Tuesday, May 25, 2010

'ಮದ್ಯ ಸಾರ '----ಅಪಾರ .

ಜಿ.ಪಿ.ರಾಜರತ್ನಂ  ಅವರ 'ರತ್ನನ ಪದಗಳು' ಮೊದಲು ಪ್ರಕಟವಾದದ್ದು 1932 ರಲ್ಲಿ.ಆದರೆ ರತ್ನನ ಪದಗಳು
ಇಂದಿಗೂ ಕಾವ್ಯಾಸಕ್ತರಿಗೆ ಇನ್ನೂ ಆಕರ್ಷಕ.ನನಗೆ ಕನ್ನಡ ಕಾವ್ಯದ ಹುಚ್ಚು ಹಿಡಿಸಿದ್ದೇ 'ರತ್ನನ ಪದಗಳು'!
ಇತ್ತೀಚಿಗೆ ಪ್ರಕಟವಾದ ಇನ್ನೊಂದು ಅದೇ ರೀತಿಯ ಪುಸ್ತಕವೆಂದರೆ ಛಂದ ಪ್ರಕಾಶನದ 'ಅಪಾರ'
 ಅವರ 'ಮದ್ಯ ಸಾರ'.ಪುಟ್ಟ ಪುಸ್ತಕ.ಬಾಟಲಿಯಂತೆಯೇ ಪುಸ್ತಕವನ್ನೂ ಜೋಬಿಗಿಳಿಸಬಹುದು!ಅದನ್ನು
'ನೈಂಟಿ'ಹನಿಗಳು ಎಂದಿದ್ದಾರೆ.ಬೆಲೆಕೂಡ ಒಂದು ವಿಶಿಷ್ಟ.ಬರೀ ಮೂವತ್ತು ರೂಪಾಯಿ!ಮೂರ್ತಿ ಚಿಕ್ಕದಾದರೂ
 ಕೀರ್ತಿ ದೊಡ್ಡದು! 'ಯಾರು ಕೇಳುವರು ನಿಮ್ಮ ಕೊಂಕು,ಸಿಕ್ಕಿರುವಾಗ ಸ್ವರ್ಗದ ಲಿಂಕು !'ಎನ್ನುತ್ತಾರೆ.
ಬೆನ್ನುಡಿಯಲ್ಲಿ 'ಗೀತ ಸಾರ  ವೇದ ಸಾರ,ಗಾದೆ ಸಾರ ಬದುಕಲು,ಮದ್ಯಸಾರ ವೇನು ಕಡಿಮೆ ,
ಗಮನ ಕೊಡಿ ಅತ್ತಲೂ '.ಎನ್ನುತ್ತಾರೆ! ಕುಮಾರ್ ಅವರ ಚಿತ್ರಗಳೂ ಚೆನ್ನಾಗಿವೆ. ಈ ಹನಿಗಳು ಏನಾದರೂ ಕಿಕ್ ಕೊಟ್ಟರೆ ನಾನು ಜವಾಬ್ದಾರನಲ್ಲ! ಇನ್ನು ಮಡಿವಂತರು ಕ್ಷಮಿಸಬೇಕು.ಕೆಂಗಣ್ಣು ಬಿಡಬೇಡಿ !ಕರಗಿ ಬೀರಾಗಿ ಹೋದೇನು!

೧) ಬೀರು ವಿಸ್ಕಿ ಜಿನ್ನು ವೈನು 
ಪರಮಾತ್ಮ  ಒಬ್ನೆ ಹೆಸರು ಬೇರೆ 
ಹೆಂಡ ಅಂದ್ರೆ ಇನ್ನೂ ವೈನು 
ಕನ್ನಡ ಪದಗಳ ಅಮಲೇ ಬೇರೆ 


೨)ಖಾಲಿಯಾಗಿದೆ  ಬದುಕು 
ಖಾಲಿಯಾಗಿದೆ ಬಾಟಲಿ 
ಉನ್ಮತ್ತ ಹೃದಯವನು ಹೊತ್ತು 
ರಸ್ತೆ ಹೇಗೆ ದಾಟಲಿ?


೩ )ನಡು ನೀರಲ್ಲಿ ಕೈ ಬಿಟ್ಟವಳೆ
ನಡು ರಾತ್ರಿ ನೆನಪಾಗದಿರು 
ಬದುಕಲು ಬಿಡು ಒಂಚೂರು 
ಹನ್ನೊಂದಕ್ಕೇ ಮುಚ್ಚುತ್ತೆ ಬಾರು 


೪) ಬೇಕಾ ಬಿಟ್ಟಿ ಕುಡೀತಾ ಹೋದ್ರೆ 
ಬದುಕೇ ಸರ್ವ ನಾಶ 
ಮನಸ್ಸು ಕೊಟ್ಟು ಕುಡಿದು ನೋಡಿ 
ಶೀಷ ದಲ್ಲೂ  ಈಶ 


೫) ರೊಕ್ಕ ಇದ್ದರಷ್ಟೇ ಸಾಲದು 
ದುಃಖ ಇರಬೇಕು ಕುಡಿಯುವನಿಗೆ 
ನಕ್ಕರೇನು ಚೆಂದ ಕುಡುಕ 
ಬಿಕ್ಕಬೇಕು ಎರಡು ಗುಟುಕು ನಡುವೆ 


೬)ಕುಡುಕನ ಮಾತಿದು ಏನು ಕೇಳುವಿರಿ 
ವಚನದ ಸಾಲಲ್ಲ ,ವಾಚನವೂ ಸರಿಯಿಲ್ಲ 
ದಾಸರ ಪದವಲ್ಲ ,ಉದಾಸರ ಪದವೇ ಎಲ್ಲ
ಭಜನೆ ತರವಲ್ಲ ,ವಿಭಜನೆ ವಿರಹದವು.


೭) ಬೇಡ್ಕೊತೀನಿ ಬಾರಂಗಳದಲಿ 
ನೆರದಿರೋ ಸಮಸ್ತ ಜನಕೆ 
ಕುಡಿದು ಮಾಡದಿರಿ ಉಪದ್ರವ  
ಕಳೀಬೇಡಿ ದ್ರವದ ಘನತೆ.


೮) ಎಷ್ಟನೇ ರೌಂಡೋ  ಯಾರಿಗೆ ಗೊತ್ತು 
ಎಲ್ಲ ಮರೆಯಲು ಬಾರಿಗೆ ಬಂದವನು 
ಖಾಲಿ ಮಾಡಿದ ಬಾಟಲುಗಳ 
ಲೆಕ್ಕ ಮಾತ್ರ ಹೇಗೆ ನೆನಪಿಡಲಿ? 

೯) ಶೇಂಗಾ,ಪಾಪಡ್,ಚಿಪ್ಸ್,ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ ?
ತಿಳಿಯದು ಏನೋ ಎಂತೋ,ನಿಮ್ಮ ರೀತಿ
ನನ್ನ ಆಯ್ಕೆ ಇದು :ಮುಗಿದು ಹೋದ ಪ್ರೀತಿ  

೧೦) ನೊಂದವನ ತಾಪ ,ಸೋತವನ ಶಾಪ
ಮರೆತವಳ ರೂಪ ,ಇಡೀ ಹಗಲ ಪಾಪ
ಸಂಜೆಯಾದೊಡನೆ ತಣ್ಣಗೆ ಕರಗುವುದು
ಬಿಯರು ಎಂಬ ಸಾರ್ವರ್ತಿಕ ದ್ರಾವಣದಲ್ಲಿ

೧೧) ಕರಗುತಿವೆ ಕೊರಗು ಬಾಟಲಿಯಲ್ಲಿ 
ಕಡೆಗೊಂದೇ ಉಳಿದಿದೆ ಚಿಂತೆ 
ಕುಡಿಯಲಾರದ ಅವಳು ಈ ಕ್ಷಣವ  
ಹೇಗೆ ನಿಭಾಯಿಸುವಳಂತೆ ?


೧೨)ಕುಡುಕರು ಅನ್ನಿ ಪರವಾಗಿಲ್ಲ 
ಕೆಡುಕರು ಅನ್ನಿ ಪರವಾಗಿಲ್ಲ 
ಯಾರು ಕೇಳುವರು ನಿಮ್ಮ ಕೊಂಕು 
ಸಿಕ್ಕಿರುವಾಗ ಸ್ವರ್ಗದ ಲಿಂಕು !
(WARNING; Drinking may be injurious to health 
in some.so don't drink .Reading kannada poetry
is healthy.so read as much as you can!)

