Saturday, May 15, 2010

ನೀಲುವಿಗೊಂದು-ಶಾಲು '

ಲಂಕೇಶರ 'ನೀಲು ಕಾವ್ಯ'ಯಾರಿಗೆ ತಾನೇ ಗೊತ್ತಿಲ್ಲ?'ನೀಲು'ವಿನ fan club ಗಳೂ ಇವೆ ಎಂದು ಸ್ನೇಹಿತರೊಬ್ಬರು ಹೇಳುತ್ತಿದ್ದರು.
ಆದರೆ ಚೆನ್ನವೀರ ಕಣವಿ ಯವರಂತಹ ನಾಡಿನ ಹಿರಿಯ ಕವಿಯೊಬ್ಬರು 'ನೀಲು'ವಿನ ಬಗ್ಗೆ ಕವಿತೆಯೊಂದನ್ನು ಬರೆದಿದ್ದಾರೆಂದು 
ನನಗೆ ಗೊತ್ತಿರಲಿಲ್ಲ.1986 ರಲ್ಲಿ ಪ್ರಕಟಗೊಂಡ ಚೆನ್ನವೀರ ಕಣವಿಯವರ 'ಕಾರ್ತಿಕದ ಮೋಡ 'ಎಂಬ ಕವನ ಸಂಕಲದಲ್ಲಿ 
ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ 'ನೀಲು' ಕಾವ್ಯದ ಬಗ್ಗೆ'ನೀಲುವಿಗೊಂದು ಶಾಲು'ಎಂದು ಕವನ ಬರೆದು ಲಂಕೇಶರ 
ಕಾವ್ಯಕ್ಕೇಒಂದು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.'ನೀಲುವಿಗೊಂದು ಶಾಲು ',ನಿಮಗೂ ಇಷ್ಟ ಆಗಬಹುದು.ಓದಿ;


ಏನಮ್ಮ  ನೀಲು -
ನೀ ಮೂಲ್ಯಾಗಿಟ್ಟ ಬಣ್ಣದ ಕೋಲು;
ತಿವಿದರ ಮುಟ್ಟಿಕೋ ಬೇಕು 
ಸೊಂಟ ,ಕೈ ,ಕಾಲು.
ತುಂಟಾಟಕ್ಕ ನೀನs ಒಂದು ಸವಾಲು.


ಪ್ರೀತಿ:ನಿನ್ನ ರೀತಿ;ಆದರೂ 
ಕೋತಿ ಆಡಿಸಿ ಮಜಾ ನೋಡಬೇಕಂತಿ.
ಏನs ಬಿಡು ,ಚ್ಯಾಷ್ಟಿ ಮಾಡ್ತಾಳ ಅಂದರ 
ಕಣ್ಣಾಗ ನೀರು ಬರು ಹಾಂಗ ಖರೇನs ಹೇಳಿಬಿಡತಿ.

ಹಕ್ಕಿ ಹಾಂಗ ಎಲ್ಲಾ ಕಡೆ ಹಾರಾಡ್ತಿ 
ಸೊಕ್ಕು ಬಂದವರ ತಲಿ ಕುಕ್ಕತಿ 
ಕೋಳಿ ಹಾಂಗ ನಸೀಕ್ಲೆ ಎಬ್ಬಸ್ತಿ 
ಬಾಗಿಲದಾಗಿನ ಬಳ್ಳಿ ಹಾಂಗ ಮೈ ತುಂಬ ಹೂ ಬಿಡತಿ .

ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ ,
ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ;
ಹಾಂಗ ನೋಡಿದರ ನೀಲು --ನೀ ಬಟಾಬಯಲು 
ಆದರೂ ಚಳಿಗಾಲದಾಗ ಇರಲಿ ತಗೋ 
ಹೊತಗೋ  ಈ  ಶಾಲು.

11 comments:

  1. ನೀಲು ಹೇಗೂ ಸೂಪರ್ :) ನೀಲುವಿಗೆ ಶಾಲು ಕೂಡ ಹಾಗೇ :)

    ReplyDelete
  2. ನೀಲುವಿಗಂತೂ ಸಮನಾರಿಲ್ಲ
    ನೀಲುವಿನ
    ಶಾಲಿಗೆ ಹೊಲಿಪುದೆ ಇಲ್ಲ!
    ಉತ್ತಮ ಕವನವೊಂದರ ಪರಿಚಯ ಮಾಡಿಸಿದ್ದೀರಾ
    ಧನ್ಯವಾದಗಳು

    ReplyDelete
  3. ಗೌತಮ್ ಹೆಗ್ಗಡೆ ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  4. ಧನ್ಯವಾದಗಳು ಪ್ರವೀಣ್ .

