್ವೇಷಿಸಿ ,
ಶತಬಾರಿ-------------  ಶಪಿಸಿ, 
ಹಿಡಿ ಶಾಪ-------------- ಹಾಕಿ ,
ನಿನ್ನ------- ಮರೆಯ ಬೇಕೆಂದು
ಶತ ಪ್ರಯತ್ನ----- ಮಾಡಿದರೂ ,
ನೀನು ರಕ್ತಬೀಜಾಸುರನಂತೆ ,
ನನ್ನ ನೆನಪಲ್ಲಿ ಮತ್ತೆ ಮತ್ತೆ ಹುಟ್ಟಿ ,
ನನ್ನಲೇ ------------ಚಿಗಿತು!
ಕವಲು ಕವಲಾಗಿ ಟಿಸಿಲೊಡೆದು !
ನನ್ನ ನರ ನಾಡಿಗಳಲ್ಲಿ ಬೆಳೆದು !
ರಕ್ತ ಮಾಂಸ ಗಳಲ್ಲಿ ಬೆರೆತು !
ನನ್ನೊಳಗೇ ಹೆಮ್ಮರವಾಗಿ,
ನನ್ನಿರವನ್ನೇ----- ಆಕ್ರಮಿಸಿ ! 
ನನ್ನ ಉಪಶಾಂತಿಯನ್ನೇ ನುಂಗಿ!
ನೀನು ಖಳನಂತೆ ನಗುವ ನಗು ,
ಕೋಶ ಕೋಶದಲ್ಲಿ ಮಾರ್ದನಿಸಿ ,
ಬದುಕು ನನಗೆ-------- ನರಕ! 
ಆದ್ದರಿಂದ ,ನನಗಾಗಿಯಾದರೂ ,
ನೀನು-------- ತಣ್ಣಗಿರಲೆಂದು,
ಮನಸಾ -------ಹಾರೈಸುತ್ತೇನೆ!
ಆಗ -----------ನೀನೆಲ್ಲೋ 
ನನ್ನೊಳಗಿನ ಮೂಲೆಯೊಂದರಲ್ಲಿ ,
ಆರಿದ ಕೆಂಡವಾಗಿ ತಣ್ಣಗಿರುತ್ತಿ!
ಸುಡದೆ --------ಸುಮ್ಮನಿರುತ್ತಿ!
ಅದರಿಂದ------ನನಗೂ ,ನಿನಗೂ,
ಸರ್ವರಿಗೂ ---------ನೆಮ್ಮದಿ!

24 comments:

  1. ಕೃಷ್ಣಮೂರ್ತಿಯವರೆ...

    ಒಂದು ಗಾದೆ ಇದೆ..
    ಛಲ ದ್ವೇಷದಿಂದ ಧುರ್ಯೋಧನ ಕೆಟ್ಟ..
    ಧರ್ಮದಿಂದ ಧರ್ಮರಾಜ ಕೆಟ್ಟ...

    ಯಾವುದಾದರೂ ಅತಿಯಾದರೆ ಕೆಟ್ಟದು ಅಂತ ಈ ಗಾದೆಯ ತಾತ್ಪರ್ಯ..

    ಸಣ್ಣದೊಂದು ಈರ್ಷ್ಯೆ, ದ್ವೇಷ ನಮ್ಮ ಬೆಳವಣಿಗೆಗೆ ಅನೂಕೂಲ..
    ದ್ವೇಷ ನಮ್ಮನ್ನು ಆಳ ಬಾರದು..
    ನಾವು ಅದನ್ನು ಆಳುವದಿದ್ದರೆ ಒಳ್ಳೆಯದು..

    ದ್ವೇಷ ವೈರಿಯನ್ನಲ್ಲದೆ ನಮ್ಮನ್ನೂ ಸುಡುತ್ತದೆ..

    ದ್ವೇಷವೇ ನೀ ತಣ್ಣಗಿರು ಎನ್ನುವ ನಿಮ್ಮ ಆಶಯ ಇಷ್ಟವಾಯಿತು...