Friday, May 21, 2010

'ನಗೆ -----ಗುಳಿಗೆಗಳು '

ವೈದ್ಯಕೀಯ  ರಂಗದಲ್ಲಿ  ಹಾಸ್ಯ  ಹಾಸುಹೊಕ್ಕಾಗಿದೆ .ಹೆಚ್ಚಾಗಿ ನೋವು ಖಾಯಿಲೆ ,ನರಳುವಿಕೆಗಳೇ ಇರುವ ಈ ಕ್ಷೇತ್ರ ದಲ್ಲಿ ಕೆಲವು ಹಾಸ್ಯ ಪ್ರಂಗಗಳು ನಡೆದು ಬದುಕನ್ನು ಹಸನುಗೊಳಿಸುತ್ತವೆ.ವೈದ್ಯಕೀಯ  ಕ್ಷೇತ್ರದಲ್ಲಿಯ  ಹಾಸ್ಯ ಕುರಿತೇ ಅನೇಕ ಪುಸ್ತಕಗಳು ಬಂದಿವೆ.ಹಲವಾರು ಖ್ಯಾತ ವೈದ್ಯರೂ ಇಂತಹ ಪುಸ್ತಕಗಳನ್ನು ಬರೆದಿದ್ದಾರೆ .ದಿನ ನಿತ್ಯದ ಜಂಜಡಗಳ ,ಒತ್ತಡದ ಬದುಕಿನಲ್ಲಿ ನಕ್ಕು ಹಗುರಾಗೋಣ ಬನ್ನಿ.ನಗೆ ಗುಳಿಗೆಗಳನ್ನು ದಿನಕ್ಕೆ ಕನಿಷ್ಠ ಮೂರು ಸಲವಾದರೂ ಸೇವಿಸಬೇಕು .
ಆಪರೇಶನ್  ಥೀಯೇಟರಿನೊಳಗೆ ಟ್ರಾಲಿಯ ಮೇಲೆ ಡ್ರಿಪ್ ಸಮೇತ ಮಲಗಿದ್ದ ರೋಗಿಯನ್ನು ಇಬ್ಬರು ವಾರ್ಡ್ ಬಾಯ್ ಗಳು ಕರೆದು ಕೊಂಡು ಹೋದರು .ಒಳಗೆ ಹೋಗುವಾಗಲೇ ರೋಗಿ ವಿಪರೀತ ಗಾಭರಿಯಾಗಿದ್ದ .ಅವನ ಸಂಬಂಧಿಗಳುಅವನಿಗೆ ಧೈರ್ಯ ಹೇಳಿ ಒಳಗೆ ಕಳಿಸಿದರು.ಒಳಗೆ ಏನು ನಡೆಯಿತೋ ಏನೋ ರೋಗಿ ಅವನಿಗೆ ಹಾಕಿದ್ದ ಪೈಪು ಗಳನ್ನೆಲ್ಲಾ ಕಿತ್ತು ಆಪರೇಶನ್ ಥೀಯೆಟರ್ ನಿಂದ ಹೊರಗೋಡಿ ಬಂದ .ಅಲ್ಲಿದ್ದ ಕೆಲವರು ಅವನನ್ನು ತಡೆದು  ನಿಲ್ಲಿಸಿ 'ಯಾಕಪ್ಪಾ ಹೀಗೆ ಓಡ್ತಾ ಇದ್ದೀಯ ? ಏನು ಕಥೆ 'ಎಂದು ಕೇಳಿದರು.ಅದಕ್ಕೆ  ರೋಗಿ ಉಬ್ಬಸ ಪಡುತ್ತಲೇ ಉತ್ತರ  ಕೊಟ್ಟ 'ಮತ್ತೆ ,ಮತ್ತೆ ----ಅಲ್ಲಿದ್ದ ಸಿಸ್ಟರ್ ಒಬ್ಬರು ,ನೀವೇನೂ ಹೆದರಬೇಡಿ ,ಮೊದಲ ಸಲ ಆಪರೇಶನ್ ಅಂದ್ರೆಹೀಗೆಲ್ಲಾ ಕೈ ನಡಗೋದು ,ಮೈ ವಿಪರೀತ ಬೆವರೋದು,ಎಲ್ಲಾ ಆಗುತ್ತೆ .ನಾನಿದ್ದೇನೆ ಧೈರ್ಯವಾಗಿರಿ ಅಂತೆಲ್ಲಾ ಧೈರ್ಯ ಕೊಡುತ್ತಿದ್ದರು 'ಎಂದ. ಅದಕ್ಕೆ ಅಲ್ಲಿದ್ದವರು 'ಅಲ್ಲಪ್ಪಾ ಸಿಸ್ಟರ್ ಧೈರ್ಯ ಹೇಳಿದ್ದರಲ್ಲಿ ತಪ್ಪೇನಿದೆ?ಅವರು ಎಲ್ಲಾ ರೋಗಿಗಳಿಗೂ ಹಾಗೇ ಧೈರ್ಯ ಹೇಳುತ್ತಾರೆ'ಎಂದರು.ಅದಕ್ಕೆ ರೋಗಿ 'ಅಯ್ಯೋ ,ಸಿಸ್ಟರ್ ಧೈರ್ಯ ಹೇಳಿದ್ದು ನನಗಲ್ಲ!ಆಪರೇಶನ್ ಮಾಡಬೇಕಿದ್ದ ಡಾಕ್ಟರಿಗೆ!'ಎಂದು ಹೇಳಿ ಅಲ್ಲಿಂದ ಓಟ ಕಿತ್ತ .ಅಂತಹ ಸಂದರ್ಭ ಬಂದರೆ ನಾನೂ ಅದನ್ನೇ ಮಾಡುತ್ತಿದ್ದೆ.ನೀವು? 

Wednesday, May 19, 2010

'ಗೆಲ್ಲುವ ಕುದುರೆಯಾಗಲಿಲ್ಲ!'

ಮೇ ತಿಂಗಳು ಪರೀಕ್ಷೆಗಳ ಫಲಿತಾಂಶಗಳು ಹೊರಬೀಳುವಾಗ ಪತ್ರಿಕೆಗಳನ್ನು ನೋಡಲು ಭಯವಾಗುತ್ತದೆ .ಫಲಿತಾಂಶ ಬಂದನಂತರ ಆತ್ಮಹತ್ಯೆ ಮಾಡಿಕೊಂಡವರ   ಸುದ್ಧಿ ಪತ್ರಿಕೆಗಳಲ್ಲಿ ಬರುವುದು ಮಾಮೂಲಾಗಿಬಿಟ್ಟಿದೆ.ಎಳೆಯ ಜೀವಗಳುಮೊಳಕೆಯಲ್ಲೇ ಬಿದ್ದು ಹೋಗುತ್ತವಲ್ಲಾ ಎಂದು ಹೃದಯ ಮರುಗುತ್ತದೆ.ಪರೀಕ್ಷೆಪಾಸಾಗುವುದೇ ಜೀವನದ ಮುಖ್ಯ ಗುರಿಯೇ ಎಂಬ ಪ್ರಶ್ನೆ ಏಳುತ್ತದೆ.ಅಂಕಕ್ಕಾಗಿಯೇ ಶಂಖ ಹೊಡೆಯುವ ಶಿಕ್ಷಣ ಶಿಕ್ಷಣವೇ ಎಂಬ ಶಂಕೆ ಮೂಡುತ್ತದೆ.

                ' ಗೆಲ್ಲುವ ಕುದುರೆಯಾಗಲಿಲ್ಲ'
              ----------------------------   
ನಾನೂ ----ಓದಿದ್ದೆ!
ಎಲ್ಲರಂತೆ  ಓಡಿದ್ದೆ ,
ಈ ಹುಚ್ಚು ರೇಸಿನಲ್ಲಿ!
ಜೀವವನ್ನೇ ತೇದು ,
ಎಣ್ಣೆ  ಮಾಡಿ ,
ಕಣ್ಣಿಗೆ ಆ ಎಣ್ಣೆ ಬಿಟ್ಟು 
ಹಗಲೂ ರಾತ್ರಿ 
ಪುಸ್ತಕದಲ್ಲಿನ ಅಕ್ಷರವಾಗಿ 
ನಿದ್ದೆಗೆ  ಒದ್ದು 
ಒಳಗೇ ಕುದ್ದು 
ಎಲ್ಲಾ ಸಂತೋಷಕ್ಕೆ 
ಬೀಗ ಜಡಿದು 
ವರ್ಷವೆಲ್ಲಾ ಓದಿದ್ದನ್ನು 
ಮೂರು ತಾಸಿನಲ್ಲಿ 
ಹೊರ ತಂದು,
 ಕಷ್ಟ  ಪಟ್ಟರೂ ,
ನಿರೀಕ್ಷಿಸಿದ ಫಲಿತಾಂಶ 
ಬಿಸಿಲುಗುದುರೆ !
'ನಾ ಗೆಲ್ಲುವ 
ಕುದುರೆಯಾಗಲಿಲ್ಲವೆಂದು '
ನೆನೆ ನೆನೆದು ಕೊರಗಿ ,
ನಂದಿ ಹೋಯಿತು 
ಒಂದು 
ದೀ 
ಪ 
!



Sunday, May 16, 2010

'ಸೊಪ್ಪಿನ ಹಾಡು'

ನಮ್ಮ ಜನಕ್ಕೆ ಇನ್ನೂ 'ಬಾಟಲಿ ಹುಚ್ಚು'ಹೋಗಿಲ್ಲ .ನಮ್ ಹುಡುಗ ತುಂಬಾ 'ಈಕು',ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಅಂತಲೋ,
ಒಂದು'ಗುಲ್ಕೊಸ್'ಬಾಟಲಿ ಏರಿಸಿಬಿಡಿ ಅಂತಲೋ ಬರುವವರ ಸಂಖ್ಯೆ ಸಾಕಷ್ಟಿದೆ.1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ಚಕ್ರಾನಗರದಲ್ಲಿವೈದ್ಯಾಧಿಕಾರಿಯಾಗಿದ್ದಾಗ ಸುತ್ತಮುತ್ತಲಿನ ಹಳ್ಳಿಯವರು ಹಿತ್ತಲಿನಲ್ಲಿ ಸೊಂಪಾಗಿ ಸೊಪ್ಪು ಬೆಳೆದು ,ಅದನ್ನು ಹುಡುಗರ ಕೈಯಲ್ಲಿ ಮಾರಿಸಿಅದರಿಂದ ಬಂದ ಹತ್ತೋ ಇಪ್ಪತ್ತೋ ರೂಪಾಯಿಗಳನ್ನು ಹಿಡಿದು ತಂದು 'ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಸಾರ್'ಅನ್ನೋರು .ಅವರಿಗೆ ಟಾನಿಕ್ ಗಿಂತ ಸೋಪ್ಪಿನಲ್ಲೇ ಹೆಚ್ಚು ಪೌಷ್ಟಿಕಾಂಶ ಇದೆ ಎಂದು ಎಷ್ಟು ಹೇಳಿದರೂ ಅರ್ಥವೇ ಆಗುತ್ತಿರಲಿಲ್ಲ .'ಹಿತ್ತಲ ಗಿಡ ಮದ್ದಲ್ಲ 'ಎನ್ನುವ ಗಾದೆ ನಿಜ ಅನ್ನಿಸಿತ್ತು .ಇಂಥವರಿಗಾಗಿ ಸೊಪ್ಪಿನ ಬಗ್ಗೆ ಒಂದು ಹಾಡು ಬರೆದು ಅದಕ್ಕೆ'ಪ್ಯಾಸಾ'ಚಿತ್ರದ 'ಸರ್ ಜೋ ತೆರಾ ಚಕ್ ರಾಯೇ 'ಎನ್ನುವ ಹಾಡಿನ ರಾಗ ಹಾಕಿ ಅಲ್ಲಿನ ಹೈಸ್ಕೂಲಿನಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಹಾಡಿದ್ದೆ.'ನಿಮ್ಮ ಸೊಪ್ಪಿನ ಹಾಡು ಕೇಳಿ ನಮ್ಮ ಹುಡುಗರು ಈಗ ಸೊಪ್ಪು, ತರಕಾರಿ ಚೆನ್ನಾಗಿ ತಿನ್ನುತ್ತಾರೆ ಸಾರ್ ' ಎಂದು ತಂದೆ ತಾಯಂದಿರು ಬಂದು ಹೇಳಿದಾಗ ನಿಜಕ್ಕೂ ತುಂಬಾ ಸಂತೋಷವಾಗುತ್ತಿತ್ತು .ನಿಮ್ಮ ಹುಡುಗರೂ ಸೊಪ್ಪು ,ತರಕಾರಿ ತಿನ್ನದಿದ್ದರೆ ಅವರಿಗಾಗಿ ಈ ಹಾಡು;