    ReplyDelete
  5. ಕೇಶವ್ ಕುಲಕರ್ಣಿಯವರಿಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  6. ಸಾರ್,

    ನನ್ನಂಥ ಅಲ್ಪನ ಬ್ಲಾಗಿಗೆ ಬಂದು ಓದಿ, ಮೆಚ್ಚಿಕೊಳ್ಳುವ ನಿಮ್ಮ ಸರಳತೆಗೆ ನನ್ನ ಅನಂತ ಧನ್ಯವಾದಗಳು.

    ನಮ್ಮ ಜಮಾನದ ತರುಣರಿಗೆ ನೀಲೂ ಕನಸಿನ ಕನ್ಯ. ಆದರೆ, ನೀಲುವಿನ ಹೆಸರಿನಲಿ ಲಂಕೇಶರು ನಮ್ಮ ಕನಸ್ಸುಗಳ ಸ್ಪೇಸ್ ಕದ್ದದ್ದಕ್ಕಾಗಿ ಮೇಸ್ಟ್ರ ಮೇಲೆ ಮುನಿಸಿದೆ.

    ಒಂದು ಒಳ್ಳೆ ರೀಡಿಂಗ್ ಕೊಟ್ಟಿದ್ದೀರಿ ಥ್ಯಾಂಕ್ಸ್.

    ಚನ್ನವೀರ ಕಣವಿಯವರ ರಸಿಕತನ ತೆರೆದುಕೊಳ್ಳುವ ಪರಿ ನೋಡಿ ಸರ್:

    "ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ ,
    ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ;
    ಹಾಂಗ ನೋಡಿದರ ನೀಲು --ನೀ ಬಟಾಬಯಲು
    ಆದರೂ ಚಳಿಗಾಲದಾಗ ಇರಲಿ ತಗೋ
    ಹೊತಗೋ ಈ ಶಾಲು."

    - ಬದರಿನಾಥ ಪಲವಳ್ಳಿ

    ReplyDelete
  7. ಒಳ್ಳೆ ಕವನ ಪರಿಚಯ....
    ನಿಮ್ಮ ಚುಟುಕುಗಳು ಸೂಪರ್ ಸರ್....

    ReplyDelete
  8. ನಮಸ್ಕಾರ ಬದರಿನಾಥ್;ಒಳ್ಳೆಯ ಕವನ ಕಲೆಯಾಗಲೀ ,ಕಥನ ಕಲೆಯಾಗಲೀ
    ಎಲ್ಲರಿಗೂ ಸಿದ್ಧಿಸುವುದಿಲ್ಲ.ನಿಮ್ಮಲ್ಲಿ ಆ ಕಲೆ ಇದೆ. ನಿಮ್ಮಿಂದ ಇನ್ನೂ ಹೆಚ್ಚಿನ ಕೃತಿಗಳ ರಚನೆಯಾಗಲಿ.ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃತಿಗಳು ಬಹಳಷ್ಟಿವೆ.ನಾವು ಓದಿ ಖುಷಿ
    ಪಡುತ್ತೇವೆ.ಬರೆಯುತ್ತಿರಿ,ಬ್ಲಾಗಿಗೆ ಬರುತ್ತಿರಿ.ಧಯವಾದಗಳು.

    ReplyDelete
  9. ಧನ್ಯವಾದಗಳು ಸವಿಗನಸಿನ ಮಹೇಶ್ ಅವರಿಗೆ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.
    ಇದೇಈಗ ನಿಮ್ಮ ಪ್ರೀತಿಯ ಹೊಸ ರೀತಿ ಓದಿ ಬಂದೆ.ಹನಿಗವನ ಚೆನ್ನಾಗಿತ್ತು .
    ಮತ್ತೆ ಬನ್ನಿ.ನಮಸ್ಕಾರ.

    ReplyDelete
  10. ಕಣವಿಯವರ ಉತ್ತಮ ಕವನ ಅದೂ ನೀಲೂ ಮೇಲಿನದು ನೆನಪಿಸಿದ್ದಿರಾ.. ಧನ್ಯವಾದಗಳು.

    ReplyDelete

Note: Only a member of this blog may post a comment.