    ನೀವು ನಿನ್ನೆ ಹೇಳೀದ ಹಾಗೆ "ಗುಣಕೆ ಮತ್ಸರವೆಲ್ಲಿ?"

    ಚಿನ್ನದಂಥಹ ಮಾತು !!

    ಸುಂದರ ಭಾವಾರ್ಥದ ಕವನಕ್ಕೆ ಅಭಿನಂದನೆಗಳು...

    ReplyDelete
  2. ಮೊದಲಿಗೇ ಅತ್ಯುತ್ತಮ ವಿಮರ್ಷಾತ್ಮಕ ಪ್ರತಿಕ್ರಿಯೆ!ಅದೂ ನಮ್ಮೆಲ್ಲರ ಮೆಚ್ಚಿನ ಲೇಖಕ ಪ್ರಕಾಶಣ್ಣನಿಂದ! ಹೃತ್ಪೂರ್ವಕ ಧನ್ಯವಾದಗಳು.ನಮಸ್ಕಾರ ಸರ್.

    ReplyDelete
  3. ನಿಜ ದ್ವೇಷ , ಅಸೂಯೆಯಿಂದ ಮಾನಸಿಕ ಹಿಂಸೆಯೆ ಹೆಚ್ಚು ....ಒಳ್ಳೆಯ ಕವನ.

    ReplyDelete
  4. ಸುಮ ಅವರೆ;ಬಹಳಷ್ಟು ಸಲ ನಮಗೆ ನೋವು ಉಂಟುಮಾಡಿದವರೇ ಹೆಚ್ಚು ನೆನಪಿಗೆ ಬರುತ್ತಾರೆ.ಅವರು ನೋವು ಉಂಟುಮಾಡಿದ ವಿಷಯ ಮತ್ತೆ ಮತ್ತೆ ನೆನಪಾಗಿ ಸಂಕಟಪಟ್ಟು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುತ್ತೇವೆ.ನಮ್ಮಲ್ಲಿ ಬರುವ ಬಹಳಷ್ಟು ರೋಗಿಗಳಲ್ಲಿ ಹೀಗೇ ಯಾರೋ ಹೇಳಿದ ಮಾತುಗಳಿಂದ ನರಳುವವರು ಇದ್ದಾರೆ.'Let go'and get going ಎನ್ನುವ ಹಾಗೆ ಕಹಿ ಘಟನೆಗಳನ್ನು ಅಷ್ಟಕ್ಕೇ ಬಿಟ್ಟು ಮುಂದೆ ಸಾಗುವುದನ್ನು ನಾವೆಲ್ಲಾ ರೂಢಿಸಿಕೊಳ್ಳಬೇಕಾಗಿದೆ ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ದ್ವೇಷಾಸೂಯೇಯಿಂದ ಮನಶಾಂತಿ ಕಳೆದುಕೊಳ್ಳಬಾರದೆಂಬ ತಾತ್ಪರ್ಯದ ತಮ್ಮ ಕವನ ಚೆನ್ನಾಗಿದೆ.

    ReplyDelete
  6. ಸೀತಾರಾಮ್ ಸರ್;ದ್ವೇಷಾಸೂಯೆ ಗಳಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳ ಬಾರದು ಎಂದು ಹೇಳಿದ್ದೀರಿ.ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  7. ದ್ವೇಶಾಸೂಯೆ...ಹಿಡಿಯಿಲ್ಲದ ಎರಡು ಮುಖದ ಖಡ್ಗ ..ಇದನ್ನು ಉಪಯೋಗಿಸಿ ಮತ್ತೊಬ್ಬರಿಗೆ ಕೇಡು ಬಯಸುವವರೂ ಘಾಸಿಗೊಳ್ಳುವುದು ದಿಟ...ಒಳ್ಲೆಯ ಅಲೋಚನೆ ಮನೋಭಾವ ಅತಿಯಾದರೂ ಮತ್ತೊಬ್ಬರಿಗೆ ಕೇಡಾಗದು..ಇದೂ ದಿಟ ಅಲ್ವೇ..? ನಮಗೆ ಕೆಡಾದರೂಆಡ್ಡಿಯಿಲ್ಲ ಮತ್ತೊಬ್ಬರಿಗೆ ತೊಂದರೆಯಾಗಬಾರದು ಎನ್ನುವ ಮನೋಭಾವ ಬಂದರೆ ದ್ವೇಶ ಬಹುಶಃ ಮುಂದುವರೆಯೊಲ್ಲ,,,ಏನಂತೀರಿ..? ಭಾವನೆಗಳ ಕವನ ರೂಪ ಇಷ್ಟವಾಯಿತು.