ಹಿತ್ಲಲ್ ಎಷ್ಟೊಂದ್ ಸೊಪ್ಪು!
ನೋಡೋಕೆಷ್ಟೊಂದ್ ಸೊಂಪು!
ತಾನೂ ತಿನ್ನದೇ, ಮಕ್ಳಿಗೂ ತಿನ್ಸದೇ 
ಕಾಸಿಗ್ ಮಾರ್ತಾನ್ ಬೆಪ್ಪು! 
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅದೋ ನೋಡು ದಂಟು !
ಗೊತ್ತಿಲ್ಲೇನೋ ಬಂಟು!
ಇದರಲ್ಲಿದೆ ಏ ಬಿ ಸಿ ಡಿ 
ಎಲ್ಲಾ ವಿಟಮಿನ್ ಗಂಟು!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಇತ್ಲಾಗ್ ನೋಡು ಮೆಂತ್ಯ !
ತಿಂದರೆ ಖಾಯಿಲೆ ಅಂತ್ಯ !
ಇದನ್ನು ಬಿಟ್ಟು ದಿನ ಬೆಳಗಾದ್ರೆ 
ಟಾನಿಕ್ ಕುಡೀತ ಕುಂತ್ಯ!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅತ್ಲಾಗ್ ನೋಡು ಬಸಳೇ!
ತಿಂದರೆ ಗರ್ಭಿಣಿ ಮಹಿಳೆ 
ಹೊಟ್ಟೇಲಿರೋ ಹಸುಳೆ 
ಗಟ್ಟಿಯಾಗುತ್ತೆ ನಾಳೆ!
ಹಿತ್ಲಲ್ ಎಷ್ಟೊಂದ್ ಸೊಪ್ಪು -----!

Saturday, May 15, 2010

ನೀಲುವಿಗೊಂದು-ಶಾಲು '

ಲಂಕೇಶರ 'ನೀಲು ಕಾವ್ಯ'ಯಾರಿಗೆ ತಾನೇ ಗೊತ್ತಿಲ್ಲ?'ನೀಲು'ವಿನ fan club ಗಳೂ ಇವೆ ಎಂದು ಸ್ನೇಹಿತರೊಬ್ಬರು ಹೇಳುತ್ತಿದ್ದರು.
ಆದರೆ ಚೆನ್ನವೀರ ಕಣವಿ ಯವರಂತಹ ನಾಡಿನ ಹಿರಿಯ ಕವಿಯೊಬ್ಬರು 'ನೀಲು'ವಿನ ಬಗ್ಗೆ ಕವಿತೆಯೊಂದನ್ನು ಬರೆದಿದ್ದಾರೆಂದು 
ನನಗೆ ಗೊತ್ತಿರಲಿಲ್ಲ.1986 ರಲ್ಲಿ ಪ್ರಕಟಗೊಂಡ ಚೆನ್ನವೀರ ಕಣವಿಯವರ 'ಕಾರ್ತಿಕದ ಮೋಡ 'ಎಂಬ ಕವನ ಸಂಕಲದಲ್ಲಿ 
ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ 'ನೀಲು' ಕಾವ್ಯದ ಬಗ್ಗೆ'ನೀಲುವಿಗೊಂದು ಶಾಲು'ಎಂದು ಕವನ ಬರೆದು ಲಂಕೇಶರ 
ಕಾವ್ಯಕ್ಕೇಒಂದು ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.'ನೀಲುವಿಗೊಂದು ಶಾಲು ',ನಿಮಗೂ ಇಷ್ಟ ಆಗಬಹುದು.ಓದಿ;


ಏನಮ್ಮ  ನೀಲು -
ನೀ ಮೂಲ್ಯಾಗಿಟ್ಟ ಬಣ್ಣದ ಕೋಲು;
ತಿವಿದರ ಮುಟ್ಟಿಕೋ ಬೇಕು 
ಸೊಂಟ ,ಕೈ ,ಕಾಲು.
ತುಂಟಾಟಕ್ಕ ನೀನs ಒಂದು ಸವಾಲು.


ಪ್ರೀತಿ:ನಿನ್ನ ರೀತಿ;ಆದರೂ 
ಕೋತಿ ಆಡಿಸಿ ಮಜಾ ನೋಡಬೇಕಂತಿ.
ಏನs ಬಿಡು ,ಚ್ಯಾಷ್ಟಿ ಮಾಡ್ತಾಳ ಅಂದರ 
ಕಣ್ಣಾಗ ನೀರು ಬರು ಹಾಂಗ ಖರೇನs ಹೇಳಿಬಿಡತಿ.

ಹಕ್ಕಿ ಹಾಂಗ ಎಲ್ಲಾ ಕಡೆ ಹಾರಾಡ್ತಿ 
ಸೊಕ್ಕು ಬಂದವರ ತಲಿ ಕುಕ್ಕತಿ 
ಕೋಳಿ ಹಾಂಗ ನಸೀಕ್ಲೆ ಎಬ್ಬಸ್ತಿ 
ಬಾಗಿಲದಾಗಿನ ಬಳ್ಳಿ ಹಾಂಗ ಮೈ ತುಂಬ ಹೂ ಬಿಡತಿ .

ನಿನ್ನ ಗುಟ್ಟು ಯಾರಿಗೂ ಬಿಟ್ಟುಕೊಟ್ಟಿಲ್ಲ ,
ಆದರೆ ವಾರಕ್ಕೊಮ್ಮೆ ಬರೂದು ಬಿಟ್ಟಿಲ್ಲ;
ಹಾಂಗ ನೋಡಿದರ ನೀಲು --ನೀ ಬಟಾಬಯಲು 
ಆದರೂ ಚಳಿಗಾಲದಾಗ ಇರಲಿ ತಗೋ 
ಹೊತಗೋ  ಈ  ಶಾಲು.

Thursday, May 13, 2010

'ಹನಿಗವನಗಳು'

1)ರವಿ-ಕವಿ
ಮೂಡಣದಲ್ಲಿ 
ಮೂಡಿದ ರವಿಗೆ 
'ಮೂಡ್ 'ಬಂದು 
ಬಾನಂಚಿನಲ್ಲಿ ಬರೆದ ,
ಹಕ್ಕಿಗಳ 
ಸಾಲು ಸಾಲು 
ಕವಿತೆ!
2)'ನಿಗೂಢ'
ಸೂರ್ಯ -------!
ನೀ ನನಗೆ ನಿಗೂಢ!
ಸಂಜೆ ಸೇರಿದರೆ 
ನೀ -------ಗೂಡ ,
ಮತ್ತೆ  ಕಾಣುವುದು 
ಮರುದಿನ ಮುಂಜಾನೆಯೇ !
3)ಸೂರ್ಯ -ಟೈಟು 
ಸೂರ್ಯ -----------,
ಸಂಜೆ ಪಡಖಾನೆಗೆ 
ಬರುವಾಗಲೇ ಟೈಟು!
ಮತ್ತೊಂದು 'ಸಿಕ್ಸ್ಟಿ'ಏರಿಸಿದ !
'ಬ್ಲ್ಯಾಕ್-ಔಟ್ 'ಆಗಿ ,
ಎಚ್ಚರ ಆದದ್ದು 
ಮಾರನೇ ದಿನ 
ಬೆಳಿಗ್ಗೆನೇ---!!
4)'ಬೋರು '  
ಯಾಕೋ
ಬೋರು !
ಮನದ 
ಬೋರಿನಲ್ಲಿ 
ಕವಿತೆಯ 
ನೀರು 
ಖಾಲಿ! 

Wednesday, May 12, 2010

ಚುಟುಕುಗಳು

೧).'ಕೊಬ್ಬು ಒಳ್ಳೆಯದಲ್ಲ'
ಕೊಬ್ಬುತ್ತಿದೆ ಕುರಿ !
ಮನದಲ್ಲೇ ನಗುತ್ತಾನೆ 
ಕಟುಕ ------!
ಕೊಬ್ಬುತ್ತಿದ್ದಾನೆ ಮನುಷ್ಯ !
ಮರೆಯಲ್ಲೇ ನಗುತ್ತಾನೆ 
ವಿಧಿ --------!
ಆದ್ದರಿಂದ ------,
ಕೊಬ್ಬು ಒಳ್ಳೆಯದಲ್ಲ !
ನಮಗೂ -----!
ಕುರಿಗೂ -------!
೨)'ಮಾತು--ಮೌನ'
ನೀವು ಮಾತನಾಡುತ್ತೀರಿ
ಸುಮ್ಮನಿರದಕ್ಕಾಗಿ !
ನಾನು ಸುಮ್ಮನಿರುತ್ತೇನೆ 
ಮಾತನಾಡದಿರುವುದಕ್ಕಾಗಿ !

Monday, May 10, 2010

'ಕಾಗೆ'

ಮಧ್ಯಾಹ್ನದ ಉರಿ ಬಿಸಿಲು
ಹಿತ್ತಿಲ ಬೇಲಿಯ ಮೇಲೆ ಕುಳಿತು
ಕೂಗುತ್ತಿರುವ 'ಕಾ '----'ಕಾ'
ಎಂಬ ಕರ್ಕಶ ಕೂಗಿಗೆ ,
ರಾತ್ರಿ ಎತ್ತಲೋ ಹಾರಿಹೋಗಿ
ಹಗಲಲ್ಲಿ ಒತ್ತರಿಸಿಕೊಂಡು ಬಂದ
ನಿದ್ದೆಯ ಹೊದ್ದಿಕೆ ಸರಿಸಿ ಎದ್ದು,
ಕಿಟಕಿಯಲ್ಲಿ ನೋಡಿದರೆ ,
ಸತ್ತ ಇರುಳಂತಿರುವ
ಇಲಿಯ ಕಾಲಲಿ ಮೆಟ್ಟಿ ,
ಹಗಲಿನ ಹಾ ಹಾ ಕಾರದಂತೆ
ತನ್ನ ಕೂಟವ ಕರೆಯುತ್ತಿದೆ
ಊಟಕ್ಕಾಗಿ ------ಕಾಗಿ!
ಭೋಜನ -----ಕೂಟಕ್ಕಾಗಿ!
 ಬೆಂದ  ಇಳೆ ಮೌನದಲ್ಲೇ
ಬೊಬ್ಬಿಡುವಂತೆ--------!
ಕಾ ಕಾ --ಎಂಬ ಕೂಗು ,
ಮಳೆಯ ----ಬರುವಿಗಾಗಿ !              

Saturday, May 8, 2010

ಮೆಚ್ಚಿದ ಕವನ ;'ಸರಳ ಮಾತು'-ಚಂದ್ರ ಶೇಖರ ಕಂಬಾರ (ಬೆಳ್ಳಿ ಮೀನು ಸಂಕಲನದಿಂದ)

ಹೆರಿಗೆ ವಾರ್ಡಿನ ಆ ಕೊನೆ ಹಾಸಿಗೆಯಲ್ಲಿ 
ಚೊಚ್ಚಲು ಬಾಣಂತಿ ,ಇನ್ನೂ ಬಾಲೆ 
ಅಲ್ಲಿ ಗೋಡೆಯ ಮೇಲೆ ಹೂ ಬಿಟ್ಟಿದೆ ಬಳ್ಳಿ ,
ಗೊತ್ತೇ ಆಗೋದಿಲ್ಲ ,ಅದು ಅರಳಿದ್ದು ಕ್ಯಾಲೆಂಡರಿನಲ್ಲಿ !

ಉಳಿದ ಬಾಣಂತಿಯರಿಗೆಷ್ಟೊಂದು ಕರುಳಿನ ಬಳ್ಳಿ!
ಕುಲು ಕುಲು ನಗುವ ,ಕೈ ತುಂಬಾ ಕಾಣಿಕೆ ತರುವ 
ಬಂಧು ಬಾಂಧವ ಮಂದಿ ,ಬಾಯ್ತುಂಬ ಬೂಂದಿ .

ಈಕೆಯ ಬಳಿಗ್ಯಾರೂ ಬರೋದಿಲ್ಲ,ನಗೋದಿಲ್ಲ ,ಕ್ಷೇಮ ಕೇಳೋದಿಲ್ಲ.
ಗಂಡನೋ ಮಿಂಡನೋ ಈ ಪಿಂಡದ ಕಾರಣಿಕನ
ಸುಳಿವಿಲ್ಲ ,ದಾಖಲೆಯಲ್ಲಿ ಅವನ ಹೆಸರೂ ಇಲ್ಲ.

ಇವಳ ಬಳಿ ಸುಳಿವವಳು ನರ್ಸೊಬ್ಬಳೇ,
ಅವಳ ತುಟಿಯಂಚಿಗೂ ಬಿಳಿಯ ನಗೆಯೇ .


ಬರುತ್ತಾರಲ್ಲ ,ಬಂಧು ಬಾಂಧವ ಮಂದಿ ,ಬಂದವರು 
ಬಂದು ,ಕೊಡುವಷ್ಟು ಕೊಟ್ಟು ನೋಡುವಷ್ಟು ನೋಡಿ 
ನೋಡಿದ ಮೇಲೆ ,ಎಲ್ಲರ ವಂಕಿ ದೃಷ್ಟಿ ಇವಳ ಕಡೆಗೇ,
ಅವರೆಲ್ಲ ಹಿಂಡು ಕಣ್ಣೊಳಗೆ ಪುಂಡು ಪೋಕರಿ ಕಥೆಯ 
ಹೆಣೆಯುವವರೇ;
ಇವಳ ತೋಳಿಗೆರಡು ಕಥೆ ,ಮುಖಕ್ಕೆ ಮೂರು ಕಥೆ 
ಕಣ್ಣಿನೊಳಗೆ ಇನ್ನೇನು ಕಥೆಗಳಿವೆಯೋ;


ಇದ್ಯಾವುದರ ಎಗ್ಗಿಲ್ಲದ ತಾಯಿ 
ಮೈ ಮರೆತ ಮಾಯಿ 
ಹಿಗ್ಗಿ ಹಸಿರಾಗಿ ,ಉಬ್ಬಿ ಮೊಗ್ಗಾಗಿ ,ಬಿರಿದು ಹೂವಾಗಿ 
ಬಗೆ ಬಗೆಯ ಧಗೆಯಿಂದ ಮಗುವನ್ನು ಕುಲುಕಿ 
ಪಲುಕುತ್ತ ಲಕಳಕಿಸುತ್ತಾಳೆ ಮಳೆಯೊಳಗಿನ ಮಲೆನಾಡಿನಂತೆ !

ಅಥವಾ ,
ನಾವು ಎಷ್ಟೆಂದರೂ ಕ್ಯಾಲೆಂಡರಿನಲ್ಲಿ ನಿಸರ್ಗವನ್ನಿಟ್ಟು 
ಮೊಳೆ ಹೊಡೆದು ಗೋಡೆಗೆ ನೇತು ಹಾಕುವ ಮಂದಿ ,
ಈ ಸರಳ ಮಾತು ನಮಗೆ ತಿಳಿದೀತು ಹೇಗೆ ?


(ನಾಳೆ 'ಅಮ್ಮಂದಿರ'ದಿನಾಚರಣೆ.ಜಗತ್ತಿನ ಎಲ್ಲಾ ತಾಯಂದಿರಿಗೂ ನನ್ನ,ಕೋಟಿ ಕೋಟಿ ನಮನಗಳು )

Thursday, May 6, 2010

'ಇಲ್ಲಿ ಮಾತಿಲ್ಲ ------ಬರೀ ಕೃತಿಯಿದೆ!'

'ಒಗ್ಗಟ್ಟಿನಲ್ಲಿ  ಬಲವಿದೆ'!
ಹೀಗೊಂದು  ಗಾದೆ !
ಇದ್ದರೆ ಇರಲಿ ಗಾದೆ ,
ನನ್ನದಿಷ್ಟೇ  ತಗಾದೆ !
ಆಡು ಮಾತಿನಲ್ಲಿ ಇದೆ ,
ಕೃತಿಯಲ್ಲಿ ಇಲ್ಲ ಒಗ್ಗಟ್ಟು !
ಹುಡುಕುತ್ತಲೇ ಇದ್ದೆ!
ತಿನ್ನುವಾಗ ಕೆಳಗೆ ಬಿತ್ತು
ಒಂದು ಚೂರು ಒಬ್ಬಟ್ಟು!
ಅರೆ!ಕೆಲವೇ ಕೆಲ ಸೆಕೆಂಡು!
ಎಲ್ಲಿತ್ತೋ ಈ ಹಿಂಡು!
ಇರುವಲ್ಲಿ ಇರದಾ ,
ಇರುವೆಗಳ  ದಂಡು!
ಚಲಿಸುತ್ತಿದೆ ಒಬ್ಬಟ್ಟು!
ಇಲ್ಲಿದೆ ನೋಡಿ ಒಗ್ಗಟ್ಟು!
ಒಂದಕ್ಕೊಂದು ಬೆನ್ನು ಕೊಟ್ಟು ,
ಕೈ ಕಾಲುಗಳ ಮೀಟಿ ಹೇಗೆ !
ಅನಾಮತ್ತಾಗಿ ಸಾಗಿಸಿವೆ,
ಒಬ್ಬಟ್ಟನ್ನು ಗೂಡಿಗೆ !
ಹಬ್ಬ ಮಾಡಲು,
ತಮ್ಮ ಪಾಡಿಗೆ !
ಘೋಷಣೆಯಿಲ್ಲ, ಗಾದೆಯಿಲ್ಲ !
ಮಾತಿಲ್ಲ ,ಕತೆಯಿಲ್ಲ !
ಇಲ್ಲಿ ಬರೀ ಕೃತಿಯಿದೆ!
ಒಗ್ಗಟ್ಟಿನಲ್ಲಿ ಬಲವಿದೆ!                  