    ReplyDelete
  8. ತುಂಬಾ ಇಷ್ಟವಾಯಿತು... ಆದರೆ ಬದುಕಲ್ಲಿ ಕೆಲವೊಮ್ಮೆ ಕೆಲವು ವ್ಯಕ್ತಿಗಳು ಮರೆಯಲಾಗದ ನೋವನ್ನು ಆಳವಾಗಿ ನೀಡಿರುತ್ತಾರೆ... ಅಂತಹವರನ್ನು ತಣ್ಣಿಗಿರಂದು ಹಾರೈಸಲು ಬಹುಶಃ ಸ್ಥಿತಪ್ರಜ್ಞರಿಗೇ ಆಗುವುದೇನೋ...! ಹಾಗೆ ನೋಡಿದರೆ ಸ್ಥಿಜಪ್ರಜ್ಞರಿಗೆ ನೋವೂ ಬಾಧಿಸದಲ್ಲ.... ಹಾಗಾಗಿ "ವಿನಾಕಾರಣ" ನೋವಿತ್ತವರನ್ನು "ಮನಃಪೂರ್ವಕವಾಗಿ" ಕ್ಷಮಿಸುವುದು.. ಕ್ಷಮಿಸಿ ಹಾರೈಸುವುದು ತುಂಬಾ ಕಷ್ಟಕರವೇ ಸರಿ.

    ReplyDelete
  9. ತುಂಬಾ ಸತ್ಯವಾದ ಮಾತುಗಳನ್ನ ಬರೆದಿದ್ದೀರ ಸರ್ , ಸ್ವಲ್ಪ ಕಷ್ಟದ ಕೆಲಸ ಇದು.
    ಆದ್ರೆ,
    ನಾವು ಆರಾಮ ಇರ್ಬೇಕಂದ್ರೆ ಇಂತದ್ದೊಂದು ಮನಸ್ಥಿತಿ ಬೇಕಾಗುತ್ತೆ.
    ಬರೆದ ಮನಸಿಗೆ(ಬೆರಳುಗಳಿಗೆ ಕೂಡ) ಥ್ಯಾಂಕ್ಸ್.

    ReplyDelete
  10. ಆಜಾದ್ ಸರ್;ನಮಸ್ಕಾರ.ನಿಮ್ಮ ಸಮಯೋಚಿತ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