Wednesday, May 5, 2010

'ಬ್ಲಾಗಿಗೆ ಮತ್ತೆ ಸ್ವಾಗತ'

ಗುಡುಗು ,ಮಿಂಚು ಸಿಡಿಲು ,ಮಳೆ,ಎಲ್ಲವೂ ಸ್ತಬ್ಧ !ಕಂಪ್ಯೂಟರ್ ನ c.p.u.ನಲ್ಲಿ ಮೇಲಿನ ಡಬ್ಬ ಒಂದು ಬಿಟ್ಟು ಎಲ್ಲವೂ ಧೂಳೀಪಟ!ಹದಿನೇಳು ಸಾವಿರ ಖರ್ಚು!ಕಂಪ್ಯೂಟರ್ ಬ್ಲಾಗಿನ ನಂಟು ಬಿಡುವಂತಿಲ್ಲ!ಹತ್ತು ದಿನ ನಾನು ನೀರಿನಿಂದ ತೆಗೆದ ಮೀನು!ಬ್ಲಾಗಿನ ಗೀಳು ಅಂಟುವ ಮೊದಲೇ ಹೀಗಾಗಿದ್ದಿದ್ದರೆ 'ಗೋಲೀ ಮಾರೋ 'ಎಂದುಬಿಡುತ್ತಿದ್ದೆನೇನೋ!ಕಾಣದ ಇಷ್ಟೊಂದು ಜನರಲ್ಲಿ ಬ್ಲಾಗ್ ಬೆಳೆಸಿರುವ ಬಾಂಧವ್ಯ ನಿಜಕ್ಕೂ ಆಶ್ಚರ್ಯ ಉಂಟುಮಾಡುತ್ತದೆ.ಇದು ಇನ್ನಷ್ಟು ಬೆಳೆಯಲಿ ಎನ್ನುವುದೇ ನನ್ನ ಆಶಯ!ಎಲ್ಲರಿಗೂ ಮತ್ತೆ ನನ್ನ ಬ್ಲಾಗಿಗೆ ಸ್ವಾಗತ
.

Sunday, April 25, 2010

ಮಾಸಿದ ಕೋಟು -ಭಾಗ 2 (ಮುಂದುವರೆದ ಭಾಗ)

ಈಗ "ಮಾಸಿದ ಕೋಟಿನ"ಕಥೆಯ ಮುಂದಿನ ಭಾಗವನ್ನು ಓದಿ ,ನಂತರ ನಿಮ್ಮ ಅಭಿಪ್ರಾಯ ತಿಳಿಸಿ:ವೈದ್ಯರು,ನಡೆದ ಆಕಸ್ಮಿಕ ಘಟನೆ ಯಿಂದ ಅವಾಕ್ಕಾದರು!ಮಾತೇ ಹೊರಡಲಿಲ್ಲ!ಆದರೂ ತಕ್ಷಣ ಸಾವರಿಸಿಕೊಂಡು,ಆ ಮಾಸಿದ ಕೋಟಿನ ವ್ಯಕ್ತಿಯನ್ನು ವಾಪಸ್ಸು ಕರೆದು ಕೂರಿಸಿದರು.ವ್ಯಕ್ತಿ ಬಿಕ್ಕಿ,ಬಿಕ್ಕಿ ಅಳುತ್ತಿದ್ದ!ಅವನನ್ನು ಸಮಾಧಾನ ಪಡಿಸಿದ ನಂತರ ವೈದ್ಯರು'ನೋಡಪ್ಪಾ,ನೀನು ಫೀಸು ಕೊಡಲಿಲ್ಲಅಂತ ತಕ್ಷಣ ಸಿಟ್ಟು ಬಂತು.ಕೋಪದಲ್ಲಿ ಏನೋ ಹೇಳಿಬಿಟ್ಟೆ ಅಂತ ಬೇಜಾರು ಮಾಡಿಕೋ ಬೇಡ,ನಿನ್ನ ಕತೆ ಏನು?'ಎಂದರು.ಅದಕ್ಕೆ ಆತ 'ಆರು ತಿಂಗಳ ಕೆಳಗೆ ನನ್ನ ಹೆಂಡತಿ ತೀರಿಕೊಂಡಳು ಸಾರ್ ,ನನಗೆ ಜೀವನಾನೆ ಬೇಡ ಅನ್ನಿಸಿತ್ತು.ಆತ್ಮಹತ್ಯೆ ಮಾಡಿ ಕೊಳ್ಳೋಣ ಅಂತಿದ್ದೆ.ನೀವು ಫೀಸು ಕೊಡದೆ ಇದ್ದರೂ, ಚಿಕೆತ್ಸೆ ಮಾಡಿದಿರಿ!ಈಗ ಅವಳ ಒಡವೆ ಗಿರವಿ ಇಟ್ಟು ಹತ್ತು ಸಾವಿರ ತಂದಿದ್ದೀನಿ.ನಿಮ್ಮ ಋಣ ಈ ಜನ್ಮದಲ್ಲಿ ತೀರಿಸೋಕೆ ಆಗೋಲ್ಲ.ಹಾಗೇ ಹತ್ತು ಸಾವಿರಕೊಟ್ಟರೆ,ನೀವುತೊಗೊಳಲ್ಲಾ.ಅದಕ್ಕೇನನಗೆ ಬಹಳ ಇಷ್ಟವಾದ ಈ ಕೋಟಿನಲ್ಲಿ ಇಟ್ಟು ಕೊಟ್ಟೆ .ಈ ಕೋಟೂ ಅವಳೇ ಯಾವುದೋ ಹಬ್ಬಕ್ಕೆ ಅಂತ ನನಗೆ ತಂದು ಕೊಟ್ಟಿದ್ದು ಸಾರ್'ಎಂದ.ಈಗ ವೈದ್ಯರ ಕಣ್ಣಲ್ಲಿ ನೀರಿತ್ತು!ವೈದ್ಯರು ನಿಧಾನವಾಗಿ ಹೇಳಿದರು'ನೋಡಪ್ಪಾ ನನಗೆ ನಿನ್ನ ಈ ಹಣದ ಅವಶ್ಯಕತೆಇಲ್ಲ.ದೇವರು ಸಾಕಷ್ಟು ಹಣ ಕೊಟ್ಟಿದ್ದಾನೆ.ಎಷ್ಟೋ ಜನ ಚಿಕಿತ್ಸೆ ಪಡೆದವರು ತಿರುಗಿಯೂ ನೋಡುವುದಿಲ್ಲ .ಈ ಹಣದಿಂದ ಯಾರಾದರೂ ಕಷ್ಟದಲ್ಲಿ ಇದ್ದವರಿಗೆ ನೀನೂ ಸಹಾಯ ಮಾಡು ಎಂದು ,ಆ ಹಣವನ್ನು ಅವನಿಗೇ ಹಿಂದಿರುಗಿಸಿ,ಅವನನ್ನು ಬಾಗಿಲಿನ ತನಕ ಬಂದು ಬೀಳ್ಕೊಟ್ಟರು.ಆಗ ರಾತ್ರಿ ಒಂಬತ್ತರ ಸಮಯ.ಕ್ಲಿನಿಕ್ಕಿನ ಬಾಗಿಲು ಮುಚ್ಚುವ ವೇಳೆಯಾಗಿತ್ತು.ಟೇಬಲ್ ಮೇಲೆ ಇದ್ದ ಬುದ್ದನ ಪ್ರತಿಮೆಯ ನಗು ಹೊರಗೆಲ್ಲಾ ತಣ್ಣನೆ ಬೆಳದಿಂಗಳಾಗಿ ಹರಡಿತ್ತು.

Wednesday, April 21, 2010

' ಮಾಸಿದ ಕೋಟು '{ ಭಾಗ -1}

ಹೀಗೊಂದು ಪುಟ್ಟ ಕಥೆ .ಎಂದೋ ಓದಿದ್ದು.ನಿಮಗೆಲ್ಲಾ ಹೇಳಬೇಕು ಅಂತ ಅನ್ನಿಸಿತು .ಹೇಳಿಬಿಡುತ್ತೇನೆ .ಹೀಗೆಲ್ಲಾ ನಡಿದಿರಲಿಕ್ಕೂ ಸಾಧ್ಯ ಅನ್ನಿಸುತ್ತದೆ.ಒಮ್ಮೊಮ್ಮೆ ಇದು ಬರೀ ಒಂದು ಕಾಲ್ಪನಿಕ ಘಟನೆ ಇರಬಹುದು ಅಂತಲೂಅನ್ನಿಸುತ್ತದೆ .ನೀವೇ ಓದಿ ನೋಡಿ.ಆತ ಸದಾ ಆ ಮಾಸಿದ ಕೋಟನ್ನು ಧರಿಸುತ್ತಿದ್ದ.ಅದರ ಜೊತೆ ಏನೇನು ನೆನಪುಗಳು ಅಂಟಿಕೊಂಡಿದ್ದವೋ ಅವನಿಗೇ ಗೊತ್ತು.ಸುಮಾರು ಮೂರು ತಿಂಗಳಿಂದ ಅವನು ಆ ವೈದ್ಯರ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದ.ಅವರುಫೀಸುಕೇಳಿದಾಗಲೆಲ್ಲಾ 'ಮುಂದಿನ ಸಾರಿ ಖಂಡಿತ ಕೊಡುತ್ತೀನಿ ಸಾರ್'ಎಂಬ ಉತ್ತರ ಅವನ ಬಳಿ ಸಿದ್ದವಾಗಿರುತ್ತಿತ್ತು.ಆದಿನ ಅವನು'ನನಗೆ ಪೂರ್ತಿ ಗುಣವಾಗಿದೆ ಸರ್ 'ಎಂದ.ವೈದ್ಯರು 'ನನ್ನ ಫೀಸು ನಾಲಕ್ಕು ಸಾವಿರ ವಾಗಿದೆ ,ಈಗಲಾದರೂ ಕೊಡುತ್ತೀಯೇನಪ್ಪಾ 'ಎಂದರು.ಆತನ ಮುಖದಲ್ಲಿ ದೈನ್ಯ ಭಾವ ಇತ್ತು.ತನ್ನ ಖಾಯಿಲೆಗುಣ ಮಾಡಿದ್ದಕ್ಕೆವೈದ್ಯರ ಬಗ್ಗೆ  ಕೃತಜ್ಞತೆಇತ್ತು.ತಾನು ಬಹಳವಾಗಿ ಇಷ್ಟಪಡುತ್ತಿದ್ದ ಕೋಟನ್ನು ಬಿಚ್ಚಿ, ಟೇಬಲ್ ಮೇಲೆ ಇಟ್ಟು'ನೀವು ದೇವರು ಇದ್ದ ಹಾಗೆ ಸರ್'ಎಂದ.ವೈದ್ಯರಿಗೆ ಅಸಾಧ್ಯ ಕೋಪ ಬಂತು.ಇನ್ನೂ ಏನೋ ಹೇಳಬೇಕೆಂದಿದ್ದ ಅವನನ್ನು ಅರ್ಧಕ್ಕೇ ತಡೆದು ಸಿಟ್ಟಿನಿಂದ 'ಎತ್ಕೊಂಡು ಹೋಗಯ್ಯ ನಿನ್ ಹಾಳು  ಕೋಟು ಯಾವೋನಿಗೆ ಬೇಕು,ನನ್ನ ನಾಲ್ಕು ಸಾವಿರ ರೂಪಾಯಿ ತಂದುಕೊಡು'ಎಂದು ,ಆ ಮಾಸಿದ ಕೋಟನ್ನು ಕೆಳಗೆ ಬಿಸಾಕಿದರು .ಆತನಿಗೆ ತುಂಬಾ ನೋವಾಗಿತ್ತು.ಕಣ್ಣಿನಲ್ಲಿ ನೀರಿತ್ತು.ಏನೂ ಮಾತಾಡದೆ ನಿಧಾನವಾಗಿ ಕೋಟನ್ನುನೆಲದಿಂದ ಎತ್ತಿಕೊಂಡು ಧರಿಸಿ,ಅದರ ಒಳ ಜೇಬಿನಲ್ಲಿದ್ದ ಹತ್ತು ಸಾವಿರ ರೂಪಾಯಿಯ ಹೊಸ ನೋಟುಗಳ ಕಟ್ಟನ್ನು ಬಿಡಿಸಿ,ನಾಲಕ್ಕು ಸಾವಿರ ಎಣಿಸಿ,ಟೇಬಲ್ ಮೇಲೆ ಇಟ್ಟು ಇನ್ನುಳಿದ ಆರು ಸಾವಿರವನ್ನು ಕೋಟಿನ ಜೇಬಿನಲಿಟ್ಟು ಮೌನವಾಗಿ ಹೊರನಡೆದ.ಟೇಬಲ್ ಮೇಲಿದ್ದ ನಾಲಕ್ಕು ಸಾವಿರ ನೋಟುಗಳು ಇಷ್ಟು ಹೊತ್ತೂ ಜೊತೆಗಿದ್ದ ಮಾಸಿದ ಕೋಟಿನೊಳಗಿನ ಆರು ಸಾವಿರ ನೋಟುಗಳಿಗೆ 'ಟಾ--ಟಾ' ಮಾಡುತ್ತಿದ್ದವು!ಟೇಬಲ್ ಮೇಲೆ ಇದ್ದ 'ಲಾಫಿಂಗ್ ಬುದ್ಧನ' ಮೂರ್ತಿ ವೈದ್ಯರನ್ನು ನೋಡಿ ನಗುತ್ತಲೇ ಇತ್ತು!                 

Tuesday, April 20, 2010

' ನವ್ಯ --------ಕಲೆ '

ನಾನು ಬಹಳ ವರ್ಷಗಳ ಹಿಂದೆ ಒಂದು ಚಿತ್ರಕಲಾ
ಪ್ರದರ್ಶನಕ್ಕೆಹೋಗಿದ್ದೆ.ಅಲ್ಲಿದ್ದ ನವ್ಯ ಚಿತ್ರವೊಂದು
ವಿಚಿತ್ರವಾಗಿತ್ತು.ಅದರತಲೆಬುಡಅರ್ಥವಾಗಲಿಲ್ಲ.
'ಇದನ್ನು ಕಲೆ ಅಂತ ಏಕೆ ಕರೆಯುತ್ತಾರೆ',ಎಂದು
ತಲೆ ಕೆರೆದುಕೊಂಡೆ! ಯಾರೋ ಸಣ್ಣ ಮಕ್ಕಳು
ಸಿಕ್ಕಿದ್ದನ್ನು ಗೀಚಿಅದಕ್ಕೆಸಿಕ್ಕಾಪಟ್ಟೆ ಬಣ್ಣ ಬಳಿದ ಹಾಗಿತ್ತು!
ಹಾಗೆಂದು ನವ್ಯ ಕಲೆಯನ್ನುನಾನುತಿರಸ್ಕಾರದಿಂದ
ಕಾಣುತ್ತೇನೆಂದು ತಪ್ಪು ತಿಳಿಯಬೇಡಿ. ಕೆಲವು
ನವ್ಯಚಿತ್ರಗಳನ್ನು ತುಂಬಾ ಇಷ್ಟಪಟ್ಟಿದ್ದುಂಟು.
ಆಗ ಅನಿಸಿದ್ದನ್ನುಕವಿತೆಯಲ್ಲಿಹಿಡಿದಿಟ್ಟಿದ್ದೆ.ನಿಮ್ಮಲ್ಲೂ
ಕೆಲವರಿಗೆ ನವ್ಯ ಚಿತ್ರಗಳನ್ನು ನೋಡಿಹಾಗೆಯೇಅನಿಸಿರಬಹುದು
.ನವ್ಯ ಚಿತ್ರಕಾರರು ದಯವಿಟ್ಟು ಸಿಟ್ಟಾಗಬೇಡಿ.
ಇದುಶ್ರೀಸಾಮಾನ್ಯನೊಬ್ಬನ ಅನಿಸಿಕೆ ಎಂದು ನಕ್ಕುಬಿಡಿ;
-------------------------
'ನವ್ಯ ಕಲೆ '
-------------------------
ಡಾಳಾದ  ಎರಡು  ಗೆರೆ !
ಮಧ್ಯೆ  ಕೆಂಪು  ಬರೆ !
ಎತ್ತಲೋ  ನೋಡುವ  ಕಣ್ಣು!
ಅರ್ಥವೇ   ಆಗುತ್ತಿಲ್ಲ ಮಣ್ಣು!
ಪಕ್ಕದಲ್ಲೇ  ಒಂದಷ್ಟು  ಮಸಿ !
ಅದಕ್ಕೇನೋ ಮಾಡಿದ್ದಾನೆ  ಕಸಿ !
ಓ -----ಅಲ್ಲೆಲ್ಲೋ  ಇದ್ದಾನೆ ಚಂದ್ರ !
ಇದನ್ನು ನೋಡೋಕೆ ನೀವೂ ಬಂದ್ರ !
ಆಕಾಶದಲ್ಲಿ ಯಾಕಿವೆ ಮೀನುಗಳು?
ಕೆಳಗೆ ಹರಿದಾಡುವ ಹಕ್ಕಿಗಳು !
ಕ್ಯಾನ್ವಾಸ್ ತುಂಬೆಲ್ಲಾ ಪುಕ್ಕಗಳು ;
ತಲೆ ಕೆಟ್ಟು ಕುಣಿಯುವ ಬಣ್ಣಗಳು !
ಇದೇನಾ ---------ನವ್ಯ ಕಲೆ !
ಇದು -----------ಕಲೆಯಲ್ಲ ,
ಹುಚ್ಚು ಹಿಡಿದ ತಲೆ !

Sunday, April 18, 2010

'ಮರೆವು'

ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.
ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .
ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .
ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .
ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .
ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .
'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.
ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .
ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.
'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!

Thursday, April 15, 2010

'ಬಾಲ್ಯ'

ಬಾಲ್ಯದ --------ಕನಸುಗಳು ,
ಈ ನಡು ವಯಸ್ಸಿನ ಮಧ್ಯಾಹ್ನದ
ಕನವರಿಕೆಗಳು -----------!
ಚಿಂತೆ ಸಂತಾಪಗಳ ಉರಿಬಿಸಿಲಿಗೆ ,
ಐಸ್ ಕ್ಯಾಂಡಿ ಮಾರುವ ಗಾಡಿಯೊಳಗಿನ,
ಬಣ್ಣ ,ಬಣ್ಣದ ,ತಣ್ಣಗಿನ -----ಐಸು!
ಹುಡುಗಿಯರ  ಜಾಮಿಟ್ರಿ ಬಾಕ್ಸಿನ ,
ಹುಣಿಸೇ ಕಾಯಿ ,ಹುಣಿಸೇ ಚಿಗುರುಗಳ ,
ಹುಳಿ,ಹುಳೀ ------------ಒಗರು !
ನೆನಸಿ ಕೊಂಡರೇ------ಮೈ ನವಿರು !
ಬಣ್ಣ ,ಬಣ್ಣದ ಗೋಲಿಗಳ ಕದಪಿನ ,
ನುಣುಪಿನ ,ಮಿರಿ ,ಮಿರಿ ,ಮಿಂಚು !
ನಾ ಓಡಿಸುತ್ತಿದ್ದ ಸವೆದ ,
ಸೈಕಲ್ ಟೈರಿನ ಅಂಚು !
ಓಡುತ್ತಲೇ ಇರುತ್ತದೆ ,
ಬದುಕಿನಾಚೆಗೂ --------!
ಹಾರುತ್ತವೆ ------ದಿಗಂತದಾಚೆಗೂ !
ನಾ ಬಿಟ್ಟ ಗಾಳಿ ಪಟಗಳಂತೆ !
ಚಿನ್ನಿ ದಾಂಡು ,ಲಗೋರಿ ,ಕಬಡ್ಡಿ !
ಒಂದೇ ,ಎರಡೇ ?ಕನವರಿಸಲೇನಡ್ಡಿ?
ಹೇ ------------ಬದುಕೇ ,
ನೀ ಮತ್ತೆ ನೀಡಬಲ್ಲೆಯಾ ?
ಕಳೆದು -----------ಹೋದ ,                            
ಆ -------ನನ್ನ  ಬಾಲ್ಯ !               