    ReplyDelete
  11. ತೇಜಸ್ವಿನಿ ಮೇಡಂ;ನಮಸ್ಕಾರ.ಸ್ಥಿತಪ್ರಜ್ಞ್ಯರಿಗೆ ಯಾರು ಎನೆಂದರೂ ನೋವಾಗುವುದಿಲ್ಲ.ನೋವಾಗುವುದೆಲ್ಲಾ ನಮ್ಮಂತಹ ಸಾಮಾನ್ಯರಿಗೆ.
    ಕವಿತೆಯ ಮೊದಲ ಭಾಗದಲ್ಲಿ ಆ ನೋವನ್ನು ಅನುಭವಿಸುವವರ ಸ್ಥಿತಿ
    ವ್ಯಕ್ತವಾಗಿದೆ.ಆದರೆ ನಮಗೆ ನೋವು ಉಂಟುಮಾಡಿದ ವ್ಯಕ್ತಿ ಎಲ್ಲೋ
    ಸುಖವಾಗಿ ಇರುವಾಗ ,ಇಲ್ಲಿ ನಾವು ಕೆರಳಿ ನರಕ ಅನುಭವಿಸಿ ನಮ್ಮ
    ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಕೇ?ಇದು ಬುದ್ಧಿವಂತಿಕೆಯೇ?
    ಅದಕ್ಕಾಗಿ ಇರುವ ಒಂದೇ ಉಪಾಯವೆಂದರೆ ,ನನಗೆ ತಿಳಿದ ಮಟ್ಟಿಗೆ
    ಎಲ್ಲಾ ಮನುಷ್ಯರಂತೆ ಇವನೂ ತಪ್ಪು ಮಾಡಿದ್ದಾನೆ ಎಂದು ಕ್ಷಮಿಸಿಬಿಡುವುದು.
    ಅದು ನೀವು ಹೇಳಿದ ಹಾಗೆ ಸುಲಭದ ಮಾತಲ್ಲ.ಆದರೂ ಪ್ರಯತ್ನವನ್ನಂತೂ
    ಮಾಡಬಹುದು.ಧನ್ಯವಾದಗಳು.

    ReplyDelete
  12. ನಾಗರಾಜ್ ಸರ್;ನಿಮ್ಮ ಮಾತುಗಳಿಗೆ ನನ್ನ ಸಂಪೂರ್ಣ ಸಹಮತಿ ಇದೆ.ನಿಮ್ಮ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗೆ ನನ್ನ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  13. ಕೃಷ್ಣಮೂರ್ತಿಯವರೆ,
    ಕವನ ಸುಂದರವಾಗಿದೆ. ಭಾವಕ್ಕೆ ತಕ್ಕ ಬಂಧವಿದೆ. ದ್ವೇಷವು ನಮ್ಮನ್ನೇ ಸುಡುವದೇ ವಿನಃ ದ್ವೇಷಿತನನ್ನಲ್ಲ ಎನ್ನುವ ತಿಳಿವಳಿಕೆ ಸರಿಯಾಗಿದೆ. ಬಸವಣ್ಣನವರ ವಚನವೊಂದು ಇಲ್ಲಿ ನೆನಪಾಗುತ್ತಿದೆ:
    "ಮನೆಯ ಕಿಚ್ಚು ಮನೆಯ ಸುಟ್ಟೀತಲ್ಲದೆ, ನೆರೆಮನೆಯ ಸುಟ್ಟೀತೆ ಅಯ್ಯಾ?"

    ReplyDelete
  14. forget and forgive ಉತ್ತಮ ಸ೦ದೇಶ ಸರ್. ನೀನು ತಣ್ಣಗಿರಲೆಂದು,ಮನಸಾ ಹಾರೈಸುತ್ತೇನೆ! ಖ೦ಡಿತಾ ಉಪಯುಕ್ತ ಮಾತುಗಳು. ಪ್ರಯತ್ನ ಮಾಡಿದಲ್ಲಿ ಸರ್ವರಿಗೂ ನೆಮ್ಮದಿ.

    ಶುಭಾಶಯಗಳು
    ಅನ೦ತ್

    ReplyDelete
  15. ಸುನಾಥ್ ಸರ್ ;ನಮಸ್ಕಾರ.ಕಿಚ್ಚಿನ ಹುಚ್ಚು ಹಿಡಿಸಿಕೊಂಡವರನ್ನು ಎಚ್ಚರಿಸಲು ಬಸವಣ್ಣನವರ ವಚನ ಸೂಕ್ತವಾಗಿದೆ.ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  16. ಅನಂತ್ ರಾಜ್ ಸರ್;ನೀನು ತಣ್ಣಗಿರೆಂದು ಹಾರೈಸುವುದು ಉತ್ತಮ.ಅದೂ ನಿನ್ನಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗುತ್ತಿದ್ದರೆ ನನಗೋಸ್ಕರವಾದರೂ ನೀನು ತಣ್ಣಗಿರು ಎಂದು ಹಾರೈಸುವುದು ನನ್ನ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ReplyDelete
  17. ಕವನ ಅರ್ಥ ಬಹಳ ಚೆನ್ನಾಗಿದೆ, ಆದರೆ ನನಗೆ ಕಾಡಿದ್ದು ಒಂದು ಪ್ರಶ್ನೆ - ರಾತ್ರಿಯೆಲ್ಲಾ ನಿದ್ದೆಗೆಟ್ಟು ಬರೆದಿರಲ್ಲ ಗುರುವೇ ? ನಿಮ್ಮ ವಯಸ್ಸಿಗೆ ಇದು ತರವೇ ?