Monday, April 12, 2010

ಸೈಕಲ್ ಹಿಂದಿನ ಚಕ್ರ ---ತಿರುಗುತ್ತಲೇ ಇತ್ತು !

{ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸ್ನೇಹಿತನೊಬ್ಬನ ಕ್ಲಿನಿಕ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿದ್ದು }

ಆ ದಿನ  ಸಂಜೆ ಸುಮಾರು ಐದೂವರೆ ಆಗಿತ್ತು .ಕ್ಲಿನಿಕ್ಕಿನಲ್ಲಿ ಹೆಚ್ಚು ರೋಗಿಗಳಿರಲಿಲ್ಲ .ಒಳಗಿನ ಪರೀಕ್ಷಾ ಕೋಣೆಯಲ್ಲಿ ರೋಗಿಯೊಬ್ಬನನ್ನು ಪರೀಕ್ಷೆ ಮಾಡಿ ಹೊರಗೆ ಬಂದೆ .ಆಗ ತಾನೇ ಬಂದಿದ್ದಆರಡಿಯ,ಧಡೂತಿದೇಹದ,ಮೈಯೆಲ್ಲಾ ಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ ವ್ಯಕ್ತಿಯೊಬ್ಬ 'ತುಂಬಾ  ಎದೆ ನೋವು ಡಾಕ್ಟರ್ ',ಎನ್ನುತ್ತಾ ,ಎದೆಯನ್ನು ಕೈಯಲ್ಲಿ ಹಿಡಿದು ಕೊಂಡೇ,ಕಡಿದು ಬಿದ್ದ ದೊಡ್ಡದೊಂದು ಮರದಂತೆ ,ಧೊಪ್ಪೆಂದು ಬಿದ್ದ.ಹೃದಯದ ಬಡಿತ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತಿತ್ತು .ಅವನ ಜೊತೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಲು ಕ್ಲಿನಿಕ್ಕಿನ ಹೊರಗೆ ಬಂದೆ .ಆ ವ್ಯಕ್ತಿ  ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದ  ಸೈಕಲ್ ಅಲ್ಲಿತ್ತು.ಸೈಕಲ್ಲಿನ  ಹಿಂದಿನ ಚಕ್ರ ಇನ್ನೂ ತಿರುಗುತ್ತಲೇ ಇತ್ತು ! ಕ್ಯಾರಿಯರ್ರಿನಲ್ಲಿದ್ದ  ಕೈ ಚೀಲ ಕೆಳಗೆಬಿದ್ದು ,ಅದರಲ್ಲಿದ್ದ ತರಕಾರಿ ,ಹೂವು ,ಹಣ್ಣು ಮತ್ತು ಎರಡು ಪ್ಲಾಸ್ಟಿಕ್ ಗೊಂಬೆಗಳು, ಫುಟ್ ಪಾತ್ ನಲ್ಲಿ  ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು !    

Sunday, April 11, 2010

ಪತ್ತೆಯಾದರೆ ,ತಿಳಿಸಿ ----ಪ್ಲೀಸ್ !

ನಮ್ಮ ಮನದ ಅಹಂಕಾರದ 
ಗಂಟುಗಳ------  ಬಿಡಿಸಿ ,
ದಶಕಗಳ ಕೊಳೆಯ
ತಿಕ್ಕಿ-------- ತೊಳೆದು 
ಶುದ್ಧ ಗೊಳಿಸಿ -----,
ಮಡಿಕೆ ಮಡಿಕೆಗಳ ತೆಗೆದು ,
ಸುಕ್ಕುಗಳ ತಿದ್ದಿ  ತೀಡಿ ,
 ನೀಟಾಗಿ ,ಗರಿ ಗರಿಯಾಗಿ 
ಇಸ್ತ್ರಿ ಮಾಡಿ ----------,
ಮುಗ್ಧತೆಯ ಶುಭ್ರತೆಯ ಸೂಸುವ ,
ಮಗುವಿನ ಮನವಾಗಿ ಮಾರ್ಪಡಿಸುವ ,
ದೋಬಿಯ ----ವಿಳಾಸ ,                                  
ಎಲ್ಲೆಂದು -----ಹುಡುಕುತ್ತಿದ್ದೇನೆ !
ಪತ್ತೆಯಾದರೆ ---------,
ತಿಳಿಸಿ --------ಪ್ಲೀಸ್ !

Friday, April 9, 2010

'ಬ್ಲಾಗಿನ ಚಾವಡಿಗೆ--------- ಸ್ವಾಗತ'

ಬ್ಲಾಗಿನ ------ಚಾರಣಿಗರೇ!
ಹೀಗೇ ಬನ್ನಿ --------ಇಲ್ಲೇ ,
ಸ್ವಲ್ಪ ವಿರಮಿಸಿಕೊಳ್ಳಿ
ಈ ನನ್ನ --------ಚಾವಡಿಯಲ್ಲಿ !
ಕಷ್ಟಗಳ ಬೆಟ್ಟವೇರಿ ಸುಸ್ತೆ ?
ಚಿಂತೆಯ 'ಬ್ಯಾಕ್ ಪ್ಯಾಕ್' '
ಕೆಳಗಿಳಿಸಿ ----ಹಾಂ --ಹಾಗೆ.
ಕುಳಿತುಕೊಳ್ಳಿ ---ಇಲ್ಲೇ !
'ಕೊಳಲ'ನೂದಲೇ? ,ಗಾಳಿ ಬೀಸಲೇ ?
ಬೇಸರವ ಬದಿಗಿರಿಸಿ ,ನಕ್ಕುಬಿಡಿ ಒಮ್ಮೆ !
ಹಾಗೇ ಇರಿ ಒಂದು ಚಣ !
ಈ ಕ್ಷಣದ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ,
ನೆನಪಿನ ಫೋಟೋಗಳನ್ನು 
ಕೊಟ್ಟುಬಿಡುತ್ತೇನೆ ನಿಮಗೇ!
ಏನು ಕುಡಿಯುತ್ತೀರಿ  ಆಸರೆಗೆ ?
ಹನಿಗವನಗಳ ಪಾನಕವೇ ?
ಕವಿತೆಗಳ ಎಳನೀರೆ?
ಅನಿಸಿಕೆಗಳ ಮಜ್ಜಿಗೆಯೇ ?
ಎಲ್ಲವೂ ಇದೆ ಇಲ್ಲಿ !
ಧನ್ಯವಾದಗಳು ಬಂದಿದ್ದಕ್ಕೆ !
ಮತ್ತೆ ಬನ್ನಿ ಮರೆಯದೇ,
ಈ ನನ್ನ ಬ್ಲಾಗಿನ ----ಚಾವಡಿಗೆ !

Thursday, April 8, 2010

ಡುಂಡಿಯವರ 'ಡಿಂಡಿಮ'