    ReplyDelete
  18. ಹಾ ಹಾ ಹಾ ,ಭಟ್ಟರೇ ನಿಮ್ಮದು ಮಿಲಿಯನ್ ಡಾಲರ್ ಪ್ರಶ್ನೆ.ನಿಮ್ಮ ಸ್ನೇಹಕ್ಕೆ ,ವಿಶ್ವಾಸಕ್ಕೆ ಧನ್ಯವಾದಗಳು.I will be at Bangalore for three days from tomorrow.please give me a ring.my number is 9449598818.REGARDS.

    ReplyDelete
  19. ತುಂಬಾ ಚೆನ್ನಾಗಿದೆ! ಪಾಲಿಸಲು ಅಷ್ಟೇ ಕಷ್ಟ :(

    ReplyDelete
  20. ಭಾಶೆಮೇಡಂ:-)ನಮ್ಮ ಮಾನಸಿಕ ಆರೋಗ್ಯದ ಸಲುವಾಗಿಯಾದರೂ ಈ ಒಂದು Attitude ಅಳವಡಿಸಿಕೊಳ್ಳುವುದು ಒಳ್ಳೆಯದು.ಅಲ್ಲವೇ? ಧನ್ಯವಾದಗಳು.

    ReplyDelete
  21. ಸರ್

    ನಾವು ಕೋಪಗೊಂಡರೆ ನಷ್ಟ ನಮಗೆ ಹೊರತು ಬೇರೆಯವರಿಗೆ ಅಲ್ಲ

    ಕೋಪಗೊಂಡಾಗ ನಮ್ಮ ಮನಸ್ಸು ನಮ್ಮ ಲ್ಲಿ ಇರುವುದಿಲ್ಲ

    ಕೋಪ ಮಾಡಿ ಕೆಟ್ಟವ ಎನಿಸಿಕೊಳ್ಳು ವುದಕಿಂತ

    ನಗೆ ಚೆಲ್ಲಿ ಸ್ನೇಹಿತ ನಾಗು ಅನ್ನುತ್ತಾರೆ ಹಿರಿಯರು

    ಬದುಕು ಅರಳಿದರೆ ಚೆಂದ

    ಕೆರಳಿದರೆ ನರಕ

    ಸುಂದರ ಅರ್ಥಗರ್ಭಿತ ಕವನ

    ReplyDelete
  22. ಕವನದ ಅರ್ಥ ಚೆನ್ನಾಗಿದೆ... ಇಷ್ಟವಾಯಿತು... ನಮಸ್ಕಾರ...

    ReplyDelete
  23. ಇದೆ ಜಗತ್ತು ಸರ್..... ನನ್ನ ಒಂದು ಕಣ್ಣು ಹೋದರು ಪರವಾಗಿಲ್ಲ, ಎದುರಾಳಿಯ ಎರಡು ಕಣ್ಣು ಹೋಗಬೇಕು ಎನ್ನುವುದು ಈಗಿನವರ ಜಾಯಮಾನ.... ಕವನದ ಭಾವಾರ್ಥ ತುಂಬಾ ಇಷ್ಟ ಆಯ್ತು......

    ReplyDelete
  24. kavanada saaramsha artapurnavaagide..ista aitu sirrr....

    ReplyDelete

Note: Only a member of this blog may post a comment.