ಸನ್ಮಾನ್ಯ ಡುಂಡಿರಾಜ್ಅವರ ಹನಿಗವಿತೆಗಳನ್ನು ನಾನು 
ತುಂಬಾ ಇಷ್ಟಪಡುತ್ತೇನೆ .ಡುಂಡಿಯವರ ಡಿಂಡಿಮ ಎನ್ನುವ 
ಅಂಕಣದಲ್ಲಿ ಅವರ ಹನಿಗವನಗಳ ಸವಿಯನ್ನು ನನ್ನ ಸಹ 
ಬ್ಲಾಗಿಗರೊಡನೆ ಹಂಚಿಕೊಳ್ಳುವ ಇಷ್ಟ .ಇಲ್ಲಿವೆ ನೋಡಿ 
ಅವರ ಕೆಲ ಹನಿಗಳು :
 1.} ನದಿ ದಾಟಲು ತೆಪ್ಪ ಇರಬೇಕು 
     ಸಂಸಾರ ಶರಧಿ ದಾಟಲು 
      ತೆಪ್ಪಗಿರಬೇಕು !
2.}ಕರಾವಳಿಯಲ್ಲಿ ಈ ಬಾರಿ 
ಎಂಥಾ ಸೆಕೆ ಅಂತೀರಿ 
ಸಾಲದ್ದಕ್ಕೆ ಪವರ್ ಕಟ್ಟು
ಜನರೆಲ್ಲಾ  ಬೆವರ್ ಬಿಟ್ಟು 
ನೇತ್ರಾವತಿ ,ಸ್ವರ್ಣಾ ,ಸೀತಾ 
ನೀರೆಲ್ಲ ಬೆವರು ನಾತ
ಹೊಳೆಯಾಗಿ ಹರಿದು ಬೆವರು 
ಉಪ್ಪಾಗಿದೆ ಸಮುದ್ರದ ನೀರು !
3}  ಮದುವೆ ಮಂಟಪದಲ್ಲಿ 
ಧರ್ಮೇಚ ,ಅರ್ಥೆಚ ----
ಅನ್ನುತ್ತಾ ಹೆಜ್ಜೆ ಹಾಕುವುದು 
ಸಪ್ತ ಪದಿ
ಆಮೇಲೆ  ಇನ್ನಾರದೋ ಜತೆ 
ಗುಟ್ಟಾಗಿ ತಿರುಗುವುದು 
ಸುಪ್ತಪದಿ !
4} ಒಳ್ಳೆ ಗುಣ 
ಎಲ್ಲೇ ಇದ್ದರೂ 
ಬದಲಾಗುವುದಿಲ್ಲ .
ಬೇವಿನ ಕಹಿ ಮರೆಸಿ 
ಅದಕ್ಕೂ ಸಿಹಿ ಬೆರಸಿ 
ನಗುತ್ತದೆ ಬೆಲ್ಲ !
5}ಆಚಾರಕ್ಕೂ ವಿಚಾರಕ್ಕೂ 
ಅತ್ಯಲ್ಪ ಅಂತರ 
ಆಚಾರದಲ್ಲಿ 'ಆ 'ಕಾರವಿದ್ದರೆ 
ವಿಚಾರದಲ್ಲಿ ವಿಕಾರ !
6}ಇಂಗಿ ಹೋದಳು 
ಸರಸ್ವತಿ ನದಿ 
ಮಣ್ಣಲ್ಲಿ .
ಸೇರಿಕೊಂಡಳು 
ಹೆಂಗಸರ 
ಕಣ್ಣಲ್ಲಿ !
7}ಬದುಕಿನ ಬಂಡಿಯಲ್ಲಿ 
ಗಂಡನ ಕೈಯಲ್ಲಿ 
ವೇಗ ವರ್ಧಕ 
ಇದ್ದರೆ ಸಾಕಾ?
ಹೆಂಡತಿಯೂ ಬೇಕು 
ಏಕೆಂದರೆ 
ಅವಳು ಬ್ರೇಕು !
8}ಸುತ್ತುತ್ತಾರೆ ಹುಡುಗರು 
ಸದಾ ಹುಡುಗಿಯರ ಹಿಂದೆ .
ಆದ್ದರಿಂದಲೇ 
ಫಲಿತಾಂಶದಲ್ಲಿ
ಹುಡುಗಿಯರೇ                     
ಮುಂದೆ .
9}ಗಾಂಧಿ ತತ್ವವನ್ನು 
ಮರೆತಿಲ್ಲ ನಾವು 
ಕೊಂಚ ಬದಲಾವಣೆ ಆಗಿದೆ .
ಅಹಿಂಸೆಯಿಂದ 
'ಅ 'ತೆಗೆದು 
ಸತ್ಯಕ್ಕೆ ಅಂಟಿಸಲಾಗಿದೆ !

Wednesday, April 7, 2010

ನಾವು -------ಮಧ್ಯಮ ವರ್ಗ!

ನಾವು ಮಧ್ಯಮ ವರ್ಗ !
ಆರಕ್ಕೇರದೆ ,ಮೂರಕ್ಕಿಳಿಯದೆ 
ನಾಲಕ್ಕರಲ್ಲೇ ನಮ್ಮ ಸರ್ಕಸ್ !
ಯಾರೋ ಕೊಂಡ ------,
ನಲವತ್ತು ಲಕ್ಷದ ಫ್ಲಾಟ್ 
ನಮಗೆ ------- ದುಬಾರಿ !
ಆದರೇನು ಮಾಡೋಣ ?                         
ಅದೇ ನೆನಪಿಗೆ ಬರುತ್ತಲ್ಲ ಹಾಳು,
ಮತ್ತೆ ಮತ್ತೆ ,ಬಾರಿ ಬಾರಿ !
ಮತ್ತೆ ಮತ್ತೆ ರಿಪೀಟ್ ಆಯಿತೇ?
ಕ್ಷಮಿಸಿ ,ನಮ್ಮ ತೊಂದರೆಗಳೂ ಹಾಗೇ!
ಮತ್ತೆ ,ಮತ್ತೆ ಮರುಕಳಿಸುತ್ತವೆ !
ಕಷ್ಟಗಳು ನಮ್ಮನ್ನು ಮುಕ್ಕಳಿಸುತ್ತವೆ!
ನಾವು ಮಧ್ಯಮ ವರ್ಗ !
ನಮ್ಮ ಬಾಳೋ --------,
ತ್ರಿಶಂಕು -------ಸ್ವರ್ಗ !          

Tuesday, April 6, 2010

ಕನ್ನಡಮ್ಮನ -------ಅಳಲು!

ಮೊನ್ನೆ ವಿ .ಆರ್.ಭಟ್ ಅವರ ಬ್ಲಾಗಿನಲ್ಲಿ 'ಕನ್ನಡಮ್ಮನ ಕೈ ತುತ್ತು' ಎನ್ನುವ ಕವಿತೆ ಓದಿ ,ಕೆಲ ವರ್ಷಗಳ ಹಿಂದೆ ನಡೆದ ಮನ ಮಿಡಿಯುವ ಘಟನೆ ನೆನಪಿಗೆ ಬಂತು.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿಹೆಂಗಸೊಬ್ಬಳುತನ್ನಎರಡುಮಕ್ಕಳನ್ನುಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೆನ್ರಿ'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ 'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!ಇದನ್ನು' ಕನ್ನಡಮ್ಮನ ಅಳಲು ಎನ್ನೋಣವೇ?

Monday, April 5, 2010

ಮಾತಿನ ಕಲ್ಲು --------ಬೀರುವ ಮುನ್ನ!

ಒಡೆದ ಮನಸ್ಸಿನ ,
ಕನ್ನಡಿಯೊಳಗಿರುವ ,
ಬಿರುಕುಗಳ  ಗಡಿಯಾಚೆ 
ಕಂಡ ಸಂಬಧಗಳು 
ಛಿನ್ನಾ------- ಛಿದ್ರ!
ಕನ್ನಡಿ ಒಡೆದರೆ 
ಬಿಂಬಗಳೂ ಚೂರು ಚೂರು !
ಒಡೆದು ವಿಕೃತ ಗೊಂಡ 
ಮನಕ್ಕೆ -------------,                  
ಕಂಡಿದ್ದೆಲ್ಲಾ ------ವಿಕೃತ !
ಆದ್ದರಿಂದ------------,
ಮಾತಿನ ಕಲ್ಲು ಬೀರುವ ಮುನ್ನ ,
ಮನಸ್ಸು ಕನ್ನಡಿಯಂತೆ 
ಎಂಬ ------------,
ಎಚ್ಚರವಿರಲಿ ----------!

Saturday, April 3, 2010

ಎದ್ದು ಹೋದಿರಿ -------ಎಲ್ಲಿಗೆ ?

ಅಸಂಬದ್ಧ  ಮಾತುಗಳ 
ಬಡಬಡಿಸುತ್ತಲೇ ಇತ್ತು ಬಾಯಿ !
ನೋಟ ನೆಟ್ಟಿತ್ತು ಮೇಲಕ್ಕೆ ,
ದಾರಿ ಯಾವುದಯ್ಯಾ ವೈಕುಂಠಕ್ಕೆ ? 
ಯುದ್ಧದಲ್ಲಿ ಸೋತು ಶರಣಾಗಿ ,
ಬಿಳಿಯ ಬಾವುಟ ಹಾರಿಸಿದಂತೆ,
ಕಣ್ಣುಗಳ ಬಿಳಿಯ ಬಣ್ಣ 
ಮಾತ್ರ ---------ಕಾಣುತಿತ್ತು !
ಜೋಕಾಲೆಯಾಡಿತ್ತು ಜೀವ,
ಒಳಕ್ಕೂ ----,ಹೊರಕ್ಕೂ.
'ಕಣ್ಣಾ ಮುಚ್ಚೆ 'ಆಟ ಮುಗಿದಿತ್ತು !
ಒಳಗಿಂದಲೇ ಬಾಯಿಯ ಬಾಗಿಲು , 
ಕಣ್ಣುಗಳ ಕಿಟಕಿಗಳ ಮುಚ್ಚಿ ,
ಸಂತೆ ಮುಗಿಸಿ ,ಕಂತೆ ಒಗೆದು ,
ನಡೆದೇ ಬಿಟ್ಟಿರಿ ನಮ್ಮೆದುರೇ ,
ಉಸಿರ ಹಾದಿ ಹಿಡಿದು ,
ನಮಗೆ -------ಕಾಣದಂತೆ ,               
ಮರಳಿ ---------ಬಾರದಂತೆ .

Friday, April 2, 2010

ನೀನು----- ದೂರ್ವಾಸನೇ ಹೌದು!

ಸಾಕಪ್ಪಾ ನಿನ್ನ ಸಹವಾಸ ! 
ಸಿಟ್ಟಿನಲ್ಲಿ ನೀ ಥೇಟ್ ದೂರ್ವಾಸನೇ!
ರಾತ್ರಿ-----------,                                    
ಬಾಯಲ್ಲಿ ---ಮಿಂಟು ,
ಮೈಗೆಲ್ಲಾ ---ಸೆಂಟು ,
ಏನು ಹಾಕಿದರೂ ನೂರೆಂಟು ,
ತೂರಿ ಬರುವ ಹಾಳು ಘಾಟು !
ತೂರಾಡುತ್ತಾ ನೀ ಬರುವ ಮುನ್ನವೇ ,
ತಲಪುವ  ಆ ನಿನ್ನ ---,
ಉಸಿರಿನ -----ದುರ್ವಾಸನೆ,
ಸಹಿಸಲು ಅಸಾಧ್ಯ ------!
ನೀ --------------ನಿಜಕ್ಕೂ ,
ದೂರ್----------ವಾಸನೆ !
ದೂರದಿಂದಲೇ ----------ವಾಸನೆ!